ಡಾ. ಎಂ. ಎಂ. ಕಲಬುರ್ಗಿಯವರ ಹತ್ಯೆ ಮತ್ತು ನಂತರ ದೇಶದ ತುಂಬ ನಡೆದ ವಿದ್ಯಮಾನಗಳು ಭಾರತ ಅಸಹಿಷ್ಣತೆ ಕಡೆ ಸಾಗುತ್ತಿರುವ ವರ್ತಮಾನಕ್ಕೆ ಪುರಾವೆ ಒದಗಿದ್ದವು. ಇದನ್ನು ನೋಡಿ ತೀವ್ರ ಆತಂಕಕ್ಕೊಳಗಾದ ಜನ, ಬರಹಗಾರರರು ಪ್ರತಿರೋಧಿಸುವ ಭಾಗವಾಗಿ ಪ್ರತಿಭಟನೆಗಿಳಿದರು. ತಮಗೆ ಸಿಕ್ಕ ಪ್ರಶಸ್ತಿ ವಾಪಸ್ ಮಾಡಿದರು. ಬೀದಿ ಹೋರಾಟದ ಜೊತೆ ಕೂಡಿಕೊಂಡರು.
ಈಗ ಅದು ಆಂದೋಲನವಾಗಿದೆ. ಸ್ವಾತಂತ್ರ್ಯ ನಂತರ ದೇಶವೇ ಮೊದಲ ಬಾರಿ ಮಾತಾಡತೊಡಗಿದೆ. ದೊಡ್ಡ ಪ್ರಮಾಣದ ಚರ್ಚೆ ಸುರುವಾಗಿದೆ. ಸರ್ಕಾರಗಳು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ದಾರಿಯನ್ನು ಹುಡುಕುವದರಲ್ಲಿಯೇ ಸಮಯ ಕಳೆಯುತ್ತಿವೆ. ಪ್ರಶಸ್ತಿ ವಾಪಸಾತಿಯಿಂದ ದೇಶದಲ್ಲಿ ಒಂದು ಸಂಚಲನ ಕಂಡು ಬರುತ್ತಿದೆ.
ದೇಶವ್ಯಾಪಿ ನಡೆದಿರುವ ಪ್ರಶಸ್ತಿ ವಾಪಸಾತಿ ಪ್ರತಿರೋದ ಜಾಗತಿಕ ಮಟ್ಟದಲ್ಲಿಯೂ ಪ್ರತಿದ್ವನಿ ಹುಟ್ಟುವಂತೆ ಮಾಡಿದೆ. ಬರಹದಿಂದ ಏನೂ ಆಗುವುದಿಲ್ಲ ಅನ್ನುವ ಕಾಲದಲ್ಲಿ ಸಾಹಿತ್ಯ ಕ್ಷೇತ್ರದ ಪ್ರತಿಭಟನೆ ಸರ್ಕಾರದಲ್ಲಿ ಗಾಭರಿ ಹುಟ್ಟಲು ಕಾರಣವಾಗಿದೆ
ದೇಶವ್ಯಾಪಿ ಪ್ರಶಸ್ತಿ ವಾಪಸಾತಿ ಮಾಡಿ ಚರ್ಚೆಗೆ ಕಾರಣವಾಗಿರುವ ಲೇಖಕರಲ್ಲಿ ಒಂದು ತಂಡ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಾಪಸಾತಿ ಮಾಡಿರುವ ಗುಜರಾತಿನ ಲೇಖಕ ಜಿ.ಎನ್ ದೇವಿ ಅವರ ನೇತೃತ್ವದಲ್ಲಿ 27 ರಂದು ಧಾರವಾಡಕ್ಕೆ ಬರಲಿದೆ. ‘ದಕ್ಷಿಣದ ಬಗ್ಗೆ ಯೋಚಿಸು’ ಎಂಬ ಧ್ಯೇಯವನ್ನಿಟ್ಟು ಉತ್ತರ ಭಾರತದ ಲೇಖಕರು ದಕ್ಷಿಣದತ್ತ ಮುಖ ಮಾಡಿದ್ದಾರೆ. ಮಹಾರಾಷ್ಟ್ರರಾಜ್ಯದಿಂದಲೂ ಲೇಖಕರು ಅಂದು ನಮ್ಮೊಡನಿರಲಿದ್ದಾರೆ. ನಮ್ಮ ರಾಜ್ಯದ ಲೇಖಕರೂ ಪಾಲ್ಗೊಳ್ಳಲಿದ್ದಾರೆ. ಇದೇ ತಿಂಗಳು 27ರಂದು (ಡಾ. ಎಂ. ಎಂ. ಕಲಬುರ್ಗಿ ಸರ್ ಜನ್ಮ ದಿನದ ಮುನ್ನಾದಿನ) ಧಾರವಾಡದಲ್ಲಿ ಈ ಎಲ್ಲ ಲೇಖಕರೊಂದಿಗೆ ಕರ್ನಾಟಕ ವಿದ್ಯಾವರ್ದಕ ಸಂಘದ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಸಾಯಂಕಾಲ 6 ಗಂಟೆಗೆ ಸಂವಾದ ಕಾರ್ಯಕ್ರಮವನ್ನು ಡಾ. ಎಂ ಎಂ. ಕಲಬುರ್ಗಿ ಹತ್ಯೆ ವಿರೋಧಿ ಹೋರಾಟ ವೇದಿಕೆ ಹಮ್ಮಿಕೊಂಡಿದೆ.
ಲೇಖಕರು ನಾವೇಕೆ ಪ್ರಶಸ್ತಿ ವಾಪಸಾತಿ ಮಾಡಬೇಕಾಯಿತು ಅನ್ನುವ ವಿಚಾರದೊಂದಿಗೆ ತಮ್ಮ ರಾಜ್ಯದ ವಿದ್ಯಮಾನ, ಸಾಹಿತಿಗಳ ಜವಾಬ್ದಾರಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡಲಿದ್ದಾರೆ. ನೀವೂ ಬನ್ನಿ ಅವರ ಅಭಿಪ್ರಾಯಗಳಿಗೆ ಮುಖಾಮುಖಿ ಆಗುತ್ತಲೇ ನಿಮ್ಮ ಅಭಿಮತವನ್ನೂ ಸೇರಿಸಿ. ಬನ್ನಿ
–ಡಾ. ರಾಜೇಂದ್ರ ಚೆನ್ನಿ, ಡಾ.ರಹಮತ್ ತರೀಕೆರೆ, ಬಂಜಗೆರೆ ಜಯಪ್ರಕಾಶ, ಕುಂವೀ, ರಂಜಾನ್ ದರ್ಗಾ , ಬಸವರಾಜ ಸೂಳಿಭಾವಿ, ಡಾ. ಎಂ ಡಿ ಒಕ್ಕುಂದ, ಶಂಕರ ಹಲಗತ್ತಿ, ಡಾ ಬಾಳಣ್ಣ ಸೀಗಿಹಳ್ಳಿ,
ಬಿ. ಶ್ರೀನಿವಾಸ, ಡಾ. ಎಚ್ ಎಸ್ ಅನುಪಮಾ, ಸುನಂದ ಕಡಮೆ, ಅರುಣ ಜೋಳದಕೂಡ್ಲಿಗಿ, ಬಿ.ಎನ್ ಪೂಜಾರ, ಕೆ. ನೀಲಾ, ಬಿ.ಐ. ಈಳಗೇರ, ಎ. ಎಂ. ಖಾನ, ಬಿ.ಎಸ್. ಸೊಪ್ಪಿನ, ಜೆ. ಭಾರದ್ವಾಜ್
ಡಾ. ಎಂ. ಎಂ. ಕಲಬುರ್ಗಿ ಹತ್ಯಾ ವಿರೋಧಿ ಹೋರಾಟ ವೇದಿಕೆ
0 ಪ್ರತಿಕ್ರಿಯೆಗಳು