ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡುವ ಪ್ರಶ್ನೆಗಳನ್ನ ಕೇಳುವ ಕವಿತೆಗಳು..

ರಾಜಕುಮಾರ ಮಡಿವಾಳರ್

ಇಲ್ಲಿ ಈ ಕವಿತೆಗಳ… ಬಗ್ಗೆ ತುಂಬ ಅದ್ಭುತವಾಗಿ ಹಿರಿಯರಾದ ಎಚ್.ಎಸ್.ಶಿವಪ್ರಕಾಶ, ಕೇಶವ ಮಳಗಿ, ಜಿ.ಎನ್.ಮೋಹನ ಮುನ್ನುಡಿ, ಬೆನ್ನುಡಿ, ಪ್ರಕಾಶಕರ ಮಾತು, ಹೀಗೆ ಈಗ ನನಗೇನೂ ಹೇಳಲು ಇಲ್ಲ ಅನ್ನುವಷ್ಟು ಬರೆದಿದ್ದಾರೆ. ಇದು ಗೊತ್ತಿದ್ದೂ ಸಹ ಒಬ್ಬ ಕವಿತೆಗಳ ಪ್ರೇಮಿ, ಓದುಗನಾಗಿ ನನಗನಿಸಿದ್ದು ಹೇಳುತ್ತಿರುವೆ.

ಬೆನ್ನುಡಿಯಲ್ಲಿ…”ಆಕರ್ಷನ ಕವಿತೆಗಳ ಆಕರ್ಷಣಾಶಕ್ತಿಗೆ” ಅನ್ನುವ ಸಾಲೊಂದಿದೆ, ಆ ಎಳೆ ಹಿಡಿದೆ ನಾನು ಹೇಳುವುದೆಂದರೆ, ಇವು ಈ ಕವಿತೆಗಳು ನ್ಯೂಟನ್ನನ ತಲೆ ಮೇಲೆ ಬಿದ್ದ ಸೇಬುಗಳು, ಆಕರ್ಷನ ಕವಿತೆಯಲ್ಲಿ ಆಕರ್ಷಣಾ ಶಕ್ತಿಗಿಂತ ಮುಂದುವರೆದು ಗುರುತ್ವಾಕರ್ಷಣ ಶಕ್ತಿ ಇದೆ, ಎಂದು ಯಾವ ಸಂದೇಹವೂ ಇಲ್ಲದೆ ಹೇಳುತ್ತೇನೆ, ಅಲ್ಲದೆ ಇವು ನ್ಯೂಟನ್ನನ ನಿಯಮ ಅಂದರೆ ಶಕ್ತಿಯ ಕೇಂದ್ರ ನೇರವಾಗಿರುತ್ತದೆ ಅನ್ನುವದನ್ನ ದಾಟಿ, ಎಲ್ಲಿ-ಎಲ್ಲಿಂದ ಎಸೆದರೂ ಇವು ತಾಯಿನೆಲಕ್ಕೆ ಬಿದ್ದ ವಿಶಿಷ್ಟ ಶಕ್ತಿಯ ಸೇಬುಗಳು!

ಆಕರ್ಷ… ಅವರು ವಿದೇಶ ಸುತ್ತಿ, ವಾಸವಿದ್ದು, ಇವನ್ನು ಒಂದು ಅನಾಥ ಪ್ರಜ್ಞೆಯಲ್ಲಿ ಬರೆದಂತವಾ? ಸೌಂದರ್ಯ ತುಂಬಿ ತುಳುಕುವ ವಿದೇಶಿ ನೆಲದಲ್ಲಿ ಇರದ ಜೀವಂತಿಕೆ ನೋಡಿ ಬರೆದರಾ? ಅಥವ ಸಮೃದ್ಧಿ ಮತ್ತು ವೈರುಧ್ಯಗಳ ತವರು ನೆಲ ತಾನೇ ಬರೆಸಿಕೊಂಡಿತಾ? ಅದು ಇದು ಎದುರಿಗಿಟ್ಟುಕೊಂಡು ಪರಮ ಏಕಾಂತದಲ್ಲಿ ಹಾಡಿಕೊಂಡರಾ? ಇವರೊಳಗಿದ್ದ ಮನುಷ್ಯ ಕವಿಯಾಗಿ ಹೊರಹೊಮ್ಮಲು ಒಂದೇ ನೆಲದ ಈ ದೇಶ-ವಿದೇಶದ ಪರಕೀಯತೆ ವೇದಿಕೆ ಆಯ್ತಾ? ಇವರ ಕವಿತೆಗಳ ದೃಷ್ಟಿಕೋನ ನನಗೆ ಈ ಎಲ್ಲ ಗೊಂದಲ ಹರವಿಕೊಂಡು ಕೂತಿವೆ.

ಕಾಡುವ ಕವಿತೆ… ಅನ್ನುವ ಮಾತು ಕಿವಿ ಸವೆದು ಹೋಗುವಷ್ಟು ಸಲ ನೀವು ಕೇಳಿದ್ದೀರಿ, ಆದರೆ ಇವು ಕಾಡುವ ಪ್ರಶ್ನೆಗಳನ್ನ ಕೇಳುವ ಕವಿತೆಗಳು. ಹೊಸ ವಿನ್ಯಾಸ, ಹೊಸ ಉಪಮೆ, ಹೊಸ ಪದ, ಹೊಸ ರೀತಿಯ ರಚನೆಗಳೂ ಹೌದು, ಕವಿತೆ ಹೀಗೆ ಮಗ್ಗಲು ಬದಲಿಸಿಕೊಳ್ಳುತ್ತಿರುವುದು, ಆಯಾ ಕಾಲಘಟ್ಟವನ್ನ ಆಯಾ ಕಾಲದ ಭಾಷೆ ಮತ್ತು ವ್ಯಾಕರಣದಲ್ಲೇ ಹಿಡಿದಿಡುವ ದೊಡ್ಡ ಪ್ರಕಾರ, ವಚನ-ದಾಸ-ನವ್ಯ-ನವ್ಯೊತ್ತರ-ಬಂಡಾಯ ಹೀಗೆ ಬದಲಾಗುತ್ತ ಈಗ ಇವರ ಆಕರ್ಷರ ಕವಿತೆಯ ಮಾದರಿಯಿಂದ ಹೊಸದೊಂದು ಹೆಸರು ಕೊಟ್ಟು ನಾಳಿನ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗುವ ಸಾಧ್ಯತೆ ಇದೆ ಇದು ನನ್ನ ಗ್ರಹಿಕೆ.

ವಿಮಾನದ ಕಿಟಕಿಯಿಂದ
ಭೂಮಿಗಾದ ಗಾಯಗಳೆಲ್ಲ ಕಾಣುತ್ತವೆ..
****
ಅಪ್ಪ ಚೂಪಾದ ಬ್ಲೇಡನ್ನು
ಅದೆಷ್ಟು ಸರಾಗವಾಗಿ ಕೆನ್ನೆಯ ಮೇಲೆ ಹರಿಸುತ್ತಾನೆ..

ಈ ರೀತಿಯ ವಿಶಿಷ್ಟ ಸಾಲುಗಳಿಂದ ಶುರುವಾಗುವ ಯಾವ ಪದ್ಯಕ್ಕೂ ಶೀರ್ಷಿಕೆಯಿಲ್ಲ, ನಂಬರು ನೆಚ್ಚರು ಅನ್ನುವ ವಚನದಂತೆ ಈಗ ನಂಬರ್ರಿಂದಲೇ ಎಲ್ಲರೂ ನಂಬುವರು ನೆಚ್ಚುವರು ಅನಿಸಿತಾ? ಇಲ್ಲಿ ನಂಬರ್ರೆ ನಂಬಲು ನೆಚ್ಚಲು ಕವಿತೆಗೆ ಶೀರ್ಷಿಕೆ ಮತ್ತು ಸ್ವತಃ ಕವಿ

ಹೆಸರನ್ನು ಮರೆಮಾಚಿ
ಅಸ್ಥಿಪಂಜರವಾಗೇ ಇರಲು ಬಯಸುತ್ತೇನೆ.
ನಿಮ್ಮ ಸುಳ್ಳಿನ ಕಥೆಗಳನ್ನೇ ಎಲ್ಲರಿಗೂ ಹೇಳುತ್ತೇನೆ
ಆದರೆ ಎಲ್ಲ ಗಾಯಗಳನ್ನು
ಅಳಿಸಲಾಗದ ಶಾಯಿಯಲ್ಲಿ ಬರೆದು
ನಿಮ್ಮ ಹೆಸರುಗಳನ್ನೇ ಶೀರ್ಷಿಕೆಯಾಗಿಸಿ
ಕವಿತೆಯಾಗಿಸುತ್ತೇನೆ..

ನಿಮ್ಮ ಹೆಸರಿನ ಶೀರ್ಷಿಕೆ ಹುಡುಕಲಾದರೂ ಓದುವ ಸುಖ ನಿಮ್ಮದಾಗಲಿ..

ಗ್ರಾಫಿಟಿಯ ಹೂಗಳು ನಾಳೆ 15ನೇ ತಾರೀಖು ಬಿಡುಗಡೆ, ಚಂದ್ರಶೇಖರ ಆಲೂರು ಸಂಕಲನ ಕುರಿತು ಮಾತನಾಡುತ್ತಾರೆ, ಗೆಳೆಯರು ಕಾರ್ಯಕ್ರಮಕ್ಕೆ ಬಂದು, ತುಂಬ ಆತ್ಮೀಯ ಕವಿಯನ್ನು ಮುಖತಃ ನೋಡಿ, ಪುಸ್ತಕ ಕೊಂಡು ಓದಿ, ಆನಂದಿಸಿ, ಶುಭ ಹಾರೈಸಿ.

ನನ್ನ ಮತ್ತು ಹೂವಯ್ಯನ ಬಳಗದ ಪರವಾಗಿ ಇಷ್ಟೊಳ್ಳೆ ವಿಶಿಷ್ಟ ಸಂಕಲನ ನಮಗೆ ಓದಲು ಕೊಟ್ಟಿದ್ದಕ್ಕೆ ಕವಿ-ಕವನ ಇಬ್ಬರಿಗೂ ಅನಂತ ಶುಭಾಶಯಗಳು

‍ಲೇಖಕರು avadhi

8 June, 2019

1 Comment

  1. ಮಠದ ಮೆಹಬೂಬ್

    ಸರ್ ನಮಗೆ ಪುಸ್ತಕ ಯಾವಾಗ ಸಿಗುತ್ತದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading