ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡಲಾಚೆಯಲ್ಲಿ ‘ಅವಳ ಕಾಗದ’

ವಿಶ್ವೇಶ್ವರ ದೀಕ್ಷಿತ, ಲಾಸ್‌ ಏಂಜಲೀಸ್‌

ಚಿತ್ರಗಳು: ದಿನೇಶ್ ಹಾರ್ಯಾಡಿ.

ಸಮುದ್ರದ ಅಲೆಗಳು ಒಂದಾದ ನಂತರ ಒಂದು ದಂಡೆಗೆ ಅಪ್ಪಳಿಸುತ್ತಿವೆ. ಕಿವಿ ಗಡಚಿಕ್ಕುವ ಶಬ್ದ. ಅಲ್ಲಿ ಅವಳುಕೂತಿದ್ದಾಳೆ. ಮರಳಿನಲ್ಲಿ ಕೈಯಾಡಿಸುತಿದ್ದಾಳೆ. ಮನಸ್ಸಿನಲ್ಲಿ ನೂರು ಮುಳ್ಳುಗಳು ಚುಚ್ಚುತಿವೆ.   ಸಮಾಜವೆಂಬ ಸಮುದ್ರದ ಅಲೆಗಳ ಆಘಾತಕ್ಕೆ ಮತ್ತು ಸುತ್ತ ಹಾಕಿದ ನಿರೀಕ್ಷೆ ಕಟ್ಟಲೆಗಳ ಮುಳ್ಳು ಬೇಲಿಯಲ್ಲಿ ಸಿಕ್ಕು, ಹೆಣ್ಣು ಎಂಬ ಒಂದೇ ಕಾರಣದಿಂದ, ಭವಿಷ್ಯವೇ ಇಲ್ಲದೆ, ಹುಟ್ಟುವುದಕ್ಕಿಂತ ಮುಂಚೆಯೆ ಭೂತವಾಗಿ ಬಿಡುತ್ತಾಳೆ.  ಇಲ್ಲಿ ಹದಿನೈದು ವರ‍್ಷದ ನೀರಸ ದಾಂಪತ್ಯದಲ್ಲಿ ಮತ್ತು  ಅಸ್ವತಂತ್ರ ಕೌಟುಂಬಿಕ ಜೀವನದಲ್ಲಿ,  ಅನ್ಯಾಯಗಳಿಗೆ ರೋಸಿ, ಸ್ವಂತ ಅಸ್ತಿತ್ವವೆ ಅಸಾಧ್ಯ ಎನಿಸಿದಾಗ  ಇದನ್ನೆಲ್ಲ ಧಿಕ್ಕರಿಸಿ ಹೊರಬೀಳುವ ತುಮುಲ ಮತ್ತು ಎದಗಾರಿಕೆಯನ್ನು ತೋರಿಸುವ ಕಥಾಭಿನಯ ಇದು. 

ಕಥೆ ಹಳೆಯದು, ನಿರೂಪಣೆ ಮತ್ತು ಅಭಿನಯ ಹೊಸದು.  ರವೀಂದ್ರನಾಥ ಠಾಕೂರರ ಕತೆಗಳನ್ನು ಆಧರಿಸಿದ ಸುಧಾ ಆಡುಕಳ ಅವರು ರಚಿಸಿದ ರಂಗರೂಪ ʼಅವಳ ಕಾಗದʼ. ಇದರ ನಿರ್ದೇಶಕರು ಡಾ. ಶ್ರೀಪಾದ ಭಟ್.‌  ಕಳೆದ ಶನಿವಾರ, ಅಗಸ್ಟ್‌ ೧೨, ೨೦೨೩ರಂದು, ಕರ್ನಾಟಕ ಸಾಂಸ್ಕೃತಿಕ ಸಂಘ, ದಕ್ಷಿಣ ಕ್ಯಲಿಫೋರ್ನಿಯ ಆಯೋಜಿಸಿದ ಕಾರ್ಯಕ್ರಮ. ಸಂಘದ ಅಧ್ಯಕ್ಷರಾದ ಶ್ರಿಯುತ ಅನಂತ ಪ್ರಸಾದ ಅವರ ಮನೆಯಲ್ಲೆ ಮನೋಜ್ಞವಾದ ಏಕವ್ಯಕ್ತಿ ರಂಗ ಅಭಿನಯವನ್ನು ನೀಡಿದವರು ಮುಂಬಯಿ ನಿವಾಸಿ ನಟಿ ಅಹಲ್ಯಾ ಬಲ್ಲಾಳ್.‌ 

ಪ್ರೇಕ್ಷಕರಿಗೆ ಅರಿವೇ ಇಲ್ಲದಂತೆ, ಕತೆಯಲ್ಲಿನ ಪಾತ್ರ ಒಂದರಿಂದ ಮತ್ತೊಂದಕ್ಕೆ ಜರುಗಿ ಮತ್ತೆ ತಿರುಗಿ ಬರುವ ಅಹಲ್ಯಾ ಅವರ ʼಪರಾಂತರಂಗ ಪ್ರವೇಶʼದ  ಅಭಿನಯ  ಅನುಪಮವಾಗಿತ್ತು.  ಪ್ರೇಕ್ಷಕರ ಮೆಚ್ಚುಗೆ ಮತ್ತು ಅಹಲ್ಯಾ ಅವರ ನಟನೆ, ಸಾಧನೆಗಳ ಬಗ್ಗೆ ಕುತೂಹಲದ ಪ್ರಶ್ನೆಗಳ ಸುರಿಮಳೆ. ಲಕ್ಷ್ಮಿ ಐತಾಳ್‌ ಅವರ ಅತಿಥಿಯಾಗಿ ಬಂದ ಅಹಲ್ಯಾ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕನ್ನಡಿಗರೆಲ್ಲರಿಗೂ ಆತ್ಮೀಯರಾಗಿಬಿಟ್ಟರು.

ಕೊನೆಯಲ್ಲಿ, ಸಮಾಜದಲ್ಲಿ ಹೆಣ್ಣಿನ ಪರಿಸ್ಥಿತಿ ಬದಲಾಗಿದೆಯೆ?  ನಿರ್ಭಯ‌ಳನ್ನು ಮರೆತೆವೆ?  ಮಣಿಪುರದ ಅಮಾನುಷ ಕೃತ್ಯಗಳು ಸಾಮಾಜಿಕ ಕ್ಯಾನ್ಸರೆ? ಈ ಸಮುದ್ರದ ಅಲೆಗಳು ನಿಲ್ಲುವವೆ? ನೀರು ಸಿಹಿಯಾದೀತೆ? ಅವಳು ಬರೆದ ಕಾಗದ ಟಪ್ಪಾಲಿನಲ್ಲಿ ಕಳೆದು ತಲುಪದೇ ಹೋಯ್ತೆ? ಮೂಕರಾಗಿ ಮನೆಗೆ ತೆರಳುವ ಸರದಿ ನಮ್ಮದಾಗಿತ್ತು.

‍ಲೇಖಕರು avadhi

17 August, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading