
ಟಿ ಎಸ್ ಗೊರವರ
ಜ್ವರ ಬಂದ ದಿನ ನಾಲಿಗೆಯ ಮ್ಯಾಲೆ ನರ್ತಿಸಿತು ಕಹಿ. ಭಾರವಾದವು ಕಣ್ಣು, ಗಿರಿಗಿಟ್ಲೆಯಾಡಿತು ಕೆಮ್ಮು ಗಂಟಲಲ್ಲೆ. ಕಹಿ ಗುಳಿಗೆ, ಕಾದು ಆರಿದ ನೀರು, ಅನ್ನ-ಹಾಲು, ವೈದ್ಯರು ಹೇಳಿದ ಹಾಸಿಗೆ ಪಥ್ಯ, ನಿಲ್ದಾಣ ತಲುಪಿ ನಿಂತಂತಾದ ಅನುದಿನದ ದಿನಚರಿ… ಎಲ್ಲವೆಲ್ಲವು ತೆಂಗಿನ ಮರದಿಂದ ಕಳಚಿ ಬೀಳುವ ಕಾಯಿ ನೆನಪಿಸಿದವು.
ಗಡಿಯಾರದ ಟಿಕ್ ಟಿಕ್ ಎದೆ ಬಡಿತದ ಸದ್ದಿಗೆ ತಾಳೆಯಾಗದೆ ಮೆರೆದವು ದುಃಸ್ವಪ್ನಗಳು. ಒಣಗಿದ ಮರ, ಸುಟ್ಟ ರೆಕ್ಕೆಯ ಪತಂಗ, ಕತ್ತು ಮುಳುಗಿಸಲು ಹವಣಿಸುವ ಹೊಳೆಯ ನೀರು, ಹಿಡಿ ಹಿಡಿಯಾಗಿ ಮಣ್ಣು ಮುಕ್ಕುತ್ತಿರುವ ಮಗು; ಫಕ್ಕನೆ ಎಚ್ಚರವಾಯ್ತು. ಒಂದಕ್ಕೊಂದು ಅಂಟಿದ ರೆಪ್ಪೆಗಳು ಅಗಲುತಿಲ್ಲ. ನೋಡು, ಆದರೂನು ಲೋಕ ತುಟಿ ಪಿಟಕ್ಕೆನ್ನಲಿಲ್ಲ.
ಕಿಟಕಿಯಿಂದ ಚಾಚಿದ ಬಳ್ಳಿ, ಹೂ ಮಳೆಗೆ ತೇಲಿ ಬಂದ ಮಣ್ಣಗಂಪು, ನವಿರಾದ ಎಳೆ ಚಿಗುರಿನಂಥ ನಿನ್ನ ನೆನಪಷ್ಟೇ ಸಾಂತ್ವಾನದ ತೊರೆಯಾಗಿ ತೋರಿದವು.

ಅಂಟಿಸಿದ ಲೇಬಲ್ ನಂಬಿಕೆಗೆ ಅರ್ಹವಲ್ಲ
ಆ ದಡ ಈ ದಡ, ಎಡ ಬಲ ಎಲ್ಲ ಗಡಬಡ. ಸಿದ್ಧಾಂತಗಳ ಜನಕರೇ ಬೆಚ್ಚಿ ಬೀಳುವ ಸರದಿ ಬಂದಿದೆ.
ಒಬ್ಬರನ್ನೊಬ್ಬರು ಮೀರಿಸುವ ಚಾಲಾಕಿ ಅನುಯಾಯಿಗಳು. ಅವರ ಆಳದ ನಿಜವ ಬಗೆದರೆ ಹಾರುವುದು ಕಲಸುಮೇಲೊಗರದ ಹುಡಿ.
ಕೇಸರಿ, ಬಿಳಿ, ಹಸಿರು ಎಂಬಿತ್ಯಾದಿ ಬಣ್ಣಗಳು ಬರೀ ಬಣ್ಣಗಳಲ್ಲೋ ಗೆಳೆಯ, ಅವು ರಾಜಕಾರಣದ ದಾಳಗಳು. ನೀನು ಧರಿಸುವ ಬಟ್ಟೆ, ಮನೆಗೆ ಬಳೆಯುವ ಬಣ್ಣಗಳೆಲ್ಲ ಯಾವುದೋ ಒಂದು ಪಕ್ಷದ ಚಿಹ್ನೆಗಳಾಗಿ, ನಿನಗೊಂದು ಗುರುತು ನೀಡುತ್ತವೆ. ಸಕಲೆಂಟು ಬಣ್ಣಗಳೆಲ್ಲ ಒಂದಕ್ಕೊಂದು ಆ ಜನ್ಮ ವೈರಿಗಳಾಗಿ ಒಂದರ ಹೆಣದ ಮುಖ ಇನ್ನೊಂದು ನೋಡದೆ ಮುಖ ತಿರುವಿಕೊಂಡು ಅಡ್ಡಾಡುವ ಹೃದಯಹೀನವಾಗುತ್ತವೆ. ಒಂದು ಹುಲ್ಲು ಕಡ್ಡಿಯನ್ನೂ ಸೃಷ್ಟಿಸುವ ತಾಕತ್ತಿರದ ಬಣ್ಣ ನೆಮ್ಮದಿ ಕಸಿದು ದ್ವೇಷದ ಗೋಡೆಯನು ಕಟ್ಟಬಲ್ಲದು.
ಆ ಅಂಗಡಿ ಈ ಅಂಗಡಿ, ಅಂಗಡಿ ಅಂಗಡಿಯಲ್ಲೂ ಬಣ್ಣದ ಸಿಹಿ ಗುಳಿಗೆಯದೇ ಮಾರಾಟ. ನಂಬಿಕೆಗೆ ಅರ್ಹವಲ್ಲ ಅಂಟಿಸಿದ ಬಣ್ಣದ ಲೇಬಲ್.






0 Comments