ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಗೋವು ನಗರ ನಕ್ಸಲ್ ಆದ ಕಥೆ

ಪ್ರತಿಭಾ ನಂದಕುಮಾರ್ 

ನನ್ನ ಪಾಡಿಗೆ ನಾನು

ನನ್ನ ಕರುವಿಗೆ ಹಾಲು ಕುಡಿಸಿ

ನಮ್ಮ ಪಾಡಿಗೆ ನಾವಿದ್ದೆವು.

ನಿಮ್ಮ ಪಾಡೇನು ತಿಳಿಯದು ನಮಗೆ

ಗಂಗೆ ತುಂಗೆ ಗೌರಿ ಎಂದೆಲ್ಲಾ ಹೆಸರಿಟ್ಟು

ನನ್ನ ಕೆಚ್ಚಲಿಗೆ ಕೈಯಿಕ್ಕಿ

ನಿಮ್ಮ ಹಾಲಿನ ವ್ಯಸನಕ್ಕೆ

ಪುಣ್ಯಪುರುಷಾರ್ಥದ ನೆಪ ಹೇಳಿದಿರಿ.

ದನದ ಮಾಂಸದ ದಾಸರು

ಜಾತಿ ಧರ್ಮಗಳ ನೆಪದಲ್ಲಿ ಸಮರ್ಥಿಸಿಕೊಂಡಿರಿ

ಚಪ್ಪಲಿ ತೊಟ್ಟುಕೊಂಡು ತಮಟೆ ನುಡಿಸಿದಿರಿ

ಖಂಡವಿದೆಕೋ ಮಾಂಸವಿದೆಕೋ

ಎಂದು ಬರೆದು ಹಾಡಿದಿರಿ

ನೀನಾರಿಗಾದೆಯೋ ಎಲೆ ಮಾನವ

ಎಂದು ನಾನು ಕೇಳಲಿಲ್ಲ

ನೀವೇ ಕೇಳಿಕೊಂಡಿರಿ

ಮತ್ತೆ ನೀವೇ ರೊಚ್ಚಿಗೆದ್ದು

ಸಂಚು ಮಾಡಿ ಕೊಂದಿರಿ

ಗೋಹತ್ಯೆ ಮಹಾಪಾಪ ಅಂತಲೂ ಸಾರಿದಿರಿ

ನರಬಲಿಯನ್ನೂ ಕೊಟ್ಟಿರಿ

ರಾಸು ಕಾರಣವಲ್ಲ

ಕೌಬಾಯ್ ಗಳ ರಾಸಲೀಲೆಗೆ

ಸುಂದರಾಂಗದ ಸುಂದರಿಯರ

ಹಿಂದು ಮುಂದಿನಲಿ

ಎಂದು ಕೊಂಡಾಡಿದವರು ನೀವು

ನಂದಗೋಪನ ಗೋಪಿಕೆಯರ ಗೊಲಸಿನ ಸದ್ದಿಗೂ

ನಮ್ಮ ಗೊರಸಿಗೂ ಅರ್ಥಾತ್ ಸಂಬಂಧವಿಲ್ಲ

ಆದರೂ ಹಾಲು ಮಾರುವ ಬಾಲಿಕೆಯರ

ಸೊಂಟ ಕುಣಿಸಿದಿರಿ.

 

ದನವ ಕಡಿಕಡಿದು ಬಸದಿಗೊಯ್ಯುತಿರ್ದರ್

ಎನ್ನುವ ಪರಮ ಪಾತಕ ಸಾಲಿಗೆ ಚಂದನವ

ಎಂದು ತಿದ್ದಿ ಸರಿಮಾಡಿಕೊಂಡಿರಿ.

ಮುಂದೆ ಬಂದರೆ ಹಾಯಲಾರೆ

ಹಿಂದೆ ಬಂದರೆ ಒದೆಯಲಾರೆ ಎಂದು

ನಾನು ಮಾತು ಕೊಟ್ಟಿಲ್ಲ

ಹುಲಿಯ ಬಾಯಿಗೆ ಬೀಳುವ ಕಥೆ ನನ್ನದಲ್ಲ

ನಿಮ್ಮ ನಿಮ್ಮ ತನುವ ಸಂತೈಸಿಕೊಂಡು

ನಿಮ್ಮ ನಿಮ್ಮ ಮನವ ನಿಯಂತ್ರಿಸಿಕೊಂಡು

ಬಾಳ್ವೆ ಮಾಡಲು

ಅಸಲು ಏನ್ ನಿಮ್ ಪ್ರಾಬ್ಲಮ್ಮು?

‍ಲೇಖಕರು avadhi

1 September, 2018

4 Comments

  1. prathibha nandakumar

    thanks Avadhi

  2. vrpelathadka

    wow madam

  3. Sudha Hegde

    ಅದೇ…. ಏನ್ ಪ್ರಾಬ್ಲಂ?

  4. ashfaq peerzade

    ಸ್ವರ್ಗದ ಹಾದಿ ಹಿಡಿದವರೇ ನಿಲ್ಲಿ!

    ಮಂದಿರದ ಘಂಟಾನಾದ
    ಮಸೀದಿಯ ಅಜಾನ ಆಲಿಸುತ್ತ
    ಒಂದಾಗಿ ಬಾಳಿದವರಿಗೆ ಒಂದನ್ನೇ
    ಆಯ್ದುಕೊಳ್ಳುವ ಅನಿವಾರ್ಯತೆಯಂದರೆ
    ಒಂದು ಕಿವಿ ಮುಚ್ಚಿ ಇನ್ನೊಂದರಿಂದ ಯಾವದಾದ್ರು ಒಂದನ್ನೆ ಕೇಳಿಸಿಕೊಳ್ಳಲು ಒತ್ತಾಯಿಸಿದಂತೆ

    ಅಮರ, ಅಕ್ಬರ, ಅಂಥೋನಿಯರು
    ಪರಸ್ಪರ ಸಹೋದರರಾಗಿ
    ಸುಮ ಅಸ್ಮಾ ,ಅಸ್ಮಾ ಸುಮ ಆಗಿ
    ದ್ವೇಷದ ಬೆಂಕಿಕಾರುವ ಮನಸ್ಸುಗಳಲ್ಲಿ
    ಪ್ರೀತಿ ಸುಮ ಅರಳಿಸುತ್ತ ಬಂದ ದೇಶದಲ್ಲಿ
    ಮೂಲವ್ಯಾಧಿಯ ಜನ ಫತ್ವಾ ಫರಮಾನು
    ಹೊರಡಿಸಿ ವಿಷಬೀಜ ಬಿತ್ತುತಿಹರು

    ಗಂಗೆಯ ಪವಿತ್ರತೆಯನ್ನು ಗೌರವಿಸುತ್ತಲೇ
    ಝಮ್ಝಮ್ ಜಲದಿಂದ ಆತ್ಮ ತೊಳೆಯುತ್ತ
    ಪರಿಶುದ್ಧರಾಗುತ್ತ ಬಂದವರು
    ಹಳ್ಳದ ನೀರಿಗೂಅ ಮೃತವೆಂದು ಕರೆದವರು

    ಫಕೀರ ಬಾಬಾನ ಕವಡಿ ಊದೀನ ಹೊಗೆ
    ಸಾಧುಸಂತರ ಬೂದಿಯಿಂದ
    ಕಷ್ಟ-ನಷ್ಟ, ರೋಗ – ರುಜಿನಗಳು ಕಳೆದು
    ನೆಮ್ಮದಿಯ ಬದುಕು ಅರಸುತ್ತ ಬಂದವರು ನಾವು

    ಪುಣ್ಯಕೋಟಿಯ ಕತೆ ಕೇಳುತ್ತಲೇ
    ಗೊಮ್ಮಟನ ಕ್ಷೀರಾಭಿಷೇಕ ಸಂಭ್ರಮಿಸುತ್ತ
    ಗೋಮಾಂಸವನ್ನು ಪವಿತ್ರವೆನ್ನುವ ಬೋಧನೆ
    ಪ್ರಭಾವ ಪ್ರಸಾದ ಸ್ವೀಕರಿಸುತ್ತ ಸಾಗಿದವರು

    ಮನುಷ್ಯತ್ವವೇ ಮಹಾದೇವ ಎಂಬುದು ಮರೆತು
    ಕಾಣದ ದೇವರನ್ನು ಅಡ್ಡಾದಿಡ್ಡಿ ಕತ್ತರಿಸಿ
    ವಿವಿಧ ನಾಮಧೇಯಗಳಿಂದ ಭಜಿಸುತ್ತ
    ಸ್ವರ್ಗದ ಹಾದಿ ಹಿಡಿದವರೇ ಸ್ವಲ್ಪ ನಿಲ್ಲಿ
    ಅಮಾಯಕರನ್ನ ತುಳಿದ ನಿಮ್ಮರ ಕ್ತಸಿಕ್ತ
    ಹೆಜ್ಜೆಗಳೆಂದೂ ಗುರಿ ತಲುಪುವದಿಲ್ಲ ನೆನಪಿಡಿ.
    (ಅಗ್ನಿ ಯಲ್ಲಿ ಪ್ರಕಟಿತ ) -ಅಶ್ಫಾಕ್ ಪೀರಜಾದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading