ದಸ್ತಗೀರ್ ದಿನ್ನಿ
‘ಒಂದಾನೊಂದು ಕಾಲದಲ್ಲಿ’ ಎನ್ನುವ ಕವನ ಸಂಕಲನದ ಮೂಲಕ ಗೆಳೆಯ ಗುರುಬಸವರಾಜ ಇದೀಗ ಕಾವ್ಯ ಲೋಕಕ್ಕೆ ಉತ್ಸಾಹದಿಂದ ಪ್ರವೇಶಿಸುತ್ತಿದ್ದಾರೆ. ವಿದ್ಯಾರ್ಥಿದೆಸೆಯಿಂದಲೇ ಬರವಣಿಗೆ, ಪುಸ್ತಕ ಪ್ರೀತಿಯನ್ನು ಬೆಳೆಯಿಸಿಕೊಂಡು ಬಂದಿದ್ದಾರೆ.
ಕವಿ ಇಲ್ಲಿ ದೈನಂದಿನ ಬದುಕಿನಲ್ಲಿ ಕಂಡುಂಡ ಪ್ರಸಂಗಗಳಿಗೆ, ವೈರುಧ್ಯಗಳಿಗೆ ಕಾವ್ಯದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಮರೆಯಾಗುತ್ತಿರುವ ಮನುಷ್ಯ ಸಂಬಂಧ, ಮೋಸ, ಅನ್ಯಾಯ, ಅಸಮಾನತೆ, ಸಾಮಾಜಿಕ ಸಂಕಷ್ಠ, ವರ್ತಮಾನದ ತಲ್ಲಣಗಳೇ ಇಲ್ಲಿನ ಕಾವ್ಯದ ಸ್ಥಾಯಿ ಭಾವಗಳಾಗಿವೆ. ಕವಿತೆಗಳುದ್ದಕ್ಕೂ ಖಾಸಗಿ ವಿಷಾದ ತೆರೆದುಕೊಂಡಿದ್ದರೂ ಲೋಕದ ವಿಚಾರವೇ ಇಲ್ಲಿ ಹೆಚ್ಚು ಮುನ್ನಲೆಗೆ ಬಂದಿದೆ. ಈ ಕವಿಗೆ ಭೂತದ ಅರಿವು, ವರ್ತಮಾನದ ಪ್ರಜ್ಞೆ ಮತ್ತು ಭವಿಷ್ಯದ ಎಚ್ಚರವಿದೆ. ಹಿಂಸೆ, ಅಸಹಿಷ್ಣುತೆಯ ಸುಡುವ ವರ್ತಮಾನದ ಪ್ರಕ್ಷುಬ್ಧ ಸನ್ನೀವೇಶದಲ್ಲಿ ನಾವಿದ್ದೇವೆ. ಇವುಗಳಿಗೆ ಪ್ರತಿರೋಧವನ್ನು ಒಡ್ಡಲು ನಮಗಿರುವ ಸಶಕ್ತ ಮಾಧ್ಯಮವೆಂದರೆ ಕಾವ್ಯ ಒಂದೇ ಎಂದು ಇವರು ನಂಬಿದ್ದಾರೆ .
ಗುರುಬಸವರಾಜರವರು ಸದ್ಯದ ಕಾವ್ಯ ಸಾಗುತ್ತಿರುವ ದಾರಿಯ ಕಡೆ ತೆರೆದಗಣ್ಣಿನಿಂದ ಹೊರಳಿ ನೋಡುವ, ಭಿನ್ನವಾಗಿ ಆಲೋಚಿಸುತ್ತಲೇ ರೂಪಕದ ಭಾಷೆಯನ್ನು ರೂಢಿಸಿಕೊಳ್ಳಬೇಕಾಗಿದೆ. ಬಹಳ ಮುಖ್ಯವಾಗಿ ಚಡಪಡಿಕೆ, ಒಳನೋಟ, ಆರ್ದ್ರತೆಗಳನ್ನು ಮೈಗೂಡಿಸಿಕೊಂಡು ಕಾವ್ಯಾತ್ಮಕ ಸಂವೇದನೆಗಾಗಿ ಸೂಕ್ಷ್ಮ ವ್ರತವನ್ನು ಕೈಗೊಂಡರೆ ನಾಳಿನ ದಿನಗಳಲ್ಲಿ ಗಟ್ಟಿಯಾಗಿ ನಿಲ್ಲುವ ಕಾವ್ಯವನ್ನು ಕೊಡುವುದರಲ್ಲಿ ಅನುಮಾನವಿಲ್ಲ
0 ಪ್ರತಿಕ್ರಿಯೆಗಳು