ಕಮಲಾ ಬೆಲಗೂರ್
ನಿಯತಿಯ ಗತಿಯ
ವೇಗವ ತಡೆಯಲಾಗದು
ಕಾಲನ ಗುಲಾಮನಾಗದೆ
ಅದನ್ನನುಸರಿಸಿ ಜೊತೆ
ಜೊತೆಯಲಿ ನಡೆದವ
ಸೃಷ್ಟಿಸುವನು ಯಶೋಗಾಥೆಯ..
ಸೂರ್ಯ ಚಂದ್ರ ತಾರೆ
ಎಲ್ಲ ಕಾಲಚಕ್ರದ ವ್ಯೂಹಕೆ
ಸಿಲುಕಿದವರೆ .ಅಡಿಗಡಿಗೂ
ಗಡಿಯಾರವ ಬೆನ್ನಿಗೊತ್ತು
ಹೊತ್ತು ಗೊತ್ತುಗಳ
ಇತಿ ಮಿತಿಯನ್ನರಿತು
ಕಾಲವು ಕಾಲವಾಗುವ
ಮುನ್ನ ಎಚ್ಛೆತ್ತು ಮುನ್ನಡೆಯೋಣ ..
ಸತ್ಯಕಾಮ ಶರ್ಮಾ ಕಾಸರಗೋಡು
ನೀನೇನೂ ಹೊರತಲ್ಲ, ಮಗೂ
ಹೊತ್ತಿರುತ್ತಾರೆ ಎಲ್ಲರೂ
ಗಡಿಯಾರದ ಬಡಿವಾರ
ಹೊರದವರೂ ಹೊಂದಿರುತ್ತಾರೆ
ಅದನು ಹುಟ್ಟಿನೊಂದಿಗೆ
ಕಾಲವೊಂದು ಕಾಲುಂದಿಗೆ.
ಕತ್ತೆತ್ತಿ ನೋಡಿದರೆ
ಸಾಯದ ಕತ್ತಲು
ನೋಡದಿದ್ದರೆ ಕೆಳಗೆ
ಪಾದ ಸಿಲುಕುವ ಬಿರುಕು
ಕಂಡುಕೊಳ್ಳಬೇಕು ನೀನು
ನಿನ್ನದೇ ಬೆಳಕು
ಅದರಲ್ಲೇ ಬದುಕು.
ಇಲ್ಲದೆಯೂ ಇರಬಹುದು
ಮುಳ್ಳುಗಳು
ಎದುರಾಗುವ ದಾರಿಯಲ್ಲಿ
ಇದ್ದೇ ಇರುತ್ತವೆ ಅವು
ಗಡಿಯಾರದಲ್ಲಿ.
ನಿನ್ನ ಹಿಂದಿರುವ ನೀರನೂ ಸೇರಿ
ಎಲ್ಲ ನುಂಗಲು ನೆರವಾಗುವ
ಕೋರೆ ಹಲ್ಲುಗಳು
ಕಾಲಗರ್ಭದೊಳಗೆ ಕೌರವರು ನೂರಲ್ಲ
ನೂರಾರು ಅಗಣಿತ ತಾರೆಗಳು
ಎಲ್ಲ ಜೀವಕೋಶಗಳ ಕಥೆಯು
ಕೊನಗೆ ಸೇರುವುದು ಕಾಲಕೋಶವನು.
ಕಾಲವನ್ನು ನೋಡಿಯಾದರೂ ಕಲಿ
ಮುನ್ನುಗ್ಗುವುದದು ಎದೆಗುಂದದೆ
ಯಾವ ಇಂಧನವೂ ಇಲ್ಲದೆ
ವೇಗದಿಂದ… ಅಲ್ಲಲ್ಲ
ವೇಗವೇ ಅದಕೆ ಎಲ್ಲ !
ಇರುವುದಕ್ಕೆಲ್ಲಾ ಅರ್ಥ
ಇರಬೇಕೆಂದೇನೂ ಇಲ್ಲ
ಮೂಡುವುದು ಮುಖ್ಯ
ಒಂದು ಸಹ್ಯ, ಸುಂದರ ಚಿತ್ರ.
ನಿನ್ನನ್ನೇ ತೆಗೆದುಕೋ
ಹೀಗೆ ನಿಂತಿರುವ ನೀನು
ಇನ್ನು ಆ ಹಿನ್ನೀರು
ಅದರ ಮೇಲೆ ಬಿದ್ದು
ನಿಂತಿರುವ ಬಿಂಬ, ನಿನ್ನ
ಹೆಗಲೇರಿರುವ ಗಡಿಯಾರ
ಇವೆಲ್ಲವನೂ ಇನ್ನೆಲ್ಲಿಗೋ
ಹೊತ್ತೊಯ್ವ ಕಾಲ
ನಿನಗರಿವಿಲ್ಲದೇ ನಮ್ಮೆಲ್ಲರಲೂ
ಇವೆಲ್ಲವೂ ಸ್ಫುರಿಸುವ ಕಾವ್ಯ.
ನಿನ್ನ ಹಿಂದೆ ಬಿದ್ದಿರುವ
ಬಿಂಬದುದ್ದವ ನಂಬಿ
ಮರುಳಾಗಬೇಡ
ಆರುವ ತನಕ ಆನೀರು
ಹಾಗಿರುವುದು ಆ ಬಿಂಬವು
ಆದರೂ…
ಹಾಗೇ ನಿಲ್ಲಬೇಡ
ಅಂಬಿಗನಿಗೆ ಕಾಯಬೇಡ
ಎತ್ತರಕೇರಬೇಕಾದರೆ ವಾಸ್ತವದಲಿ
ನಡೆಯಬೇಕು ರೆಕ್ಕೆಯೂರಿಗೆ
ಗುರಿಯಿಲ್ಲವೆಂದಾದರೆ
ನಡೆಯನ್ನೆ ಗುರಿಮಾಡಿ ನಡೆ.
ನಡೆದೇನು ಮಾಡುವುದು
ಎನ್ನುವುದಕಿಂತ ಮಿಗಿಲು
ನಿಂತೇನು ಮಾಡುವುದು
ಎಂದು ಕೇಳುತಾ ನಡೆ
ಲೆಕ್ಕಿಸದೆ ತಡೆಗೋಡೆ.
ನೀನು ನಡೆದಲ್ಲಿ
ದಾರಿ ಬೆಳೆಯುವುದು
ನಡೆಯುವವರತ್ತಲೇ ಬೆಳಕು
ನಗೆಯನ್ನು ಬೀರುವುದು.
0 ಪ್ರತಿಕ್ರಿಯೆಗಳು