ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಯಾರೊಳಗೆ ಯಾವ ನೆನಪಿನ ನದಿ ಹರಿಯುತ್ತಿದೆಯೋ

ಅದೆಷ್ಟೇ ಚೆಂದದ ಭಾರೀ ರೇಷ್ಮೆಸೇರೆಯೋ, ಚೆಂದದ ಚೂಡಿದಾರೋ, ಗಂಡಸರಾದರೆ ಸೂಟೋ , ಪ್ಯಾಂಟೋ ಹಾಕಿ , ಇನ್ ಶರ್ಟೂ ಮಾಡಿ ಹೊರಗೆ ಹೋಗಿರುತ್ತೇವೆ. ವಾಪಾಸು ಬಂದು ಆ ಬಟ್ಟೆಗಳನ್ನ ತೆಗೆದು ಮನೆಯಲ್ಲಿ ಹಾಕಿಕೊಳ್ಳೋ ಕ್ಯಾಶುವಲ್ ಬಟ್ಟೆಗಳನ್ನ ಹಾಕಿಕೊಳ್ತೇವಲ್ಲ, ಆಗ ಅದೆಂತದೋ ನಿರಾಳ ಫೀಲ್ ಮಾಡುತ್ತೇವೆ. ಹೌದು ತಾನೇ? ಇಷ್ಟು ಹೊತ್ತು ಕೃತಕವಾಗಿದ್ದಂತೆ.. ಅದೇನನ್ನೋ ಹೊತ್ತು ನಡೆಯುತ್ತಿದ್ದಂತೆ ಇದ್ದದ್ದು, ಮನೆಯಬಟ್ಟೆ ಹಾಕಿಕೊಂಡ ಕೂಡಲೆ ಒಂಥರ ಸಹಜವೂ ಹಗುರವೂ ಆದ ಭಾವ. ನಮ್ಮ ಮನೆಗೆ ನಾವು ಬಂದಂತೆ, ಒಂದು ಕಂಫರ್ಟ್ ಫೀಲ್. ಕಂಫರ್ಟ್ ಝೋನ್.
ಊರು ಕೇರಿ ಅಂತ ಬರೀತಿದ್ಲಪ್ಪ ಈವೆಣ್ಣು, ಈಗ ಎಲ್ಲ ಬಿಟ್ಟು ಬಟ್ಟೆ ಬರೆ ವಿಚಾರ ಕ್ಕೆ ಯಾಕೆ ಬಂತೀಗ? ಅಂದಿರಾ? ಅದನ್ನೇ ಹೇಳ್ತೀನ್ ಕೇಳಿ. ಈ ಬಟ್ಟೆಯ ವಿಷಯ ಬದುಕಿಗೂ ಅನ್ವಯವಾಗಿಬಿಟ್ಟರೆ? ಬಿಟ್ಟರೆ ಏನು ಬಂತು ? ಆಗಿಬಿಟ್ಟಿದೆ ಕೋಟಿಕೋಟಿ ಜನರ ಬದುಕಲ್ಲಿ. ಅದರಲ್ಲು ಹಳ್ಳಿ ಬಿಟ್ಟು ನಗರಕ್ಕೆ ಬಂದು ಹೊಸ ಬದುಕು ಕಟ್ಟಿಕೊಳ್ಳುವ ಲ್ಲರೂ ಅವರವರ ಊರ ಭಾಷೆ, ರೀತಿ, ರಿವಾಜುಗಳನ್ನೆಲ್ಲ ಬೆನ್ನಿಗೆ ಬಿಟ್ಟು, ಒಂದು “ಕಾಮನ್” ಅನಿಸುವ , ಭಾಷೆ ಮತ್ತು ಬದುಕನ್ನ ಒಪ್ಪಿ, ಅಪ್ಪಿ ಬದುಕುತ್ತಿರುತ್ತೇವೆ. ಬೆಳಗಾಂ, ಯಾದಗಿರಿ, ದಾವಣಗೆರೆ, ಶಿವಮೊಗ್ಗ, ಮೈಸೂರು, ಚಾಮರಾಜನಗರ..ನೀವು ಆಯಾ ಊರಿಗೆ ಹೋದರೆ ಭಿನ್ನತೆ ರಪ್ಪಂತ ಕಣ್ಣಿಗೂ, ಕಿವಿಗೂ ಬಡಿಯುತ್ತದೆ. ಅದೇ ಬೆಂಗಳೂರಿನಲ್ಲಿ ಎಲ್ಲರಿಗೂ ಒಂದು ಕಾಮನ್ ರಿವಾಜು. ರೆಡಿಮೇಡು ಬಟ್ಟೆಯ ಹಾಗೆ ಬದುಕಿಲ್ಲಿ ರೆಡಿಮೇಡು. ಅಗತ್ಯವಿದ್ದರೆ ಚೂರು ಚಾರು ಆಲ್ಟ್ರೇಷನ್ನು ಅಷ್ಟೆ. ಕಥೆ ಹೇಳ್ತೀನಿ ಕೇಳಿ
ಅವರು ವಿಧಾನಸೌಧದಲ್ಲಿ ದೊಡ್ಡ ಹುದ್ದೆಯಲ್ಲಿದ್ದವರು. ಚಾಮರಾಜನಗರದ ಹಳ್ಳಿಯೊಂದರಿಂದ ಬಂದವರು. ಹಾಸ್ಟೆಲುಗಳಲ್ಲಿದ್ದುಕೊಂಡು ಓದಿ, ಆ ಕಾಲಕ್ಕೆ ಸರಕಾರೀ ಹುದ್ದೆ ಅದರಲ್ಲೂ ವಿಧಾನಸೌಧದ ಕೆಲಸ ಸಂಪಾದಿಸಿದವರು. ದೊಡ್ಡ ಕುರ್ಚಿ, ಸದಾ ಐಎಎಸ್ ಲೆವೆಲ್ಲಿನ ಅಧಿಕಾರಿಗಳು, ಬೇರೆ ಬೇರೆ ಜಿಲ್ಲೆಗಳ ಡಿಸಿಗಳು, ಮಂತ್ರಿಗಳು, ಇವರೊಟ್ಟಿಗಿನ ಸಹವಾಸ, ಸಹಚರ್ಯ. ಆಫೀಸೇ ಕೊಟ್ಟ ಕಾರು, ಒಬ್ಬ ಡ್ರೈವರು, ಕಛೇರಿಯಲಿ ಬೆಲ್ಲು ಹೊಡೆದರೆ ಬಂದು ಕೈ ಕಟ್ಟಿ ನಿಲ್ಲುವ ಮಂದಿ. ಶಕ್ತಿಕೇಂದ್ರದ ಯಾರನ್ನು ಬೇಕಾದರೂ ಹತ್ತು ಅಂಕಿಗಳಲಿ ಸಂಪರ್ಕಿಸಬಹುದಾದ ಸ್ಥಾನ-ಮಾನ. ಹುಡುಕಿಕೊಂಡು ಬರುವ ದೊಡ್ಡಮನುಷ್ಯರು. “ಹೊರಡೋಣ” ಅಂದ ಕೂಡಲೇ ಸಿದ್ದವಾಗಿ ನಿಲ್ಲುವ ಪಿಎ. ಮನೆಯಲ್ಲೂ ಸಕಲ ಸೌಕರ್ಯ, ಆಳು, ಕಾಳು, ಚಂದದ ಹೆಂಡತಿ, ಮುದ್ದು ಮಕ್ಕಳು. ಸರಕಾರೀ ರಜೆಗಳು, ವಿಶೇ಼ಷ ಸವಲತ್ತುಗಳು.ಅಫಿಶಿಯಲ್ ಕೆಲಸವಾಗಲೀ, ಪರ್ಸನಲ್ ಓಡಾಟವಾಗಲಿ ಹೋದ ಕಡೆ ಬಂದ ಕಡೆ ಎಲ್ಲ ರೆಡ್ ಕಾರ್ಪೆಟ್ಟು. “ಕುಡಿದ ನೀರು ಅಲ್ಲಾಡದಂಗೆ” ಅಂತಾರೆ ನಮ್ಮ ಕಡೆ, ಹಂಗೆ ಅವರ ಜೀವನ. ಅವರನ್ನ ಒಂದಷ್ಟು ದಿನ ಹತ್ತಿರದಿಂದ ನೋಡಿ, ಬಡ್ಡೀಮಗಂದು ಇದ್ಕೇ ಇರಬೇಕು ಜನ ಕುರ್ಚಿ ಅಂದ್ರೆ ಸಾಯೋದು ಅಂತ ಅನಿಸಿತ್ತು ನನಗೆ.
ನಗರದ ಬದುಕಿಗೊಂದು ರಿವಾಜಿರುವಂತೆ, ಶ್ರೀಮಂತರ, ಅದರಲ್ಲೂ ದೊಡ್ಡ ಮಟ್ಟದ ಹುದ್ದೆಯಲ್ಲಿರುವವರಿಗೂ ಒಂದು ರಿವಾಜು ಬೇಕೋ ಬೇಡವೋ ಸೃಷ್ಟಿಯಾಗಿರುತ್ತದೆ. ಇಂತದ್ದೊಂದು “ಕುಡಿದ ನೀರೂ ಅಲ್ಲಾಡದಂತ” ಬದುಕೂ.. ಆ ರಿವಾಜೂ ಅವರನ್ನ ಅದೆಷ್ಟು ಆವರಿಸಿಕೊಂಡಿತ್ತೆಂದರೆ, ಇಪ್ಪತ್ತನಾಲ್ಕು ಗಂಟೆ, ಮುನ್ನೂರರವತ್ತೈದು ದಿವಸ ಅವರದನ್ನು ಮೇಂಟೇನ್ ಮಾಡಲೇಬೇಕಾಗುತ್ತದೆ. ತಲೆಮೇಲೆ ಕಿರೀಟ ಇಟ್ಟುಕೊಳ್ಳೋದು ಸುಲಭ. ಜಗತ್ತು ಜೈಕಾರ ಹಾಕುತ್ತದೆ. ಚಪ್ಪಾಳೆ ತಟ್ಟುತ್ತದೆ. ಆದರೆ ಅದನ್ನ ಮೇಂಟೇನ್ ಮಾಡೋದಿದೆಯಲ್ಲ ಅಲ್ಲಿರುವುದು ಕಷ್ಟ. ಆ ಅಧಿಕಾರದ ಗಮ್ಮತ್ತಿನಲಿ ಅವರು ಅದೆಷ್ಟು ಮುಳುಗಿಹೋಗಿದ್ದರೆಂದರೆ, ತಾನು ಬೇರೆ ಆಕುರ್ಚಿ ಬೇರೆ ಅಂತ ಯೋಚಿಸಲಿಕ್ಕೂ ಹೋಗದಷ್ಟು. ಅಥವಾ ಯೋಚಿಸಲಿಕ್ಕೆ ಆಗದಷ್ಟು.
ಸಮಯ ಬಂತು ನೋಡಿ, ನಮ್ಮ ಆಯಸ್ಸಿದ್ದಷ್ಟು ದಿನ ಕುರ್ಚಿಯ ಆಯಸ್ಸು ಇರುವುದಿಲ್ಲವಲ್ಲ, ಅದು ಒಂದು ದಿನ “ನೋಡಪ್ಪ, ನಾನೇ ಬೇರೆ ನೀನೇ ಬೇರೆ “ ಅಂತ ಹೇಳಿಯೇಬಿಟ್ಟಿತ್ತು. ಕಿರೀಟ ಕಳಚಿಟ್ಟು ಬರುವುದು ಅನಿವಾರ್ಯವಾಗಿತ್ತು. ಎಲ್ಲ ಸರಕಾರೀ ಹುದ್ದೆಗಳ. ಅಧಿಕಾರಿಗಳ ಅನಿವಾರ್ಯ ಕರ್ಮ ಅವರ ಪಾಲಿಗೂ ಬಂದಿತ್ತಷ್ಟೆ. ನಂತರದ ಅವರ ಬದುಕು ಬೇರೆಯೇ ಆಯಿತು. ಅವರು ಹೇರ್ ಡೈ ಮಾಡುವುದನ್ನು ಬಿಟ್ಟರು. ಕುರ್ಚಿಯಿಂದ ತನ್ನನ್ನು ಬೇರೆಯಾಗಿಸಿಕೊಂಡ ಮೊದಲ ಸ್ಟೆಪ್ ಆಗಿತ್ತು ಅದು. ಕೈ ತುಂಬ ಹಣ, ಕಾರು ,ಬಂಗಲೆ, ಪೆನ್ಶನ್ ಎಲ್ಲ ಇತ್ತು. ಯಾವುದಾದರೂ ಕ್ಲಬ್ ಮೆಂಬರ್ಶಿಪ್ ತಗೊಂಡು ಕಾಲ ಕಳೆಯಬಹುದಿತ್ತು. ಸುಖವಾಗಿ ಪಾರ್ಟಿ ಗೀರ್ಟಿ ಮಾಡಿಕೊಂಡಿದ್ದರೆ ಯಾರೂ ಬೇಡ ಅಂತಿರಲಿಲ್ಲ. ಆದರೆ ಆ ಜೀವ ಯಾಕೋ ಮುಖ ಮಾಡಿದ್ದು ಚಾಮರಾಜನಗರದ ತನ್ನ ಊರಿಗೆ. ಓದುವ ಕಾಲಕ್ಕೇ ಊರು ಬಿಟ್ಟದ್ದು ಅಂದರೆ, ಸಂಪರ್ಕ ಕಡಿದು ಹೋಗಿ ಅದೆಷ್ಟೋ ವರ್ಷವಾಗಿ ಹೋಗಿದೆ. ಯಾವಾಗಲೋ ಒಮ್ಮೊಮ್ಮೆ ಭೇಟಿ ಅಷ್ಟೆ. ಅದೂ ಕಿರೀಟದೊಂದಿಗೇ. ಕೈ ಕಟ್ಟಿ ಬೆನ್ನುಬಾಗಿಸಿ ನಿಂತವರ ಕೈಗೆ ಮೂರುಕಾಸು ಕೊಟ್ಟು ಧೂಳೆಬ್ಬಿಸಿಕೊಂಡು ಇವರ ಕಾರು ಹಾರುತ್ತಿತ್ತು. ಹೊಗೆ ಕಾರುತ್ತಿತ್ತು. ಈಗ ಎಲ್ಲ ಬಿಟ್ಟು ಇಲ್ಲಿಗೆ ಬಂದದ್ದು ಯಾಕೆ>? ಅಂಥದ್ದೊಂದು ಐಶಾರಾಮಿ ಬದುಕಿನಿಂದ ಈ ಬರಡುಗಾಡು ಅವರನ್ನ ಯಾಕೆ ಸೆಳೆಯಿತು? ಅಮ್ಮನ ನೆನಪೇ? ಮಣ್ಣ ಸೆಳೆತವೇ? ಅಥವಾ ಕಿರೀಟ ಕಳಚಿಟ್ಟಾಗ ಜ್ಞಾನೋದಯವಾಯಿತೆ? ಒಟ್ಟಿನಲಿ ಬದುಕು ಬದಲಾಯಿತು. ಆ ಬದಲಾವಣೆಯಾದರೂ ಎಂತದು ಗೊತ್ತಾ? ಅವರು ಹಾಗೆ ಅಷ್ಟು ವರ್ಷ ಐಶಾರಾಮಿಯಾಗಿ ಬದುಕಿದ್ದೇ ಸುಳ್ಳಾ ಅನಿಸುವಷ್ಟು. ಅದೆಷ್ಟೋ ವರ್ಷದಿಂದ ಹೀಗೇ ಇಲ್ಲೇ ಮಣ್ಣು ಕೆರೆಯುತ್ತಿದ್ದಾರೇನೋ ಅನಿಸುವಷ್ಟು. ಹಾವಭಾವದಲ್ಲೂ ಆಟಿಟ್ಯೂಡು, ಭಾಷೆ ಎಲ್ಲವೂ ಅಲ್ಲೇ ಇದ್ದವರಷ್ಟೇ ಸಹಜಾತಿ ಸಹಜ! ಒಂದೇ ಸಲಕ್ಕೆ ರಪ್ಪಂತ ಹೀಗೆ ಬದಲಾಗಬಹುದಾ? ಹಾಗಿದ್ದರೆ ಇಷ್ಟು ದಿನ ಇದೆಲ್ಲಿ ಬಚ್ಚಿಟ್ಟಿದ್ದರು ಈ ರೀತಿ, ನೀತಿ, ಭಾಷೆಯನ್ನ ಇವರು? ಇಷ್ಟು ವರ್ಷಗಳೂ ಹಾಕಿದ್ದು ಬರೀ ವೇಷವಾ? ಬದುಕಿದ್ದು ತನ್ನದಲ್ಲದ ಬದುಕಾ? ಯಾವುದದು ಇವರ ಸೆಳೆದ ಕೊಂಡಿ? ಎಷ್ಟೊಂದು ಪ್ರಶ್ನೆಗಳೇಳುತ್ತವೆ.

ನನ್ನ ಪರಿಚಯದ ಒಬ್ಬರು ಗುಂಡ್ಲುಪೇಟೆ ಪಕ್ಕದ ಹಳ್ಳಿಯವರು. ಮೈಸೂರಲ್ಲಿ ಉದ್ಯೋಗ.. ಆತನ ಹೆಂಡತಿ ನನ್ನ ಸಂಬಂಧಿ. ಒಮ್ಮೆ ನಾವೆಲ್ಲ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ (ಅಲ್ಲಿ ವರ್ಷದ ಎಲ್ಲಾಕಾಲದಲ್ಲೂ ಹಿಮ ಆವರಿಸಿರುತ್ತದೆ) ಹೋಗಿದ್ದಾಗ ಬಂದಿದ್ದರು. ಅವರು ತನ್ನ ಹೆಂಡತಿ , ಮತ್ತು ಅಮ್ಮನ ಜೊತೆ ತಮ್ಮ ಊರ ಭಾಷೆಯಲ್ಲೂ , ಉಳಿದಂತೆ ನಮ್ಮೊಂದಿಗೆ ಶಿಷ್ಟ ಭಾಷೆಯಲ್ಲೂ ಮಾತಾಡುತ್ತಿದ್ದರು.ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿರೋ ಅವರು, ವಾರಕ್ಕೊಮ್ಮೆ ಊರಿಗೆ ಹೋಗದಿದ್ರೆ ಆಗೋದೇ ಇಲ್ಲವಂತೆ. ಕಾರಣವಿಷ್ಟು ವಾರವೆಲ್ಲ ಆಫಿಸಿನಲ್ಲಿ ತಾನು ಸಹಜವಾಗಿ ಆಡದ ಶಿಷ್ಟ ಭಾಷೆ ಆಡುತ್ತಾ, ಸಹಜವಲ್ಲದ ಬದುಕು ಬದುಕುತ್ತಾ ಉಸಿರುಕಟ್ಟಿದಂತೆ ಇರುತ್ತಾರಲ್ಲ. ವಾರದ ಕಡೆಯಲ್ಲಿ ಹೋಗಿ “ನಾರ್ಮಲ್” ಆಗಿ ಮಾತಾಡಿ , ಊರು ಗದ್ದೆ, ಮನೆ ಅಂತ ನೋಡಿಕೊಂಡು, ಕಟ್ಟಿದ ಉಸಿರು ಬಿಟ್ಟು ಬಂದರೆ ಅದೇನೋ ಸಮಾಧಾನ.
ಕಳಲೆ ಪಾರ್ಥಸಾರಥಿ ಅಂತವರ ಹೆಸರು. ಫೇಸ್ ಬುಕ್ಕಿನಲಿ ಸಿಗುತ್ತಾರೆ ನೋಡಿ. ಹೀಗೇ ಅವಧಿಯ ನನ್ನ ಕಾಲಂ ಓದುತ್ತಾ ಖುಷಿಯಾಗಿ ಅಮೆರಿಕೆಯಿಂದ ಫೋನ್ ಮಾಡಿದ್ದರು. ಸುಮಾರು ಒಂದು ಗಂಟೆ ಅವರು ಮಾತಾಡಿದ್ದು. ಸುಮಾರು 50-60 ವರ್ಷಗಳ ಹಿಂದಿನ ನಂಜನಗೂಡು ತಾಲೋಕಿನ ಅವರ ತಂದೆ ಇದ್ದ. ಇವರು ತಮ್ಮ ಆರಂಭದ ಬಾಲ್ಯ ಕಳೆದ “ಚಿಕ್ಕಾಟಿ” ಅನ್ನುವ ಊರಿನ ಬಗ್ಗೆ. ಆ ಊರಲಿ ಇವರು ಕಂಡ ಜಾತಿಜಗಳಗಳು, ಹಬ್ಬಗಳು, ನಂಬಿಕೆಗಳು, ಆಚರಣೆಗಳು ಹೀಗೇ ಮಾತು ಸಾಗಿತ್ತು. ಅರ್ಚಕರಾಗಿದ್ದ ಅವರ ತಂದೆ ಸ್ವಾತಂತ್ರ್ಯ ಬಂದ ದಿನ ಹೇಗೆ ಊರ ಮನೆ ಮನೆಗಳಲಿ ಹೋಳಿಗೆ ಮಾಡಿಸಿದ್ದರು. ತಾವು ಆಊರು ಯಾಕೆ ಬಿಟ್ಟೆವು ಎಂಬೆಲ್ಲಾ ಕಥೆ. ಈಗ ಅವರ ಮಕ್ಕಳೊಂದಿಗೆ ಇವರು ವರ್ಷದ ಎಷ್ಟೋ ದಿನ ಅಮೆರಿಕೆಯಲ್ಲಿರುತ್ತಾರಂತೆ. ವಿಷಯ ಅದಲ್ಲ. ಈ ಪಾರ್ಥಸಾರಥಿ ಅವರಿಗೆ ಒಂದು ಆಶೆ ಇದೆ. ಒಂದು ದಿನ ಚಿಕ್ಕಾಟಿಗೆ ಹೋಗಿ ಊರವರಿಗೆಲ್ಲ ಹೋಳಿಗೆ ಊಟ ಹಾಕಿಸಿ, ಅವರೊಂದಿಗೆ ಒಂದು ಸ್ವಾತಂತ್ರ್ಯೋತ್ಸವ ಆಚರಿಸಬೇಕಂತೆ. ಆದರೆ ಹೇಗೆ? 10 ವರ್ಷಕ್ಕೆ ಜನರೇಷನ್ ಗ್ಯಾಪು ಸೃಷ್ಟಿಯಾಗುತ್ತಿರುವ ಹೊತ್ತಿದು. ಈಗ 50 ವರ್ಷಗಳ ಹಿಂದಿನ ಸಂಪರ್ಕ ಮಾಡುವುದು ಹೇಗೆ? ಅವರು ನನಗೆ ಹೇಳಿ, ನಾನು ನಮ್ಮಪ್ಪನಿಗೆ, ಮಾವನಿಗೆ ಹೇಳಿ, ಪ್ರಸಾರಾಂಗದ ಅಧ್ಯಕ್ಷರಾಗಿರುವ ಸಿ. ನಾಗಣ್ಣ (ಸಿ ಅನ್ನುವ ಇನಿಶಿಯಲ್ಲಿಂದಲೇ ನಾವು ಕಂಡುಹಿಡಿದ ಕಥೆ ಬೇರೆಯದೇ ಇದೆ) ಅವರನ್ನ ಕಡೆಗೂ ಸಂಪರ್ಕ ಮಾಡುವ ಹೊತ್ತಿಗೆ ಆಗಸ್ಟ್ ಹದಿನೈದು ಕಳೆದಿತ್ತು. ಆದರೆ ಹೋಳಿಗೆ ಯೋಜನೆ ಜಾರಿಯಾಗಲಿದೆ. ಆ ಮಾತು ಬೇರೆ. ಆದರೆ ಅಷ್ಟು ಚಿಕ್ಕ ಹುಡುಗನಾಗಿದ್ದ ಅವರ ಮೇಲೆ ಆ ಊರು ಬೀರಿದ ಗಾಢ ಪ್ರಭಾವ ಎಂತದಿರಬಹುದು? ಪರಿಚಯದ ಒಂದೇ ಒಂದು ಜೀವವಿರದ ಆ ಊರಿಗೆ ಇವರು ಯಾಕೆ ಹೋಗಬೇಕು? ಅವರಿಗಾಗಿ ಸಿಹಿ ಊಟ ಯಾಕೆ ಮಾಡಿಸಬೇಕು? ಎಲ್ಲಿಯ ಅಮೆರಿಕಾ? ಎಲ್ಲಿಯ ಚಿಕ್ಕಾಟಿ? ಯಾವುದೀ ಸೆಳೆತ?
1991ನೆಯ ಇಸವಿಯಿಂದಲೂ ನಮ್ಮೂರೂ ಸೇರಿದಂತೆ ಮೈಸೂರು ತಾಲೋಕಿನ ಎಷ್ಟೊಂದು ಹಳ್ಳಿಗಳಿಗೆ ಇನ್ಸ್ ಸ್ಟಾಲ್ಮೆಂಟಿನಲಿ ಪಾತ್ರೆ, ಫ್ಯಾನು. ಮಿಕ್ಸಿ, ಕುರ್ಚಿ ಅಂತೆಲ್ಲ ಮಾರುವ ವ್ಯಕ್ತಿಯೊಬ್ಬರಿದ್ದಾರೆ. ಅವರ ಊರು ಮಧುರೈ. ಮೊನ್ನೆ ಬಂದಾಗ “ಇದೊಂದೇ ವರ್ಷ ಅಮ್ಮ. ಮಗಳಿಗೆ ಡಿಗ್ರಿ ಮುಗಿತದೆ ಊರ್ಗೇ ಹೋಗ್ಬುಡನ ಅಂತ ಇದೀವಿ. ಅದ್ಕೆ ಹೊಸಾ ಸಾಮಾನು ಕೊಡ್ತಿಲ್ಲ. ವ್ಯಾಪಾರ ಎಲ್ಲ ನಿಲ್ಸಿ ಅಲ್ಲೆ ಹೋಗ್ಬುಡ್ತೀನಿ” ಅಂತಿದ್ದರು. ಮೂವತ್ ವರ್ಷ ಮೈಸೂರಲ್ಲಿದ್ದೂ ನಿಮಗೆ ಮಧುರೈ ಹೆಚ್ಚು ಇಷ್ಟವಾಧ್ದು ಯಾಕೆ? ಅಂತ ಕೇಳಬೇಕನಿಸಲಿಲ್ಲ
ಅವತ್ತು ಕಾಜಾಣದ ಕವಿಗೋಷ್ಟಿಗೆ ಹೋಗುವ ದಾರಿಯಲ್ಲಿ “ಬೆಂಗಳೂರನ್ನು ನಮ್ಮ ಸ್ವಂತದ್ದೆನ್ನುವ ಜನರೇ ಇಲ್ಲಪ್ಪ. ಇದೂ ನಮ್ಮೂರೇ ಅಲ್ವ?” ಅಂತೆಲ್ಲ ವಾದಿಸಿಕೊಂಡು ಹೋದರು ಭಾರತಿ ಬಿ ವಿ. ಆಮೇಲೆ ಅಲ್ಲಿ ಯಾರೊ “ಮೇಡಂ ನೀವು ಕೊಳ್ಳೆಗಾಲದ ಕಡೆಯೋರಾ? ನಿಮ್ಮ ಲೇಖನಗಳಲ್ಲಿ ಕೊಳ್ಳೆಗಾಲ ಬರುತ್ತಲ್ಲ?” ಅಂದಾಗ, ಇವರು ಇರುವ ಅಷ್ಟೂ ಹಲ್ಲು ತೋರಿಸಿ “ಹ್ಞಾ, ನಾನು ಅಲ್ಲೇ ಹುಟ್ಟಿದ್ದು” ಅನ್ನುತ್ತಾ ಕೊಳ್ಳೆಗಾಲದ ಬಗ್ಗೆ ಮಾತು ಮುಂದುವರೆಸಿದರು. ಆ ಕ್ಷಣ ಅವರ ಕಣ್ಣಲ್ಲಿ ಹಾದು ಹೋದ ಮಿಂಚಿಗೆ ಬೆಂಗಳೂರಮ್ಮ ತುಸು ಹೊತ್ತು ಮರೆಯಾಗಿದ್ದದ್ದು ಮಾತ್ರ ಸುಳ್ಳಲ್ಲ.
 
ಇತ್ತೀಚೆಗೆ ಈಟಿವಿಯಲ್ಲಿ ಜಿ, ಎನ್ ಮೋಹನ್ ಅವರು ನಾಗೇಶ್ ಹೆಗಡೆ ಅವರನ್ನ ಅವರದೇ ತೋಟದಲ್ಲಿ ಸುತ್ತಾಡಿಸಿ “ವಾಕ್ ಟಾಕ್ “ ಮಾಡಿದ್ದರು. ಆಗ ನಾಗೇಶ್ ಹೆಗಡೆ ಅವರು ಹೇಳ್ತಿದ್ದರು, “ಮರಳಿ ಮಣ್ಣಿಗೆ” ಅನ್ನುವುದು ಕೇವಲ ಮನುಷ್ಯರನ್ನು ಕಾಡುವ ವಿಷಯವಲ್ಲ. ಇಲ್ಲೆಲ್ಲೋ ಬಂದು ಕೂಡಿ ಹಾಡಿ, ಮರಿ ಮಾಡಿಕೊಂಡು ಮತ್ತೆ ಎಲ್ಲಿಗೋ ಹಾರುವ ಹಕ್ಕಿಗಳು, ಮತ್ತೆ ಮರುವರ್ಷ ಬಂದೇ ಬರುತ್ತವೆ. ಹುಡುಕಿಕೊಂಡು ಬರುತ್ತವೆ.” ಕಡೆಯಲ್ಲಿ ಮೋಹನ್ ಅವರು. “ಇಷ್ಟು ವರ್ಷದಲ್ಲಿ ನಾಗೆಶ್ ಹೆಗಡೆ ಸಾಧನೆ “ಬರೀ ಮಣ್ಣು” . ಅಂತ ಮಾಡಿದ ತಮಾಷೆಗೆ “ಅದರ ಬಗ್ಗೆ ನನಗೆ ಹೆಮ್ಮೆಯಿದೆ” ಅಂತ ನಕ್ಕರು ನಾಗೇಶ್ ಹೆಗಡೆ. ಅವರ ಇಡೀ ಸಂದರ್ಶನದ ತುಂಬ ಕಂಡಿದ್ದು ಎಲ್ಲಿದ್ದರೂ ಅವರನ್ನು ಕರೆಯುತ್ತಿದ್ದ , ಅವರು ಗುನುಗುನಿಸುತ್ತಿದ್ದ, ಆ ಅದೇ “ಮಣ್ಣ ಹಾಡು.”
ಅನಂತನಾಗ್ ಅವರೂ ತಮ್ಮ “ನನ್ನ ತಮ್ಮ ಶಂಕರ” ಪುಸ್ತಕದಲ್ಲಿ ತಮ್ಮೂರಿನ ಬಗ್ಗೆ ಈಗಲೂ ಇರುವ ವಿಶೇಷ ಆಕರ್ಷಣೆ ಬಗ್ಗೆ, ಆಗಾಗ ಅಲ್ಲಿಗೆ ಹೋಗಿ ಬರೋ ಬಗ್ಗೆ ಬರೆದುಕೊಂಡಿದಾರೆ. ಜೋಗಿ ಅವರೂ ಕೂಡ ಈಚೆಗೆ ಫೇಸ್ಬುಕ್ಕಲ್ಲಿ ಬರಕೊಂಡಿದ್ದರು. ಒಂದಷ್ಟು ಜಮೀನು ತಗೊಂಡು ಊರ ಕಡೆ ಹೊರಟುಬಿಡೋ ಬಗ್ಗೆ. ಹೋಗಬೇಡಿ ಅಂದವರಿಗಿಂತ ಹೋಗಿ ಅಂದವರೇ ಹೆಚ್ಚು. ಹಾಗನ್ನಲು ಕಾರಣ ಅವರ ಮನದ ಮೂಲೆಯಲ್ಲೂ ಅಡಗಿ ಕೂತಿರೋ ಅಂತದೇ ಅದುಮಿಟ್ಟ ಆಸೆಯಾಗಿರಬಹುದಾ? ಬೆಂಗಳೂರಿನ, ಅಥವಾ ಅಂತ ಮಹಾನಗರಗಳಲ್ಲೂ ಇರಬಹುದಾದ ಅರ್ಧಕ್ಕಿಂತ ಹೆಚ್ಚು ಜನರ ಮನಸಲ್ಲಿ ಇಂತದೊಂದು ಆಶೆ ಇದ್ದಿರಲೇಬೇಕು ಅನಿಸುತ್ತದೆ. ಸುಮ್ಮನೇ ಗಮನಿಸಿ ಅಪರೂಪಕ್ಕೆ ಊರಿಗೆ ಬರೋ ಮಂದಿ ಅಲ್ಲಿನ ಕೋನೆ ಕೋನೆಗಳನ್ನೂ ಫೊಟೋ ತೆಗೆತೆಗೆದು ಫೇಸ್ ಬುಕ್ಕಿನಲಿ ಇನ್ನಿಲ್ಲದ ಸಂತಸದಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಅದರ ಕಾರಣವೂ ಇದೇ. ಅಲ್ಲಿ ಹೋದಾಕ್ಷಣ ಬೆಳೆದ ಪರಿಸರ ಆಪ್ತವಾಗಿಬಿಡುತ್ತದೆ. ಮತ್ತದೇ ಮನೆ ಬಟ್ಟೆ ಹಾಕಿಕೊಂಡ ಭಾವ. ಆ ಹೇಳಲಾರದ ಸಂತಸವನು ಹಂಚಿಕೊಳ್ಳಬೇಕೆಂಬ ತಹತಹ ಇದೆಲ್ಲ ಸೇರಿ ಫೋಟೋಮೇಲೆ ಫೋಟೋಗಳಾಗಿ ಅಪ್ಲೋಡ್ ಆಗುವುದು.
ಈ ಆಪ್ತತೆ, ಭಾಷೆಗೆ ನಿಲುಕದ ಎಂತದೋ ಭಾವ ಸಿಗುವುದು, ಆವರಿಸುವುದು ನಾವು ನಾವು ಬೆಳೆದ ನಮ್ಮ ಪರಿಸರದಲಿ ಮಾತ್ರವೇ. ನನ್ನನ್ನ ಕರಕೊಂಡು ಹೋಗಿ ಮಲೆನಾಡಿಗೆ ಬಿಟ್ರೆ ಹಸಿರನ್ನ ನೋಡಿ ಕಣ್ಮನ ತುಂಬಿಕೊಳ್ಳಬಹುದೇ ಹೊರತು ಆಪ್ತಭಾವ ಕಾಡಲಾರದು. ಮಳೆಕಾಣದ ,ಬಯಲು ಸೀಮೆಯ ,ಗಡಿನಾಡ ಬಿರುಕ ನೆಲದಲಿ ನನ್ನ ಭಾವದ ಕೂ ಅರಳಿ ನಿಲ್ಲುತ್ತದೆ. ಯಾವತ್ತೂ ನಾವು ಬೆಳೆದ ಪರಿಸರದಲೇ ನಮ್ಮ ಬಾಲ್ಯದ ಬೇರುಗಳಿರುತ್ತವೆ. ಭಾವಸಾಮ್ರಾಜ್ಯವಿರುತ್ತದೆ. ಹೇಳಲಾರದ, ಅದೆಂತದೋ ಗುಟ್ಟುಗಳಿರುತ್ತವೆ. ಎಲ್ಲರ ಎದೆಯೊಳಗೂ ಅವರವರ ಊರ ಭಾವ ನದಿಯೊಂದು ನಿರಂತರ ಹರಿಯುತ್ತಲೇ ಇರುತ್ತದೆ. ಆದರೆ ಕಿವಿಯಾಗಬೇಕಲ್ಲ.? ಆ ಅಧಿಕಾರಿಯಂತೆ ನಾವು ಕಿರೀಟಧಾರಿಗಳಾಗಿದ್ದುಬಿಡುತ್ತೇವಾ? ಗಡಿಯಾರದ ಜೊತೆ ಸ್ಪರ್ಧೆಗಿಳಿಯುತ್ತ, ಈ ರೆಡಿಮೇಡು ಬದುಕಲಿ ನದಿಯ ಸದ್ದಿಗೆ ಕಿವಿಕೊಡುವುದೇ ಇಲ್ಲವ? ನಿಶ್ಯಬ್ದಕೆ ಹತ್ತಿರವಾಗುತ್ತಾ ಆಗುತ್ತಲೇ ಆ ನೆನಪ ನದಿಯ ಸದ್ದೂ ಹೆಚ್ಚು ಸ್ಪಷ್ಟವಾಗುತ್ತದಾ? ಏನಾದರಾಗಲಿ ಕಡೇ ಪಕ್ಷ ನದಿಯೊಂದು ಬತ್ತದಿದ್ದರೆ ಸಾಕು.
ಬೆಂಗಳೂರಿನ ನಮ್ಮ ಪಕ್ಕದ ಮನೆಯ ಹುಡುಗ ಇಂಗ್ಲೆಂಡಿನಲಿ ಎಂಎಸ್ ಮಾಡಿ ಈಗ ಅಲ್ಲೆ ಕೆಲಸ ಮಾಡುತ್ತಿದ್ದಾನೆ. ಸಣ್ಣ ರಜೆಯಲಿ ಬಂದಿದ್ದ. ಅವನ ಅಪ್ಪನೊಟ್ಟಿಗೆ ಏಳು ಜನ,. ಅಮ್ಮನೊಟ್ಟಿಗೆ ನಾಕು ಜನ, ಅಕ್ಕ ತಂಗಿ ಅಣ್ಣ ತಮ್ಮಂದಿರು. ಎಲ್ಲರ ವಾಸ ಬೆಂಗಳೂರಲ್ಲೆ. ಅವನು ಉತ್ಸಾಹದಿಂದ ದೊಡ್ಡಪ್ಪ, ಚಿಕ್ಕಪ್ಪ, ಅತ್ತೆ. ಚಿಕ್ಕಮ್ಮ ಅಂತೆಲ್ಲ ಎಲ್ಲರ ಮನೆ ಸುತ್ತಿದ. ಸುಮ್ಮನೇ ಸುಮ್ಮನೇ ಬಸವನಗುಡಿ, ಗಾಂಧೀಬಝಾರು, ವಿವಿಪುರಂ ಅಂತ ಓಡಾಡಿದ. ಹಳೆಯ ಗೆಳೆಯರ ಗುಡ್ಡೆ ಹಾಕಿಕೊಂಡ. ಸರಿರಾತ್ರಿವರೆಗೂ ಜೋರು ಗಲಾಟೆ ಮಾಡುತ್ತಾ ಮನೆಮುಂದೆ ವಾಲಿಬಾಲ್, ಷಟಲ್ ಆಡಿದ. ಗಣೇಶನ ಹಬ್ಬ ಬೇರೆ ಬಂದಿತ್ತು. ಡಂಕಣಕ ಮ್ಯೂಸಿಕ್ಕಿಗೆ ಸ್ಟೆಪ್ಪೂ ಹಾಕಿದ. ಪ್ರತಿಯೊಂದನ್ನೂ ಫೋಟೋ ತೆಗೆದುಕೊಂಡಿದ್ದ. ಥೇಟು ಅದೇ ಮನೆ ಬಟ್ಟೆ ಹಾಕಿಕೊಂಡ, ಕಟ್ಟಿದ್ದ ಉಸಿರು ಬಿಟ್ಟು ನಿಂತ ಭಾವ. ವೀಸಾ ಕರೆಯಿತು. ಸಣ್ಣಗೆ ಮುಖ ಮಾಡಿಕೊಂಡು ಹೊರಟುನಿಂತ. ದೂರ ದೇಶದಲಿ ಕೂತು ಆಕಾಶ ನೋಡುವಾಗ, ಅವನೊಳಗೆ ಬೆಂಗಳೂರ ಯಾವ ನೆನಪ ನದಿ ಹರಿಯುತ್ತಿರಬಹುದು? ಕರೆಯುತ್ತಿರಬಹುದು?
 
 

‍ಲೇಖಕರು G

7 October, 2014

ನಿಮಗೆ ಇವೂ ಇಷ್ಟವಾಗಬಹುದು…

13 Comments

  1. ಎಂ.ಸಿ.ನಿಂಗಪ್ಪ.ಹಟ್ಟಿ ಚಿನ್ನದ ಗಣಿ

    ವ್ಹಾ ಅದ್ಬುತ.ಅದೆಂತ ಕಲ್ಪನೆ ನಿಮ್ಮದು ನಾವು ಅದೆಷ್ಟೊೇಬಾರಿ ಅನುಭವಿಸಿರುತ್ತೆವೆ,ಆದರೆ ನಮಗಿದು ಹೊಳೆದಿರುವದಿಲ್ಲಾ.ಬಟ್ಟೆ ಮತ್ತು ಭಾವನೆಗಳ ರೂಪಕ ಸೋಗಸಾಗಿದೆ.

  2. ಅಮರದೀಪ್ ಪಿ. ಎಸ್

    ಕೆಲ್ಸ ಸಿಕ್ಕ ತಕ್ಷಣ ಬೆಂಗಳೂರಲ್ಲಿ ಸೆಟ್ಲ್ ಆಗಿಬಿಡಬೇಕು ಅಂತನ್ನೋರನ್ನು ಸೇರಿಕೊಂಡಂತೆ ನಾನಾ ಜನರ ಮನಸ್ಥಿತಿ ಇದೇ ಆಗಿರುತ್ತೆ. ಯಾಕೆ ಅಂತ ವಿವರಿಸೋಕೆ ವಿಷಯ, ವಸ್ತು, ಯಾವುದೂ ಬೇಕಿಲ್ಲ. ಬೇಕಿರೋದು ತುಡಿತ. ಅದನ್ನು ಕೆಲವರು ಹೇಳಿಕೊಳ್ಳುತ್ತಾರೆ, ಇನ್ನು ಕೆಲವರು ಹೇಳದೇ ಹಳೆಯ ಊರು ಕೇರಿ, ಹೊಲ, ದಾರಿ ಹಿಡಿಯುತ್ತಾರೆ. ಸೂಟು ಬೂಟು ಬಿಟ್ಟು ಹವಾನಿಯಂತ್ರಿತ ಲುಂಗಿ, ಪೈಜಾಮದೊಳಗೆ ತೂರಲು ಇಷ್ಟಪಡುತ್ತಾರೆ. ಯಾಂತ್ರಿಕ ಬದುಕಲ್ಲಿದ್ದೂ ದೂರದ, ಇಷ್ಟದ ಜಾಗ, ಭಾಷೆ, ಎಲ್ಲವನ್ನೂ ಅನುಭವಿಸುವವರು ನಮ್ಮ ನಡುವೆ ಈಗಲೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. …… ಬರಹ ಚೆನ್ನಾಗಿದೆ…..

  3. vidyashankar

    🙂 chandada baraha…

  4. Anil Talikoti

    ನದಿಗೆ ನೆನಪಿನ ಹಂಗು ಇರಲಿಕ್ಕಿಲ್ಲ – ನದಿ ಬದಿಯ ನಮಗಂತೂ ಇದ್ದೆ ಇದೆ. ಇದೊಂದು ವಿಲೋಮ ಚುಂಬಕತೆ – ದೂರ ಇದ್ದಷ್ಟೂ ಸೆಳೆತ ಜಾಸ್ತಿ. ಬರಹ ತುಂಬಾ ಹಿಡಿಸಿತು.
    ~ಅನಿಲ

  5. bharathi b v

    ಕುಸುಮಾ ಲೇಖನ ಚೆನ್ನಾಗಿದೆ. ಇಲ್ಲೊಂದೇ ಒಂದು ಮಾತು – ನಾನು ಬೆಂಗಳೂರನ್ನು ನನ್ನೂರು ಅಂತ ಎಂದೂ ಅನ್ನೋದಿಲ್ಲ. ಆದರೆ, ಬೆಂಗಳೂರು ಗಬ್ಬು-ಕೊಳಕು-ಗೋಳು ಅಂತ ಬಯ್ಯೋದೂ ಇಲ್ಲ.ನಾನು ಹೇಳಿದ್ದು ‘ಬೆಂಗಳೂರೆಂಬ ಹೆಂಡತಿಯಂಥ ನಗರ’ ಅಂತ … ಅವಳಿಲ್ಲದೇ ಬದುಕು ಕಷ್ಟ ಅಂತ ಗೊತ್ತಿದ್ದೂ. ಎಷ್ಟೆಲ್ಲ ಅವಲಂಬನೆ ಇದ್ದಾಗ್ಲೂ ಪಾರ್ಟಿಗಳಲ್ಲಿ ಹೆಂಡತಿಯರ ಜೋಕ್ ಮಾಡಿ ನಗ್ತಿರ್ತಾರಲ್ಲ ಗಂಡಂದಿರು ಆ ಲೆಕ್ಕದಲ್ಲಿ ಬೆಂಗಳೂರಿನ ಬಗ್ಗೆ ನನಗೆ ತುಂಬ ಕನಿಕರ. ಆದರೆ ನಿನ್ನೂರು ಯಾವುದು ಅಂದರೆ ಇವತ್ತಿಗೂ ಮತ್ತೆ ಯಾವತ್ತಿಗೂ ಕೊಳ್ಳೆಗಾಲವೇ …

  6. sindhu

    chenaagide Kusu. beautiful

  7. Anonymous

    touching…n…in depth…keep it up kusuma…

  8. Hemanth kumar S

    Bahala sogasagide KB avare…. andahaage nannuru yelanduru.

  9. Anonymous

    tumba aaptavada baraha

  10. Anonymous

    ನಿಶ್ಯಬ್ದಕೆ ಹತ್ತಿರವಾಗುತ್ತಾ ಆಗುತ್ತಲೇ ಆ ನೆನಪ ನದಿಯ ಸದ್ದೂ ಹೆಚ್ಚು ಸ್ಪಷ್ಟವಾಗುತ್ತದಾ? ದೂರ ದೇಶದಲಿ ಕೂತು ಆಕಾಶ ನೋಡುವಾಗ, ಅವನೊಳಗೆ ಬೆಂಗಳೂರ ಯಾವ ನೆನಪ ನದಿ ಹರಿಯುತ್ತಿರಬಹುದು? ಕರೆಯುತ್ತಿರಬಹುದು? naa ande heliddenalla. nimma baraha eradane ” malgui days “

  11. chaithra

    ದೂರ ದೇಶದಲಿ ಕೂತು ಆಕಾಶ ನೋಡುವಾಗ, ಅವನೊಳಗೆ ಬೆಂಗಳೂರ ಯಾವ ನೆನಪ ನದಿ ಹರಿಯುತ್ತಿರಬಹುದು? ಕರೆಯುತ್ತಿರಬಹುದು? ನಿಶ್ಯಬ್ದಕೆ ಹತ್ತಿರವಾಗುತ್ತಾ ಆಗುತ್ತಲೇ ಆ ನೆನಪ ನದಿಯ ಸದ್ದೂ ಹೆಚ್ಚು ಸ್ಪಷ್ಟವಾಗುತ್ತದಾ? howdu anisuute. naa ande helidenalla nimma barahagalu nanage eradane “malgudi days” anubhava koduttive.

  12. Anitha

    Nangu nanna ooru kai beesi kareda anubhava aythu………. Thumba chenda bardidira

  13. shammi

    sooooperruuu..uhum haage a nadi battida dina naanu nIvu..matte suttalina jagattina melina priti ella maayavaagute..nammurandre nage ishta ishta!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading