ಪಾಲಿಗೆ ಬಂದ ಎಲ್ಲವನ್ನೂ ನೋಡಲಾಗುತ್ತಿಲ್ಲ
ರೇಣುಕಾ ರಮಾನಂದ /ಅಂಕೋಲಾ
ಆತ
ಕಿನಾರೆ ಗಾಳಿಯಲ್ಲಿ
ಒಬ್ಬೊಂಟಿಯಾಗಿ
ಮರಳಡಿಗೆ ಕಾಲು ಹುಗಿಸಿಕೊಂಡು
ನಿನ್ನೆಯಂತೆಯೇ ನಿಂತಿದ್ದ
ಹೇಳುವುದನ್ನು ಸರಿಯಾಗಿ ಕೇಳು
ಬಿಟ್ಟುಹೋದ ಅವಳ ಪಾದದ
ಗುರುತುಗಳು ಇಲ್ಲೇ ಇಂಗಿವೆ
ಹುಡುಕು ಆಲಸಿಯಾಗಬೇಡ
ಒತ್ತಾಯಿಸಿತು ದಂಡೆ
ಮಾಮೂಲಿಯಂತೆ
ಎಲ್ಲವೂ ಸುಳ್ಳು..!
ಸುಯ್ಲೆಬ್ಬಿಸಿ ಅಸಮ್ಮತಿ
ಸೂಚಿಸಿತು ಗಾಳಿಮರ
ಈ ದಂಡೆಗೂ ಅದಕ್ಕೂ ಯಾವಾಗಲೂ
ಆಗಿಬರುವುದಿಲ್ಲ
ಉಪ್ಪುಕಡಲಿಗೋ ವಿಪರೀತ ಸುಸ್ತು
ಎತ್ತಿ ಬಿಸುಟ ಶವಗಳದ್ದೋ
ಐನೀರು ಮುಳುಗಿ ಹೋದ ಕನ್ಯೆಯರದ್ದೋ
ಲೆಕ್ಕ ಇಡಬಹುದು
ಕಾಣೆಯಾದವರದ್ದೆಲ್ಲ ಆಗಲಿಕ್ಕಿಲ್ಲ
ಖಾಯಂ ಕೈ ಚಲ್ಲಿಬಿಡುತ್ತದೆ ಅದು
ಕೇಳುವಂತಿಲ್ಲ
ಅವಳು ಹೋದಲಾಗಾಯ್ತು
ಮುದ್ದು ಪದಗಳನ್ನೆಲ್ಲ ಕದ್ದು
ಮಾರಲಾಗಿದೆ ಸಂತೆಬೀದಿಗಳಲ್ಲಿ
ಈಗುಳಿದವು
ಹೂಳು ತುಂಬಿದ ಜವುಗು ಮಣ್ಣಿನೊಳಗೆ
ಬರೀ ಕಠಿಣಪದಗಳು
ನಾನಾಥ೯ಕಗಳು
ಒದ್ದೆ ರೇವೆಯಗುಂಟ ಬಿಳುಚಿಕೊಂಡಿವೆ
ಇಡಿ ಇಡೀ ನೆನಪುಗಳು
ಆತ೯ ಕಣ್ಣುಗಳಗುಂಟ
ಹಬ್ಬಿದ ಹಸಿಹಸಿ ನರನಾಡಿಗಳ ಚಿತ್ರವ
ಒಮ್ಮೆ ಎಡಕ್ಕೂ ಇನ್ನೊಮ್ಮೆ ಬಲಕ್ಕೂ
ಹಿಂದಿನ ಸಂಜೆಯೇ ಗೀರಿಬಿಟ್ಟಿವೆ
ಏಡಿಮರಿಗಳು
ಅವಳಿಲ್ಲದ ಇವನನ್ನ
ಭರಿಸುತ್ತಾರೆಯೇ ಯಾರಾದರೂ…..
ಬೇಗ ಭರತವುಕ್ಕಿ ಎಲ್ಲ ಅಳಿಸಿಹೋಗಲಿ
ಪ್ರಭುವೇ
ಪಾಲಿಗೆಬಂದ ಎಲ್ಲವನ್ನೂ
ನೋಡಲಾಗುತ್ತಿಲ್ಲ..





ಚಂದದ ಅರ್ಥ ಗರ್ಭಿಭಿತ ಮಣ್ಣಿನ ವಾಸನಯ ಕವಿತೆ.
ಖುಷಿ
Thank u
ರೇಣುಕ..ಕಡಲ ಕಿನಾರೆಯಲ್ಲಿ ಓಡಾಡಿಸಿ ಬಿಟ್ಟು ಹೋಗಿದೆ ನಿಮ್ಮ ಕವಿತೆ
ನಿತ್ಯನೂತನ ಕಡಲು ಸಾವಿರ ಕಲ್ಪನೆಯ ಒಡಲು
ತುಂಬಾ ಮನ ಮಿಡಿವ ಕವನ. ” ಇಡೀ ಇಡೀ ನೆನಪುಗಳು ಆರ್ತ ಕಣ್ಣುಗಳಗುಂಟ ” !!ಚಂದದ ಸಾಲುಗಳು. ” ಕಣ್ಣಂಚಿನ ಕಣ್ಣ ಹನಿಯೇ ಜಾರಗೊಡೆ ನಿನ್ನ ಅಲ್ಲಿಹುದು ನೂರು ನೆನಪುಗಳ ಕವನ ” ಎನ್ನಲೇ? ಮನದಿ ನೂರು ಭಾವಗಳ ಉಬ್ಬರಿಸುವ ಕವನ.
ಸರೋಜಿನಿ ಮೇಡಂ ತಮ್ಮ ಅಬಿಮಾನಕ್ಕೆ ಋಣಿ
ಅವಳಿಲ್ಲದ ಇವನನ್ನು
ಭರಿಸುತ್ತಾರೆಯೇ ಯಾರಾದರೂ….
ಒಮ್ಮೆ ಗಕ್ಕನೆ ಮನ ತಡೆದು ನಿಲ್ಲಿಸುವ ಸಾಲುಗಳು. ಕಣ್ಣು ತುಂಬಿ ಬಂತು.
ಸಂಗೀತಾ ಮ್ಯಾಡಂ ತುಂಬ ಖುಷಿ
ಮನಮುಟ್ಟುವ ಕವನ. ಪ್ರಕೃತಿ ಮತ್ತು ಮನಸ್ಥಿತಿಗಳ ಜುಗಲ್ಬಂದಿ ಚೆನ್ನಾಗಿ ಬಿಂಬಿತವಾಗಿದೆ.
ಒಹ್ ಧನ್ಯವಾದ ಪ್ರಕಾಶಣ್ಣ
ಸಂಗೀತಾ ಮ್ಯಾಡಂ ತುಂಬ ಖುಷಿ