-ರವಿ ಮೂರ್ನಾಡು, ಕ್ಯಾಮರೂನ್
ಇದು ಕೆಲವು ದಿನಗಳ ಹಿಂದೆ ‘ಅವಧಿ’ಯಲ್ಲಿ ಪ್ರಕಟವಾಗಿದ್ದ ಎಂ. ಎಸ್. ಮೂರ್ತಿ ಅವರ ರೇಖಾ ಚಿತ್ರಕ್ಕೆ ಬರೆದ ಕವಿತೆ.
ಆ ಬಾಗಿಲೊಳಗೆ
ಯಾರೋ ಕಟ್ಟಿದರು
ಅರಿಯದ ಜಗತ್ತು
ಹೊರಗೆ ಮತ್ತೊಂದು !
ಹೊರ ಬರುವ ಧಾವಂತಕೆ ನಾನು
ಒದ್ದಾಟಕೆ ಕದ ತೆರೆದ ಅವ್ವ
ಅಳುತ್ತಿದ್ದೆವು ಆ ಶುಭದಿನ !
ಕರುಳ ಬಳ್ಳಿಗೆ ಕತ್ತರಿ ಸಿಕ್ಕಿಸಿ
ಸ್ವಾಗತವೆಂದು ನಕ್ಕರು ಜನ !
ಬೆಳಕು ಬೊಗಸೆ ಬಿಚ್ಚಿದಾಗ
ತೆರದಿದ್ದೇನೆ ಹಣತೆ ಕಣ್ಣು
ಓಡಿಸುತ್ತಾ ಕತ್ತಲು !
ನನಗಿಟ್ಟ ಹೆಸರಿನ ಚೌಕಟ್ಟಿನೊಳಗೆ
ಉರುಳಿದಂತೆ ನನ್ನ ಜಗತ್ತು !
ಮೊಲೆ ಹಾಲು ಕಲಿಸಿದ ಹಸಿವಿಗೆ
ನಡೆದು ಎಡವಿ ಓಡಿದ್ದೇನೆ ಬೆವತು
ಬಾಯಾರಿ ಕುಡಿದು ನೀರು
ಚಳಿಯೆಂದು ಬಡಬಡಿಸಿ
ಬಿಸಿಯೇರಿ ತಂಗಾಳಿಗೆ ತೆರೆದು !
ಕತ್ತಲೆಯಂತೆ ಬೆತ್ತಲೆ ನಾನು
ಜ್ಞಾನದ ಬೆಳಕಿನ ಭಿಕಾರಿ
ಹೂವಾಗಿ ಮೋಹಕೆ ಅರಳಿ
ಬಿದ್ದ ಬೀಜಕೆ ಬೇರಾಗಿ-
ಕಟ್ಟಿದ್ದೇನೆ ಮನೆ-ಸಂಸಾರ-ಅಧಿಕಾರ
ಸುಕ್ಕು ಕಾಲುವೆಗೆ ಅನುಭವಗಳ ಸುರಿದು !
ಈ ಬಾಗಿಲ ಹೊರಗೆ
ನಾನೇ ಕಟ್ಟಿದ ಜಗತ್ತು
ಒಳಗೆ ಗೊತ್ತಿಲ್ಲದ ಮತ್ತೊಂದು !
ಈಗ ದಣಿದಿದ್ದೇನೆ…
ಹೋಗಲಾರದ ನೋವಿಗೆ ನಾನು
ಹೆಣಭಾರಕೆ ಗರ್ಭ ತೆರೆದ ಮಣ್ಣು
ಮೌನವಾದೆವು ಆ ದುಃಖ್ಖ ದಿನ !
ಮೂರಡಿ ಮಣ್ಣಿಗೆ ಹೂಗಳ ಚೆಲ್ಲಿ
ಶ್ರಾದ್ದವೆಂದು ಕೈತೊಳೆದರು ಜನ !
]]>







ಒಂದು ಕವಿತೆಯಲ್ಲಿ ಒಬ್ಬ ಮನುಜನ ಜೀವನದ ವರ್ಣನೆ.. ಅಸಾಮಾನ್ಯ ಕವಿತೆ.. ತಲೆ ಬಾಗುವೆ ರವಿಯಣ್ಣ 🙂
ಹಂತ ಹಂತವಾಗಿ ಪಕ್ವಗೊಂಡು ಬೆಳೆದ ಪ್ರತಿಮೆ… ಒಳ್ಳೆಯ ಕವಿತೆ ರವಿಯಣ್ಣ… 🙂
ಒಂದು ಜೀವ ಮಾನದ ವೃತ್ತಂತವನ್ನು ಸವಿಸ್ತಾರವಾಗಿ ಕಟ್ಟಿಕೊಟ್ಟಿದ್ದೀರ.
ಬಾಗಿಲಿನ ಹಿಂದೆ ಇದ್ದ ಭದ್ರತೆ ನಮಗೆ ಬಾಗಿಲಿನ ಹೊರಗೆ ಇರಲಾರದು. ಹೊರಗೆ ಬರೀ ಗುದ್ದಾಟ ಜಗ್ಗಾಟ ಕಾಲು ಎಳೆದಾಟ.
ನಾನು ಪದೇ ಪದೇ ಓದಿಕೊಳ್ಳಲು ಈ ಕವನವನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತೇನೆ.
ಹೋಗಲಾರದ ನೋವಿಗೆ ನಾನು
ಹೆಣಭಾರಕೆ ಗರ್ಭ ತೆರೆದ ಮಣ್ಣು
ಮೌನವಾದೆವು ಆ ದುಃಖ್ಖ ದಿನ !
ಮೂರಡಿ ಮಣ್ಣಿಗೆ ಹೂಗಳ ಚೆಲ್ಲಿ
ಶ್ರಾದ್ದವೆಂದು ಕೈತೊಳೆದರು ಜನ !
heart touching….
ಸರ್,
ನಿಮ್ಮ ಕವಿತ್ವ ಶಕ್ತಿಗೆ ತಲೆಬಾಗಿ ವಂದಿಸುವೆ.
ಎಷ್ಟು ಸರಳ…ಎಷ್ಟೊಂದು ಅರ್ಥಪೂರ್ಣ !!!!