ಸರ್ಕಾರಿ ಸವಲತ್ತಿನಲ್ಲಿ ದಳ್ಳಾಲಿಕೋರತನಕ್ಕೆ ರಹದಾರಿಯಿದು
ರಾಜಾರಾಂ ತಲ್ಲೂರ್
– – – – – – – – – – – – – – —
ಬೆಂಗಳೂರಿನಲ್ಲಿ ವೆಂಕಟಪ್ಪ ಆರ್ಟ್ ಗ್ಯಾಲರಿ ಖಾಸಗಿಗೆ ಹೋಗುವ ಬಗ್ಗೆ ಚರ್ಚೆ ಗಾವೆದ್ದಿದೆ.
ಅದನ್ನು ಹೊಂದಬಯಸಿರುವ ಖಾಸಗಿ ಫೌಂಡೇಶನ್ ಪಿಪಿಪಿ ಮೂಲಕ ಸರ್ಕಾರಿ ಸವಲತ್ತನ್ನು ತನ್ನ ಕೈಗೆ ತೆಗೆದುಕೊಂಡು, ಬಹಳ ವೃತ್ತಿಪರವಾಗಿ ನಡೆಸುವ ಮಾತಾಡುತ್ತಿದೆ. ಅದಕ್ಕೆ ವಿರೋಧ ವ್ಯಕ್ತಪಡಿಸಿ ಸಿಳ್ಳೆ ಹೊಡೆದಿರುವ ಕರ್ನಾಟಕದ ಕಲಾವಿದರು ತಮ್ಮ ಬಳಿ ಪ್ರಖರ ಯೋಜನೆಗಳೇನೂ ಇಲ್ಲದಿದ್ದರೂ, ಸರ್ಕಾರ ತನ್ನ ಪೋಷಣೆಯಲ್ಲೇ ಗ್ಯಾಲರಿ ನಡೆಸಲಿ ಎಂದಿದ್ದಾರೆ.
ದಿಲ್ಲಿ, ಮುಂಬಯಿ, ಚೆನ್ನೈ ನಂತಹ ಹಬ್ ಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಕಲೆ-ಮತ್ತದರ ಮಾರುಕಟ್ಟೆ ಅವತಾರ ಶೈಶವದಲ್ಲೇ ಇದೆ. ಇಲ್ಲಿನ ಮಾರುಕಟ್ಟೆಯಲ್ಲಿರುವ ಯಶಸ್ವೀ ಕಲಾವಿದರೂ ಆ ಹಬ್ ಗಳನ್ನೇ ಆಧರಿಸಿ ವ್ಯವಹರಿಸುತ್ತಾರೆ.
ಖಾಸಗೀ ಫೌಂಡೇಶನ್ ಹೇಳುತ್ತಿರುವುದು ಹೊರನೋಟಕ್ಕೆ ಓಹೋ! ಅದ್ಭುತ ಅನ್ನಿಸುತ್ತಿದೆಯಾದರೂ, ಇದು ಯಾಕೋ ಊರಿನ ಶೆಟ್ರ ಕಿರಾಣಿ ಅಂಗಡಿ ಒಡೆದು – ಮಾಲ್ ಕಟ್ಟಿದ ಹಾಗೆಯೇ ಕಾಣಿಸುತ್ತಿದೆ- ಕೇಳಿಸುತ್ತಿದೆ. ಯಥಾವಕಾಶ ಹದ್ದುಗಳು, ಗಿಡುಗಗಳು, ಗರುಡಗಳು ತಮ್ಮತಮ್ಮ ಪಾಲನ್ನು ಊಹಿಸಿಯೇ ಬಾಯಿ ನೀರು ಬಿಡುತ್ತಾ ಹೇಳಿಕೆಗಳ ಮೂಲಕ ಈ ಹಸ್ತಾಂತರವನ್ನು ಸಮರ್ಥಿಸುತ್ತಿವೆ.
ನಾನು ಹೇಳಬೇಕಾಗಿರುವುದು ಇಷ್ಟು:
ಖಾಸಗಿ ಸಂಸ್ಥೆಯೊಂದು ಇಲ್ಲಿ ಕಲಾವಿದರ ಕಲಾಪ್ರದರ್ಶನಗಳನ್ನು ಏರ್ಪಡಿಸಿದರೆ, ಅದು ಹೊರನೋಟಕ್ಕೆ ಸರ್ಕಾರಿ ಕೃಪಾಪೋಷಿತ ಪ್ರದರ್ಶನ ಆಗಿರುತ್ತದೆಯೇ ಹೊರತು, ಅಲ್ಲಿನ ಕಲಾಕೃತಿಗಳ ಮಾರಾಟ – ಅದರ ಹಿಂದಿರುವ ಕಮಿಷನ್ ವ್ಯವಹಾರಗಳು ಬಹಳ ವ್ಯವಸ್ಥಿತವಾಗಿ ಖಾಸಗಿ ಮಾರುಕಟ್ಟೆ ಕುಳಗಳ ಹಿಡಿತದಲ್ಲೇ ಉಳಿಯುತ್ತವೆ.
ಪ್ರದರ್ಶನ ನಾಟ್ ಫರ್ ಪ್ರಾಫಿಟ್ ಅಂದರೆ, ಅದರರ್ಥ, ಕಲಾವಿದನ ಕಲಾಕೃತಿಗೆ ಸಿಗುವ ಬೆಲೆ, ಅದರ ಮಾರಾಟದಿಂದ ಪ್ರದರ್ಶಕನಿಗೆ ಸಿಗುವ ಕಮಿಷನ್ ಇವೆಲ್ಲ “ನಾಟ್ ಫರ್ ಪ್ರಾಫಿಟ್” ಅಲ್ಲ!
ಸರ್ಕಾರ ತನ್ನನ್ನು ಅಪ್ ಡೇಟ್ ಮಾಡಿಕೊಳ್ಳುವ ಬದಲು, ಯಾರದ್ದೋ ಕೈಗೆ ತನ್ನ ಸವಲತ್ತುಗಳನ್ನು ಕೊಟ್ಟು, ದುಡ್ಕೊಳ್ಳಪ್ಪಾ ಅಂದಹಾಗಿದೆ – ಈ ವೆಂಕಟಪ್ಪ ಪರಬಾರೆ ವ್ಯವಹಾರ.
0 ಪ್ರತಿಕ್ರಿಯೆಗಳು