ಸಿದ್ದು ಪಿನಾಕಿ
ಬಹಳ ಉದ್ವೇಗದಲ್ಲಿದ್ದೇನೆ. ಹೇಗೆ ವರ್ಣಿಸಬೇಕೋ, ಈ ಘಟನೆಯನ್ನು ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ. ಬರೆಯಲು ಕುಳಿತರೆ, ಪದಗಳೇ ಮರೆತುಹೋಗುತ್ತಿವೆ. ನಾನು ಕಬಿನಿಯ ಒಡಲಲ್ಲಿ ಕಳೆದಷ್ಟು ದಿನ, ನನ್ನೂರು ಮಂಡ್ಯದಲ್ಲೂ ಕಳೆದಿಲ್ಲವೇನೋ ! ಕಬಿನಿ ಒಡಲಲ್ಲಿ ಮಮತೆ ಇದೆ. ನಿಶಬ್ಧವಿದೆ. ಅಂದ ಚೆಂದವಿದೆ. ಅದಕ್ಕಿಂತಲೂ ಹೆಚ್ಚು ರೌದ್ರತೆ ಇದೆ. ಇದು ಕಬಿನಿಯ ಹೊಕ್ಕಳು ಬಳ್ಳೆ ರೇಂಜ್. ದಟ್ಟ ಕಾಡಿನ ಮಧ್ಯೆ ಇದೆ ಸೀಗೂರು ಟ್ಯಾಂಕ್.
ಈ ಫೋಟೋವನ್ನೂ ಸೂಕ್ಷ್ಮವಾಗಿ ನೋಡಿ. ಆನೆಗಳಿವೆ. ಅಮ್ಮನ ತೆಕ್ಕೆಯಲ್ಲೇ ಮರಿಯೊಂದಿದೆ. ಸುತ್ತಮುತ್ತ ನೂರಾರು ಜಿಂಕೆಗಳಿವೆ. ಅವುಗಳ ಮಧ್ಯೆಯೇ ರಾಜನಿದ್ದಾನೆ. ಅರರೇ… ಏನ್ರೀ ಈ ದೃಶ್ಯ ಅಂತೀರಾ..!
ನೂರಾರು ಜಿಂಕೆಗಳನ್ನು ಬಿಟ್ಟ ಹುಲಿರಾಯನ ಕಣ್ಣು, ಆನೆಮರಿಯ ಮೇಲೇ ಇತ್ತು. ಆದರೆ, ಅದರ ಅಮ್ಮ ಮತ್ತು ಇತರೇ ಆನೆಗಳು ಬಿಡಬೇಕಲ್ಲ. ಹುಲಿಯನ್ನು ಹತ್ತಿರಕ್ಕೂ ಸೇರಿಸಲಿಲ್ಲ. ಆದ್ರೆ, ಹುಲಿರಾಯ, ಒಮ್ಮೆ ಮನಸ್ಸು ಮಾಡಿದರೆ, ಮುಗೀತು. ಬೇಕು ಎಂದದ್ದನ್ನು ಪಡೆದೇ ಪಡೆದುಕೊಳ್ತಾನೆ.

ಇದು ಸತತ ಏಳು ಗಂಟೆಯ ಹೋರಾಟ. ದೊಡ್ಡ ದೊಡ್ಡ ಆನೆಗಳನ್ನು ಬೆದರಿಸತೊಡಗಿತು ಹುಲಿರಾಯ. ಬಗ್ಗದಿದ್ದಾಗ, ಚಾರ್ಜ್ ಮಾಡಿತು. ಹುಲಿರಾಯನ ದರ್ಪದ ಮುಂದೆ, ಆನೆಗಳು ಶರಣಾಗಲೇಬೇಕಾಯ್ತು. ಕಡೆಗೂ, ಆನೆಮರಿ, ಹುಲಿರಾಯನ ದವಡೆಗೆ ಸಿಲುಕಿತು.
ಈ ಅದ್ಬುತ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು ನನ್ನ ಕುಚಿಕು ಗೆಳೆಯ ಶೇಜ್. ಅಬ್ದುಲ್ ಶೇಜ್. ಹುಲಿಯ ಬಗ್ಗೆ ಅಷ್ಟೊಂದು ಹೇಳಿ, ಈ ಗೆಳೆಯನ ಬಗ್ಗೆ ಹೇಳೋಕೆ ಹೊರಟರೆ, ಒಂದು ದಿನವೂ ಸಾಲೋಲ್ಲ ಬಿಡಿ.
ನಾನೋ ಕಬಿನಿಯ ನೆಂಟ. ಆದ್ರೆ, ಈ ಶೇಜ್, ಅವಳ ಮಗನೇ. ಈತ ಬುದ್ದಿ ಕಂಡಾಗಿನಿಂದಲೂ ದಟ್ಟ ಕಾಡಿನ ಮಧ್ಯೆಯೇ ಬೆಳೆದಿದ್ದಾನೆ. ಕಾಡನ್ನೇ ಉಸಿರಾಗಿಸಿಕೊಂಡಿದ್ದಾನೆ. ಈಗ ದೇಶದ ಹೆಸರಾಂತ ವೈಲ್ಡ್’ಲೈಫ್ ಫೋಟೋಗ್ರಾಫರ್’ಗಳಲ್ಲಿ ಈತನೂ ಒಬ್ಬ.
ಶೇಜ್ ಬಗ್ಗೆ ಇನ್ನೊಮ್ಮೆ ಪರಿಚಯ ಮಾಡಿಕೊಡ್ತೇನೆ. ಮತ್ತೆ, ಇನ್ನೊಮ್ಮೆ, ಈ ಫೋಟೋ ನೋಡಿ. ರೋಮಾಂಚನ.






0 Comments