ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿತೆಯ ಸಾಲುಗಳನ್ನು ಬೊಗಳುತ್ತಿರುತ್ತದೆ..

ಅಲೆಮಾರಿ‘ ಬರಹಗಳು ಇಷ್ಟವಾಗುವುದು ಎರಡು ಕಾರಣಕ್ಕೆ. ಮೊದಲನೆಯದು ಅವರಿಗೆ ಸರಿಯಾದದ್ದನ್ನು ಗುರುತಿಸುವ ಕಣ್ಣಿದೆ ಎರಡನೆಯದಾಗಿ ಹಾಗೆ ಗುರುತಿಸಿದ್ದನ್ನು ಇದು ಕನ್ನಡದಲ್ಲೆ ಹುಟ್ಟಿದ ಕವಿತೆಯೇನೋ ಎಂಬಂತೆ ಕಟ್ಟಿಕೊಡಬಲ್ಲ ಶಕ್ತಿ ಇದೆ. ಈ ಎರಡೂ ಗುಣಗಳಿಗೆ ನಮೋ ಎನ್ನುತ್ತಾ ನಮ್ಮೆಲ್ಲರ ಪ್ರೀತಿಯ ಅಮೃತಾ ಪ್ರೀತಂ ಅವರ ಕವನಗಳನ್ನು ಮುಂದಿಡುತ್ತಿದ್ದೇವೆ-
 
ಪುಟ್ಟ ಗುಡಿಸಲು ನನ್ನದು 
ಎಲ್ಲಿ ಹಾಸಲಿ ಹೇಳು ಚಾಪೆ?
ನಿನ್ನ ನೆನಪಿನ ಕಿಡಿಯೊಂದು
ಅತಿಥಿಯಾಗಿ ನನ್ನ ಮನೆಗೆ ಬಂದಿದೆ..
******
 
ಬಾನೆಂಬ ಪವಿತ್ರ ಜಾಡಿ
ಮೋಡವೆಂಬ ಜಾಮನೆತ್ತಿ
ಬೆಳದಿಂಗಳ ಗುಟುಕು ಕುಡಿದಿದ್ದೇನೆ,
ಧರ್ಮನಿಂದೆಯ ಮಾತಾಡಿದ್ದೇನೆ..
****
ನನ್ನೊಳಗಿನ ಕಿಚ್ಚೆ, ಅಭಿನಂದನೆ,
ಸೂರ್ಯನಿಂದು ನನ್ನಲ್ಲಿಗೆ ಬಂದಿಹನು,
ಇದ್ದಿಲ ತುಂಡೊಂದನ್ನು ಕೇಳಿ
ತನ್ನ ಕಿಚ್ಚನ್ನು ಹೆಚ್ಚಿಸಿಕೊಂಡಿಹನು.
*********
ಏನಾಗಿದೆಯೋ ದೇವರೆ ಈ ರಾತ್ರಿಗಳಿಗೆ
ಕತ್ತಲಲ್ಲಿ ಓಡುತ್ತ, ಓಡುತ್ತ
ಮಲಗಿದ ಮಿಂಚು ಹುಳುಗಳ ಹಿಡಿಯುತ್ತಿವೆ..
 
ಅಕ್ಕ ಸಾಲಿ ಉಂಗುರ ಸಿದ್ಧ ಮಾಡಿದ್ದಾನೆ,
ನನ್ನ ವಿಧಿ ಅದರೊಳಗೆ
ನೋವಿನ ಮುತ್ತೊಂದ ಕೂರಿಸುತಿದೆ..
 
ಜಗತ್ತು ನೇಣುಗಂಬ ನೆಟ್ಟಿದೆ ಈಗ
ಗೆದ್ದ ಪ್ರತಿಯೊಬ್ಬನ ಕಂಗಳು
ತಮ್ಮ ಹಣೆ ಬರಹ ಓದಲಾರಂಭಿಸಿವೆ..
**********

 
ಮಸಲತ್ತು..
ರಾತ್ರಿ ತೂಕಡಿಸುತ್ತಿದೆ…
ಯಾರೋ ಮಾನವನ ಎದೆಗೆ ಕನ್ನಹಾಕಿದ್ದಾರೆ.
ಎಲ್ಲಾ ಕಳ್ಳತನಗಳಿಗಿಂತ
ಭಯಂಕರವೀ ಕಳವು.
 
ಎಲ್ಲ ದೇಶಗಳ, ಎಲ್ಲ ಶಹರಗಳ
ಪ್ರತಿ ರಸ್ತೆಯ ಮೇಲೆ ಇದೆ
ಕಳ್ಳರ ಗುರುತು.
ಯಾವ ಕಣ್ಣು ನೋಡುವುದಿಲ್ಲ,ಬೆರಗಾಗುವುದಿಲ್ಲ.
ಸರಪಳಿಗೆ ಬಿಗಿದ ನಾಯಿಯಂತೆ
ಯಾವಾಗಲೋ ಒಮ್ಮೆ
ಯಾರದೋ ಕವಿತೆಯ ಸಾಲುಗಳನ್ನು
ಬೊಗಳುತ್ತಿರುತ್ತದೆ..

‍ಲೇಖಕರು avadhi

19 September, 2008

1 Comment

  1. sudhanva

    ಇದಕ್ಕಿಂತ ಚೆನ್ನಾಗಿ ಬರೆಯುವುದು ಬಹಳ ಕಷ್ಟ ! ಥ್ಯಾಂಕ್ಯು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading