‘ಅಣಬೆ ಎಂದರೆ ಪಂಚಪ್ರಾಣ’ ಎನ್ನುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ‘ನನ್ನ ಕುಪ್ಪಳಿ’ ಅಂಕಣದಲ್ಲಿ ಮಲೆನಾಡಿನ ಅಣಬೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
। ಕಳೆದ ಸಂಚಿಕೆಯಿಂದ ।
ನಾನಿನ್ನೂ ಹೇಮಾಂಗಣದ ಅತಿಥಿ ಗೃಹದಲ್ಲಿ ಮಲಗಿದ್ದೆ. ಗುಂಡ ಬಂದವನೆ ಕಿಟಕಿಯಲ್ಲಿ ಇಣುಕಿ ‘ಸಾರು… ಸಾರು’ ಎಂದು ಆತುರದಲ್ಲಿ ಕೂಗಿದ. ಎದ್ದು ನೋಡಿದರೆ ಅವನ ಮುಖ ಅಣಬೆಯಂತೆಯೇ ಅರಳಿತ್ತು.
‘ಏನೋ ಗುಂಡಾ?’ ಎಂದು ಪ್ರಶ್ನಿಸಿದೆ. ಅವನ ಅಷ್ಟೂ ಹಲ್ಲುಗಳನ್ನು ಪ್ರದರ್ಶಿಸುತ್ತ ‘ಅಣಬೆ ಎದ್ದವೆ ಸಾರು’ ಎಂದ. ಹೌದು ನಿನ್ನೆ ಒಳ್ಳೆಯಉನಿ ಮಳೆಯಾಗಿತ್ತು. ಆಕಾಶದಲ್ಲಿ ನಾಲ್ಕಾರು ಬಾರಿ ಸಾಧಾರಣ ಮಟ್ಟದ ಗುಡುಗು ಸದ್ದು ಮಾಡಿತ್ತು. ಮಲೆನಾಡಿನಲ್ಲಿ ಒಂದುಬಾರಿ ಗುಡುಗಿದರೂ ಅದು ಬೆಟ್ಟ ಬೆಟ್ಟಗಳನ್ನು ಹಾದು ಅನುರಣಿಸುತ್ತದೆ.
ಆದರೆ ಇಂದು ಅಣಬೆ ಏಳಬಹುದೆಂಬ ಯಾವ ಕಲ್ಪನೆಯೂ ಇಲ್ಲದೆ ನಾನು ಮಲಗಿದ್ದೆ. ಅಂದು ಗುಂಡ ‘ನಾಳೆ ಅಣಬೆ ಏಳಬಹುದು’ ಎಂದು ಆಸೆ ಹುಟ್ಟಿಸಿದ್ದನಾದರೂ ಅಣಬೆ ಕಾಣದೆ ನಿರಾಶನಾಗಿದ್ದ ನನ್ನನ್ನು ಇಂದು ಪ್ರಸನ್ನಗೊಳಿಸುವ ಸಮಯ ಬಂದಿತ್ತು. ಆದ್ದರಿಂದಲೇ ಅವನು ಆನಂದೋತ್ಸಾಹದಿಂದ ನನ್ನನ್ನು ಬೆಳ್ಳಂಬೆಳಗ್ಗೆ ಎಚ್ಚರಿಸಿದ್ದ.
ನಾನು ಮೊದಲೇ ಅಣಬೆ, ಬಕ್ಕ ಎದ್ದು ಓಡಿದೆ. ಅಲ್ಲೇ ನನ್ನ ಕೊಠಡಿಯ ಎದುರಿಗೇ ಇರುವ ಮರಗಳ ಸಣ್ಣ ತೋಪಿನ ಕೆಳಗೆ ಬೆಳ್ಳಗಿನ ಹೊಳೆಯುವ ಗುಳ್ಳೆಗಳು ಗೋಚರಿಸಿದವು.
ಹತ್ತಿರ ಹೋಗಿ ನೋಡಿದೆ, ಒಂದಲ್ಲ ಎರಡಲ್ಲ ನೂರಾರು ಅಣಬೆಗಳು! ಇನ್ನೂ ಪರಿಪೂರ್ಣವಾಗಿ ಅರಳಿರದ ಮೊಗ್ಗಿನ ಆಕಾರದ ಮೊಗಟು ಅಣಬೆಗಳೇ ಹೆಚ್ಚಿದ್ದವು. ಆ ಮೊಗರುಗಳು ಹೆಚ್ಚು ರುಚಿ. ‘ಯಾವುದಾದರೂ ಚೀಲ ತಂದು ಕಿತ್ತು ತುಂಬೋ’ ಎಂದು ಹೇಳಿದೆ.
‘ಇರೀ ಸಾರು ಸಣ್ಣ ಬಿಸಿಲು ಬರಲಿ’ ಎಂದು ನನ್ನ ಉತ್ಸಾಹಕ್ಕೆ ತಡೆ ಒಡ್ಡಿದ. ಯಾರಾದರೂ ಬಂದು ಅಪಹರಿಸಿ ಬಿಟ್ಟಾರು ಎಂಬುದು ನನ್ನ ಆತಂಕ. ನಮ್ಮ ಬಯಲು ಸೀಮೆಯಲ್ಲಿ ಅಣಬೆಗಳ ಒಡೆತನಕ್ಕಾಗಿ ಜಗಳ ಗುದ್ದಾಟಗಳೂ ಆಗಿದ್ದನ್ನು ನಾನು ಕಂಡಿದ್ದೆ. ನನ್ನ ಆತಂಕವನ್ನು ಕಂಡು ಗುಂಡ ನಗುತ್ತಾ ಹೇಳಿದ ‘ಇವತ್ತು ಎಲ್ಲೆಲ್ಲೂ ಬೇಕಾದಷ್ಟು ಅಣಬೆ ಎದ್ದವೆ ಸಾರು, ಇಲ್ಲಿ ಯಾರೂ ಬರಲ್ಲ’ ಎಂದು ಅಭಯ ನೀಡಿದ.
ಬಿಸಿಲು ಬಂದ ನಂತರ ಗುಂಡ ಹಸಿ ನೆಲದ ಅಣಬೆಗಳನ್ನು ಕಿತ್ತು ಚೀಲಕ್ಕೆ ತುಂಬುತ್ತಿದ್ದರೆ ಅದೊಂದು ಥರಾ ಹಿತವಾದ ಮುಗ್ಗುಲು ವಾಸನೆ ಸುತ್ತಲೂ ಅಡರಿತ್ತು. ಒಂದು ಚೀಲ ಬರ್ತಿಯಾಯಿತು. ಏನಿಲ್ಲವೆಂದರೂ ಹತ್ತನ್ನೆರಡು ಕೆ.ಜಿ.ಯಷ್ಟಾದರೂ ಇರಬಹುದು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದು ಬಯಸದೇ ಬಂದ ಭಾಗ್ಯವಾಗಿತ್ತು. ಇಂದು ನಾವು ಕಿತ್ತಿದ್ದು ಯಾವ ಅಣಬೆ ಎಂಬುದು ನನಗೆ ತಿಳಿಯಲಿಲ್ಲ.
ಗುಂಡನ ಪ್ರಕಾರ ಮಲೆನಾಡಿನಲ್ಲಿ ಮುಳ್ಳಣಬೆ, ಕುಳಣಬೆ, ಚುಳ್ಳಣಬೆ, ಹೆಗ್ಗಾಲಣಬೆ, ಹುಲ್ಲಣಬೆ, ಮರ ಅಣಬೆ ಮುಂತಾಗಿ ಅನೇಕ ಅಣಬೆಗಳು ಏಳುತ್ತವೆ. ಅಣಬೆ ಏನೋ ಸಂಗ್ರಹವಾಗಿದ್ದವು. ಮುಂದೇನು ಮಾಡುವುದು? ನೆಲದ ಸಿರಿಯಂತಿರುವ ಈ ಅಣಬೆಗಳನ್ನು ರುಚಿಗಟ್ಟುವಂತೆ ಅಡುಗೆ ಮಾಡಿ ಬಡಿಸುವ ಪಾಕ ಪ್ರವೀಣರು ಯಾರು?
ಈ ಬಗ್ಗೆ ಚಿಂತಿಸಿಯೇ ಇರಲಿಲ್ಲ. ಗುಂಡನ ಜೊತೆ ಸಮಾಲೋಚಿಸಿದೆ. ಇಲ್ಲಿ ನಮ್ಮ ಗುಂಡನ ವಿಚಾರವನ್ನೂ ಸ್ವಲ್ಪ ಈಗಲೇ ಹೇಳಿಬಿಡುವುದು ಒಳ್ಳೆಯದು. ಗುಂಡನಿಗೀಗ ಸುಮಾರು ನಲವತ್ತೈದು ಐವತ್ತು ವರ್ಷಗಳಿರಬಹುದು. ನಮ್ಮ ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಕೇಂದ್ರದಲ್ಲಿ ಅವನೊಬ್ಬ ತಾತ್ಕಾಲಿಕ ನೌಕರ. ಐವತ್ತಾದರೂ ಮದುವೆಯಾಗದ ಏಕಾಂಗಿ ಮನುಷ್ಯ. ಯಾಕೆ ಗುಂಡ ಮದುವೆಯಾಗಲಿಲ್ಲ? ಎಂದು ಪ್ರಶ್ನಿ ಸಿದರೆ ಸುಮ್ಮನೆ ತಲೆಕೆರೆದು ನಗುತ್ತಾ ನಿಲ್ಲುತ್ತಾನೆ.
‘ಎಲ್ಲಾದರೂ ಹೆಣ್ಣು ನೋಡಿದರೆ ಮದುವೆಯಾಗುತ್ತೀಯಾ?’ ಎಂದು ಒತ್ತಾಯಿಸಿ ಕೇಳಿದರೆ ‘ಆ ಟೈಮಲ್ಲಿ ಆಗ್ಲಿಲ್ಲ, ಈಗ ಯಾರು ಹೆಣ್ಣು ಕೊಡ್ತಾರೆ, ಎಂಥಾ ಮದ್ವೆ ಬುಡಿ ಸಾರು’ ಎಂದು ಆಧ್ಯಾತ್ಮ ಉಸುರುತ್ತಾನೆ. ಐದು ಅಡಿ ಎತ್ತರವಿರಬಹುದು. ಸಣಕಲನಾದರೂ ಗಟ್ಟಿ ಮುಟ್ಟಾಗಿದ್ದಾನೆ. ಮೀನು ಬೇಟೆ, ಏಡಿ ಬೇಟೆ, ಜೇನು ಬೇಟೆಯಲ್ಲಿ ನಿಸ್ಸೀಮ. ಅವನಿಗೆ ಗೊತ್ತಿಲ್ಲದ ಗಿಡಮರಗಳಿಲ್ಲ. ಎಲ್ಲೂ ಅಷ್ಟು ಸುಲಭವಾಗಿ ಬೆಳೆಯುವುದಿಲ್ಲ ಎಂಬ ಪ್ರತೀತಿ ಇರುವ ವಿಶೇಷ ಮರಗಿಡಗಳನ್ನು ನರ್ಸರಿ ರೂಪದಲ್ಲಿ ಬೆಳೆಸಿ ತೋರಿಸುವ ಪರಂಪರೆಯ ಜ್ಞಾನ ಅವನಿಗಿದೆ.
ಪ್ರಾಣಿಗಳ ಚಲನವಲನ ಅವನಿಗೆ ಚೆನ್ನಾಗಿ ಗೊತ್ತು. ಮಂಗದಂತೆ ಎಂಥ ಮರವನ್ನು ಹತ್ತಬಲ್ಲ. ಅವನಿಗೆ ಗೊತ್ತಿರುವ ಇಂಥ ನಾನಾ ನೈಪುಣ್ಯತೆಗಳಲ್ಲಿ ಶೇಕಡಾ ಒಂದರಷ್ಟು ಇಲ್ಲದ ನಾವು ಲೋಕದ ದೃಷ್ಟಿಯಲ್ಲಿ ಮಹಾ ವಿದ್ಯಾವಂತರು! ಆದರೆ ಕೇವಲ ಅಕ್ಷರ ಗೊತ್ತಿಲ್ಲದಿರುವ ಕಾರಣಕ್ಕೆ ಅವನು ಅವಿದ್ಯಾವಂತ, ನಿರಕ್ಷರ ಕುಕ್ಷಿ, ಆದರೆ ವಿದ್ಯೆ ಎಂಬುದು ಅನುಭವದ ಸಂಕೇತ, ಅಕ್ಷರ ಕೇವಲ ಅಹಂಕಾರದ ಸಂಕೇತ.
ಗುಂಡನ ವಿಷಯವನ್ನು ಇಷ್ಟೆಲ್ಲಾ ಯಾಕೆ ಹೇಳಿದೆನೆಂದರೆ ಅವನಿಂದ ನನ್ನ ಅಣಬೆ ಅಡುಗೆ ಸಾಧ್ಯವಿಲ್ಲ ಎಂಬುದನ್ನು ತಿಳಿಸುವುದಕ್ಕಾಗಿ. ಆ ಒಂಟಿ ಜೀವಿಯ ಮೇಲೆ ಆ ಭಾರ ಹೊರಿಸಲು ನನಗೆ ಇಷ್ಟವಿರಲಿಲ್ಲ. ಹಾಗಾದರೆ ಏನು ಮಾಡುವುದು? ಅಷ್ಟರಲ್ಲಿ ಗುಂಡನೇ ಒಂದು ಪರಿಹಾರ ಸೂಚಿಸಿದ. ನಮ್ಮ ಕೇಂದ್ರದ ಮತ್ತೊಬ್ಬ ತಾತ್ಕಾಲಿಕ ಕೆಲಸದ ಹುಡುಗಿ ಮಲ್ಲಿಕಾ ಮನೆಗೆ ಕೊಟ್ಟು ಅಣಬೆ ಪಲ್ಯ ಮಾಡಿಸುವುದು ಅವನ ಸೂಚನೆಯಾಗಿತ್ತು.
ನಾನೂ ಯೋಚಿಸಿದೆ, ಆದರೆ ನನಗದು ಸರಿ ಕಾಣಲಿಲ್ಲ. ಮಲ್ಲಿಕಾ ನಮ್ಮ ಕಚೇರಿಯ ಹುಡುಗಿಯಾಗಿರುವುದರಿಂದ ಇಂಥ ವಿಷಯಕ್ಕೆಲ್ಲ ಬಳಸಿಕೊಳ್ಳುವುದು ಸರಿಯಲ್ಲ, ಅಲ್ಲದೆ ಇತ್ತೀಚೆಗಷ್ಟೇ ‘ಮೀನಿನ ಪಲ್ಯ’ವನ್ನು ಅವರ ಮನೆ ಯಿಂದಲೇ ತಂದು ಕೊಟ್ಟಿದ್ದಾರೆ. ಆದ್ದರಿಂದ ಅಲ್ಲಿಗೆ ಕೊಡುವುದು ಬೇಡ ಎಂದು ತೀರ್ಮಾನಿಸಿದೆ.
ಹೀಗೆ ಆಕಸ್ಮಿಕವಾಗಿ ಸಿಕ್ಕ ಬೇಟೆಯನ್ನು ಮುಂದಿಟ್ಟುಕೊಂಡು ಜಿಜ್ಞಾಸೆಯಲ್ಲಿರುವಾಗಲೇ ನಮ್ಮ ಅದೃಷ್ಟವೋ ಎಂಬಂತೆ ಬೆಕ್ಕನೂರ ಸುಬ್ಬಣ್ಣ ಅಲ್ಲಿ ಪ್ರತ್ಯಕ್ಷವಾದರು. ಬೆಕ್ಕನೂರು ಕುಪ್ಪಳಿಯಿಂದ ಕೇವಲ ಒಂದು ಮೈಲು ದೂರದಲ್ಲಿರುವ ಎರಡು ಮೂರು ಮನೆಗಳ ಹಳ್ಳಿ. ಗಡಿಕಲ್ಲಿಗೆ ಅಂಟಿಕೊಂಡಂತಿದೆ. ಗಡಿಕಲ್ಲು ತೀರ್ಥಹಳ್ಳಿ ಮತ್ತು ಕೊಪ್ಪ ತಾಲ್ಲೂಕುಗಳ ಗಡಿ ಗ್ರಾಮ.
ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ವಾಸ್ತವವಾಗಿ ಕುಪ್ಪಳಿ ತೀರ್ಥಹಳ್ಳಿಯಿಂದ 16 ಕಿ.ಮೀ. ದೂರದಲ್ಲಿದ್ದರೆ ಕೊಪ್ಪದಿಂದ ಕೇವಲ 9ಕಿ.ಮೀ. ದೂರದಲ್ಲಿದೆ. ಆದ್ದರಿಂದಲೇ ಕುವೆಂಪು ತಾಯಿ ಊರು ಹಿರೇಕೂಡಿಗೆ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲ್ಲೂಕಿಗೆ ಸೇರಿದ್ದರೂ ಕುಪ್ಪಳಿಗೆ ಕೇವಲ ನಾಲ್ಕು ಕಿ.ಮೀ. ದೂರದಲ್ಲಿದೆ.
ಬೆಕ್ಕನೂರು ಸುಬ್ಬಣ್ಣನವರ ವಿಷಯ ಹೇಳಲು ಹೋದವನು ಭೂಗೋಳದ ಕಡೆ ತಿರುಗಿಬಿಟ್ಟೆ ಅನಿಸುತ್ತಿದೆ. ಸುಬ್ಬಣ್ಣನ ವರ ಪೂರ್ಣ ಹೆಸರು ಸುಬ್ರಹ್ಮಣ್ಯ. ಆದರೆ ಸುಬ್ಬಣ್ಣ ಎಂದೇ ಎಲ್ಲರಿಗೂ ಪರಿಚಿತ. ಗದ್ದೆ ಮತ್ತು ಅಡಿಕೆ ತೋಟವಿದೆ. ಹಳೇ ಕಾಲದ ಗೌಡಿಕೆ ಮನೆ. ಮನೆಯ ಅರ್ಧ ಭಾಗವನ್ನು ನವೀಕರಣಗೊಳಿಸಿ ‘ಹೋಮ್ಸ್ಟೇ’ಯನ್ನಾಗಿ ಪರಿವರ್ತಿ ಸಿದ್ದಾರೆ. ಲಾನ್ ಮತ್ತು ಅಲಂಕಾರಿಕ ಗಿಡಗಳ ಮೂಲಕ ಪರಿಸರವನ್ನು ಚಂದ ಕಾಣಿಸಿದ್ದಾರೆ.
ಸುತ್ತಲೂ ಅಡಿಕೆ ಮತ್ತು ಬಾಳೆಗಿಡಗಳ ಸಮೃದ್ಧಿ ಮನಸೆಳೆಯುತ್ತದೆ. ಸುಬ್ಬಣ್ಣ ಕಲಾವಿದನ ಮನಸ್ಸಿನವರು. ಪರಿಸರ ವಾದಿ ಕೂಡ. ಹಾಗಾಗಿ ಅವರ ಮನೆ ಪರಿಸರವೂ ಅವರ ಮನಸ್ಸಿ ನಂತೆಯೇ ರೂಪುಗೊಂಡಿದೆ. ಅವರ ಪತ್ನಿ ಶ್ರೀಮತಿ ಉಷಾ ತುಂಬಾ ಸುಸಂಸ್ಕೃತ ಹೆಣ್ಣು ಮಗಳು.
ಇಕ್ಕಟ್ಟು ಬಿಕ್ಕಟ್ಟುಗಳಲ್ಲಿಯೂ ನಗುನಗುತ್ತಲೇ ಪರಿಸ್ಥಿತಿಗಳನ್ನು ನಿಭಾಯಿಸುವ ತಾಳ್ಮೆ ಮತ್ತು ಚಾಕಚಕ್ಯತೆ ಇರುವ ವಿಶೇಷ ಗುಣ ಅವರದು. ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ ಈ ಮೊದಲೇ ಈ ದಂಪತಿಗಳು ನನಗೆ ಚಿರಪರಿ ಚಿತರು. ಕುಪ್ಪಳಿಗೆ ಬಂದಾಗಲೆಲ್ಲಾ ಅವರ ಮನೆಗೆ ಭೇಟಿ ನೀಡಿ ಮಾತನಾಡಿಸುವುದು ನನ್ನ ರೂಢಿಯಾಗಿತ್ತು.
ಇಂಥ ಚಿರಪರಿಚಿತ ಸುಬ್ಬಣ್ಣ ನನಗೆ ಕಂಡ ಕೂಡಲೇ ನನ್ನ ಸಮಸ್ಯೆಗೆ ತಕ್ಷಣವೇ ಉತ್ತರ ಸಿಕ್ಕೇಬಿಟ್ಟಿತ್ತು. ಆ ರಾಶಿ ರಾಶಿ ಅಣಬೆಗಳನ್ನು ತೋರಿಸಿ ನನಗೆ ಇದರ ರಸಗವಳ ಸಿದ್ಧ ವಾಗಬೇಕು ಎಂದು ಕೇಳಿಕೊಂಡೆ. ಮರು ಮಾತಿಲ್ಲದೆ ಸುಬ್ಬಣ್ಣ ಒಪ್ಪಿದರು. ತಕ್ಷಣವೇ ಚೀಲವನ್ನು ಹೊತ್ತು ಅವರ ಬೈಕ್ ಹಿಂದೆ ಕುಳಿತೆ. ಸನಿಹದಲ್ಲೇ ತೇಜಸ್ವಿ ಸ್ಮಾರಕ ಎದುರಾಯಿತು.
‘ನೀನು ಅಪ್ಪನ ಕಾದಂಬರಿಯ ಬಾಡುಗಳ್ಳ ಸೋಮನ ವಂಶಸ್ಥನೇ ಇರಬೇಕು’ ಎಂದು ಅವರು ಅಣಕಿಸಿ ನಕ್ಕಂತಾಯಿತು! ಒಂದು ರೀತಿಯಲ್ಲಿ ನನಗೇ ನಾಚಿಕೆಯಾಯಿತು. ಆದರೇನಂತೆ, ದೇವರ ವರದಂತೆ ಎಂದೋ ಯಾವೊತ್ತೋ ದಿಢೀರನೆ ಪ್ರತ್ಯಕ್ಷವಾಗುವ ಈ ಅಣಬೆಗಳು ದಿನಾ ಸಿಗಲು ಸಾಧ್ಯವೇ?
ಸುಬ್ಬಣ್ಣನವರ ಮನೆಗೆ ಹೋದಾಗ ಶ್ರೀಮತಿ ಉಷಾ ನಗುನಗುತ್ತಲೇ ಸ್ವಾಗತಿಸಿದರು. ಚಿಲದಲ್ಲಿದ್ದ ಅಣಬೆ ನೋಡಿ ಅವರಿಗೂ ಆಶ್ಚರ್ಯವಾಯಿತು. ‘ಇಷ್ಟು ಅಣಬೆ ಎಲ್ಲಿ ಸಿಕ್ತು ಸಾರ್’ ಎಂದು ಉದ್ಧಾರ ತೆಗೆದರು. ನನ್ನ ವಿನಂತಿಗೆ ಮೊದಲೇ ‘ಮಧ್ಯಾಹ್ನ ಊಟಕ್ಕೆ ಅಣಬೆ ಪದಾರ್ಥ ರೆಡಿ ಇರುತ್ತೆ ಸಾರ್, ಊಟಕ್ಕೆ ಇಲ್ಲೇ ಬಂದು ಬಿಡಿ’ ಎಂಬ ಆಹ್ವಾ ನವನ್ನೂ ಕೊಟ್ಟರು.
‘ಆಯ್ತು, ಥ್ಯಾಂಕ್ಸ್ ಮೇಡಂ’ ಎಂದು ಹೇಳಿ ಅಲ್ಲಿಂದ ಹೊರಟೆ. ಪದಾರ್ಥ ರೆಡಿಯಾಗುತ್ತಿದ್ದಂತೆ ಸುಬ್ಬಣ್ಣನವರ ಫೋನ್ ಬಂತು. ನಡೆಯುತ್ತಲೇ ಅವರ ಮನೆ ತಲುಪಿದೆ. ಅಣಬೆಯ ಪರಿಮಳಕ್ಕೆ ಅಂಗಳವೆಲ್ಲ ಗಮಗುಟ್ಟುತ್ತಿತ್ತು. ಮನಸಾರೆ ಊಟ ಮಾಡಿದೆ. ಆದರೆ ಉಳಿದಿರುವ ಅಣಬೆಗಳನ್ನು ಏನು ಮಾಡುವುದು? ಉಷಾ ಅವರೇ ಒಂದು ಪರಿಹಾರ ಸೂಚಿಸಿದರು.
‘ಸಾರ್ ಇದಕ್ಕೆ ಉಪ್ಪುಕಾರ ಹಚ್ಚಿ ಉರಿದು ನಂತರ ಪ್ರಿಜ್ಗೆ ಇಟ್ಟಿರುತ್ತೇನೆ. ಬರುವ ಶನಿವಾರ ಹೇಗಿದ್ದರೂ ಊರಿಗೆ ಹೋಗುತ್ತೀರಿ. ಮನೆಗೆ ಕೊಂಡೋಗಬಹುದು’ ಎಂದರು. ಅವರ ದೊಡ್ಡ ಮನಸ್ಸಿಗೆ ನಿಜಕ್ಕೂ ಬೆರಗಾದೆ. ಅವರು ಹಾಗೇ ಮಾಡಿದರು. ನನ್ನ ಸಂಸಾರ ಬೆಂಗಳೂರಿನಲ್ಲಿ ವಾಸವಾಗಿತ್ತು.
ಬೆಂಗಳೂರಿನಿಂದ ಕುಪ್ಪಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಲಕ್ಷ್ಯುರಿ ಬಸ್ ಇತ್ತು (ಇಂದಿಗೂ ಇದೆ). ಶನಿವಾರ ರಾತ್ರಿ ಆ ಬಸ್ಸಿಗೆ ಕೂರುವಷ್ಟರಲ್ಲಿ ಗುಂಡ ಒಂದು ಪ್ಯಾಕ್ ಮಾಡಿದ ಪಾತ್ರೆ ಹಿಡಿದು ಓಡಿ ಬಂದ. ‘ಅಣಬೆ ಪದಾರ್ಥ ಸಾರು, ಸುಬ್ಬಣ್ಣ ಕೊಟ್ಟರು’ ಎಂದ. ‘ಅವತ್ತು ಸಂಜೆಗೆ ನನ್ನನ್ನೂ ಊಟಕ್ಕೆ ಕರದಿದ್ರು. ಉಷಾಕ್ಕ ಭರ್ಜರಿ ಅಡುಗೆ ಮಾಡ್ತರೆ’ ಎಂದು ಗುಂಡನೂ ಅವರಿಗೆ ಕೃತಜ್ಞತೆ ಅರ್ಪಿಸಿದ. ಸುಬ್ಬಣ್ಣ ಮತ್ತು ಉಷಾ ಅವರ ಉದಾರತೆ ಬಗ್ಗೆ ಯೋಚಿಸುತ್ತಲೇ ಬೆಂಗಳೂರಿನತ್ತ ಪ್ರಯಾಣ ಮುಂದುವರಿಸಿದೆ.
ಮುಂದಿನ ವಾರಕ್ಕೆ
0 ಪ್ರತಿಕ್ರಿಯೆಗಳು