ಜಗದೀಶ್ ಕೊಪ್ಪ
ಈ ಬಾರಿಯ ಪ್ರತಿಷ್ಟಿತ ಮ್ಯಾಗ್ಸೆಸೆ ಪ್ರಶಸ್ತಿಗೆ ಕರ್ನಾಟಕ ಸಂಗೀತದ ಯುವ ಪ್ರತಿಭಾವಂತ ಗಾಯಕ ಹಾಗೂ ಬಂಡಾಯ ಮನೋಭಾವದ ಚಿಂತಕ ಟಿ.ಎಂ.ಕೃಷ್ಣ ಆಯ್ಕೆಯಾಗಿದ್ದಾರೆ.
ಕರ್ನಾಟಕ ಸಂಗೀತವು ನಿಂತ ನೀರಲ್ಲ ಅಥವಾ ಅದು ಯಾರೊಬ್ಬರ, ಯಾವೊಂದು ಸಮುದಾಯದ ಸ್ವತ್ತಲ್ಲ ಎಂದು ಬಲವಾಗಿ ನಂಬಿರುವ ಟಿ.ಎಮ್. ಕೃಷ್ಣ ಕೇವಲ ಗಾಯಕ ಮಾತ್ರವಲ್ಲದೆ, ಕರ್ನಾಟಕ ಸಂಗೀತದ ಚರಿತ್ರೆಯನ್ನು ಸಮಕಾಲೀನ ಜಗತ್ತಿಗೆ ಹತ್ತಿರವಾಗುವಂತೆ ಮುರಿದು ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಇವರು ‘ದಿ ಹಿಂದೂ’ ಪತ್ರಿಕೆಯಲ್ಲಿ ನಿರಂತರವಾಗಿ ಲೇಖನಗಳನ್ನು ಬರೆಯುತ್ತಾ, ಸಂಪ್ರದಾಯ ಮತ್ತು ಶಾಸ್ತ್ರೀಯ ನೆಪದಲ್ಲಿ ತನ್ನ ಸುತ್ತಾ ಗೋಡೆ ಕಟ್ಟಿಕೊಂಡಿದ್ದ ಕರ್ನಾಟಕ ಸಂಗೀತದ ಗೋಡೆಗಳನ್ನು ಕೆಡವಿದವರು.
ಸಂಗೀತ ಕೇವಲ ಪ್ರದರ್ಶನದ ಪ್ರಕಾರವಲ್ಲ, ಅದೊಂದು ಶುದ್ಧ ಕಲೆ ಮತ್ತು ಈ ನೆಲದ ಎಲ್ಲಾ ಸಂಸ್ಕೃತಿಯೊಳಗೆ ಅಡಗಿರುವ ಅಭಿವ್ಯಕ್ತಿಯ ಪ್ರಕಾರಗಳನ್ನು ಒಳಗೊಂಡಿರುವ ಕಲೆ ಎಂದು ಪ್ರತಿಪಾದಿಸುವ ಕೃಷ್ಣರವರು, ಕರ್ನಾಟಕ ಸಂಗೀತದ ರಾಗಗಳ ಜೊತೆಗೆ ನಮ್ಮ ಜನಪದರ ನಡುವೆ ಹುದುಗಿ ಹೋಗಿದ್ದ ನಾಟಿ ರಾಗ ಅಥವಾ ಗ್ರಾಮ ರಾಗಗಳಿಗೆ ಹೆಚ್ಚಿನ ಮಹತ್ವ ನೀಡಿ ಅವುಗಳನ್ನು ಮುಂಚೂಣಿಗೆ ತರಲು ಪ್ರಯತ್ನಿಸುತ್ತಿದ್ದಾರೆ.
ತಮ್ಮ ಪ್ರಯೋಗಶೀಲತೆಯಿಂದಾಗಿ ತಮಿಳುನಾಡಿನ ಮಡಿವಂತರ ವಿರೋಧವನ್ನು ಕಟ್ಟಿಕೊಂಡಿರುವ ಅವರು, ಟೀಕೆ ಮತ್ತು ವಿಮರ್ಶೆಗಿಂತ ಪ್ರಯೋಗಶೀಲತೆಯಲ್ಲಿ ನಂಬಿಕೆಯುಳ್ಳವರಾಗಿದ್ದಾರೆ. ಇತ್ತೀಚೆಗೆ ಉತ್ತರ ಕರ್ನಾಟಕದ ಜೋಗತಿಯರನ್ನು ಬೆಂಗಳೂರಿನ ಸಂಗಿತ ಕಚೇರಿಗೆ ಕರೆಸಿ, ಅವರಿಂದ ಹಾಡು ಹೇಳಿಸಿ ಅವರ ಜೊತೆ ವೇದಿಕೆ ಹಂಚಿಕೊಂಡ ಮಹಾನ್ ಹೃದಯವಂತ.
ಚೆನ್ನೈ ನಗರದಿಂದ ಮಹಾಬಲಿಪುರಕ್ಕೆ ಹೊಗುವ ಈಸ್ಟ್ ಕೋಸ್ಟ್ ರೋಡ್ ಎಂಬ ಕಡಲ ಕಿನಾರೆಯುದ್ದಕ್ಕೂ ಸಾಗುವ ಹಳೆಯ ರಸ್ತೆಯೊಂದಿದೆ. ನಲವತ್ತು ಕಿಲೊಮೀಟರ್ ಉದ್ದದ ರಸ್ತೆಯ ಎಡ ಬಲ ಅನೇಕ ಮೀನುಗಾರರ ಹಳ್ಳಿಗಳಿವೆ. ಇದೀಗ ಮೀನುಗಾರರ ಹೆಣ್ಣು ಮಕ್ಕಳಿಗೆ ಸಂಗಿತವನ್ನು ಕಲಿಸಿ, ಅವರನ್ನು ವೇದಿಕೆಗೆ ಹತ್ತಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸಂಗೀತವೆಂಬುದು, ಭಾಷೆ, ಗಡಿ, ಜಾತಿ, ಧರ್ಮವನ್ನು ಮೀರಿದ ಮನುಕುಲದ ಹೃದಯದ ಭಾಷೆ ಎಂದು ನಂಬಿಕೊಂಡಿರುವ ಟಿ.ಎಂ. ಕೃಷ್ಣ ರವರು ಬರೆದಿರುವ ‘ಸದರನ್ ಮ್ಯೂಸಿಕ್’ ಎನ್ನುವ ಕೃತಿ ಸಂಗೀತಾಸಕ್ತರು ಓದಲೇ ಬೇಕಾದ ಕೃತಿ.
ಈ ಕೃತಿಯ ಕೆಲವು ಆಯ್ದ ಲೇಖನಗಳನ್ನು ಟಿ.ಎಸ್. ವೇಣುಗೋಪಾಲ್ ಮತ್ತು ಶೈಲಜಾ ರವರು ” ಸಹ ಸ್ಪಂದನ” ಎಂಬ ಹೆಸರಿನಲ್ಲಿ ರಾಗ ಮಾಲಾ ಪುಸ್ತಕ ಮಾಲಿಕೆಯಡಿ ಕನ್ನಡಕ್ಕೆ ತಂದಿದ್ದಾರೆ. ಆಸಕ್ತರು ಈ ಕೃತಿಯನ್ನೂ ಸಹ ಗಮನಿಸಬಹುದು.
ಇಲ್ಲಿದೆ ನೀವು ನೋಡಲೇಬೇಕಾದ ವಿಡಿಯೋ
ಶ್ರೀ ಟಿ.ಎಂ.ಕೃಷ್ಣ ಅವರ ಪ್ರಯತ್ನಕ್ಕೆ ನನ್ನದೊಂದು ಸಲಾಮ್! ಹಾಗೂ ಅಭಿನಂದನೆಗಳು.
ಮ್ಯಾಗ್ಸೆಸೆ ಪ್ರಶಸ್ತಿಗೆ ಶ್ರೀ.ಕೃಷ್ಣ ಅತ್ಯಂತ ಸೂಕ್ತರು ಎಂದು ನನಗನ್ನಿಸುತ್ತದೆ. ಜನಪದ ಸಂಗೀತ ಎಲ್ಲ ಸಂಗೀತಗಳ ತಾಯಿಬೇರು. ಶಿಷ್ಠ ಸಂಗೀತ ಪದ್ಧತಿ ಎಷ್ಟೋ ಎಷ್ಟೋ ಎಷ್ಟೋ ತರುವಾಯ ಹುಟ್ಟಿದ್ದು. ಆದರೆ ಶಿಷ್ಠವು ತನ್ನ ತಾಯನ್ನೇ ಅಸ್ಪೃಶ್ಯಳಂತೆ ಕಂಡದ್ದು ಸಂಗೀತಲೋಕದ ಅಹಂಕಾರ. ಕರ್ನಾಟಕೀ ಪಂಡಿತರು ಮಾತ್ರ ಅಲ್ಲ , ಈ ಜನಪದ /ಮೌಖಿಕ ಸಂಗೀತದಿಂದ ಬೇಕಾದ್ದು ಎತ್ತಿಕೊಂಡು ಶಿಷ್ಠ ವಾದ್ಯಗೋಷ್ಟಿಯ ತನಿಬೆರಕೆಯಿಂದ ಶ್ರಾವ್ಯ ಹಾಡುಗಳನ್ನು ಸೃಷ್ಟಿಸುವ ಎಲ್ಲ ಭಾಷೆಗಳ ಸಿನಿಮಾ ಸಂಗೀತ ನಿರ್ದೇಶಕರು ಕೂಡ -ಕೆಲವರನ್ನು ಹೊರತುಪಡಿಸಿ – ಮೂಲಕ್ಕೆ ಆಭಾರ ಸಲ್ಲಿಸುವುದನ್ನೇ ಮರೆಯುತ್ತಾರೆ. ಹಜಾರಿಯಾ ಒಬ್ಬರು ಇದಕ್ಕೆ ಶಾಶ್ವತ ಅಪವಾದ.
ಕೃಷ್ಣ ಅವರು ಕರ್ನಾಟಕಸಂಗೀತದ ಮಡಿಗಂಗೋತ್ರಿ ಚೆನ್ನೈಯಲ್ಲೇ ಹುಟ್ಟಿ ಅದನ್ನು ಧಿಕ್ಕರಿಸುವುದೆಂದರೆ ಅದೇನು ಸುಲಭದ ಮಾತಲ್ಲ. ಹೊಸದನ್ನು ಹುಡುಕಿ ಮೆಟ್ಟುವ ಇಂತಹವರನ್ನು ಮನ್ನಿಸುವುದು ಎಂದರೆ ನಮಗೆ ನಾವು ಮನ್ನಿಸಿಕೊಂಡಂತೆ.
ನೋಡಿದೆ. ಕೇಳಿದೆ.ತುಂಬಾ ತುಂಬಾ thanks ಅವಧಿಗೆ.
“ಸಹ ಸ್ಪಂದನ” , ‘ಸದರನ್ ಮ್ಯೂಸಿಕ್’ ಕೃತಿಯ ಆಯ್ದ ಭಾಗ ಅಲ್ಲ . ಅದೊಂದು ಸ್ವತಂತ್ರ ಲೇಖನಗಳ ಸಂಕಲನ . ಅದರಲ್ಲಿನ ಕೆಲವು ವಿಷಯಗಳು ‘ಸದರನ್ ಮ್ಯೂಸಿಕ್’ ಕೃತಿಯಲ್ಲಿ ಉಲ್ಲೇಖವಾಗಿವೆ ಅಷ್ಟೇ .