ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕತ್ತಲ ರಾಜ್ಯದಲ್ಲಿ ಬೆಳಕಿಗೇನು ಬದುಕು..

ಡಾ. ಗೋವಿಂದ ಹೆಗಡೆ

ಗಜಲ್-೧

ಬೇರುಗಳ ಕತ್ತರಿಸಿದ್ದಾರೆ ಇನ್ನು ಭಯವಿಲ್ಲ

ನೆಟ್ಟು ನೀರೂ ಎರೆದಿದ್ದಾರೆ ಇನ್ನು ಭಯವಿಲ್ಲ

ಸ್ವಂತಿಕೆಯ ಮಾತು ನಡೆಯೆಷ್ಟು ಅಪಾಯಕಾರಿ

ಗಿಣಿಮಾತುಗಳ ಕಲಿಸಿಕೊಟ್ಟಿದ್ದಾರೆ ಇನ್ನು ಭಯವಿಲ್ಲ

ಕತ್ತಲ ರಾಜ್ಯದಲ್ಲಿ ಬೆಳಕಿಗೇನು ಬದುಕು

ಕಣ್ಣು ಮುಚ್ಚಿರಲು ಕಲಿಸಿದ್ದಾರೆ ಇನ್ನು ಭಯವಿಲ್ಲ

ಇರಿವ ನಿಜಗಳ ಗೋಜು ಯಾರಿಗೆ ಬೇಕಿದೆ ಹೇಳು

ಕಳ್ಳು ಕುಡಿಸಿ ಅಮಲೇರಿಸಿದ್ದಾರೆ ಇನ್ನು ಭಯವಿಲ್ಲ

ಉತ್ತರಭೂಪರೇ ತುಂಬಿದ್ದಾರೆ ಎಲ್ಲೆಲ್ಲೂ

ಪ್ರಶ್ನೆಗಳ ಕತ್ತು ಹಿಚುಕಿದ್ದಾರೆ ಇನ್ನು ಭಯವಿಲ್ಲ

ಗಜಲ್-೨

ಎದೆಯ ಹಾದಿಯಲಿ ಖುಷಿಯ ನೆಟ್ಟವಳೆ ಎಲ್ಲಿದ್ದಿ ಇಲ್ಲಿ ತನಕ

ಕಣ್ಣದೀಪಕ್ಕೆ ಎಣ್ಣೆ ಹನಿಸಿದವಳೆ ಎಲ್ಲಿದ್ದಿ ಇಲ್ಲಿ ತನಕ

ಕಡಲ ಅಲೆಗಳಲಿ ಭರತದಾಟ ನಿನ್ನ ಭಾಷೆಯೇನೆ

ಸೋತ ಮೈಮನಕೆ ಉಕ್ಕು ತಂದವಳೆ ಎಲ್ಲಿದ್ದಿ ಇಲ್ಲಿ ತನಕ

ಹೊಕ್ಕುಳಲೇ ಇರುವ ಗಂಧವರಿಯದೇ ಮೃಗವದು ಸಂಭ್ರಾಂತ

ಇಹದ ಪರಿಮಳವ ಎತ್ತಿ ಕೊಟ್ಟವಳೆ ಎಲ್ಲಿದ್ದಿ ಇಲ್ಲಿ ತನಕ

ಉತ್ತರವಿದ್ದೇ ಇತ್ತು ಇಲ್ಲೇ ಎಲ್ಲೋ ಅರಸಿದೆನೇನು

ಪೂರ್ವೋತ್ತರಗಳ ಆಚೆ ಬೆಳಕಾದವಳೆ ಎಲ್ಲಿದ್ದಿ ಇಲ್ಲಿ ತನಕ

ನೆಲದ ಕರೆಯೇ ನೀನು ಮುಗಿಲ ಕೊರಳೇ ಹೇಳು ದಿವದ ಅರಳೇ

ಒಡಲಹಾಡಿಗೆ ಸುಧೆಯೂಡಿದವಳೆ ಎಲ್ಲಿದ್ದಿ ಇಲ್ಲಿ ತನಕ

‍ಲೇಖಕರು avadhi

27 July, 2019

2 Comments

  1. T S SHRAVANA KUMARI

    ಸೊಗಸಾಗಿದೆ

  2. ಸುಧಾರಾಣಿ ನಾಯ್ಕ

    ಅಭಿನಂದನೆಗಳು,ಗಜಲ್ ಗಳು ಸೊಗಸಾಗಿವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading