ಸಂಕೇತದತ್ತ
ಚಿತ್ರಕಲಾ ಪ್ರತಿಭೆ ಕೀರ್ತನಾ ಪ್ರಸಾದ್ ಅವರು ಮೂಲ ತಮಿಳುನಾಡಾದರೂ ತಮ್ಮ ಪತಿಯೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಇಲ್ಲಿನ ಸ್ವಚ್ಛಂದ ಪರಿಸರವು ಇವರಲ್ಲಿನ ಕಲಾವಿದೆಯನ್ನು ಎಚ್ಚರಗೊಳಿಸಿದೆ. ಬಾಲ್ಯದಿಂದಲೂ ರೂಢಿಸಿಕೊಂಡು ಬಂದಿದ್ದ ಚಿತ್ರಕಲೆಯಲ್ಲಿ ಮತ್ತೆ ತೊಡಗಿಕೊಂಡಿದ್ದಾರೆ. ಶಾಸ್ತ್ರೋಕ್ತವಾದ ಪೇಂಟಿಂಗ್ ಅನ್ನು ಅಭ್ಯಾಸಿಸುತ್ತಿದ್ದವರು ಸ್ವಲ್ಪ ಬದಲಾವಣೆಯತ್ತ ಮುಖಮಾಡಿ ಅಮೂರ್ತದತ್ತ ಹೆಜ್ಜೆ ಹಾಕಿದ್ದಾರೆ.
ಸ್ವಚ್ಛಂದ ಪರಿಸರದಲ್ಲಿ ಸ್ವೇಚ್ಛೆಯಿಂದ ಹಾರಾಡುವ ಪಕ್ಷಿಗಳ ಹಾವ-ಭಾವ-ಚಿಲಿಪಿಲಿಗಳನ್ನಷ್ಟೇ ಅಲ್ಲದೇ ಅವು ಬದುಕುವ ಪರಿಯ ಸೂಕ್ಷ್ಮತೆಯನ್ನು
ಗಮನಿಸುತ್ತಾ ಬಂದಿದ್ದಾರೆ. ಕಲಾವಿದೆಯಾದ ಕೀರ್ತನಾ ಅವರು ಅವುಗಳನ್ನು ಯಥಾವತ್ತಾಗಿ ಚಿತ್ರಿಸದೇ ಅವುಗಳಲ್ಲಿನ ಬಣ್ಣಗಳನ್ನು ತಮ್ಮದೇ ಶೈಲಿಯಲ್ಲಿ ಅಮೂರ್ತರೂಪದಲ್ಲಿ ಚಿತ್ರಿಸಿದ್ದಾರೆ.
ಕೀರ್ತನಾ ಅವರ ತಂದೆ ಹಾಗೂ ತಾಯಿ ಇಬ್ಬರೂ ಚಿತ್ರಕಾರರೇ ಆಗಿದ್ದರಿಂದ ಇವರಲ್ಲಿ ಚಿತ್ರ ರಚನೆಯು ಹುಟ್ಟಿದಾರಭ್ಯವೇ ಒಗ್ಗಿ ಹೋಗಿದೆ. ಗುರು ಎಸ್ ಧನಪಾಲ್ ಅವರು ಈಕೆಯಲ್ಲಿದ್ದ ಕಲಾವಿದೆಗೆ ಪೋಷಣೆಯನ್ನಿತ್ತು, ಶಾಸ್ತ್ರೋಕ್ತವಾಗಿ ಅಭ್ಯಾಸಿಸುವಂತೆ ಮಾಡಿ ಸ್ಫೂರ್ತಿಯಾದರು ಎನ್ನುತ್ತಾ ಗುರುವಿಲ್ಲದೇ ಇಂತಹ ಕಲೆಯು ಒಲಿಯದು ಎನ್ನುತ್ತಾರೆ. ಅಷ್ಟೇ ಅಲ್ಲದೇ ಪತಿಯೂ ಚಿತ್ರಕಾರರಾಗಿದ್ದು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ್ದಾರೆ.
ಕೀರ್ತನಾ ಓದಿದ್ದು ಇತಿಹಾಸವದರೂ ಪ್ರಸ್ತುತಕ್ಕೆ ಹೆಚ್ಚು ಪ್ರಧಾನ್ಯತೆ ಕೊಡುತ್ತಾ ತಮ್ಮನ್ನು ತಾವು ಹೊಸ ಹೊಸ ಆಲೋಚನೆಯತ್ತ ತೊಡಗಿಸಿಕೊಂಡಿದ್ದಾರೆ. ಕೀರ್ತನಾ ಅವರ ಚಿತ್ರಕಲಾ ಆಸಕ್ತಿಗೆ ರೆಕ್ಕೆ-ಪುಕ್ಕಗಳು ಬಂದಿವೆ. ಅದರ ಫಲವೇ ‘ಕಲರ್ಸ್ ಆಫ್ ದ ವಿಂಡ್’ ಪಕ್ಷಿಗಳ ಕುರಿತಾದ ಚಿತ್ರಕಲಾ ಪ್ರದರ್ಶನ. ಈ ಕಲಾಪ್ರದರ್ಶನವು ಮಾರ್ಚ್ 31 ರಂದು (ಇಂದು) ಸಿಕೆಪಿಯ ಅಸಿಸ್ಟೆಂಟ್ ಪ್ರೊಫೆಸರ್ ಆದ
ಹಾಗೂ ಖ್ಯಾತ ಕಲಾವಿದರಾದ ಬಾಬು ಜತ್ಕರ್ ಅವರು ಉದ್ಘಾಟಿಸಲಿದ್ದಾರೆ. ಮತ್ತೊಬ್ಬ ಖ್ಯಾತ ಚಿತ್ರಕಾರರಾದ ಎಸ್ ಎ ವಿಮಲನಾಥನ್ ಅವರು ಅತಿಥಿಯಾಗಿ ಆಗಮಿಸಲಿದ್ದಾರೆ. ಸಿಕೆಪಿಯ ಕಲಾಗ್ಯಾಲರಿಯಲ್ಲಿ ಸಂಜೆ 5ಕ್ಕೆ ಇದು ಉದ್ಘಾಟನೆಯಾಗಲಿದೆ.
ಈ ಪ್ರದರ್ಶನವು ಏಪ್ರಿಲ್ 6ರವರೆಗೆ ತೆರೆದಿರುತ್ತದೆ. ತಮಿಳುನಾಡಲ್ಲಿದ್ದರೂ ಬೆಂಗಳೂರಿನ ಸಿಕೆಪಿಯಲ್ಲಿ ನಡೆಯುತ್ತಿದ್ದ ‘ಚಿತ್ರಸಂತೆ’ಗೆ ಆಗಾಗ ಬಂದು ಹೋಗುತ್ತಿದ್ದರಂತೆ. ಎಂದಾದರೂ ಒಮ್ಮೆ ಇಲ್ಲಿನ ಕಲಾ ಗ್ಯಾಲರಿಯಲ್ಲಿ ತಮ್ಮದೊಂದು ಕಲಾ ಪ್ರದರ್ಶನ ಏರ್ಪಡಿಸಬೇಕೆಂಬ ಹೆಬ್ಬಯಕೆಯನ್ನು ಇಟ್ಟುಕೊಂಡಿದ್ದರಂತೆ! ಆದರದು ಇಷ್ಟು ಬೇಗ ಈಡೇರುತ್ತೇ ಅನ್ನುವ ನಂಬಿಕೆ ನನಗೆ ಇರಲಿಲ್ಲ ಎನ್ನುವುದು ಕೀರ್ತನಾ ಅವರ ಮಾತು. ಚೆನ್ನೈ ನಲ್ಲಿ ಹಲವಾರು ಪ್ರದರ್ಶನಗಳನ್ನು ನಡೆಸಿದ್ದಾರೆ.
ಆದರೆ ಈ ಸಿಕೆಪಿಯಲ್ಲಿ ಈಗ ನಡೆಸುತ್ತಿರುವ ಕಲಾಪ್ರದರ್ಶನದಲ್ಲಿ ಹೆಚ್ಚಿನ ವಿಶೇಷತೆಗಳಿವೆ ಎನ್ನುತ್ತಾರೆ. ಅದೇನೆಂದರೆ ಹೊಸ ಜಾಗ, ಹೊಸ ಜನ, ಹೊಸ ವಿಚಾರ ಮಾಡುವ ಹಲವು ಬಗೆಯ ಕಲಾರಾಧಕರು, ಉತ್ತಮ ಕಲಾ ಮಾರುಕಟ್ಟೆಗೆ ಹೆಸರಾದ ಊರು! ಇಲ್ಲಿಯ ವಿಮರ್ಶೆ ನೇರವಾಗಿರುತ್ತೆ. ಕಾರಣ ನನಗೆ ತಿಳಿದವರು ಇಲ್ಲಿ ಯಾರೂ ಇಲ್ಲವಲ್ಲಾ? ‘ನೋ ಸಾಫ್ಟ್ ಕಾರ್ನರ್!’ ಎನ್ನುವುದು ಕಲಾವಿದೆ ಕೀರ್ತನಾ ಅವರ ಅಭಿಪ್ರಾಯ.
ನವಿಲು ಹಾಗೂ ಗಿಳಿಗಳಲ್ಲದೇ ಹಲವಾರು ಹಕ್ಕಿಗಳನ್ನೂ ತಮ್ಮದೇ ಶೈಲಿಯ ವರ್ಣ ವಿನ್ಯಾಸದಲ್ಲಿ ಚಿತ್ರಿಸಿದ್ದಾರೆ. ಎಷ್ಟೇ ಇ-ಕಲಾಪ್ರದರ್ಶನಗಳು ನಡೆದರೂ ನೇರಾನೇರ ಚಿತ್ರಕೃತಿಗಳನ್ನು ನೋಡುವ, ಆಸ್ವಾದಿಸುವ ಪರಿಯೇ ಬೇರೆ. ಕಲಾರಾಧಕನಿಗೂ ಹಾಗೂ ಕಲಾಕೃತಿಗೂ ಮಧ್ಯೆ ಏರ್ಪಡುವ ತರಂಗದ ಅನುಭವ ನೇರ ನೋಡುಗನೇ ಬಲ್ಲ. ಗೋಡೆಗೆ ತಗುಲಿಸಿದ ಕ್ಯಾನ್ವಾಸನ್ನು ಹೆಚ್ಚು ನಿಂತು ನೋಡುವ, ಅನುಭವಿಸುವ ರೀತಿ ಇ-ಎಕ್ಸಿಬಿಷನ್ನಲ್ಲಿ ಸಿಗದು.
0 ಪ್ರತಿಕ್ರಿಯೆಗಳು