ಗಂಗಾ ಚಕ್ರಸಾಲಿ
ಐದು ವರ್ಷಗಳಿಗೊಮ್ಮೆ..
ನಡೆಯುವ ಜಾತ್ರೆಯಿದು
ರಥವಿಲ್ಲ,ಅದರೊಳು ಮೂರ್ತಿಯೂ ಇಲ್ಲ
ಆದರೂ ಅದ್ದೂರಿ ಆಡಂಬರ,ಸಡಗರ;
ತಿಂಗಳುಗಳ ಮೊದಲೇ…
ನಡೆಯುತ್ತದೆ ಪೂರ್ವ ತಯಾರಿ
ದೇವರುಗಳು ಆಜ್ಞೆ ನೀಡುತ್ತಾರೆ
ಪೂಜಾರಿಗಳು ಅದಕ್ಕಾಗಿ ದುಡಿಯುತ್ತಾರೆ;
ಇವರಿಗೂ ಒಂದೊಂದು ಬಣ್ಣವಿದೆ
ಬಾವುಟವಿದೆ,ತತ್ವ ಸಿದ್ಧಾಂತವಿದೆ
ಆದರೆ ಅವು ಬದಲಾಗಬಹುದು…
ದೇವರುಗಳು ತಮ್ಮ ಗುಡಿ ಬದಲಾಯಿಸಿದಾಗ;
ಈ ದೇವರು ಕಲ್ಲಿನ ಮೂರ್ತಿಯಂಥಲ್ಲ
ಭಕ್ತರು ಕೈಮುಗಿಯಬಹುದು..ಬಿಡಬಹುದು
ದೇವರುಗಳೇ ಕೈ ಮುಗಿಯುತ್ತಾರೆ
ತಮ್ಮನ್ನು ಕೈ ಬಿಡಬೇಡಿರೆಂದು;
ತಮ್ಮ ಗುಡಿಗಳಿಂದ ಹೊರಬರುತ್ತಾರೆ
ಪೂಜಾರಿಗಳನ್ನು ಜೊತೆಮಾಡಿಕೊಂಡು,
ಹಣ, ಸೀರೆ, ಬಾಡೂಟ, ಸುರಪಾನ
ಭಕ್ತರಿಚ್ಛೆಯಂತೆ ಧಾರಾಳವಾಗಿ ನೀಡುತ್ತಾರೆ;
ಕೊನೆಗೊಂದು ದಿನ ಜಾತ್ರೆ ನಡೆಯುತ್ತದೆ
ಭಕ್ತರು ತಮ್ಮ ತಮ್ಮ ದೇವರುಗಳಿಗೆ,
ಕಾಣಿಕೆಗಳನ್ನು ಹಾಕುತ್ತಾರೆ…
ಹುಂಡಿಗಳು ತುಂಬಿಕೊಳ್ಳುತ್ತವೆ;
ಮುಂದೊಂದು ದಿನ ದೇವರ ಸತ್ವ ಪರೀಕ್ಷೆ
ಹೆಚ್ಚು ಕಾಣಿಕೆ ಸ್ವೀಕರಿಸಿದ ದೇವರು..
ಶಕ್ತಿಶಾಲಿ, ಬಲಾಢ್ಯವಂತನಾಗುತ್ತಾನೆ
ಹಾರ, ತುರಾಯಿ ಭಕ್ತರಿಂದ, ಪೂಜಾರಿಗಳಿಂದ;
ಸಂತುಷ್ಟಗೊಂಡ ದೇವರುಗಳು..
ಗದ್ದುಗೆ ಏರುತ್ತಾರೆ, ಗುಡಿ ಸೇರುತ್ತಾರೆ
ಈಗ ಪರಿಸ್ಥಿತಿ ಅದಲು, ಬದಲು..
ಭಕ್ತರು ಗೋಗರೆದರೂ..ದೇವರೂ ಇಲ್ಲ, ಪೂಜಾರಿಯೂ ಇಲ್ಲ;
0 ಪ್ರತಿಕ್ರಿಯೆಗಳು