ನಾನು ಕುಪ್ಪಳಿಗೆ ಬಂದದ್ದು ಜೂನ್ 22, 2009ರ ಸೋಮವಾರ. ಆ ಹೊತ್ತಿಗೆ ಕರಾವಳಿ ಮತ್ತು ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರಬೇಕಿತ್ತು. ಆದರೆ ವಾಡಿಕೆಯ ಮಳೆ ಇಲ್ಲದೆ ಬಿಸಿಲ ಬೇಗೆ ತೀವ್ರತರವಾಗಿತ್ತು. ಮುಖಕ್ಕೆ ರಾಚುತ್ತಿದ್ದ ಬಿಸಿಲಿನ ಝಳ ಎಷ್ಟಿತ್ತೆಂದರೆ ಹಂಪಿಯ ಸುಡುಬಿಸಿಲನ್ನು ಮೀರಿಸುವಂತಿತ್ತು.
ಇಡೀ ದೇಶದಲ್ಲಿಯೇ ಮಳೆ ಇಲ್ಲವೆಂಬ ಆಹಾಕಾರ ಎದ್ದಿತ್ತು. ಉತ್ತರ ಭಾರತ ಬಿಸಿಲ ಝಳದಿಂದ ತತ್ತರಿಸಿತ್ತು. ದಕ್ಷಿಣ ಭಾರತ ಮಳೆಗಾಗಿ ಕಾತರಿಸುತ್ತಿತ್ತು. ನಮ್ಮ ಹವಾಮಾನ ತಜ್ಞರ ಪ್ರಕಾರ ಆ ವರ್ಷದ ನೈರುತ್ಯ ಮುಂಗಾರು ಹದಿನೈದು ದಿನ ಮೊದಲೇ ಕೇರಳದ ಮೂಲಕ ಬರಬೇಕಾಗಿತ್ತು. ಹದಿನೈದು ದಿನ ಮೊದಲಿರಲಿ, ಜೂನ್ ಮೊದಲ ವಾರದಲ್ಲಿ ಬರಬೇಕಾದ ವಾಡಿಕೆಯ ಮಳೆಯೇ ಜೂನ್ 20 ಆದರೂ ಮಾಯವಾಗಿತ್ತು.
ಯಾಕೆ ಹೀಗೆ? ಇದಕ್ಕೆ ಹವಾಮಾನ ತಜ್ಞರು ಕೊಟ್ಟ ಮತ್ತೊಂದು ಕಾರಣವೆಂದರೆ, ಮೇ ಹದಿನೈದಕ್ಕಷ್ಚೇ ಹಿಂದೂ ಮಹಾಸಾಗರದಲ್ಲಿ ಮುಂಗಾರು ಮಾರುತಗಳು ರೂಪುಗೊಂಡಿದ್ದವಂತೆ. ಆದರೆ ಅರಬ್ಬೀ ಸಮುದ್ರದಲ್ಲಿ ಎದ್ದ ಒಂದು ‘ಸೈಕ್ಲೋನ್’ ದಕ್ಷಿಣ ಭಾರತದಾದ್ಯಂತ ಏಕಾಏಕಿ ನುಗ್ಗಿ ನೈರುತ್ಯ ದಿಕ್ಕಿಗೂ ಚಲಿಸಿದ್ದರಿಂದ ಮಾಮೂಲು ಮುಂಗಾರು ಮಾರುತದ ತೇವಾಂಶವನ್ನು ಹೀರಿಬಿಟ್ಟವಂತೆ!
ಹೀಗಾಗಿ ಸಿದ್ಧವಾಗಿ ಹೊರಟಿದ್ದ ಮುಂಗಾರು ಹಿಂದೆ ಸರಿಯಿತು. ಮತ್ತೊಂದು ವರದಿಯ ಪ್ರಕಾರ ಸಮುದ್ರದ ನೀರು ಅಗತ್ಯಕ್ಕಿಂತ ಬಿಸಿಯಾಗುತ್ತಿದೆ. ಆದ್ದರಿಂದ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ ಎಂಬುದಾಗಿತ್ತು. ಇಷ್ಟಾಗಿಯೂ ಸದ್ಯದಲ್ಲಿಯೇ ಮಳೆ ಬರಲಿದೆ ಎಂಬುದು ಹವಾಮಾನ ಇಲಾಖೆಯ ನೀರೀಕ್ಷೆಯಾಗಿತ್ತು.
ಈ ನಡುವೆ ಇಡೀ ವೃತ್ತಪತ್ರಿಕೆಗಳಲ್ಲಿ ಮಳೆ ಇಲ್ಲದ್ದೇ ಸುದ್ದಿ. ವಿದ್ಯುತ್ ಬರ, ದಿನಕ್ಕೆ ಹನ್ನೆರಡು ಗಂಟೆ ಕರೆಂಟಿಲ್ಲ. ಕೆಲವೊಮ್ಮೆ 24 ಗಂಟೆಯೂ ಇಲ್ಲ. ವಿದ್ಯುತ್ ಮಂತ್ರಿಗಳು ದೇವರೇ ಗತಿ ಎಂದು ಹಣೆಗೆ ಕೈ ಹಚ್ಚಿ ಕೂತರು! ಮುಜರಾಯಿ ಮಂತ್ರಿ ರಾಜ್ಯದ ಸಾವಿರಾರು ದೇವಸ್ಥಾನಗಳಲ್ಲಿ ಪೂಜೆ ಹೋಮಗಳನ್ನು ನಡೆಸಬೇಕೆಂದು ಪೂಜಾರಿಗಳಿಗೆ ತಾಕೀತು ಮಾಡಿದ ಸುದ್ದಿಯೂ ಪತ್ರಿಕೆಯಲ್ಲಿ ಬಂತು. ಮುಖ್ಯಮಂತ್ರಿಗಳೂ ಹೋಮ-ಹವನಕ್ಕೆ ಸಿದ್ಧರಾಗುತ್ತಿದ್ದು, ಇದುವರೆಗೆ ಯಾರೂ ಮಾಡಿರದ ಹೋಮವನ್ನು ಅವರು ಸಂಘಟಿಸುತ್ತಾರೆ ಎಂಬ ಸುದ್ದಿ ಭರ್ಜರಿಯಾಗಿ ರಾರಾಜಿಸಿತು.
ಈ ನಡುವೆ ಮುಂದಿನ 24 ಗಂಟೆಗಳಲ್ಲಿ ಮುಂಗಾರು ಕಾಲಿಡುವುದು ಖಚಿತ ಎಂದು ಹವಾಮಾನ ತಜ್ಞರು ಪ್ರಕಟಿಸಿದರು. ಮಾನ್ಯ ಕಂದಾಯ ಮಂತ್ರಿಗಳು ತಾವೇ ವರುಣನ ಪ್ರತಿನಿಧಿ ಎಂಬಂತೆ ಟಿ.ವಿ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ನಾಳೆಯೇ ಮಳೆ ಸುರಿಯಲಿದೆ ಎಂದೂ ಬಿತ್ತರಿಸಿ ಬಿಟ್ಟರು! ಅಷ್ಟೇ ಅಲ್ಲ, ‘ಬಂದೇ ಬರುತ್ತದೆ, ಬರಲೇ ಬೇಕು’ ಎಂದು ಮಳೆರಾಯನಿಗೇ ಹುಕುಂ ಕೊಡುವಂತೆ ಮಾತನಾಡಿದರು.
ನಿನ್ನೆ ಗೆಳೆಯರೊಬ್ಬರು, ‘ಬಳ್ಳಾರಿಯ ಗಣಿಧಣಿಗಳ ಈ ಮಾತನ್ನು ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಕೇಳುತ್ತಿರುವಾಗ, ಮಳೆರಾಯ ಕೇಳದಿರಲು ಸಾಧ್ಯವೇ’ ಎಂಬ ವ್ಯಂಗ್ಯದ ಮಾತನ್ನೂ ಹೇಳಿದರು. ನಾಳೆ ಆಯಿತು, ನಾಡಿದ್ದಾಯಿತು, 24 ಗಂಟೆಗಳಲ್ಲ, 48 ಗಂಟೆಯೂ ಕಳೆಯಿತು. ವರುಣನ ಆರ್ಭಟವಿರಲಿ, ವರುಣನ ಪಿಸು ಮಾತೂ ಇಲ್ಲದಂತೆ ಆಕಾಶದಲ್ಲಿ ನೀರವಂತೆ ಮಡುಗಟ್ಟಿತ್ತು.
ರೈತರ ಮುಖದಲ್ಲಿ ದುಗುಡ ಹೆಚ್ಚಾಗಿತ್ತು. ವೃತ್ತಪತ್ರಿಕೆಗಳು ಬರಿದಾದ ಅಣೆಕಟ್ಟೆಗಳ ಚಿತ್ರಗಳನ್ನು ಪ್ರಕಟಿಸುತ್ತಾ ‘ಬರ’ದ ಮುನ್ಸೂಚನೆ ನೀಡತೊಡಗಿದವು. ಅಲ್ಲಿ ಇಲ್ಲಿ ಮೋಡಗಳು ಕಾಣಿಸಿ ಕೊಳ್ಳುತ್ತಿದ್ದವಾದರೂ ಮಳೆಯ ಸಿಂಚನ ಆಗಲೇ ಇಲ್ಲ.
ತತ್ಕಾಲಕ್ಕೆ ಕುಪ್ಪಳಿಯ ಶತಮಾನೋತ್ಸವ ಭವನದ ಅತಿಥಿ ಗೃಹದಲ್ಲಿಯೇ ಉಳಿದಿದ್ದ ನಾನು ಪ್ರತಿದಿನ ಬೆಳಗ್ಗೆ ಕವಿಶೈಲ, ಕವಿಮನೆ, ಬೆಕ್ಕನೂರು, ಗಡಿಕಲ್ಲು ಹೀಗೆ ಒಂದೆರಡು ಕಿ.ಮೀ. ಪಾಸಲೆಯಲ್ಲಿ ವಾಯುವಿಹಾರ ಮಾಡುತ್ತಿದ್ದೆ. ಮೊದಲೇ ಕಪ್ಪು ಬಣ್ಣದ ನನ್ನ ಮುಖ ಮಲೆನಾಡಿನ ಹವಾಮಾನಕ್ಕೆ ಎಣ್ಣೆಕೆಂಪಾದರೂ ಆಗಬಹುದು ಎಂಬ ಒತ್ತಾಸೆ ಇಟ್ಟುಕೊಂಡು ಬಂದಿದ್ದ ನಾನು ಬಳ್ಳಾರಿಯನ್ನೂ ಮೀರಿಸುವ ಈ ಬಿಸಿಲಿಗೆ ಇನ್ನಷ್ಟು ಕರಿಯನಾಗಿ ಕಂಗೊಳಿಸತೊಡಗಿದ್ದೆ.
ಅಲ್ಲಲ್ಲಿ ದಟ್ಟ ಮೋಡಗಳು ಕಾಣಿಸಿಕೊಳ್ಳುತ್ತಿದ್ದರೂ ಚಳ್ಳೆ ಹಣ್ಣು ತಿನ್ನಿಸುತ್ತಾ ಎಲ್ಲರಿಗೂ ಟೋಪಿ ಹಾಕುತ್ತಿದ್ದ ಅವುಗಳನ್ನು ಕಂಡು ‘ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ’ ಎಂಬ ಕವಿ ಶಿವರುದ್ರಪ್ಪನವರ ಕವಿತೆ ಗನುಗುತ್ತಾ ಇರಬೇಕಾದ ಪರಿಸ್ಥಿತಿ ಉಂಟಾಗಿತ್ತು. ಅಷ್ಟೇ ಅಲ್ಲದೆ ನಮ್ಮ ತತ್ವಪದಕಾರರು ಹಾಡಿದ ‘ಯಾತಕ್ಕೆ ಮಳೆ ಹೋದವೋ ಶಿವಾ ಶಿವಾ ಲೋಕ ತಲ್ಲಣಿಸುತಾವೋ’ ಎಂಬ ಹಾಡು ಮತ್ತೆ ಮತ್ತೆ ನನ್ನ ಎದೆಯಲ್ಲಿ ಅನುರಣಿಸುತ್ತಿತ್ತು.
ಒಬ್ಬನೇ ಅಲೆದಾಡುವಾಗ ಸ್ವಲ್ಪ ಜೋರಾಗಿಯೇ ಈ ಹಾಡುಗಳನ್ನು ಗುನುಗುತ್ತಿದ್ದೆ. ಯಾರು ಸಿಕ್ಕರೂ ಮಳೆ ಇಲ್ಲದ್ದೇ ಮಾತು. ಇದರ ನಡುವೆ ನಮ್ಮ ಅಧ್ಯಯನ ಕೇಂದ್ರದ ಕಾವಲುಗಾರ, ತೇಜಸ್ವಿ ಕಾದಂಬರಿಯಲ್ಲಿನ ಮಂದಣ್ಣನಂಥ ಸುಪ್ತ ಪ್ರತಿಭೆ ‘ಗುಂಡ’ ಮಾತ್ರ ಮಳೆ ಬಂದೇ ಬರ್ತದೆ ನೋಡಿ ಸಾ’ ಎಂದು ದಾರ್ಶನಿಕನಂತೆ ಹೇಳುವಾಗ ನನ್ನಲ್ಲಿ ಮಳೆಯ ನೀರೀಕ್ಷೆ ಹೆಚ್ಚಾಗುತ್ತಿತ್ತು. ನನ್ನ ಕಣ್ಣಲ್ಲಿ ಆಸೆಯ ಮೋಡಗಳು ಕಟ್ಟುತ್ತಿದ್ದವು.
0 ಪ್ರತಿಕ್ರಿಯೆಗಳು