ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡಲ ಗರ್ಭದೊಳ ನಡೆದು ತೊರೆಯೀಗ ಪರಿಪೂರ್ಣ

ಕಿರುತೊರೆ

ಎನ್.ಕೃಷ್ಣಮೂರ್ತಿ

 

ಮೂಲವೆಂಬೊ ತಾಯಮಡಿಲ ಜಿಗಿದು

ಅಂಬೆಗಾಲಲ್ಲರಿದು ಜುಳುಜುಳು ಕವಿತೆ

ಅಣುಅಣು ನೀರಾಗುವ ಮಾಯೆ

ಕಿರುತೊರೆಯ ಜೀವದೊರತೆ

ಸುಲಭವಲ್ಲ ಪಯಣ ಮುಂದೆ

ಬಂಡೆಗಲ್ಲಿಗೆ ಮೈ ತರಚಿ ಪೊದರುಗಳಲಿ ಕೈಕಾಲು

ಪರಚಿ ಜಾರು ಜವುಗು ಮಣ್ಣು ಜಿಗಣೆ

ಕಾರಣವಿರದೆ ಕೂಗುವ ಜೀರುಂಡೆ ಸುಂಯ್ಯೆನುವ

ಸೊಳ್ಳೆ ಬೇಡದ ಗಾನ ಜೀವನ

ನಡೆಯಲೇ ಬೇಕು ಇನ್ನು ತೊರೆ

ತೊರೆದಾಗಿದೆ ತಾಯತೊಡೆ

ಆವುದೋ ಊರ ತಿರುವಲಿ ಸೊಂಟ ಬಳುಕಿ

ಬೃಹತ್ ಬಂಡೆಯ ತಲೆಯಿಂದ ಧುಮುಕಿ

ಹರಿದರಿದು ತಿಳಿಯಾಗಿ ನದಿಯಾಗಿ

ಬಣ್ಣದ ಮೀನು, ಸೀಗಡಿ ಮತ್ತು ಕಲ್ಲುಏಡಿಗೂ ತಾಯಾಗಿ

ಜೀವಜೀವದ ದಾಹವಾರಿಸೊ ಗಂಗೆ

ಕೆಲವೊಮ್ಮೆ ಪ್ರೇಮಿಗಳ ಪಾದಕೆ ತಂಪು

ಅವಕಾಶವಿದ್ದಂತೆ ಆಕಾರ ಅದಲುಬದಲು

ತೆಳ್ಳನೆಯ ಸ್ಫಟಿಕದಂತೆ ಒಮ್ಮೆಮ್ಮೆ

ವಜ್ರದಂತೆ ಗಡಸು

ಮರದ ನೆರಳಿದ್ದರೂ ದಂಡೆಯಲಿ

ವಿಶ್ರಮಿಸದಂತೆ

ಕೃಶವಾಗಿ ಸುಡುಬೇಸಿಗೆಗೆ ಮತ್ತೆ

ಮುಖವೊಡ್ಡಿ ಮಳೆಗೆ ಖುಷಿಯಾಗಿ

ನಾನೆಂಬೊ ಪದಕಳೆದು

ಕಡಲ ಗರ್ಭದೊಳ ನಡೆದು

ತೊರೆಯೀಗ ಪರಿಪೂರ್ಣ ಮತ್ತು

ಸ್ಪಷ್ಟ ಹರಿವುದರ ಕಾರಣ

(ಶ್ರೀಪುರುಷೋತ್ತಮ ಬಿಳಿಮಲೆಯವರ ’ಬಂಟಮಲೆಯ ಕಿರುತೊರೆ’ ಓದಿ…)

 

‍ಲೇಖಕರು G

1 October, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading