ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಲ್ಗೆಜ್ಜೆಯಲ್ಲಿದ್ದ ಎರಡು ಗೆಜ್ಜೆಗಳು ಕಾಣುತ್ತಿಲ್ಲವಲ್ಲ…

ಒಂದು ಕವಿತೆ

ಪ್ರವರ ಕೊಟ್ಟೂರು

ನದಿಯ ದಂಡೆಯಲ್ಲೇಕೆ ನಿಂತಿರುವಿ ನಲ್ಲೆ,

ನಸುಕಿನಿಂದಲೂ ನಿನ್ನನೇ

ಹುಡುಕಿ ಬೆವರು ಹರಿದು

ಮೈಯೆಲ್ಲ ಉಪ್ಪಡರಿದೆ

ಈಗ ಕೊಂಚ ಸಮಾಧಾನಕ್ಕೆ

ತಣ್ಣಗಾಗಿಹೆ,

ತಂಗಾಳಿಯ ಪಿಸುಮಾತ ಕೇಳುತ್ತಿರುವೆಯೇನು

ನನಗೇನು ಕೇಳುತ್ತಿಲ್ಲವಲ್ಲ,

ನೀ ಎದುರಿಗಿದ್ದಕ್ಕೆ ನನ್ನ

ಎದೆ ಬಡಿತವೇರಿ

ಕಿವಿ ತಮಟೆಗಪ್ಪಳಿಸುತ್ತಿದೆ,

ಮಳೆ ನಿಂತು ಸುಮಾರು ಹೊತ್ತಾಯಿತು

ಹನಿ ತೊಟ್ಟಿಕ್ಕುತ್ತಿದೆಯಲ್ಲ,

ಹೋ ನೀರಿಗೆ ಕಲ್ಲು ಎಸೆಯುತ್ತಿರುವೆಯೇನು

ಅದಕ್ಕೇ ನೀರ ಮೇಲೆ

ಅಲೆಗಳು ನಗುತ್ತಾ ತೇಲುತ್ತಿವೆ

ನಿನ್ನ ಮೂಗುತ್ತಿಯಂತೆ.

ರೆಪ್ಪೆಗಳನ್ನೊಂಚೂರು ಮಿಟುಕಿಸು

ಅಷ್ಟು ಚೆಂದದ ಕಣ್ಣುಗಳಿಗೆ

ದೃಷ್ಟಿಯಾದೀತು,

ಹುಬ್ಬ ತೀಡಿದ್ದ ಕಪ್ಪು ಕಾಡಿಗೆಗೂ ಸಹಿತ,

ಕಾಲ್ಗೆಜ್ಜೆಯಲ್ಲಿದ್ದ ಎರಡು ಗೆಜ್ಜೆಗಳು

ಕಾಣುತ್ತಿಲ್ಲವಲ್ಲ,

ನೀರಲ್ಲಿ ಕಾಲಿಟ್ಟಾಗ ಮೀನುಗಳು

ಬೆರಳ ಚುಂಬಿಸಲು ಹೋಗಿ

ಆಯಾತಪ್ಪಿ ನುಂಗಿರಬೇಕು,

ಇಲ್ಲೇಕೆ ನಿಂತಿರುವೆ ನಲ್ಲೆ

ಮೌನಕ್ಕೆ ಶರಣಾಗಿ

ನದಿಯ ದಂಡೆಯ ಮೇಲೆ

‍ಲೇಖಕರು G

16 October, 2012

3 Comments

  1. hi

    Wow!!

  2. Prakash Srinivas

    ತುಂಬಾ ತುಂಬಾ ಚೆನ್ನಾಗಿದೆ!

  3. venkatesh

    classy….. “ರೆಪ್ಪೆಗಳನ್ನೊಂಚೂರು ಮಿಟುಕಿಸು ಅಷ್ಟು ಚೆಂದದ ಕಣ್ಣುಗಳಿಗೆ ದೃಷ್ಟಿಯಾದೀತು,” superb line ….

    lovelyu imagination

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading