ನಗಿಸೋ ಕಾರ್ಟೂನು ಹಬ್ಬದಲ್ಲಿ ಕಣ್ಣುಗಳನ್ನು ತೇವಗೊಳಿಸಿದ ಕ್ಷಣಗಳು!
ಸತೀಶ್ ಆಚಾರ್ಯ
ಕಳೆದ ವರ್ಷದ ಕಾರ್ಟೂನು ಹಬ್ಬದಲ್ಲಿ ರೋಟರಿ ಕಲಾಮಂದಿರದಲ್ಲಿ ತುಂಬಿದ ಸಭಿಕರನ್ನೆಲ್ಲ ಇಮೋಷನಲ್ ಮಾಡಿದ ಸಂದರ್ಭ, ನಮ್ಮೂರಿನ ಕೋವಿಡ್ ಯೋಧರನ್ನು ಗುರುತಿಸಿ ಸನ್ಮಾನಿಸಿದಾಗ.
ಕೊರೋನಾ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲದೆ, ಅತ್ಯಗತ್ಯವಾಗಿ ಬೇಕಾದ ಸುರಕ್ಷಾ ಸಾಮಗ್ರಿಗಳ ಕೊರತೆ ಇದ್ದಾಗಲೂ ಕೋವಿಡ್ ಶಂಕಿತರನ್ನು ಹಿಂದೆ ಕಳಿಸದೆ ಟೆಸ್ಟ್ ಮಾಡಿದವರು, ಪಾಸಿಟಿವ್ ರೋಗಿಗಳನ್ನು ಆರೈಕೆ ಮಾಡಿದವರು, ತುರ್ತು ಇದ್ದಾಗಲೆಲ್ಲ ಹಿಂದೆ ಮುಂದೆ ನೋಡದೆ ಜನರನ್ನು ಆಸ್ಪತ್ರೆಗೆ ಕೊಂಡೊಯ್ದ ಆಂಬುಲೆನ್ಸ್ ಚಾಲಕರು, ಸ್ಮಶಾನದಲ್ಲಿ ಕೋವಿಡ್ನಿಂದ ಮಾಡಿದವರ ಶವವನ್ನು ಮನೆಯವರೂ ಮುಟ್ಟಲು ಹೆದರುತ್ತಿದ್ದಾಗ ಧೈರ್ಯದಿಂದ ಶವ ಸಂಸ್ಕಾರ ಮಾಡಿದವರು, ಲಾಕ್ಡೌನ್ ಕಾಲದಲ್ಲಿ ಅನ್ನ -ನೀರಿಗೆ ಗತಿ ಇಲ್ಲದೇ ಅಲೆದಾಡಿದ ಜನರಿಗೆ ಊಟ ನೀಡಿದ ಅನ್ನದಾತರು, ಹಸಿವಿನಿಂದ ಕಂಗಾಲಾದ ಬೀದಿಯ ಮೂಕ ಪ್ರಾಣಿಗಳಿಗೆ ತುತ್ತು ನೀಡಿದವರು…ಹೀಗೆ ಇವರೆಲ್ಲ ವೇದಿಕೆಗೆ ಬಂದು ಸನ್ಮಾನ ಸ್ವೀಕರಿಸಿದಾಗ ಸಭೆಯಲ್ಲಿ ಸೇರಿದವರೆಲ್ಲ ಸಾರ್ಥಕ ಭಾವನೆಯಿಂದ ವಂದಿಸಿದರು. ವೇದಿಕೆಗೆ ಅಂದು ಬೆಲೆ ಸಿಕ್ಕಿತು. ಅದೊಂದು ಅದ್ಭುತ ಕ್ಷಣ!
ಕಳೆದೊಂದು ವರ್ಷದಲ್ಲಿ ಆರೋಗ್ಯ ಇಲಾಖೆಯ ಕೋವಿಡ್ ಯೋಧರು ಬೇರೆಯೇ ರೀತಿಯ ಸವಾಲುಗಳನ್ನು ಎದುರಿಸಿದರು. ವ್ಯಾಕ್ಸಿನ್ ನೀಡಿ ಕೊರೋನಾದ ಅಲೆಗಳನ್ನು ತಡೆಯೋ ಸವಾಲು. ಈ ಸವಾಲಿನಲ್ಲಿ ಯಶಸ್ವಿಯಾದರು ಕೂಡ. ಈ ಸಾಲಿನ ಕೋವಿಡ್ ಯೋಧರನ್ನು ಗುರುತಿಸುವ ಜವಾಬ್ದಾರಿ ನಮ್ಮದು.
ಈ ವರ್ಷದ ಕಾರ್ಟೂನು ಹಬ್ಬದಲ್ಲಿ ಕುಂದಾಪುರ ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಒಬ್ಬೊಬ್ಬ ಕೋವಿಡ್ ಯೋಧರನ್ನು ಆಯ್ದು ಡಿಸೆಂಬರ್ 5 ರ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಈ ಆಯ್ಕೆಯನ್ನು ಆಯಾಯ PHC ಯ ಆರೋಗ್ಯ ಅಧಿಕಾರಿಯೇ ಮಾಡಲಿದ್ದಾರೆ. ಜೊತೆಗೆ ತಮ್ಮ ಕೋವಿಡ್ ಯೋಧರ ಬಗ್ಗೆ ಒಂದು ನಿಮಿಷದ ವಿಡಿಯೋ ಕೂಡ ನೀಡಲಿದ್ದಾರೆ. ಈಗಾಗಲೇ ಹಲವು ಆರೋಗ್ಯ ಅಧಿಕಾರಿಗಳು ಖುಷಿಯಿಂದ ಸಹಕರಿಸಿದ್ದಾರೆ. ಅವರಿಗೆಲ್ಲ ಧನ್ಯವಾದಗಳು.
ಕಾರ್ಟೂನು ನಗಿಸೋ ಕಲೆ ಅನಿಸಿರಬಹುದು. ಆದರೆ ಕಲಾವಿದರಾಗಿ ಕಾರ್ಟೂನು ಹಬ್ಬದಲ್ಲಿ ಇಂತಹ ಭಾವನಾತ್ಮಕ ಕ್ಷಣಗಳಿಗಾಗಿ ನಾವೆಲ್ಲ ಕಾಯುತ್ತಿರುತ್ತೇವೆ.
0 ಪ್ರತಿಕ್ರಿಯೆಗಳು