ಮುಳುಗಿದರೂ ಮುಗಿಯಲಾರದ್ದೂ…
ಬಿ ಎಂ ಬಶೀರ್

ಹೂವಿನ ಎಸಳೊಂದ ಕಿತ್ತು
ಇದರ ಪರಿಮಳ ನೋಡು
ಎಂದು ಅಕ್ಕಸಾಲಿಗನಿಗೆ ಕೊಟ್ಟೆ…
ನನ್ನ ದೊರೆಯೇ….
ಅವನದನ್ನು ಕಲ್ಲಿಗೆ ತಿಕ್ಕಿ
ಮೂಸಿ ನೋಡಿ ಹೇಳಿದ…
ಇದರಲ್ಲಿ ಅಂತಹದೇನು ಇಲ್ಲ….
2
ರೊಟ್ಟಿ ಮಾಡಲು
ಬರೋದಿಲ್ಲ ಎಂದು ಹೇಳುವಂತಿಲ್ಲ…
ನಾವು ಮಾಡಿದ
ರೊಟ್ಟಿಯನ್ನೇ ತಿನ್ನಬೇಕಾದ
ದಿನವೊಂದಿದೆ
ನೆನಪಿಡು
3
ಸ್ವತಹ ಭಿಕ್ಷುಕರಾದ
ಮನುಷ್ಯರ ಮುಂದೆ
ಕೈ ಚಾಚೂದು ಬೇಡವೆಂದು
ನಿನ್ನೆಡೆಗೆ ಕೈ ಚಾಚಿದೆ
ನನ್ನ ದೊರೆಯೇ…
4
ಕಾಣದ ದೇವರಿಗೆ
ಬಾಗೂದಿಲ್ಲವೆಂದ,
ನನ್ನ ದೊರೆಯೇ…
ನಾನೋ ಕಾಣುವ
ಮನುಷ್ಯರಿಗೆ ಬಾಗೂದಿಲ್ಲ
ಎಂದೇ, ಅಷ್ಟೇ….
5
ಅವರು ಹೇಳುತ್ತಾರೆ
ನಿನಗೆ ಅಂಜಬೇಕೆಂದು
ನನ್ನ ದೊರೆಯೇ,
ನಾನು ಕಣ್ಣು ತೆರೆದು ನೋಡುತ್ತಿದ್ದೇನೆ…
ತಾಯೊಬ್ಬಳು ಬೆತ್ತ ಹಿಡಿದು ನಿಂತಿದ್ದರೆ
ಆಕೆಯ ಮುಂದಿರುವ ಮಗು ಕಿಲ ಕಿಲ ನಗುತ್ತಿತ್ತು…
6
ನೀನು ಅರ್ಥವಾಗುತ್ತಿಲ್ಲವೆಂದು
ಅವರು ನಿನ್ನನ್ನು ನಂಬುತ್ತಿದ್ದಾರೆ
ನನ್ನ ದೊರೆಯೇ,
ನಿನ್ನೊಬ್ಬನನ್ನು ಬಿಟ್ಟು
ಈ ಜಗದಲ್ಲಿ ನನಗೆ ಯಾವುದೂ ಅರ್ಥವಾಗುತ್ತಿಲ್ಲ !
7
ನೀನೇಕೆ ಮಸೀದಿಗೆ
ಬರುತ್ತಿಲ್ಲ, ಎಂದು ಅವರು ಕೇಳುತ್ತಾರೆ…
ನನ್ನ ದೊರೆಯೇ,
ಭವ್ಯ ಮಸೀದಿಯ ಅಮೃತ ಶಿಲೆಯ
ನೆಲ ಹಾಸಿನಲ್ಲಿ
ನನಗೆ ನಿನ್ನ ಬದಲು
ನನ್ನ ಪ್ರತಿಬಿಂಬವೇ ಕಾಣುತ್ತದೆ
8
ನಮಾಜಿಗೆ ನಿಂತ ನನ್ನನ್ನು
ಕೇಳಿದರು, ಶುದ್ಧಿಯಾಗಿದ್ದೀಯ?
ಇಲ್ಲ ಎಂದೇ…
ಅವರೆಲ್ಲ ನನ್ನ ಹೊರ ದಬ್ಬಿದರು…
ನನ್ನ ದೊರೆಯೇ
ಅವರಿಗೇನು ಗೊತ್ತು?
ನನ್ನ ಅಶುದ್ಧಿ ಏಳು ಕಡಲನ್ನು
ಮುಳುಗಿದರೂ
ಮುಗಿಯಲಾರದ್ದೂ ಎಂದು…
ಶುದ್ಧಿಯಾಗಲೆಂದೇ ನಾನು
ನಿನ್ನ ಮುಂದೆ ನಿಂತಿದ್ದೆ ಎಂದು?
9
ದೇವರನ್ನು ನಂಬೋದು
ಎಂದರೆ ಏನು?
ಅವನು ಕೇಳಿದ…
ಏನು ಹೇಳಲಿ ನನ್ನ ದೊರೆಯೇ…
ನನ್ನನ್ನು ನಾನು ನಂಬೋದು
ಎಂದರೆ ಏನು?
10
ದೇವರನ್ನು
ಹೇಗೆ ಆರಾಧಿಸಬೇಕು?
ಅವನು ಕೇಳಿದ…
ನೀನು ಅವನ ಆರಾಧಿಸುತ್ತಿರೂದು
ನಿನಗೇ ತಿಳಿಯದಿರಬೇಕು
ಹಾಗೆ…ಎಂದೆ…
11
ಗೋರಿಯ ಮೇಲೆ ಕುಳಿತು
ರೊಟ್ಟಿ ತಿನ್ನುತ್ತಿದ್ದೀಯ ಪಾಪಿ?
ಅವರು ಕೇಳಿದರು…
ನನ್ನ ದೊರೆಯೇ
ಅವರಿಗೇನು ಗೊತ್ತು?
ಗೋರಿಯೊಳಗಿರುವವರೂ
ತಮ್ಮ ತಮ್ಮ ರೊಟ್ಟಿಗಳನ್ನು
ತಿನ್ನುವ ಹೊತ್ತು ಇದೆಂದು?




ಬಹಳ ಚೆನ್ನಾಗಿವೆ ಬಶೀರ್ ಭಾಯಿ 🙂 ಮನಸೋತೆ.
abinadanegagu
ಚೆನ್ನಾಗಿವೆ. ಮೊದಲನೆಯದಂತೂ ನಮ್ಮನ್ನೇ ಒರೆಕಲ್ಲಿಗೆ ತಿಕ್ಕುತಿದ್ದಾನೇನೋ ಅಕ್ಕಸಾಲಿಗ ಅನ್ನುವಷ್ಟು ತೀಕ್ಷ್ಣ. ಬಶೀರ್ ಪ್ಲೀಸ್ ಆ ‘ಕೊಳಲ ಹುಡುಗ’ನನ್ನು ಹುಡುಕಿ.
ಬಶೀರ್ ಅವರೇ,
ಇವೆಲ್ಲವನ್ನೂ ಓದುತ್ತಿರುವಾಗ ಖುಷಿ ಎನಿಸುತ್ತಿತ್ತು.
ಈ ಎಲ್ಲ ಪುಟ್ಟ ಪುಟ್ಟ ಸಾಲುಗಳು ಒಂದು ಇನ್ನೊಂದಕ್ಕೆ ಪೈಪೋಟಿ ಕೊಡುತ್ತಲಿವೆ.
ಸರಳವಾಗಿ ಶೃಂಗರಿಸಿದ ಪದ್ಯಗಳು.
-Rj
ನಮಾಜಿಗೆ ನಿಂತ ನನ್ನನ್ನು
ಕೇಳಿದರು, ಶುದ್ಧಿಯಾಗಿದ್ದೀಯ?
ಇಲ್ಲ ಎಂದೇ…
ಅವರೆಲ್ಲ ನನ್ನ ಹೊರ ದಬ್ಬಿದರು…
ನನ್ನ ದೊರೆಯೇ
ಅವರಿಗೇನು ಗೊತ್ತು?
ನನ್ನ ಅಶುದ್ಧಿ ಏಳು ಕಡಲನ್ನು
ಮುಳುಗಿದರೂ
ಮುಗಿಯಲಾರದ್ದೂ ಎಂದು…
ಶುದ್ಧಿಯಾಗಲೆಂದೇ ನಾನು
ನಿನ್ನ ಮುಂದೆ ನಿಂತಿದ್ದೆ ಎಂದು?
+++++++++++++++++++++++
ಏಳು ಕಡಲಿನಾಳಕ್ಕೆ ಮುಳುಗಿ ಏಳಿಸಬಹುದಾದ ಚಿಂತನಾತ್ಮಕ ಕವನ.
ಇತರ ಕವನಗಳು ಅದರ ದುಪ್ಪಟ್ಟಿ ಆಳ ಉಳ್ಳದ್ದು .
ಸರಳ,ನೇರ,ಮನಸ್ಸಿಗೆ ಮುಟ್ಟುವ ಅರ್ಥಪೂಣಱ ಪುಟಾಣಿ ಸಾಲುಗಳ ಮೆರವಣಿಗೆ
ಮನಸ್ಸನ್ನು ಆವರಿಸಿಕೊಳ್ಳುತ್ತದೆ.
ಇಶ್ರತ್ ನಿಸಾರ್
ಚೆನ್ನಾಗಿದೆ. ಓದಿ ಖುಷಿ ಪಟ್ಟೆ.
ಕಾಣದ ದೇವರಗೆ
ಬಾಗೋದಿಲ್ಲ ಎಂದ,
ಎನ್ನುವ ಸಾಲುಗಳು ಬಹಳ ಆಪ್ತವಾದವು. ಮತ್ತೆ ಮತ್ತೆ ಕಾಡುವುದು.
7neyadu ellakkintha hechchu ishtavaythu … aadre ellavoo chennagide