ಶ್ರೀದೇವಿ ಕೆರೆಮನೆ
ಕದವಿಲ್ಲದ ಊರಲ್ಲಿ
ಎಲ್ಲವೂ ಮುಕ್ತ ಮುಕ್ತ
ಮಾತು, ಮುತ್ತು, ಪ್ರೀತಿ
ಜಗಳ, ವೈಮನಸ್ಸು
ಜೊತೆಗೆ ಮೈಥುನ ಕೂಡ
ತೆರೆದುಕೊಂಡ ಮನೆಯೊಳಗೆ
ಚೆಲ್ಲಾಪಿಲ್ಲಿ ಬಿದ್ದ ಸಾಮಾನು
ಬೋರಲಾದ ಪಾತ್ರೆ ಪಗಡೆ
ಹರಡಿಕೊಂಡ ಬಟ್ಟೆ, ಪುಸ್ತಕ
ಒಳ ಉಡುಪು, ಹಾಸಿಗೆ
ಎಲ್ಲವೂ ಖುಲ್ಲಾಂ ಖುಲ್ಲಾ
ಯಾರು ಬೇಕಾದರೂ ಇಣುಕಬಹುದು
ಕಿಟಕಿಯಿಂದ, ಬಾಗಿಲ ಚೌಕಟ್ಟಿನಿಂದ
ಯಾರ ಮನೆಯಲ್ಲಿ ಬೇಕಾದರೂ
ಯಾವುದಕ್ಕೂ ಕದವೇ ಇಲ್ಲ
ಯಾವ ಮುಜುಗರವೂ ಇಲ್ಲ

ಇಣುಕಿದ ಕ್ಷಣದಲ್ಲಿ ಏನೆಲ್ಲ ಕಾಣಬಹುದು
ಆದರೂ ಕಂಡೂ ಕಾಣದಂತೆ
ಮುಗುಮ್ಮಾಗಿ ಮುನ್ನಡೆಯಬೇಕು
ಕಂಡಿದ್ದು ಗೊತ್ತಾದರೂ
ಆದೇನೂ ವಿಷವಲ್ಲ ಎಂಬಂತೆ
ಸೋಗು ಹಾಕಲು ಗೊತ್ತಿರಬೇಕು
ಕದವಿಲ್ಲದ ಊರಲ್ಲಿ
ಪ್ರತಿ ಮನೆಗೂ ನಿಷಿದ್ಧಗಳಿವೆ
ಅಲ್ಲಿ ಬೈಗುಳಗಳು ಅಪ್ಪಿ ತಪ್ಪಿ ಕೂಡ
ಗೋಡೆ, ಬಾಗಿಲ ಚೌಕಟ್ಟು ದಾಟಿ
ಹೊರ ಹೋಗಿ ??ರೆಯವರ ಕಿವಿಗೆ
ಅಪ್ಪಳಿಸಿ ನಗೆಪಾಟಲಾಗುವಂತಿಲ್ಲ
ಭಾವನೆಗಳನ್ನು ಬೇಕಾಬಿಟ್ಟಿ ಹರಿಬಿಟ್ಟು
ಪಕ್ಕದವರ ಬಾಯಿಗೆ ಆಹಾರವಾಗುವಂತಿಲ್ಲ
ಹಗಲು ಮೈಥುನವಂತೂ
ಅಯ್ಯೋ, ಮಾಡುವಂತೆಯೇ ಇಲ್ಲ..






Vastava badukige hattirada kavite.
ಬದುಕಿನ ಚಿತ್ರಣವನ್ನು ಬೆತ್ತಲಾಗಿಸಿದ “ನಗ್ನಸತ್ಯ” ಕವನ.
ಒಳ್ಳೆಯ ರೂಪಕದೊಂದಿಗೆ ಕವಿತೆ ದಾಟಿಸಿದ್ದೀರಿ…ಚೆನ್ನಾಗಿದೆ.
ಜೀವನದ ನಗ್ನಸತ್ಯ ಬಿಚಿಟ ಕವಯಿತ್ರಿ ಅವರಿಗೆ ನನ ಕೋಟಿ ನಮನಗಳು