– ಮಲ್ಲಿಕಾರ್ಜುನಗೌಡ ತೂಲಹಳ್ಳಿ
ಕಣಿವೆ ತಳದ ಬಿಂದು
ಕಣಿವೆ ತಳದ
ನಟ್ಟನಡು ಬಿಂದು
ಈ ಮನ.
ವಲಸೆ ತೀರಿದ ಮೇಲೆ
ಕತ್ತಲ ಧ್ಯಾನ.
ರೆಪ್ಪೆಅಡಿಗೆ
ಒಂದೇಕಣ್ಣುತೆರೆದು
ಸುತ್ತ
ಮೈಹಾಸಿ ತಂದುದನೆಲ್ಲ
ಸುರಿದು
ಛಾಪಿಸಿದ ಬೆಲೆ ಕಳೆದು
ನಿಜದತಕ್ಕಡಿಯಲ್ಲಿ
ಮಾನ ಅವಮಾನಗಳ ಅಳೆದು
ಕರಗುವುದಿಲ್ಲಿ
ಬರೀ ಘನವಾಗಿ ಸಂದದ್ದು.
ಪಾತಾಳದುಗ್ರಾಣದಲಿ
ಹುಸಿಗಿಲ್ಲ ಅವಕಾಶ.
ನಿಮ್ಮೂರಿನ ಬಜಾರಿನಲಿ
ಗಲ್ಲಿಯಲಿ
ರೂಮಿನ ಮಂಚದಲಿ
ಹರಿಬಿಟ್ಟ ಹಾವುಗಳೆಲ್ಲ
ವಿಷ ಕಳೆಯಲೇಬೇಕು ಇಲ್ಲಿ.
ಪರ್ವತವೂತಲೆಬಾಗಿ
ತೋಳುಚಾಚಿದೆ ನೋಡು.
ಅಲೆಗಳೆಲ್ಲ ಶಾಂತವಾಗಿ
ಕನ್ನಡಿ ಜಲವಿಳಿವ ಜಾಡು.
ನಂಬಿಕೆಯ ವೇಷದಲಿ
ಹುಸಿ ಹುಗಿಸಲಾಗದು.
ಎದೆಗೊಟ್ಟ ಪ್ರತೀಕ್ಷಣಕಣದಲ್ಲೂ
ಸ್ಥಿರ ನ್ಯಾಯಕನ್ನಡಿ.






uttama kavana..
ಚನ್ನಾಗಿದೆ.ಇನ್ನೂ ಗಟ್ಟಿಯಾಗಿ ಬರಿಬಹುದಿತ್ತು
Kavana chennaagide sir!