ಒಂದಾನೊಂದು ಕಾಲವಿತ್ತು. ಮಳೆ ಇಂಥ ದಿನವೇ ಕಡಲ ತಡಿಯಲ್ಲಿ ಕಾಲೂರುತ್ತದೆ ಎಂದು ಖಚಿತವಾಗಿ ಹೇಳುವ ಕಾಲ ಅದು. ಭೂಮಿ ಮತ್ತು ಆಕಾಶಗಳ ಸುಮಧುರ ಸಂಬಂಧ ನಿಯತವಾಗಿ ಇದ್ದ ಕಾಲವದು. ಭೂಮಿಯ ಅಚ್ಚ ಹಸಿರು, ಪಚ್ಚೆ ನೆಲ, ಆಕಾಶವನ್ನೇ ಚುಂಬಿಸುವ ಬೃಹತ್ ಮರಗಳು, ಬೆಟ್ಟಗಳ ತುತ್ತ ತುದಿಯಲ್ಲಿ ಹುಲುಸಾಗಿ ಬೆಳೆದು ತೊನೆದಾಡುವ ಹುಲ್ಲುಗಾವಲುಗಳು, ಅಣಬೆ, ಆರ್ಕಿಡ್, ಬಿದಿರು, ಬೆತ್ತ, ಬಳ್ಳಿಗಳೂ ಸೇರಿದಂತೆ ಸಾವಿರಾರು ಬಗೆಯ ಹೆಣೆದು ಹಬ್ಬಿದ ನಿಬಿಡಾರಣ್ಯದ ಜೀವಸಂಕುಲಗಳು ನಳನಳಿಸುತ್ತಿದ್ದ ಕಾಲ ಅದು.
ಸಮುದ್ರದಲ್ಲಿ ಹುಟ್ಟಿ ಆಕಾಶದಲ್ಲಿ ವಿಹರಿಸುವ ಮೇಘ ಸಂಕುಲಕ್ಕೂ ಈ ಜೀವಜಾಲಕ್ಕೂ ಎಲ್ಲಿಲ್ಲದ ನಂಟು. ನನಗೆ ಗೊತ್ತಿರುವಂತೆ ನಮ್ಮ ಮಂತ್ರಿಗಳೆಂಬ ಮಹಾ ಮೂರ್ಖರು, ಪುರೋಹಿತರು ನಡೆಸುವ ಹೋಮ ಹವನಾದಿಗಳಿಗೆ ಮಳೆರಾಯ ಕ್ಯಾರೆ ಎಂದ ಕಾಲವಿಲ್ಲ. ಆದರೆ ಜೀವಜಾಲದ ಮುಗ್ಧ ಸಂಕುಲ ಬಾಯ್ತೆರೆದಾಗ ಅವುಗಳ ಅಭೀಪ್ಸೆಗೆ ತಕ್ಕಂತೆ ಮಳೆರಾಯ ಹನಿಹನಿಯಾಗಿ ಕರಗುತ್ತಿದ್ದ. ತೊರೆತೊರೆಯಾಗಿ ಹರಿಯುತ್ತಿದ್ದ.
ಆದರೆ ಇಂದು ಸ್ವಾರ್ಥವೇ ಮೈವೆತ್ತಂತಿರುವ ಮನುಷ್ಯನ ದುರಾಸೆಗೆ, ನಿರ್ಲಕ್ಷ್ಯಕ್ಕೆ ಜೀವಸಂಕುಲ ಸರ್ವನಾಶವಾಗುತ್ತಿದೆ. ಸಮುದ್ರದಿಂದ ಹುಟ್ಟುವ ಮೋಡಗಳು ನಮ್ಮ ವನರಾಶಿಗೆ ಆಕರ್ಷಿತವಾಗಿ ಮಳೆ ಸುರಿಸುತ್ತವೆ ಎಂಬ ಕನಿಷ್ಠ ‘ಕಾಮನ್¬ಸೆನ್ಸ್’ ಇಲ್ಲದ ನಮ್ಮ ರಾಜಕಾರಣಿಗಳು ಅರಣ್ಯವನ್ನು ಹರಾಜು ಹಾಕಿ, ಮಳೆಗಾಗಿ ಹೋಮ ಮಾಡುತ್ತಾರೆ.’ ನೋಡನೋಡುತ್ತಿದ್ದಂತೆ ಸಾಗರ, ಹೊಸನಗರ, ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಕಾರ್ಕಳ, ಕುದ್ರೆಮುಖ, ಪುತ್ತೂರು, ಸುಳ್ಯದ ಅನೇಕ ಮಳೆಕಾಡುಗಳು ಕರಗಿ ಹೋಗಿ, ಅಕೇಶಿಯಾ, ಮ್ಯಾಂಜಿಯಂ, ರಬ್ಬರುಗಳನ್ನು ಹೊತ್ತು ಕುಳಿತಿವೆ. ಎಲೆ ಕೊಳೆಯದ ಆ ಮರಗಳಡಿಯಲ್ಲಿ ಜೀವಜಾಲ ಬದುಕುವುದಾದರೂ ಹೇಗೆ? ಒಟ್ಟಿನಲ್ಲಿ ಸಹ್ಯಾದ್ರಿಯ ‘ಜಟಿಲ ಕಾನನಗಳಲ್ಲಿ ಕುಟಿಲ ಕಾರಸ್ಥಾನ’ಗಳು ಎಡೆಬಿಡದೆ ನಡೆಯುತ್ತಿವೆ.
ಇಷ್ಟಾಗಿಯೂ ನಮ್ಮ ಪಶ್ಚಿಮ ಘಟ್ಟಗಳ ನಿರ್ದಿಷ್ಟ ಪ್ರದೇಶಗಳಲ್ಲಿ, ಮನುಷ್ಯ ನುಸುಳಲು ಅಸದಳವಾದ ಕೆಲವು ಭಾಗಗಳಲ್ಲಿ ಇನ್ನೂ ಕಾಡುಗಳು ಬದುಕಿವೆ. ಆಗುಂಬೆ, ಕೊಡಚಾದ್ರಿ, ಹುಲಿಕಲ್, ನಾಗೋಡಿ, ಮೇಘಾನೆ, ಗೋವರ್ಧನ ಗಿರಿ, ಮುಂತಾದ ಘಟ್ಟಗಳಲ್ಲಿ ಇಂದಿಗೂ ಅರಣ್ಯ ಒಂದಿಷ್ಟಾದರೂ ಉಳಿದಿವೆ. ಅಳಿದುಳಿದ ಸಸ್ಯ ಸಂಕುಲ ಮತ್ತು ಪ್ರಾಣಿಸಂಕುಲದ ಈ ಬಾಯ್ದೆರೆವ ಬದುಕಿಗೆ ನೀರುಣಿಸಲಾದರೂ ಮಳೆರಾಯ ಬರಲೇಬೇಕು. ಹಾಗೇ ತಡವಾಗಿಯಾದರೂ ಅವನು ಬಂದ. ಮನುಜನ ಮೇಲೆ ಮುನಿಸಿಕೊಂಡು ದೂರಾಗಿದ್ದ ಮಳೆರಾಯ ಅಂತೂ ಬಂದ.
ಅಂದು ಜುಲೈ ಒಂದನೇ ತಾರೀಖು. ಆಷಾಢ ಮಾಸದ ಆರಂಭ. ಪುನರ್ವಸು ಮಳೆಯ ಮೊದಲ ಪಾದ, ನೈರುತ್ಯ ಮೂಲೆಯಿಂದ ಕರಿ ಮೋಡಗಳ ಸವಾರಿ ಮಾಲೆಮಾಲೆಯಾಗಿ ಬರತೊಡಗಿತು. ಬೆಳಗ್ಗೆ ಪ್ರಖರವಾಗಿ ಇದ್ದ ಚುರುಕು ಬಿಸಿಲು ಮಧ್ಯಾಹ್ನದ ವೇಳೆಗೆ ಮಾಯವಾಗಿ ತಣ್ಣೆಳಲಿನ ತಂಪು ಗಾಳಿ ಬೀಸತೊಡಗಿತು. ಮೂರು ಗಂಟೆಯ ವೇಳೆಗೆ ದೂರದಲ್ಲೆಲ್ಲೋ ಗುಡುಗಿದ ಸದ್ದು. ಬೃದಕಾರದ ಮೋಡಗಳು ದಟ್ಟೈಸುತ್ತಿದ್ದಂತೆ ಇಡೀ ವಾತಾವರಣವೇ ಗಂಭೀರ. ತಡಮಾಡದೆ ಮಳೆ ಬಂದೇ ಬಿಟ್ಟಿತು!
ತುಂತುರು ತುಂತುರು ಹನಿ, ಹದವರಿತ ತಣ್ಣನೆಯ ಗುಡುಗು, ನಮ್ಮ ಗುಂಡನ ಕಣ್ಣಲ್ಲಿ ಆನಂದಬಾಷ್ಪ. ‘ನೋಡಿ ಸಾರು, ನಾನೇಳಲಿಲ್ವೇ, ಮಳೆ ಬರ್ತದೆ ಅಂತ’ ಎಂದು ಉದ್ಗರಿಸಿದ. ಹೌದು ಮಳೆ ಬಂದೇ ಬಂತು. ಎಲ್ಲಿಯೋ ದೂರದಲ್ಲಿ ಘಟ್ಟ ಏರುತ್ತಿರುವ ಹತ್ತಾರು ಲಾರಿಗಳ ಏರಿಳಿತದ ಸದ್ದಿನಂತೆ ಮೊರೆಯತೊಡಗಿತ್ತು. ಹತ್ತೇ ನಿಮಿಷದಲ್ಲಿ ಅದು ಬಿರುಗಾಳಿಯ ಸದ್ದು ಎಂದು ಹೊತ್ತಾಯಿತು.
ರಭಸದ ಗಾಳಿಗೆ ಎತ್ತರದ ಮರಗಳ ರಂಬೆಕೊಂಬೆಗಳು ಆಕಾಶ ಭೂಮಿ ಒಂದಾಗುವಂತೆ ತೊಯ್ದಾಡತೊಡಗಿದವು. ಗಾಳಿಯ ರಭಸದೊಡನೆ ದಪ್ಪದಪ್ಪ ಹನಿಗಳ ಹೊಡೆತ. ಹಾಗೇ ಅರ್ಧಗಂಟೆಯ ಚದುರಂಗದಾಟದಲ್ಲಿ ಗಾಳಿ ಮಳೆಯ ಪರಸ್ಪರ ಪೈಪೋಟಿ. ಕೊನೆಗೆ ಸೋತದ್ದು ಗಾಳಿ. ಗಾಳಿ ನಿಶ್ಚಲವಾಗುತ್ತಿದ್ದಂತೆ ಮಳೆಯ ಆರ್ಭಟ. ಸ್ವರಸ್ವರವಾಗಿ ಆರಂಭವಾದ ಮಳೆ ಕ್ರಮೇಣ ರಭಸಗೊಳ್ಳುತ್ತಾ ಧಾರೆಧಾರೆಯಾಗಿ ಅಪ್ಪಳಿಸತೊಡಗಿತ್ತು. ಹಗಲು ನಾಲ್ಕು ಗಂಟೆ ಸಂಜೆಯ ಏಳರಂತೆ ಮಾರ್ಪಾಟಾಯಿತು. ಅದೆಲ್ಲಿ ಅಡಗಿದ್ದವೋ ಮೋಡಗಳು, ಅವು ಮೋಡಗಳಲ್ಲ, ಕಾರ್ಮೋಡಗಳು! ಬಿಸಿಲ ಜಳದಿಂದ ಬಾಯ್ತೆರೆದ ಭೂತಾಯಿಗೆ ಅದೊಂದು ಆಹ್ಲಾದಕರ ರಾತ್ರಿ.
ಅದು ಮೊದಲಿಗೆ ಗೋಚರವಾದದ್ದು ಕಪ್ಪೆಗಳ ಮೇಳದ ಮೂಲಕ. ಎಂಟು ಗಂಟೆಯ ವೇಳೆಗೆ ಕರೆಂಟ್ ಮಾಯ. ಬಿರುಮಳೆ ಮುಂದುವರಿದೇ ಇತ್ತು. ಕಗ್ಗತ್ತಲ ರಾತ್ರಿ. ನಾನು ಉಳಿದಿದ್ದ ಅತಿಥಿಗೃಹದಲ್ಲಿ ಮುಂಬತ್ತಿಯೂ ಇಲ್ಲ. ಮ್ಯಾಚ್ಬಾಕ್ಸ್ ಮೊದಲೇ ಇಲ್ಲ. ಸದ್ಯ ನನ್ನಲ್ಲೊಂದು ಟಾರ್ಚ್ ಇತ್ತು, ಟಾಯ್ಲೆಟ್ ರೂಮಿಗೆ ಅನುಕೂಲವಾಗುವಂತೆ!
ಇಡೀ ಕಟ್ಟಡದಲ್ಲಿ ನಾನು ಮತ್ತು ಗುಂಡ ಇಬ್ಬರೇ. ಸುತ್ತಲೂ ಕತ್ತಲ ರಾಶಿ. ಗುಡುಗು ಮಿಂಚು ಕೂಡ ಇಲ್ಲದ ರಾತ್ರಿ. ಆದರೆ ಮಳೆ ಮಾತ್ರ ಧಾರೆಧಾರೆಯಾಗಿ ಸುರಿಯುತ್ತಲೇ ಇತ್ತು. ಮೊದಲ ಮಳೆಯ ಸುಖವೋ ಎಂಬಂತೆ ಜೀರುಂಡೆಗಳ ಅನವರತ ನಾದ! ರಾತ್ರಿಯಾಗುತ್ತಿದ್ದಂತೆ ಕಪ್ಪೆ ಕುಟುಂಬಗಳ ವಟವಟ ತಾಳ, ಕಾಡು, ಬೆಟ್ಟ, ಮನೆ, ಮಠ, ಆಕಾಶ, ನಕ್ಷತ್ರ ಮುಂತಾದ ಸೃಷ್ಟಿಯ ಯಾವ ಅದ್ಭುತಗಳು ಈಗ ಇಲ್ಲಿ ಇಲ್ಲ, ಎಲ್ಲವೂ ಮಂಗಮಾಯ, ಕತ್ತಲು ಮತ್ತು ಮಳೆ ಎರಡೇ ಸರ್ವವ್ಯಾಪಿ, ಸರ್ವಂ ಶೂನ್ಯಂ.
ಕುವೆಂಪು ಕುಪ್ಪಳಿಯ ಈ ನೀರವ ರಾತ್ರಿಯನ್ನು ಅನುಭವಿಸಿಯೇ ತಾನೇ ಈ ಕವನ ರಚಿಸಿದ್ದು.
ಕದ್ದಿಂಗಳು; ಕಗ್ಗತ್ತಲು;
ಕಾರ್ಗಾಲದ ರಾತ್ರಿ.
ಸಿಡಿಲ್ಮಿಂಚಿಗೆ ನಡುಗುತ್ತಿದೆ
ಪರ್ವತ ವನಧಾತ್ರಿ.
ತುದಿಯಿಲ್ಲದೆ ಮೊದಲಿಲ್ಲದೆ
ಹಿಡಿದಂಬರವನು ತಬ್ಬಿದೆ
ಕಾದಂಬಿನಿ ರಾಶಿ;…
ಹೊಂಬಳ್ಳಿಯು ಹೊಮ್ಮಿದವೊಲು
ಥಳ್ಳೆನೆ ಮುಗಿಲಂಚು,
ಇರುಳಲಿ ಹಗಲಿಣಿಕಿದವೊಲು
ಹಾವ್ನಾಲಗೆ ಮಿಂಚು
ನೆಕ್ಕುತಲಿದೆ ಕತ್ತಲೆಯನು;
ಕುಕ್ಕುತಲಿದೆ ಬುವಿಗಣ್ಣನು
ಮಿಂಚ್ಹಕ್ಕಿಯ ಚಂಚು!
ಆಕಾಶವೆ ನೀರಾಯ್ತೆನೆ
ಸುರಿಯುತಿದೆ ಭೋರ್ಭೋರೆನೆ
ಮುಂಗಾರ್ಮಳೆ ಧಾರೆ;
ಲಯ ಭೀಷಣ ಮಳೆಭೈರವ
ಮೈದೋರಲು ಮರೆಯಾಗಿವೆ
ಭಯದಲಿ ಶಶಿತಾರೆ!
ಲಯ ರುದ್ರನ ಜಯ ಡಿಂಡಿಮ
ಘನ ವಜ್ರದ ರಾವ;
ಭವ ವಿಪ್ಲವಕರ ಭೈರವ
ವರ ತಾಂಡವ ಭಾವ!
ದಿಗ್ದಿಕ್ಕಿಗೆ ಅದೊ ಹೊಕ್ಕಿದೆ
ಕಾರ್ಮುಗಿಲಿನ ಕೇಶ!
ಸಿಡಿಲ್ಮಿಂಚಲಿ ಹೊಮ್ಮುತಿದೆ
ಮಳೆ ಭೈರವ ರೋಷ!
ಮಳೆ ಎಂಬುದು ಬರಿ ಸುಳ್ಳಿದು!
ಮಳೆಯಲ್ಲಿದು! ಮಳೆಯಲ್ಲಿದು!
ಪ್ರಲಯದ ಆವೇಶ!
0 ಪ್ರತಿಕ್ರಿಯೆಗಳು