ಬೀರು ದೇವರಮನಿ
ಯಾಕೆ ನೀ ಅಲ್ಲಿಗೋದೆ
ಇಲ್ಲಿರಲು ಬೇಸರವಾಯಿತೇ
ನಿನ್ನ ಬದುಕಿನ ಅವಸ್ಥೆ ಹೀಗೆ ಮಾಡಿರಬೇಕು
ದಿಕ್ಕೆಟ್ಟ ನಿರ್ಜನ ಪ್ರದೇಶದಲ್ಲಿ ಕಗ್ಗತ್ತಲದೇ ಆಡಳಿತ.
ನಿನ್ನ ಹುಡುಕಬಂದೆ
ನಿನ್ನ ಜೊತೆ ಕೂಡಿ ಮಾತಾಡಬೇಕಂದೆ
ಕ್ಷಣ ಮುನ್ನ ನೀ ಅವರ ತೆಕ್ಕೆಗೆ ಬಿದ್ದು ಬಿಟ್ಟೆ
ಕೆಡುಕು ಕಣ್ಣಿನಲಿ ಕತ್ತಿ ಮಸೆವವರ ಪಾಲಾಗಿಬಿಟ್ಟೆ
ಕಟ್ಟು ಪಾಡಿನ ಕೆಡುಕುತನ ಪಟ್ಟು ಹಿಡಿದು ನೂಕುತ್ತವೆ
ಪಾಪ ಕೂಪದ ಬಾವಿಗೆ ತಳ್ಳಿ ಗಹ ಗಹಿಸಿ ನಗುತ್ತವೆ.
ಅನಿಷ್ಠ ಪದ್ಧತಿಯ ಅಮಲಿನಲ್ಲಿ ತೇಲುವವರದೆ ಕುತಂತ್ರ
ಥೂ ಹೇಡಿ ಮುಖಗಳು, ಕರುಣೆಯಿಲ್ಲದ ಕುಖ್ಯಾತಿಗಳು
ಕೀಳು ಜಾತಿಯ ಕುಲಗೇಡಿಗಳು
ಕರುಳ ಬಳ್ಳಿಯನ್ನೇ ಕತ್ತರಿಸಿ ತಿನ್ನುವ ಕಿಂಕರರು
ಅದೆಷ್ಟು ಬಾವಲಿಗಳು, ರಕ್ತ ಹೀರುವ ಸೊಳ್ಳೆಗಳು ಮುತ್ತಿಗೆ ಹಾಕಿ ನಿನ್ನ ಹೊಸಕಿ ಹಾಕುತ್ತವೆ
ನೀ ಹೋಗಬಾರದಿತ್ತು ಅತ್ತ
ಕಾಮುಕರ ಕಣ್ಣಿಗೆ ನಿನ್ನ ದೃಷ್ಟಿ ತಾಗಬಾರದಿತ್ತು.
ಕಾಳ ಕತ್ತಲೆಯಲಿ ನಿನ್ನತ್ತ ನಾ ಹೇಗೆ ಬರಲಿ
ಷಡ್ಯಂತ್ರ ಹೂಡಿ ಆ ದುಷ್ಟರಿಂದ ನಿನ್ನ ಹೇಗೆ ಬಿಡಿಸಲಿ
ನಿನ್ನ ಪ್ರಖರ ಕೈ ಬೆರಳುಗಳಷ್ಟೇ ನೋಡಬಲ್ಲೆ
ಆ ಸಪೂರ ಬೆರಳುಗಳಿಗಷ್ಟೇ ಮುತ್ತನಿಟ್ಟು
ಸಮಾಧಾನ ತರುವ ಧೈರ್ಯದ ಮಾತುಗಳ ಮಾತ್ರ ಪಿಸುಗುಟ್ಟಬಲ್ಲೆ
ಮೂಕ ಸಂವೇದಿಯಾಗಿದ್ದೇನೆ ನಿನ್ನ ಅವಸ್ಥೆಯ ಕರುಣಾಜನಕ ಕೂಗನ್ನು ಮನಸ್ಸಿನಲ್ಲಿ ಬಿಗಿದಿಟ್ಟು ಆಗಾಗ ಕಂಪಿಸುತ್ತೇನೆ.
0 ಪ್ರತಿಕ್ರಿಯೆಗಳು