ನಿಲ್ದಾಣ..
ಶ್ರೀ ತಲಗೇರಿ
ದಪ್ಪ ದಪ್ಪ ಗೂನು ಮೋಡಗಳು
ಗಾಳಿ ಕೂದಲ ಗಂಟಿಗೆ ಸಿಕ್ಕಿ
ಹೆಣ್ಣು ಗಂಡೆಂಬುದ ನೋಡದೇ
ಉದುರುತ್ತಿವೆ ಗುಂಪುಗಳಲ್ಲಿ
ಗೆರೆಯೆಳೆದಿರಲಿಲ್ಲ
ಒಳಗೊಳಗೇ ಗೀಚುವಾಗ.
ಅಚ್ಚ ಕಪ್ಪಿನ ಉಸಿರು
ಕೊಳವೆ ತುಂಬ ಬಿಡುವಾಗ
ಯಾರೋ ಮೂಗುದಾರ ಎಳೆದಂತೆ…!
ಒರಟು ಚರ್ಮಗಳ ತಿಕ್ಕಾಟಕ್ಕೆ
ಹುಟ್ಟಿಕೊಂಡ ಶಬ್ದಕ್ಕೆ
ಬೆಂಕಿಯುಗುಳುವ ತಾಕತ್ತಿತ್ತೆಂದು
ತಿಳಿದದ್ದು ಹವೆ ಹೆದರಿಕೊಂಡಾಗಲೇ!
ಹೇಳಿದರು ಯಾರೋ,
ರೈಲು ಬಂತೆಂದು.
ಬೋಗಿಗಳ ಮೆಟ್ಟಿಲಿಗೆ
ಅದೆಷ್ಟು ಕೆಸರು ಮೆತ್ತಿಕೊಂಡಿತ್ತು!
ನೆನಪಾಗುತ್ತಿತ್ತೇನೋ ಒರೆಸುವಾಗ
ಅದೆಷ್ಟೋ ಚಪ್ಪಲಿಗಳ
ಬೆವರಿಗೆ ಬಣ್ಣವಿರಬೇಕಿತ್ತು.
‘ಎರಡು ನಿಮಿಷ ಮಾತ್ರ
ಹೊರಡುತ್ತದೆ ರೈಲು’
ಗಡಿಬಿಡಿಯ ಕುಂಟೆಬಿಲ್ಲೆಯಲ್ಲಿ
ನೂಕು ನುಗ್ಗಲು ಕೈ ಬೀಸಲು.
ಕಿಟಕಿ ಸರಳುಗಳ ಹಿಂದೆ,
ದೂರದಲ್ಲಿ ನಿಂತ ನಾಯಿಮರಿಯ
ಬಿಂಬ ಮೂಡುತ್ತದೆ ಅವಳ ಕಂಗಳಲ್ಲಿ.
ಮೊನ್ನೆಯಷ್ಟೇ ಹುಟ್ಟಿದ್ದ
ಬಿಳಿಹಲ್ಲುಗಳೆರಡು ನಾಚುತ್ತವೆ
ಹೆಸರು ಹೇಳಲು.
ಎಳೆದಾಡಿಕೊಳ್ಳುತ್ತವೆ ಕೀಲುಗಳು
ಇಷ್ಟಗಲದ ಜಾಗದಲ್ಲಿ
ಗಿರಕಿ ಹೊಡೆಯುತ್ತ.
ಅಂಟಿಕೊಂಡ ಹನಿಗಳು
ಜಾರಿಕೊಳ್ಳುತ್ತವೆ ಎಲೆಯ ನರಗಳ
ಮೇಲ್ಮೈಯ ಇಳಿಜಾರಿನಲ್ಲಿ.
ಅಲ್ಲೂ ಬಣ್ಣಬಿಟ್ಟಿಲ್ಲ ಎಲೆಗಳು
ಕುಂತುಹೋದವರಿಗೂ ಅದರ ಹಕ್ಕಿಲ್ಲ.
ಹೊರಟಿದ್ದೇನೆ ಚೀಲ ಹಿಡಿದು.
ಹಳಿಗಳ ಅಕ್ಕಪಕ್ಕದಲ್ಲಿ
ಅಪ್ಪುಗೆಯ ಮೇಣದ ಕಲೆಗಳಲ್ಲಿ
ಬಿದ್ದುಕೊಂಡಿರಬಹುದೇನೋ
ಒಂದೆರಡು ತುಂಡು ಮಾತುಗಳು.
ನಾಳೆ ಸಂಜೆಯ ಬಯಲಲಿ
ಕುಳಿತುಕೊಳಲು ಎರಡು ನೆಳಲು.





0 Comments