ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಂದನ ಆಕ್ರಂದನಕ್ಕೆ ಸಾಂತ್ವನವೇನಿದೆ ?

ಕಂದನ ಆಕ್ರಂದನ

ನಾ ದಿವಾಕರ್


ಅಮ್ಮಾ ನನಗೇನಾಗಿದೆಯಮ್ಮಾ
ಎಂದು ಕಂದಮ್ಮ ಮುದ್ದಾಗಿ ಕೇಳಿದಾಗ
ಥಟ್ಟನೆ ನೆನಪಾದರು ದ್ರೌಪದಿ
ಮಂಡೋದರಿಯರು
ಪಾತಿವ್ರತ್ಯದ ಪ್ರತಿನಿಧಿಗಳು
ಪುರಾಣ ಕಥನಗಳ ದುರಂತ ನಾಯಕಿಯರು !
 
ಏನೆಂದು ಹೇಳಲಿ ಜಗವರಿಯದ ಕಂದಮ್ಮನಿಗೆ
ಅಂಗಾಂಗದ ಪರಿವೆಯೇ ಇಲ್ಲದ ಹಸುಳೆಯ
ಲಿಂಗಸ್ಪರ್ಷದ ಅನುಭಾವವನು
ಧರ್ಮ ತತ್ವ ಸಿದ್ಧಾಂತಗಳು ಗ್ರಹಿಸುವವೇ ?
 
ಎಲ್ಲರೂ ನನ್ನನ್ನೇ ನೋಡುವರೇಕಮ್ಮಾ
ಎಂದು ಹಸುಳೆ ಕೇಳಿದಾಗ
ಕರುಳು ಹೇಳಿತು
ಸುಮ್ಮನಿರು ಸುತ್ತಲಿನ ಕ್ರೌರ್ಯ ಕತ್ತಲಲ್ಲೇ ಇರಲಿ
ಹಸುಳೆಯ ಎದೆ ಇರಿಯುವುದು ಬೇಡವೆಂದು !
 
ಮತ್ತದೇ ಅಳು ಮತ್ತದೇ ಪ್ರಶ್ನೆ
ಹೇಗೆ ಸಹಿಸಲಿ ? ದೂಷಿಸುವುದಾರನ್ನು ?
ಪುರುಷತ್ವವನ್ನೇ ಪೌರುಷವನ್ನೇ
ಪುರುಷ ಸೂಕ್ತದ ಕ್ರೌರ್ಯ ಸೂಕ್ತಿಗಳನ್ನೇ ?
 
ಅಮ್ಮಾ ನೋಯುತ್ತಿದೆ,,,,,
ಕಂದನ ಆಕ್ರಂದನಕ್ಕೆ ಸಾಂತ್ವನವೇನಿದೆ ?
ನೋವು ಸಹಿಸಲುಬಹುದು ಕ್ರೌರ್ಯ ಸಹಿಸಲಹುದೇ ?
ಚೌಕಟ್ಟಿನೊಳಗೆ ಬಂಧಿಯಾಗಿ
ಸರಳುಗಳನ್ನು ಎಣಿಸುತ್ತಾ ಕುಳಿತಾಗ
ಸೂರ್ಯ ಮುಳುಗುತ್ತಿರುತ್ತಾನೆ
ಎಲ್ಲೆಡೆ ಕೆಂಪು ರಕ್ತವ ಚೆಲ್ಲಿ
ಮೌನವಾಗಿ ಶಾಂತವಾಗಿ
ದಿಗಂತದಲಿ ಭರವಸೆಯ ಗೆರೆಯ ಮೂಡಿಸುತ್ತಾ !

‍ಲೇಖಕರು avadhi

27 May, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading