
ಎಂ ಎಸ್ ರುದ್ರೇಶ್ವರಸ್ವಾಮಿ
ಖಾಲಿ ಕಾಗದದ ಮೇಲೆ
ಏನನ್ನಾದರೂ
ಬರೆದುಕೊಡು, ಇಲ್ಲವೆ ಮಳೆಯನ್ನಾದರೂ
ಚಿತ್ರಿಸು, ಎಂದಳು.
ಖಾಲಿ ಕಾಗದದ ಮೇಲೆ
ಅಕ್ಷರಗಳನ್ನು
ಮೂಡಿಸುತ್ತ ಹೋದೆ: ಅಕ್ಷರಗಳು ಬೆಳೆದು
ಕಪ್ಪು ಚುಕ್ಕಿಗಳಾದವು
ಪದಗಳು ಅರ್ಥ ಕಳೆದುಕೊಂಡವು.
ಅವಳು ಒಂದೊಂದು
ವಾಕ್ಯವನ್ನು,
ಪದಪುಂಜವನ್ನು, ಪದಗಳ ನಡುವಿನ
ನಿಶ್ಯಬ್ದವನ್ನು ಆಲಿಸಿದಳು.

ಪದಗಳು ಸೇತುವೆಯಾಗಿ
ಅರ್ಥಕಟ್ಟಿಕೊಡಲಿಲ್ಲ.
ನೋಡಿದವರು ಯಾರೇ ಇರಲಿ; ಶಪಿಸದೆ
ಸುಮ್ಮನೆ ಇರಲಾರರು.
ಹಾಳೆಯನ್ನು ಮಳೆಯಲ್ಲಿ ತೊಳೆದು
ಮಳೆಯನ್ನು
ಚಿತ್ರಿಸುವ ಆಸೆ ಹುಟ್ಟಿಸಿತು.
ಬಾಗಿಲು ತೆರೆದೆ
ಮನೆ ಬಾಗಿಲಲ್ಲಿ ಮಳೆ ನೆಲಮುಗಿಲಿಗೆ ಒಂದಾಗಿ
ನಿಂತಿತ್ತು, ಅದಕ್ಕೆ ತೂಫಾನ್-
ಸಾಥ್ ನೀಡುತ್ತತ್ತು.
ಚಿತ್ರಿಸುವುದು ಹೇಗೆ
ಒದ್ದೆ ಕಾಗದದ ಮೇಲೆ ಗಾಯಗೊಂಡ ಮಳೆಯ
ಅಹಂ ಅನ್ನು?






0 Comments