
ಪ್ರಿಯ ಓದುಗರೆ,
ಒಂದು ಮಂದಹಾಸದಂತೆ ನಿಮ್ಮ ಮುಂದೆ ಸುಳಿದಾಡುತ್ತಿದ್ದ ಕನ್ನಡದ ಕೆಂಡಸಂಪಿಗೆ ಸಂಕ್ರಾಂತಿಯ ಈ ದಿನದಿಂದ ಇನ್ನು ಪ್ರತಿನಿತ್ಯ ಮತ್ತೆ ಅರಳಲಿದೆ. ಸುಮಾರು ನೂರು ದಿನಗಳ ವಿರಾಮದ ಬಳಿಕ ಕನ್ನಡದ ಪರಿಮಳವನ್ನ,ಕನ್ನಡದ ಬೆಡಗನ್ನ ಮತ್ತೆ ನಿಮ್ಮ ಮುಂದೆ ಅರುಹಲಿದೆ.
ಇಲ್ಲಿಯ ಜನ,ಇಲ್ಲಿಯ ಖುಷಿ,ಇಲ್ಲಿನ ಸಿಟ್ಟು,ಇಲ್ಲಿನ ನೋವು, ನಗು, ತಮಾಷೆ, ಕಥೆ, ಕವಿತೆ, ಚಿಂತನೆ, ಈ ನೆಲದ ಅಗಾಧ ಸೌಂದರ್ಯ, ಜೀವನ ಪ್ರೀತಿ, ಇತಿಹಾಸ, ರಾಜಕೀಯ, ಸಿನೆಮಾ, ನಾಟಕ, ಪ್ರೇಮ, ಪ್ರೀತಿ, ತಕರಾರು, ಚಿಂತೆ ಈ ಎಲ್ಲವೂ ಬೇರೆ ಬೇರೆ ಬಣ್ಣಗಳಲ್ಲಿ ಬಣ್ಣನೆಗಳಲ್ಲಿ ಇನ್ನು ಮುಂದೆ ಈ ತಾಣದಲ್ಲಿ ಪ್ರತಿದಿನವು ಕಾಣಲಿವೆ.
ಕೆಂಡಸಂಪಿಗೆಯ ಈ ನೂರು ದಿನಗಳ ವಿರಾಮದ ಸಮಯದಲ್ಲಿ ಈ ಇಳೆಯಲ್ಲಿ ಏನೇನೆಲ್ಲಾ ಸಂಭವಿಸಿವೆ. ಇನ್ನು ಮುಂದೆಯೂ ಸಂಭವಿಸಲಿವೆ. ಈ ಇಳೆಯ ಎಲ್ಲ ಆಗುಹೋಗುಗಳಿಗೂ ಸಾಕ್ಷಿಯಾಗಿ ಉಳಿಯಬೇಕು ಎನ್ನುವ ಹುಚ್ಚು ಹಠವೇನೂ ಇಲ್ಲದೆ ಒಂದಿಷ್ಟು ಸಾವಿರ ಕನ್ನಡಿಗರ ಓದುವ ಖುಷಿಗೆ, ಒಂದಿಷ್ಟು ಕನ್ನಡ ಬರಹಗಾರರ ಬರೆಯುವ ಆನಂದಕ್ಕೆ, ಓದಿ ಬರೆದು ಜಾಣರಾಗಿರಬೇಕು ಎನ್ನುವ ಕನ್ನಡದ ಹುಡುಗ ಹುಡುಗಿಯರ ಹುಚ್ಚು ಹುಮ್ಮಸ್ಸಿಗೆ ಒಂದು ಒಳ್ಳೆಯ ತಾಣವಾಗಿ ಕೆಂಡಸಂಪಿಗೆ ಉಳಿಯಲಿದೆ. ಕನ್ನಡದ ಒಳ್ಳೆಯ ಮನಸ್ಸುಗಳು ಈ ಬಲುದೊಡ್ಡ ಇಳೆಯ ಯಾವ ಮೂಲೆಯಲ್ಲಾದರೂ ಬದುಕುತ್ತಿರಲಿ ಕೆಂಡಸಂಪಿಗೆಯನ್ನು ಕಂಡೊಡನೆ ಉಲ್ಲಸಿತರಾಗಿ, ವಿಸ್ಮಿತರಾಗಿ, ಮೋಹಿತರಾಗಿ, ನಗು ಸಿಟ್ಟು ಜಂಬ ಅಸೂಯೆ ಪ್ರೀತಿ ಎಲ್ಲವೂ ಇರುವ ಕೇವಲ ಮನುಷ್ಯರಾಗಿ ತಮ್ಮ ಓದಿನ ಈ ಸಮಯವನ್ನು ಆನಂದಿಸಿದರೆ ಅದಕ್ಕಿಂತ ಮಿಗಿಲಾದ ಕನ್ನಡದ ಸೇವೆ ಇನ್ನೇನಿದೆ.
ನಿಮಗೆಲ್ಲ ಗೊತ್ತಿರುವ ಹಾಗೆ ಕೆಂಡಸಂಪಿಗೆಯ ತಂಡದಲ್ಲಿ ಕನ್ನಡದ ಅತ್ಯುತ್ತಮ ಬರಹಗಾರರ ಬಲುದೊಡ್ಡ ಪಡೆಯೇ ಇದೆ. ಈ ಪಡೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬೇರುಗಳನ್ನೂ ಚಿಗುರುಗಳನ್ನೂ ಪಡೆಯಲಿದೆ. ‘ಕನ್ನಡದ ಈ ಹೊತ್ತಿನ ಬಹಳ ಒಳ್ಳೆಯ ಬರಹಗಳು ಬೇಕಾದರೆ ಕೆಂಡಸಂಪಿಗೆಯನ್ನು ಒಮ್ಮೆ ನೋಡಿ’ ಎಂದು ಈಗ ಅಲ್ಲಲ್ಲಿ ಕೇಳಿಬರುತ್ತಿರುವ ಮಾತುಗಳು ಇನ್ನು ಕೆಲವು ದಿನಗಳಲ್ಲಿ ಎಲ್ಲ ಕಡೆಯಲ್ಲೂ ಕೇಳಿಬರಬೇಕು ಎನ್ನುವುದು ನಮ್ಮ ಒಳ ಆಸೆ.
ಈ ಒಳ ಆಸೆ ನಿಜವಾಗಲಿದೆ ಎನ್ನುವುದು ನಮ್ಮ ಆತ್ಮ ವಿಶ್ವಾಸ.
ಕೆಂಡಸಂಪಿಗೆ ಲೆಮನ್-ಟ್ರೀ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಕನಸಿನ ಕೂಸು. ಕನ್ನಡಕ್ಕೆ ಜಾಗತಿಕ ಗುಣಮಟ್ಟದ ಅಂತರ್ಜಾಲ ತಾಣವೊಂದನ್ನ ಒದಗಿಸುವ ದಿಕ್ಕಿನಲ್ಲಿ ಒಂದು ನಮ್ರ ಪ್ರಯತ್ನ.
ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡುವ ಈ ದಿನ ನಮ್ಮ ಈ ಆಸೆಗಳನ್ನು ನಿಮ್ಮ ಜೊತೆ ಹಂಚಿಕೊಂಡಿದ್ದೇವೆ.
ಕೆಂಡಸಂಪಿಗೆ ಓದಿ, ಕೆಂಡಸಂಪಿಗೆಗೆ ಬರೆಯಿರಿ.
ಸಂಪಾದಕ
(ಲೆಮನ್- ಟ್ರೀ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಪರವಾಗಿ)





0 Comments