ದಿನೇಶ್ ಕುಕ್ಕುಜಡ್ಕ
ಕಾರ್ಟೂನಿಸ್ಟ್ ಜಿ.ಬಾಲಾ ಬಂಧನ ಈ ನೆಲದ ವಿಮರ್ಶಾಪ್ರಜ್ಞೆಯ ಚಿತೆಗಿಟ್ಟ ಧೂರ್ತತನದ ಕೊಳ್ಳಿ.
ಆ ಚಿತ್ರದಲ್ಲಿ ಅವಹೇಳನಕಾರಿಯಾದದ್ದೇನಿದೆಯೋ; ಬೌದ್ಧಿಕ ದಾರಿದ್ರ್ಯವನ್ನೇ ಹಾಸಿ ಹೊದ್ದು ಮಲಗಿರುವ ಇಂದಿನ ಪ್ರಭುತ್ವನೀತಿಯೇ ಹೇಳಬೇಕು! ಎಲ್ಲೋ ಕಿಡಿಹೊತ್ತಿ ತಳಮಳ ದಳ್ಳುರಿಗಳಿಗೆ ಕಾರಣವಾಗುತ್ತಿದ್ದ ಫ್ಯಾಸಿಸ್ಟ್ ಮನೋಭಾವ ದೇಶದ ಎಲ್ಲಾ ರಾಜ್ಯಗಳಿಗೂ, ಎಲ್ಲಾ ಪಕ್ಷಗಳಿಗೂ, ಎಲ್ಲಾ ಮಾರಿಕೊಂಡ ಮೆದುಳುಗಳಿಗೂ ವಿಷಜ್ವಾಲೆಯಂತೆ ಹಬ್ಬುತ್ತಿರುವುದು ಈ ನೆಲಕ್ಕೆರಗಿದ ಸಾಂಸ್ಕೃತಿಕ ಆಘಾತ!
ವಿಜ್ಞಾನ-ತಂತ್ರಜ್ಞಾನಗಳಲ್ಲಷ್ಟೇ ಪಾಶ್ಚಾತ್ಯರಂತಾದರೆ ಸಾಲದು. ಟೀಕೆ-ವಿಮರ್ಶೆಗಳನ್ನು, ಅದರಲ್ಲೂ ಕಲೆಯ ಮೂಲಕ ಅಭಿವ್ಯಕ್ತಿಸಲ್ಪಡುವ ವಿಚಾರಘಟಕಗಳನ್ನು ವಿಶಾಲವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಆವಾಹಿಸಿಕೊಳ್ಳುವುದರಲ್ಲೂ ಪಾಶ್ಚಾತ್ಯರನ್ನು ಮಾದರಿಯಾಗಿಸಿಕೊಳ್ಳಬೇಕು. ಸಂಸ್ಕೃತಿಯ ಬಗ್ಗೆ ಹೆಮ್ಮೆಯಿಂದ ಎದೆಯುಬ್ಬಿಸಿಕೊಳ್ಳುವ ನಾವು ಸಂಸ್ಕೃತಿಯ ಮೂಲಸ್ರೋತವೆನಿಸಿರುವ ಕಲಾಭಿವ್ಯಕ್ತಿಯೊಳಗಿನ ಮುಕ್ತತೆಯ ಜೀವಸೆಲೆಯನ್ನು ಗ್ರಹಿಸಿ ಗೌರವಿಸುವ ಮನೋಭಾವವನ್ನೂ ರೂಢಿಸಿಕೊಳ್ಳಬೇಕು!
ಕಲೆಯ ಒಳಗಿರುವ ಪ್ರೀತಿಸುವ ಶಕ್ತಿ ಪ್ರಕ್ಷುಬ್ದಗೊಂಡ ವಿದ್ವೇಷಕಾರಿ ಮನಸ್ಸುಗಳಲ್ಲಿ ಅರಿವಿನ ಒರತೆ ಉಕ್ಕಿಸಲೆಂದಷ್ಟೇ ಪ್ರಾರ್ಥಿಸುತ್ತೇನೆ.
ಮನಸೊಳಗಿನ ಹೊಲಸನ್ನು ಹೊರಹಾಕುವುದೇ ಅಭಿವ್ಯಕ್ತಿ ಸ್ವಾತಂತ್ರ್ಯವೆಂದಾದರೆ ಧಿಕ್ಕಾರವಿರಲಿ ಆ ಸ್ವಾತಂತ್ರ್ಯಕ್ಕೆ