ಸವಿತಾ ರವಿಶಂಕರ್
ದಿನಕ್ಕೊಂದು ಅಳಲು
ನಿನ್ನಹಂಕಾರಗಳು
ಹೆಪ್ಪುಗಟ್ಟಿ ಅರಳುವುದು
ಮೌನದಲೇ ಸಮ್ಮತಿಯ ಹಾಗೆ ಎಂದು
ನಟಿಸುವ ನನ್ನ ರಂಗಶಾಲೆಯಲ್ಲಿ
ನೀನೆ ರಾಮನಾದರು ರಾವಣನಾಗಿ
ಅರಳಿ ಕುಣಿದದ್ದು.
ರಾವಣ ಮಗುವಾಗಿ
ಪ್ರೀತಿಗಾಗಿ ಹಂಬಲಿಸಿ ಸೋತು
ಮಣ್ಣಾಗಿ ಕುಶ ಲವರಾಗಿ
ಮರಳಿ ತೆಕ್ಕೆ ಏರಿ
ನಾ ಹೇಳಿದಂತೆ ನಡೆದದ್ದು
ಎಂಬ ಕತೆ ನುಸುಳಿದ್ದು.
ಮತ್ತೊಮ್ಮೆ ಮೌನ ನಾ ಧರಿಸಿ
ಮಾತಿಗೆ ಇಲ್ಲಿ ಬೆಲೆ ಇಲ್ಲ ಬಾಳಿಗಿಲ್ಲಿ
ಅರ್ಥವಿಲ್ಲ. ಬಯಸಲಿಲ್ಲ.
ಬಯಸಿದ್ದು ಸಿಗಲಿಲ್ಲ
ಮೌನವಲ್ಲದೆ ಬೇರೆ ರೀತಿಯಿಲ್ಲ.
ಹೋರಾಟ ಮಾಡುವುದು ಯಾರೊಂದಿಗೆ
ಬಯಸಿ ಅಪ್ಪಿ ಮುದ್ದಾಡಿದ
ಮನಸ್ಸಿನೊಂದಿಗೆ ಹೇಗೆ ?
ಛೆ ಸಾಯಲಿ ಇನ್ನಾದರು
ಅವನಾಡುವ ಮಾತು.
ಕೆಪ್ಪಾಗಲಿ ತೂತಿರುವ ಕಿವಿ ಎಂದೂ ಶಪಿಸದೇ
ಪರಿತ್ಯಕ್ತಳಲ್ಲ ಬೇಕಿಲ್ಲ ನಿ ಎನಗೆ ನಡಿ
ಎಂದು ಅಡಿ ಇಟ್ಟ ಈ ಹೆಣ್ಣು
ನಮ್ಮೆಲ್ಲರಿಗೆ, ಶಕ್ತಿ ಸಂಚಯನದ
ದಾರಿಗೆ ಅಡಿಗಲ್ಲು.
ಒಂಟಿಯಾಗಿ ನಡೆಯುವುದು ಭಯವಲ್ಲ .
ನಡೆಯುವುದು ದಾರಿಯಾದಾಗ
ನನಗೆ ನಾನೇ ಎಲ್ಲ ಎಂದರಿತ ಹೆಜ್ಜೆಗಳಿಗೆ
ಮೊದಲಪಾಠದ ಅಕಾರಾದಿ….
0 ಪ್ರತಿಕ್ರಿಯೆಗಳು