ಕಣ್ಣಿನ ಕಡೆಯ ಕನಸ್ಸನ್ನು ಬಿಡುಗಡೆಗೊಳಿಸಲಾಗಿದೆ..

ಅಲಂಕಾರ

ಕಾಜೂರು ಸತೀಶ್

ಸತ್ತಾಯಿತು
ಇನ್ನು ಅಲಂಕಾರವಷ್ಟೆ ಬಾಕಿ.
 
ಹೊರಬಿದ್ದ ಕಣ್ಣಗುಡ್ಡೆಗಳನ್ನು
ಮುಚ್ಚಿಡಲಾಗಿದೆ.
ಕಾಡಿಗೆಯಲ್ಲಿ ತಿದ್ದಿ ಕಪ್ಪಾಗಿಸಿದ
ಕಣ್ಣಿನ ಕಡೆಯ ಕನಸ್ಸನ್ನು
ಬಿಡುಗಡೆಗೊಳಿಸಲಾಗಿದೆ.
 
ಕನ್ನಡಕ ಬಿಚ್ಚದೆಯೇ ಇವತ್ತಿನ ಸ್ನಾನ.
 
ಬೇಗ ..
ಅಲಂಕಾರಕ್ಕೆ ಸಿದ್ಧಗೊಳಿಸಿ,
ಇನ್ನೂ ಎಷ್ಟೊಂದು ಕೆಲಸಗಳು ಬಾಕಿ ಇವೆ.
 
ಮೊದಲು ಹಣೆಗೆ ಬೊಟ್ಟು ಇಡೋಣ
ಅದು ಸಿಂಧೂರವಾಗಿರಲಿ
ವೃತ್ತಾಕಾರದಲ್ಲಿರಲಿ.
ಅಂಟುವ ಸಿಂಧೂರ ಬೇಡ
ಅದರ ಕಲೆ ಅಲ್ಲೇ ಉಳಿಯುತ್ತದೆ .
ಗಂಧದ ಬೊಟ್ಟು ಬೇಕಾ?
ವಿಭೂತಿಯಾದರೆ ಚೆನ್ನ
ಸ್ಮಶಾನಕ್ಕಲ್ಲವೇ?
 
ಕಣ್ರೆಪ್ಪೆಗಳಿಗೆ ಕಾಡಿಗೆ ಬೇಡ
ಕಣ್ಣೀರು ಜಿನುಗಿದರೆ
ಶುಭ್ರವಾಗಿ ಕಾಣಿಸಬಹುದು .
 
ಮೂಗಿನಲ್ಲಿ ಹತ್ತಿ ಇಡಲು ಮರೆಯಬಾರದು
ನಮ್ಮ ವಾಸನೆ ಹಿಡಿದು ಹಿಂದೆಯೇ ಬಂದರೆ?
 
ಸತ್ತು ಬಿಳುಚಿದ ತುಟಿಗಳು
ಕಳೆಗುಂದಿದ ಹಲ್ಲುಗಳು
ದಂಗೆಯೇಳದೆ ಇರುವುದಿಲ್ಲ .
ಒಂದು ಹೊಸ ಹತ್ತಿ ಬಟ್ಟೆ ಹರಿದುಕೊಡಿ
ಸೇರಿಸಿ ಕಟ್ಟಿ ಹಾಕೋಣ
ಪಾಠ ಕಲಿಸಬೇಕು .
 
ನಾಲಗೆಯಿಂದಿಳಿಯುತ್ತಿರುವ ವಿಷ
ಹೊರಗಿಳಿಯದಂತೆ ನೋಡಿಕೊಳ್ಳಬೇಕು
ಕೆನ್ನೆಯ ಈ ಒಂಟಿ ಕುಳಿಯನ್ನು ಮುಚ್ಚಿಡಬೇಕು
ಇನ್ನಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಲಿ.

ರಕ್ತ ಇಳಿಯುತ್ತಿರುವ ಕಿವಿಗಳಲ್ಲಿ
ಹತ್ತಿಯುಂಡೆಗಳನ್ನು ತುರುಕೋಣ
ಎಂಥ ಆಲಿಸುವ ಸಾಮರ್ಥ್ಯವಿತ್ತು-
ನಾವು ಹೇಳದಿರುವುದೇ ಕೇಳಿಸುತ್ತಿತ್ತು.
ಹೊಳೆಯುವ ಈ ವಾಲೆಗಳನ್ನು
ಬಿಚ್ಚಿಡಲು ಮರೆಯಬೇಡಿ
ಅದು ಹೊಳೆದದ್ದು ಸಾಕು.
 
ಕೈಗೆ ಕಟ್ಟಿದ ಕಪ್ಪು ದಾರದಲ್ಲಿರುವ
ತಾಯತವನ್ನು ಕತ್ತರಿಸಿಹಾಕಬೇಕು
ನೋಡೋಣ
ಇನ್ನ್ಯಾವ ರಕ್ಷೆಯಿದೆ ಇವಳಿಗೆ .
 
ಉಬ್ಬಿದ ನರಗಳಿರುವ ಕೈಗಳ
ಊದಿದ ಬೆರಳುಗಳನ್ನೆಲ್ಲ ಸೇರಿಸಿ
ಈಗಲೇ ಕಟ್ಟಿಹಾಕಬೇಕು
ಬಲೆ ಹೆಣೆಯುವ ಬೆರಳುಗಳವು
ಎಷ್ಟು ವೇಗ ಅವಕ್ಕೆ!
ಬೆರಳಿಗೆ ಅಂಟಿಕೊಂಡಿರುವ ಯಾವುದಾದರೂ
ಉಂಗುರವಿದೆಯೇ ನೋಡಿಕೊಳ್ಳಿ.
 
ಖಾಲಿ ಹಸ್ತಗಳನ್ನು
ಕ್ಷಮೆ ಕೇಳುವ ಹಾಗೆ ಜೋಡಿಸಿಡಿ.
 
ಘಲ್ಲು ಘಲ್ಲೆನ್ನುವ ಕಾಲ್ಗೆಜ್ಜೆಗಳನ್ನು
ಬಿಚ್ಚಿಟ್ಟುಬಿಡಿ
ಶ್..ಜಾಗ್ರತೆ
ಶಬ್ದ ಕೇಳಿಸಬಾರದು.
ಕಾಲುಗಳನ್ನು ಸುಮ್ಮನೆ ಬಿಡಬಾರದು –
ಕಟ್ಟಿಹಾಕಬೇಕು.
ಮತ್ತೆ ಎದ್ದು ಬರಬಾರದು
ಯಾರ ನೆನಪಿನಂಗಳಕ್ಕೂ.
 
ಸಾಕು
ಎಲ್ಲ ತಯಾರಿಗಳೂ ಮುಗಿದವು
ಈಗ ನೋಡುವ ಸಮಯ.
 
ಕಡೆಯ ಬಾರಿ ಒಮ್ಮೆ ನೋಡಿ ಹೋಗೋಣ .
 
ಏನನ್ನೂ ಕೊಂಡು ಹೋಗುತ್ತಿಲ್ಲವೆಂದು
ಸರಿಯಾಗಿ ನೋಡಿ ಖಾತ್ರಿಪಡಿಸಿಕೊಳ್ಳಿ.
 
ಸ್ವಲ್ಪ ದೂರ ನಿಂತು
ಕಣ್ಣುಗಳನ್ನು ಒರೆಸೋಣ
ಸುಡುವ ಅವಳ ಎದೆಯ ಮೇಲೊಂದು
ಹೂವನ್ನಿಡೋಣ
ಎದೆಬಿರಿಯುವಂತೆ ಜೋರಾಗಿ ಅತ್ತುಬಿಡೋಣ.
 
ಆದರೆ ಹೆಚ್ಚು ಹೊತ್ತು ಮಲಗಿಸುವುದು ಬೇಡ
ಗುಂಡಿ ತೋಡಿ ಮುಚ್ಚಿಹಾಕಬೇಕು ಬೇಗ.
 
ಹಿರಿಯರು ಇನ್ನೂ ಬದುಕಿದ್ದಾರೆ.
ಶವ ಸುಡಲು
ಮಾವಿನ ಮರವನ್ನು ಕತ್ತರಿಸುವುದು ಬೇಡ.
 
ಸುಡುವುದೇ ಬೇಡ ಬಿಡಿ
ಸುಟ್ಟರೆ ಬೂದಿ ಉಳಿದುಬಿಡುತ್ತದೆ.
 
**
ಮಲಯಾಳಂ ಮೂಲ: ಕೀರ್ತನಾ ವಿಶ್ವನಾಥ್
ಕನ್ನಡಕ್ಕೆ : ಕಾಜೂರು ಸತೀಶ್
 

‍ಲೇಖಕರು G

July 16, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. narayan raichur

    chennagide – bahala maarmikavaada niroopane, aadhyaatmada aleyoo beratu mana tattuvantaha prayatna – GOOD !!!

    ಪ್ರತಿಕ್ರಿಯೆ
  2. ಮಂಜುನಾಥ್. ಪಿ

    ತಟ್ಟುವ ಕವಿತೆ ..! ತುಂಬಾನೆ ಚೆನ್ನಾಗಿದೆ …! carry on ಕವಿಗಳೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: