ಸಿ.ಎಸ್.ದ್ವಾರಕಾನಾಥ್
ದಟ್ಟಕಾಡಿನಂತಿರುವ ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಆಗಾಗ ವಾಕ್ ಹೋಗುತ್ತೇನೆ..
ಎಸ್.ಎಂ. ಕೃಷ್ಣರ ಕಾಲದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಇದನ್ನು ಕಬಳಿಸಲು ಹೊರಟಾಗ ಪ್ರೊ. ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ಇಲ್ಲಿನ ವಿದ್ಯಾರ್ಥಿಗಳು, ಅಧ್ಯಾಪಕರು ಎಲ್ಲಾ ಸೇರಿ ಹೋರಾಟ ಮಾಡಿ ಈ ಭೂಮಿಯನ್ನು ಉಳಿಸಿಕೊಂಡರು.. ಆಗ ಕೃಷ್ಣರ ಸರ್ಕಾರ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಮೇಲೆ ಹಾಕಿದ್ದ ಕ್ರಿಮಿನಲ್ ಕೇಸುಗಳನ್ನು ನಾನೇ ನಡೆಸಿದ್ದೆ.. ಪ್ರೊಫೆಸರ್ ಅಂತೂ ಒಂದು ದಿನವೂ ಕೇಸಿಗೆ ಬಾರದೆ ಸರ್ಕಾರದ ಮೇಲೆ ಒತ್ತಡ ತಂದು ಕೇಸ್ ವಾಪಸ್ಸು ಪಡೆಯುವಂತೆ ನೋಡಿಕೊಂಡರು..!
ಇದೆಲ್ಲದರ ಫಲವಾಗಿ ಇಂದು ಈ ಭೂಮಿ ಉಳಿದಿದೆ.. ಇದು ಉಳಿದಿದ್ದರಿಂದ ನಮ್ಮಂಥವರು ವಾಕ್ ಮಾಡುತಿದ್ದೇವೆ.. ಈ ಯಾವುದೇ ಹಿನ್ನೆಲೆ ಅರಿಯದವರು ಕೂಡ ವಾಕ್ ಬಂದು ಹಣ್ಣು, ಕಾಯಿ, ಹೂವು, ಎಲೆ ಕೀಳುವ ‘ಸತ್ಕಾರ್ಯ’ ಮಾಡುತ್ತಾರೆ.. ಇಲ್ಲಿ ಕದ್ದ ಹೂಗಳೇ ಇವರ ಮನೇ ದೇವರ ಪೂಜೆಗೆ ಪವಿತ್ರ..!
ಇಂದು ಬೆಳಿಗ್ಗೆ ವಾಕ್ ಮಾಡುವ ಜನ ವೀರಾವೇಶದಿಂದ ಅಲ್ಲೇ ಗಿಡಗಳಿಂದ ಮುರಿದ ರೆಂಬೆ ಕೈಯಲ್ಲಿ ಹಿಡಿದು ನಿಂತಿದ್ದರು!? ರಸ್ತೆ ದಾಟುತಿದ್ದ ಹಾವಿನ ಮರಿಯೊಂದನ್ನು ಹೊಡೆದು ಸಾಯಿಸಲು ಹೊರಟಿದ್ದ ಈ ‘ವೀರ’ರನ್ನು ನಾನು ತಡೆದಿದ್ದೇ ಅವರಿಗೆ ಎಲ್ಲಿಲ್ಲದ ಕೋಪ ಬಂದು.. ಒಬ್ಬ ” ಅದು ಕೊಳಕು ಮಂಡಳ ಕಣ್ರೀ..ವಿಷಜಂತು.. ಅದು ಕಚ್ಚಿದರೆ ಮುಗೀತು..” ಅಂದ.
ನಾನು “ಆಯ್ತು ಬಿಡಿ ಅದರ ಪಾಡಿಗೆ ಅದು ಹೋಗುತ್ತೆ” ಅಂದೆ.. “ಅದು ನಾಳೆ ನಿಮ್ಮನ್ನೇ ಕಚ್ಚಿದರೆ ಏನು ಮಾಡ್ತೀರಿ..” ಅಂದ ಮತೊಬ್ಬ..”ಕಚ್ಚಿದರೆ ಕಚ್ಚಿಸಿಕೊಳ್ತೀನಿ.. ಇದು ಅವುಗಳ ಜಾಗ ನಾವು ಅಕ್ರಮವಾಗಿ ಬಂದಿದ್ದೇವೆ..” ಅಂದೆ.. “ಹೋ ಗಾಂಧಿ ಮಹಾತ್ಮ ಕಚ್ಚಿಸಿಕೊಳ್ತಾರಂತೆ ಬಿಡ್ರೋ.. ಇವರ ಮನೆಯವರನ್ನು ಕಚ್ಚಿದಾಗ ಇವರಿಗೆ ಗೊತ್ತಾಗ್ತೈತೆ..” ಎಂದು ತಲೆಗೊಂದರಂತೆ ನನ್ನನ್ನು ವ್ಯಂಗ್ಯ ಮಾಡಿ ನಗಾಡಿ ಹೋದರು.. ಅದು ರಸ್ತೆದಾಟಿ ಹೋಗೋವರೆಗೂ ಕಾದು ಅದು ಕಣ್ಮರೆಯಾದ ಮೇಲೆ ಹೊರಟೆ..
ಪ್ರಾಣಿಗಳಲ್ಲಿ ವಿಷಜಂತುಗಳಿರಲು ಸಾಧ್ಯವೇ.. ಅವು ಇರುವುದು ಮನುಷ್ಯರಲ್ಲವೆ..? ಅದಿರಲಿ..
ನನಗೆ ಅರ್ಥವಾಗದಿರುವುದು ಇವರೆಲ್ಲ ವಿದ್ಯಾವಂತರು ಇವರ ಮಕ್ಕಳಿಗೆ ಪರಿಸರ, ಪ್ರಾಣಿ, ಪಕ್ಷಿಗಳನ್ನು ಉಳಿಸಬೇಕೆಂದು ಹೇಳಿಕೊಡಬೇಕಾದವರು.. ಇವರು ವಾಸ್ತವದ ಜತೆ ಮುಖಾಮುಖಿಯಾದಾಗ ಹೀಗೆ ವರ್ತಿಸುತ್ತಾರಲ್ಲ..ಹೇಗೆ..? ನಿಜಕ್ಕೂ ಆಘಾತವಾಯಿತು..
Sir, ಇವರನ್ನೆಲ್ಲ ವಿದ್ಯಾವಂತರು ಅಂದುಕೊಳ್ಳೋದು ನಮ್ಮ ಭ್ರಮೆ. Education ಮತ್ತು Schooling ಮಧ್ಯೆ ಬಹಳ ವ್ಯತ್ಯಾಸವಿದೆಯಲ್ವಾ ?