ಜಗದೀಶ್ ಕೊಪ್ಪ ಹಿರಿಯ ಪತ್ರಕರ್ತರು. ಪ್ರಸ್ತುತ ಉದಯ ಟಿ ವಿ ಚಾನಲ್ ನ ಹುಬ್ಬಳ್ಳಿ ವಿಭಾಗದ ಮುಖ್ಯಸ್ಥರು. ಮಂಡ್ಯದಲ್ಲಿ ಹಲಕಾಲ ಪತ್ರಿಕೋದ್ಯಮದಲ್ಲಿ ನುರಿತ ಕೊಪ್ಪ ಮಂಡ್ಯದ ಬಂಡಾಯ ಗುಣವನ್ನು ಮಡಿಲಿಗೆ ಕಟ್ಟಿಕೊಂಡವರು.
ಹಲವು ಜನಪರಚಳವಳಿಗಲ್ಲಿ ತೊಡಗಿಸಿಕೊಂಡಿರುವ ಜಗದೀಶ್ ಕೊಪ್ಪ ಈಗ ಎಲ್ಲರ ಗೆಳೆಯ ಉಮರ ಖಯಾಮನ ಕವಿತೆಯ ಬೆನ್ನುಬಿದ್ದಿದ್ದಾರೆ. ಇಂದು ಧಾರವಾಡದಲ್ಲಿ ಬಿಡುಗಡೆಯಾದ ಈ ಪುಸ್ತಕದ ಆಯ್ದ ಕವಿತೆ ನಿಮಗೆ-

ಸಖಿ
ಅಲ್ಲೊಂದು ಮರವಿರಲ್ಲಿ
ಆ ಮರದಡಿಯಲ್ಲಿ
ಒಂದಿನಿತು ರೊಟ್ಟಿ,
ಬಟ್ಟಲು ತುಂಬ ಮದ್ಯ
ಜೊತೆಗೆ ನೀನು,
ನಿನ್ನ ಹಾಡುಗಳ
ಅನುವರಣಗಳಿರಲಿ.
ಇವಿಷ್ಟು ಸಾಕು
ಸ್ವರ್ಗವಾದರೂ ಏಕೆ ಬೇಕು?
ಮಧು ಶಾಲೆಯಲ್ಲಿ
ಎದುರಾದ ವೃದ್ಧನನ್ನು
ನಿಲ್ಲಿಸಿ ಕೇಳಿದೆ,
“ಇಲ್ಲಿಂದ ಹೋದವರ
ಸುದ್ದಿ ಏನಾದರೂ
ತಿಳಿಯಿತೇ?”
ಮಧು ಬಟ್ಟಲ ಕೈಗಿತ್ತು,
ಇಲ್ಲಿಂದ ಹೋದವರು
ಹಿಂತಿರುಗಿ ಬರುವುದಿಲ್ಲ
ಸುದ್ದಿಯನ್ನೂ ತರುವುದಿಲ್ಲ
ಸಧ್ಯಕ್ಕೆ ಇದ ನೀ ಕುಡಿ ಎಂದ.
ಕುಡಿದ ಮತ್ತಿನಲಿ
ಮಧು ಬಟ್ಟಲನು
ಕಲ್ಲಿನ ಮೇಲೊಗೆದೆ.
ಒಡೆದ ಬಟ್ಟಲ ಚೂರು
ನೊಂದು ನುಡಿಯಿತು
ಖಯ್ಯಾಮ್
ನಿನ್ನೆ ‘ನಾನು ಕೂಡಾ ನಿನ್ನಂತಿದ್ದೆ’
ನಾಳೆ ‘ನೀನೂ ಕೂಡಾ ನನ್ನಂತಾಗುವೆ.’
ವಂಚಕರ ಮಾತುಗಳನ್ನೆಲ್ಲಾ
ನಂಬಿ ಬದುಕಿದ್ದು ಸಾಕು.
ಗೆಳೆಯರು ಮಾತ್ರ
ಒಳ್ಳೆಯ ಮದ್ಯ ಕೊಡುತ್ತಾರೆ
ಅಷ್ಟೇ ಅಲ್ಲ ಅವರೆಲ್ಲರೂ
ಒಬ್ಬೊಬ್ಬರಾಗಿ ಇಲ್ಲಿಂದ
ಹೊರಟು ಹೋಗುತ್ತಾರೆ
ಹಿಂತಿರುಗುವ ಸುಳಿವು
ಕೂಡ ನೀಡುವುದಿಲ್ಲ.
ಕಾಲ ಕೆಟ್ಟಿತು ಎಂದು
ಕೊರಗಿದವರ ಬಗ್ಗೆ
ಜಗತ್ತು ಹೇಸಿದೆ ಖಯ್ಯಮ್,
ತೆಗೆದುಕೊ ಮಧು ಬಟ್ಟಲ
ಕೇಳು ಸಂಗೀತವ
ನಿನ್ನ ಬದುಕಿನ ಮಧು ಪಾತ್ರೆ
ಒಡೆದು ಹೋಗುವ ಮುನ್ನ.





0 Comments