೩೧ ಮಾರ್ಚ್ ೨೦೧೨ಕ್ಕೆ ಮುಚ್ಚಲ್ಪಡುವ ಮಂಗಳೂರಿನ ಅತ್ರಿ ಬುಕ್ ಸೆಂಟರ್ ಕುರಿತು ರಾಧೇಶ್ ತೋಳ್ಪಾಡಿ ಎಸ್, ಉಪಾಧ್ಯಾಯ ಬರೆದ ಕವನ
ಯಾಕತ್ರಿ ಅನುವವರಿಗೇನು ಹೇಳುವುದು?
– ರಾಧೇಶ್ ತೋಳ್ಪಾಡಿ ಎಸ್, ಉಪಾಧ್ಯಾಯ
ಅತ್ರಿ ಬುಕ್ ಸೆ೦ಟರ್
ಕೊನೆಯಿರದ ಪ್ರವಾಹದಲ್ಲೊಂದು ನಡುಗಡ್ಡೆ ಇದು
ಆಲಿಬಾಬನ ಗುಹೆ ತೆರಕೊಂಡಾಗ ಆ ಹುಡುಗ
ಚಪ್ಪಾಳೆ ತಟ್ಟಿ ಕೇಕೆ ಹಾಕಿದ್ದು ಇಲ್ಲೇ
ಇದರ ಕಿರುದಾರಿ, ಓಣಿಗಳಲ್ಲೇ ಗೋಚರಿಸಿದ್ದು
ಅಲ್ಲಮನ ಬಯಲು, ಎಷ್ಟೊಂದು ಮುಗಿಲು, ನಕ್ಶತ್ರ
ಚಂದ್ರಲೋಕದ ತಾಯಿ ಬೆಳದಿಂಗಳು.
ನಾಯಿಗುತ್ತಿ, ಸರಸೋತಿ, ಪಾರೋತಿಯರೆಲ್ಲ ಸಿಕ್ಕದ್ದು ಇಲ್ಲೇ.
ಇಲ್ಲೇ ಆ ಮಹಾವಟವೃಕ್ಷ, ಅದರ ಹರೆಯದಲ್ಲಿ ಗೋವಿಂದ
ಕೊಳಲನೂದುತ್ತ,
ಕೇಳಬಹುದಾಗಿತ್ತು ಬಗೆಬಗೆಯ ಹಕ್ಕಿಗಳ ಒಡಲಿನುಲಿ, ನಾಡಿಮಿಡಿತ.
ಯಾಕತ್ರಿ ಅನುವವರಿಗೇನು ಹೇಳುವುದು?
ಉಪಮೆ-ಅಲಂಕಾರ ಬಿಟ್ಟು ಹೇಳುವುದಾದರೆ
ಮಳೆ ಬಂದಾಗ ನೀಡಿದ್ದು ಇದೇ ತಲೆಯ ಮೇಲೊಂದು ಸೂರು.
ಮೆಟ್ಟಲುಗಳನ್ನೇರಿ ಹೋದವರಿಗಂತೂ ಅದು ಅವರದೇ ಬಾನಂಗಳ!
ಚತುರ್ವಿಧದ ರಸ್ತೆಗಳೂ ಸಂಧಿಸುವ ಒಂದು ಸಾರ್ವಜನಿಕ ಸ್ಥಳ
ಪ್ರತಿಯೊಬ್ಬರ ಖಾಸಗಿ ಭಾಗವಾದದ್ದೊಂದು ಪವಾಡ!
ಏನು ಬೇಸರವೋ ಈ ನಡುಗಡ್ಡೆಗೆ, ನೀರಿಕಿಳಿದವನೆ ಬಲ್ಲ!
ಅಮುಕಿ ಹಿಡಿದವೆ ಬಾಯಿಯೇ ದೇಹವಾಗಿರುವ ಮಕರಾಕ್ಷ ಬಳಗ?
ಎಲ್ಲಿ ಹುಡುಕುವುದಿನ್ನೆಲ್ಲಿ ತಡಕಾಡುವುದು
ಆ ಹಸಿರು ಹೊಲ ಬಿದಿರು ಮೆಳೆ ಕೊಳಲ?
ತಂತಮ್ಮ ತಾರೆಗಳ ಕೂಡೆ ಪಿಸುನುಡಿಯ ಆಡಗೊಟ್ಟವರ?
]]>
0 ಪ್ರತಿಕ್ರಿಯೆಗಳು