ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

' ಕರ್ತವ್ಯನಿಷ್ಠೆ ಮೆರೆದ ಪೊಲೀಸರಿಗೆ ಸಲಾಂ' – ಚಿತ್ರಾ ಸಂತೋಷ್ ಬರೀತಾರೆ

ಚಿತ್ರಾ ಸಂತೋಷ್

ಕೃಪೆ : ವಿಜಯ ಕರ್ನಾಟಕ

ಬಹಳಷ್ಟು ಸಂದರ್ಭಗಳಲ್ಲಿ ಪೊಲೀಸೋರು “ಸರಿಯಿಲ್ಲ” ಅನ್ನೋದನ್ನು ಕೇಳ್ತೀವಿ. ರಾತ್ರಿ ಡ್ಯೂಟಿಗೆ ಹಾಕಿದ್ರೂ ಕೆಲವರು ಗಸ್ತು ಮಾಡದೆ ಠಾಣೆಯಲ್ಲೇ ಗೊರಕೆ ಹೊಡೀತಾ ಇರ್ತಾರೆ. ರಾತ್ರಿ ಎಷ್ಟೋ ಸಲ ನಾನು ತಡವಾಗಿ ಮನೆಗೆ ಹೋಗೋ ಸಮಯದಲ್ಲಿ ಗುಂಡು ಹಾಕ್ಕೊಂಡು ಟೈಟಾಗಿರುವ ಖಾಕಿಧಾರಿಗಳನ್ನು ನೋಡಿದ್ದೀನಿ. ಒಳ್ಳೆದು/ಕೆಟ್ಟದು ಎಲ್ಲಾ ಕಡೆ ಇದ್ದಿದ್ದೇ. ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕಾದ್ರೆ ದೀರ್ಘದಿನಗಳೇ ಬೇಕಾಬಹುದೇನೋ!

ಆ ವಿಷ್ಯ ಅತ್ಲಾಗಿರಲಿ. ಮಾರ್ಚ್ 5ರಂದು ರಾತ್ರಿ ಹೊತ್ತು ಆದ ಅನುಭವ. ಆಫೀಸ್ ನಿಂದ ಹೊರಟು ಸೀದಾ ನಮ್ಮನೆ ಹತ್ರದ ಟೈಲರ್ ಅಂಗಡಿಗೆ ಹೋಗಿದ್ದೆ. ಅಲ್ಲಿ ಬಟ್ಟೆಯೊಂದನ್ನು ಹೊಲಿಯೋಕೆ ಕೊಟ್ಟಿದ್ದೆ. ಅದರ ಓನರ್ ಲೇಡಿ. ಬಟ್ಟೆಯೇನೋ ರೆಡಿಯಾಗಿತ್ತು, ಆದರೆ, ಮೊದಲು ಹೇಳಿದ ರೇಟಿಗಿಂತ 50 ರೂಪಾಯಿ ಜಾಸ್ತಿ ಕೇಳಿದ್ಳು. ನಾನದನ್ನು ಪ್ರಶ್ನೆ ಮಾಡಿದೆ. ಇಲ್ಲ , ನೀವು ಹೇಳಿದಷ್ಟೇ ಕೊಡೋದು…ಒಂದು ರೇಟ್ ಫಿಕ್ಸ್ ಮಾಡಿದ ಮೇಲೆ ಜಾಸ್ತಿ ಕೊಡಕ್ಕಾಗಲ್ಲ ಅಂತ. ಆದರೆ, ಓನರ್ ಲೇಡಿ ನನ್ನ ಎರಡು ಮಾತುಗಳಿಗೆ ಹಿಗ್ಗಾಮುಗ್ಗಾ ಬೈಯಲು ಶುರುಮಾಡಿದಳು. ಅಷ್ಟೊತ್ತಿಗೆ ಅವಳ ಮಗ ಅಮ್ಮಂಗೆ ಸಾಥ್ ನೀಡಿದ. ಅತ್ಯಂತ ಕೆಟ್ಟ ಪದಗಳಿಂದ ಬೈಯೋಕೆ ಶುರುಮಾಡಿದ. ಅವರಾಡುವ ಮಾತುಗಳಿಗೆ ನಾನು ಎದುರಾಡಲು ಅಸಹಾಯಕಗಳಾಗಿದ್ದೆ. ಏಕೆಂದರೆ, ಅವರ ಬೈಗುಳದಲ್ಲಿ ಹೊರಬರುತ್ತಿದ್ದ ಕೆಲ ಪದಗಳನ್ನು ನಾನು ಕೇಳಿಯೇ ಇರಲಿಲ್ಲ!  ಜೀವಮಾನದಲ್ಲಿ ಕೇಳದ ಆ ಅವ್ಯಾಚ್ಯ ಪದಗಳಿಗೆ ವಿರುದ್ಧ ನಾನು ಬೈಯತೊಡಗಿದರೆ ನನಗೂ ಅವರಿಗೂ ಏನು ಡಿಫರೆನ್ಸ್ ಇರುತ್ತೇ? ಅನಿಸಿತ್ತು.

ಅವರ ಮಾತಿನ ಓಟ ಮುಂದುವರಿಯುತ್ತಿತ್ತು. ಆ ಲೇಡಿ ಬೈಯೋದೇನೋ ಸರಿ…ಕೆಲವರು ಹಾಗೇ…ವಟವಟ ಬಾಯಿ…ಆದರೆ ಆಕೆಯ ಮಗ? ಏನಂದ ಗೊತ್ತಾ “ನೀನು ಈ ರೋಡಿನಲ್ಲಿ ಕಂಡ್ರೇ….?’ ಅಂಥ ಶುರುಮಾಡಿದ. ಇತ್ತ ಕಡೆ ಬಂದು ಪೋಲೀಸ್ ಠಾಣೆಗೆ ಕಾಲ್ ಮಾಡಿದೆ. ಅದು ಸದಾಶಿವನಗರ ಪೋಲೀಸ್ ಠಾಣೆ. ಅಲ್ಲಿಂದ ನಾನಿದ್ದ ಜಾಗಕ್ಕೆ 2 ಕಿ.ಮೀ. ಆದರೆ, ನಾನು ಕರೆ ಮಾಡಿದ ಕೇವಲ 3 ನಿಮಿಷದಲ್ಲಿ ಇನ್ಸ್ ಪೆಕ್ಟರ್ ಸಮೇತ ಏಳು ಮಂದಿ ಪೊಲೀಸರು ಅಲ್ಲಿ ಹಾಜರಾದ್ರು. ಮುಂದೇನಾಯಿತು….ವಿವರಣೆ ಬೇಕಾಗಿಲ್ಲ….!! ನಿಜವಾಗಲೂ ಸದಾಶಿವನಗರ ಪೊಲೀಸ್ ಠಾಣೆಯ ಆ ಪೊಲೀಸರಿಗೆ ಸೆಲ್ಯೂಟ್ ಹೇಳಲೇಬೇಕು. ಪೊಲೀಸರೆಂದ್ರೆ ಲಂಚಬಾಕರು, ಕರ್ತವ್ಯಭ್ರಷ್ಟರು…ಎನ್ನುವ ಆರೋಪಗಳಿವೆ. ಈ ಎಲ್ಲಾ ಆರೋಪಗಳ ನಡುವೆ ಇಂಥ ಒಳ್ಳೆಯ ಪೊಲೀಸರೂ ಇರುತ್ತಾರೆ, ಇದ್ದಾರೆ, ಮುಂದೆನೂ ಇರಬೇಕು.
ಮೆಜೆಸ್ಟಿಕ್ ನಂಥ ಬಸ್ ನಿಲ್ದಾಣಗಳಲ್ಲಿ ತಡರಾತ್ರಿ ಬಸ್ ಗಾಗಿ ಕಾದು ಹೋಗುವುದೆಂದರೆ ಅದರಷ್ಟು ಹಿಂಸೆ ಏನೂ ಇಲ್ಲ. ಆಟೋ, ಬಸ್ ಡ್ರೈವರ್ ಗಳಿಂದ(ಗರಿಷ್ಠ ಮಂದಿ) ಹೆಣ್ಣುಮಕ್ಕಳನ್ನು ಕಾಣೋ ರೀತಿಯೇ ಬೇರೆ ಇರುತ್ತದೆ. ಅದಕ್ಕಾಗಿ ಯಾರೂ ನಮ್ಮ ಜೊತೆಗೆ ಇಲ್ಲದಿದ್ರೆ ಒಂದು ಪೊಲೀಸ್ ಠಾಣೆ ನಂಬರ್ ಇಟ್ಟುಕೊಂಡಿರಬೇಕು. ಮಲ್ಲೇಶ್ವರಂನ 8ನೇ ಕ್ರಾಸ್ ನಲ್ಲಿ ಸುತ್ತಾಡಬೇಕಾದ್ರೆ ಎಲ್ಲೋ ಒಂದು ಕಡೆ ಇದ್ದ ಠಾಣೆಯ ನಂಬರ್ ನೋಟ್ ಮಾಡಿಕೊಂಡಿದ್ದೆ. ಅದು ಮೊನ್ನೆ ಟೈಲರ್ ಖದೀಮನಿಗೆ ಬುದ್ಧಿ ಕಲಿಸಕೆ ಉಪಯೋಗವಾಯಿತು.

*******

ಹೆಣ್ಣುಮಕ್ಲಳೇ ಆಗಿರಲಿ ಅಥವಾ ಗಂಡೇ ಆಗಿರಲಿ. ತಮಗಾಗುವ ಅನ್ಯಾಯವನ್ನು ಪ್ರತಿಭಟಸಿದೆ ಇದ್ದರೆ ಅನ್ಯಾಯಗಳು ನಡೆಯುತ್ತಲೇ ಇರುತ್ತವೆ. ನಾವು ಬಗ್ಗಿದಷ್ಟೂ ಗುದ್ದುವವರು ಇರ್ತಾರೆ. ತಪ್ಪೆನಿಸಿದ್ರೆ ಪ್ರತಿಭಟಿಸಿ, ಆಗ ತಪ್ಪು ಮಾಡುವವರು ಪಾಠ ಕಲಿಯುತ್ತಾರೆ. ಧೈರ್ಯ ನಮ್ಮ ಆಸ್ತಿ.
 

‍ಲೇಖಕರು avadhi

11 March, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading