ಚಿ ಜ ರಾಜೀವ
ಒಂದು ಮನೆಯ ಮಾತುಕತೆ:
ಮಗಳಿಂದ ಪತ್ರಿಕೆಯ ತಲೆಬರಹಗಳ ಓದುವಿಕೆ ಶುರು:
ಕನ್ನಡ ಶಾಲಾ ಪಠ್ಯದಲ್ಲಿ-
ಬಲಪಂಥೀಯ ಮೇಲ್ಜಾತಿಯ ಲೇಖಕರೇ ತುಂಬಿ ತುಳುಕುತ್ತಿದ್ದಾರೆಂದು ಪ್ರಗತಿಪರ, ಎಡಪಂಥೀಯ ಮೇಲ್ಜಾತಿ
ಸಾಹಿತಿಗಳ ಹಲ್ಲು ಕಡಿತ…
ಅಣ್ಣನಿಗೆ ಅವಮಾನವಾಗಿದೆ ಎಂದು ಶರಣರ ಸಿಟ್ಟು…
ರಸ ಋಷಿಗೆ ಅವಮಾನ ಎಂದು ಭೈರವ ಶ್ರೀಗಳು ಅಸಮಾಧಾನ…
ಮಹಾನಾಯಕರಿಗೆ ಅಗೌರವ ತೋರಿಸಲಾಗಿದೆ ಎಂದು ಬಹುಜನರ ಆಕ್ರೋಶ…
ಕೇರಳ-ಕರ್ನಾಟಕ ಸುಧಾರಕ
ಗುರುವಿನ ಪಠ್ಯ ಕಡಿತ ಎಂದು ಶಿಷ್ಯರ ಕ್ರೋಧ…
ಸಿಟ್ಟಿಗೆ ಪ್ರತಿಯಾಗಿ ಪಠ್ಯ ವಾಪಸಾತಿ ಚಳವಳಿ ಶುರು..
ಓದುವಿಕೆ ಮುಗಿದ ಬಳಿಕ ತಲೆಬರಹಗಳ ಕುರಿತು ಅಪ್ಪ ಅಮ್ಮನ ಚರ್ಚೆ :
ಅಪ್ಪಾ:
“ಇಷ್ಟವೋ ಕಷ್ಟವೋ, ಈ ಎಲ್ಲರಿಗೂ ಸಿಡಿದೇಳಲು ಕಾರಣವಿದೆ, ಗಟ್ಟಿಯಾಗಿ ಹೇಳಿಕೊಳ್ಳಲು ಅವರವರ ಜಾತಿಯ ಅಸ್ತಿತ್ವವಿದೆ. ಆದರೆ,
ನಮಗೇನಿದೆ ?
ನಮ್ಮಂಥ ಸಣ್ಣ ಪುಟ್ಟ ನೂರಾರು ಜಾತಿಯವರಿಗೆ ಅಸ್ಮಿತೆ ಏನಿದೆ? ನಮ್ಮವ ಎಂದು ಹೇಳಿಕೊಳ್ಳಲು ಪಠ್ಯದಲ್ಲಿ ನಮ್ಮ ಜಾತಿಯ ಒಬ್ಬ ಮಹಾತ್ಮನೂ ಇಲ್ಲ. ಹಾಗಾಗಿ,ಕಿತ್ತಾಡಲೂ ನಮಗೆ ಅವಕಾಶವೂ ಇಲ್ಲ. ಈ ಜಾತಿ ಜನಗಳ, ಅವರ ಮಹಾತ್ಮರ ಇರುವಿಕೆಯನ್ನು
ಓದಬೇಕಷ್ಟೆ.ನಾವೇನಿದ್ದರೂ ಈ ಸೆಣಸಾಟ ಸಂಭ್ರಮಗಳ ವೀಕ್ಷಕರಾಗಬೇಕಷ್ಟೆ !
ಅಪ್ಪನ ಮಾತಿಗೆ ನನ್ನಮ್ಮ ಕೆರಳಿದಳು-
“ಅಯ್ಯೋ ಅದೇನು ಮಾತು ಅಂಥ ಆಡ್ತಿಯಾ ಮಾರಾಯ ? ಈ ಎಲ್ಲ ಮಹಾತ್ಮರನ್ನು ಏನೆಂದುಕೊಂಡಿರುವೆ. ಅವರೆಲ್ಲಾ ನಮ್ಮವರೇ. ಮನುಷ್ಯ ಮತದವರು, ಮನುಕುಲದ ಮಾರ್ಗದರ್ಶಕರು….
ಮಾತು ಮುಂದುವರಿಸಿದ ಅಪ್ಪ
“ನಿಜಾ, ಅವರೆಲ್ಲರೂ ನಮ್ಮವರೇ, ನಮ್ಮ ಮತದವರೇ, ವಿಶ್ವ ಪಥದವರೇ…ಆದರೆ,
ಆದರೆ…!
ಅಮ್ಮ: ಆದ್ರೆ-ಹೋದ್ರೆ ಏನೂ ಇಲ್ಲ. ಅವರಿಗೆ ಅವಮಾನವಾದರೆ, ಅವರನ್ನು ಯಾರಾದರೂ ಸಂಕುಚಿತಗೊಳಿಸಿದರೆ, ಮೊದಲು ನಾವು ದನಿ ಎತ್ತೋಣ !
ಅಪ್ಪನ ಪ್ರತಿಕ್ರಿಯೆ: ಆಯ್ತು ಮಾರಾಯ್ತಿ.
ನಿನ್ನ ಹೆಣ್ತನದ ಮಾತಿಗಾದರೂ ದನಿ ಎತ್ತುವೆ..
ಮಗಳ ಪ್ರಶ್ನೆ: ಹೌದು, ಈ ತಾಯ್ತನ ಅಂದ್ರೆ ಏನಪ್ಪಾ ?
ನಾನೆಂದೆ: ಎಲ್ಲರನ್ನೂ ಒಳಗೊಳ್ಳುವ ಗುಣವಿರಬಹುದು ಮಗಳು…
ಮಾತುಕತೆ ಮುಕ್ತಾಯ !
0 ಪ್ರತಿಕ್ರಿಯೆಗಳು