ಕೆ.ವಿ. ತಿರುಮಲೇಶ್ ಕೇಳ್ತಾರೆ
ಕಾಫಿ ಹೌಸ್-ನಲ್ಲೇನು ಕವಿತೆ ಓದುವುದು?
ಓದುವುದಾದರೆ ಓದಿ ಶ್ಮಶಾನದಲ್ಲಿ
ಕಿವಿಯಿರದ ಕಿವಿಗಳಿಗೆ ಕಣ್ಣಿರದ ಕಣ್ಗಳಿಗೆ
ಕೇವಲ ಆತ್ಮಗಳಿಗೆ
ನಾಭಿಯಿಂದೇಳಲಿ ಓಂಕಾರವೆಂಬುದು
ನಭದಿಂದ ಬೀಳಲಿ ಕಣಗಿಲೆ ಹೂಗಳು
ಪ್ರತಿಭಾ ನಂದಕುಮಾರ್ ಖಡಕ್ ಉತ್ತರ
ಕೆ ವಿ ಟಿ ಡಾರ್ಲಿಂಗ್…..
ಓದಿ ಹೇಳಬೇಕಾಗಿಲ್ಲ, ಆತ್ಮಗಳಿಗೆ,
ಕಿವಿ ಎನ್ನುವುದು ಕೇಳುವುದು ಮಾತ್ರವಲ್ಲ
ಕಣ್ಣು ಕಾವ್ಯ ಬೇಡುವುದಿಲ್ಲ
ನಾಭಿ ಓಂಕಾರದ ಮೂಲವಲ್ಲ
ನಭದಿಂದ ಬೀಳುವುದಿಲ್ಲ ಕಣಗಿಲೆ ಹೂ.
ಸ್ಮಶಾನ ಎನ್ನುವುದು ಏನು
ಕೆಫ಼ೆಗಳಲ್ಲದೆ ಬೇರೆ ಇರುವುದೇನು
ಹೆಣಗಳು ಮಲಗುವಲ್ಲಿ
ಆತ್ಮಗಳು ಗೈರು ಹಾಜರಿ ಅಲ್ಲಿ
ಓಂಕಾರ ಬಿಂದು ಇತ್ಯಾದಿ
ನಾಭಿ ನಭ ಏಳಲಿ ಬೀಳಲಿ ಎಲ್ಲ
ಬರೀ ಕ್ಲೀಷೆ, ಪದ ತೀಟೆ
ಬೇಕಿದ್ರೆ ಒಂದ್ ಕಪ್ ಕಾಫ಼ಿ ಕುಡಿಯಿರಿ
ಮೇಲೊಂದಿಷ್ಟ್ ಪಕೋಡ ತಿನ್ನಿ
ಇನ್ನೂ ಸಾಲದಂದ್ರೆ ಪಕ್ಕದ ಟೇಬಲ್ಲಿನ
ಸುಂದರಿಯ ನಾಭಿ ದಿಟ್ಟಿಸಿ.
ಕಣಗಿಲೆ ಅಲ್ಲದಿದ್ದರೂ ಬೀಳುತ್ತವೆ ಕೆನ್ನೆಗೇನಾದರೂ …. !!
Good experience. Let this jugalbandi continue. We will enjoy it. Is it okay with you both?
ofcourse…bring it on!!
ಕಾಫಿ ಹೌಸ್:
ಇಲ್ಲ,
ಕಾಫಿ ಹೌಸಿಗೆ
ಹೊಂದುವ ಠಾಕು-ಠೀಕು,
ನಯ-ನಾಜೂಕು.
ನಾಭಿಯಿಂದೇಳುವ ಓಂಕಾರಕ್ಕೆ,
ಗಣಗಲೆ ಹೂವಿನ ಅಲಂಕಾರಕ್ಕೆ,
ಅಲ್ಲಿನ ಸದಾಚಾರ ಸಂಹಿತೆ
ಒಪ್ಪುವುದಿಲ್ಲ.
ಕಾವ್ಯವೆಂಬ ವಿದ್ರೋಹಿಗೆ
ಸ್ಮಶಾನ ಅಗ್ರಸ್ಧಾನ.
ರಿಲ್ಕ್ ಗೋರಿಯ ಬರಹದಂತೆ (ನನ್ನ ಪ್ರಜ್ಞೆಗೆ ದಕ್ಕಿದಷ್ಟು):
“ಓ ಗುಲಾಬಿ
ಹಾ ಅಪ್ಪಟ ದ್ವಂದ್ವತೆ,
ಯಾರ ನಿದ್ದೆಗೂ ಒಗ್ಗದ ಖುಷಿ,
ಎಷ್ಟೋ ರೆಪ್ಪೆಗಳಡಿಯಲ್ಲಿ.”
ಅನಗತ್ಯ
ನೀತಿ ಸಂಹಿತೆಗಳ, ನಿಯಮ, ನಡಾವಳಿಗಳ
ಮಿತಿಮೀರುವ ಸ್ವೇಚ್ಛತೆ ಬೇಕು ಅಷ್ಟೆ.
ಸ್ಪೂರ್ತಿಗೆ, ಸಾಮೀಪ್ಯಕ್ಕೆ, ಆತ್ಮರತಿಗೆ
ಸದಾ ಬಗಳಲ್ಲಿ, ನಾಭಿ, ನಭದಲ್ಲಿ,
ಎಲ್ಲ ಮೂಲಗಳಲ್ಲಿ ಉದ್ಭವಿಸಲು ಅಸಾಧ್ಯ.
ಆದರೂ ಮರಳುಗಾಡಿನ ಓಯಸಿಸ್ ಗಳಂತೆ ಅಲ್ಲೂ-ಇಲ್ಲೂ,
ಎಲ್ಲೆಲ್ಲೋ ಬಹಳ ಅಪರೂಪಕ್ಕೆ ಒಮ್ಮೊಮ್ಮೆ
ಸಿಗುವ ಜೀವಜಲ –
ಕವನಗಳು.
ಇಷ್ಟಾದರೂ,
ಶುದ್ಥ ದೇಸೀ ತಳಿ ಫಿಲ್ಟರ್ ಕಾಫಿ ದ್ವೇಷಿಯಲ್ಲ.
ಜೊತೆಗೆ ಮದ್ಯ, ಪದ್ಯ, ಮಾನಿನಿಯರೊಂದಿಗೆ ನಿತ್ಯ
ಏಳು-ಬೀಳು, ತೀಟೆ-ತಾಪತ್ರಯಗಳು
ಇದ್ದುದೇ…