ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಐತಾಳರಿಗೆ ಅಭಿನಂದನೆಗಳು..

ಎಲ್ ಸಿ ಸುಮಿತ್ರಾ 

ಹಳೆಮನೆಯ ಚಿತ್ರ ಮತ್ತು ಪುಸ್ತಕದ ಶೀರ್ಷಿಕೆಯೆ ಎಲ್ಲ ವನ್ನೂ ಹೇಳುತ್ತಿದೆ.

ಇದು ಅಭಿನವ ಪ್ರಕಾಶನದವರು ಪ್ರಕಟಿಸಿರುವ ನಾಗ ಐತಾಳರು ಬರೆದಿರುವ ಪುಸ್ತಕ.

ಐದು ದಶಕಗಳಿಂದ ತಾವು ಹುಟ್ಟಿದ ಊರಿನಿಂದ ದೂರವಿರುವ ಲೇಖಕರು, ಕೋಟದಲ್ಲಿರುವ ತಮ್ಮ ಕುಟುಂಬದ ಮನೆ ಮತ್ತು ಜನರ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ಭೂಮಾಲೀಕರಾಗಿದ್ದ ಹಿರಿಯರು ಕಟ್ಟಿಸಿದ ಮನೆಯ ಭೌತಿಕ ವಿವರಗಳು ಮೊದಲ ಇಪ್ಪತ್ತು ಪುಟಗಳನ್ನು ತುಂಬಿವೆ.. .ಮಲೆನಾಡಿನ ಮನೆಯಾಗಿರಲಿ ಕರಾವಳಿಯ ಮನೆ ಆಗಿರಲಿ ಕೃಷಿ ಆಧಾರಿತ ಮನೆಗಳ ರೂಪದಲ್ಲಿ ಸಾಮ್ಯವಿದೆ.

ಐತಾಳರು ಒಳಗಿನ ಅಂಗಳ ಕುರಿತು ಬರೆಯುವಾಗ “ಪಾತಾಳ ಅಂಕಣ” ಪದ ಬಳಸಿದ್ದಾರೆ. ನಮ್ಮ ಮನೆಯಲ್ಲಿಯು ಈ ಪದ ಬಳಕೆಯಲ್ಲಿತ್ತು. ಈಗಿನ ತಲೆಮಾರಿನ ವರಿಗೆ ಹಾಗೆಂದರೇನು ಗೊತ್ತಿಲ್ಲ. ಕೋಟದ ಗಾಂಧಿ ಎಂದು ಕರೆಸಿಕೊಳ್ಳುತ್ತಿದ್ದ, ತಂದೆ, ಉಪಪತ್ನಿಯಿದ್ದ ಚಿಕ್ಕಪ್ಪ, ಲೇಖಕರು ಪ್ರೈಮರಿ ಶಾಲೆಗೆ ಹೋಗುವಾಗ ಪೆಪ್ಪರಮಿಂಟ್ ಕೊಡುತ್ತಿದ್ದ ಶೇಷ ಕಾರಂತ (ಶಿವರಾಮ ಕಾರಂತರ ತಂದೆ) . ಎಲ್ಲವೂ ಸಂದುಹೋದ ಕಾಲದ ಒಳಿತು ಕೆಡಕುಗಳ ಚಿತ್ರಣ ನೀಡುತ್ತವೆ..

ಕೆಲವು ಸಂದರ್ಭದಲ್ಲಿ ನನಗೆ ಕೆ ಪಿ ಕೇಶವ ಮೆನನ್ ಅವರ” ಗತಿಸಿದ ಕಾಲ” ಪುಸ್ತಕದ ನೆನಪಾಯಿತು.. ಉಳ್ಳವರ ಬದುಕು ಚೆನ್ನಾಗಿರಬೇಕಾದರೆ ಅದಕ್ಕಾಗಿ ಜೀವ ತೇದ ಕೃಷಿ ಕಾರ್ಮಿಕರು ಇದ್ದರು. ಅವರ ಕುರಿತು ಅವರ ಕಷ್ಟದ ಕುರಿತು ಬರೆದಿದಾರೆ… ಮಕ್ಕಳಿಗೆ ಕಾಫಿ ಸೋಸಿದ ಪುಡಿಗೆ ಬೆಲ್ಲದ ನೀರು ಮತ್ತು ಹಾಲುಹಾಕಿ ಸೋಸಿ ಕೊಡುತ್ತಿದ್ದ ಕಾಫಿಯ ರುಚಿ ಇನ್ನೂ ನೆನಪಿನಲ್ಲಿದೆ‌ ಅನ್ನುವುದನ್ನು ಓದಿದಾಗ ನಮ್ಮದೂ ಇದೇ ಕತೆಯಾಗಿತ್ತಲ್ಲ ಅನಿಸಿತು.

“ನಮ್ಮವರು” ಭಾಗದಲ್ಲಿ ಸಹೋದರ, ಸಹೋದರಿಯರು, ಚಿಕ್ಕ ಪ್ಪನ ಮಕ್ಕಳು, ತಾಯಿಯ ಕುರಿತು ವಿವರವಾಗಿ ಬರೆದಿದ್ದಾರೆ. ಪದೇ ಪದೇ ಬದಲಾದ ಮನೆ, ಊರು, ಸಂದು ಹೋದ ಬಂಧುಗಳು ಈಗಿಲ್ಲವಲ್ಲ ಎಂಬ ಹಳಹಳಿಕೆ ನಮ್ಮಲ್ಲೂ ಒಂದು ವಿಷಾದವನ್ನು ಮೂಡಿಸುತ್ತದೆ. ಆದರೆ ತಮ್ಮ ಮಕ್ಕಳು, ಮೊಮ್ಮಕ್ಕಳು, ಅಮೆರಿಕ ದ ಬದುಕು, ಇತ್ಯಾದಿಗಳನ್ನು ಇಲ್ಲಿ ಬರೆದಿಲ್ಲ..

ಇದು ಪೂರ್ತಿ “ಕೋಟ ಮಹಾ ಜಗತ್ತಿನ” ಕಥೆ. ಪುಸ್ತಕ ಒಂದೇ ಸಲಕ್ಕೆ ಓದಿಸಿಕೊಂಡಿತು.. ಲೇಖಕರ ಭಾವುಕ ಸಂವೇದನಾಶೀಲತೆ ನನಗೆ ಇಷ್ಟವಾಯಿತು.. ಈ ಪುಸ್ತಕದ ಓದು ಎಪ್ಪತ್ತೈದು ವರ್ಷ ಹಿಂದಿನ ಒಂದು ಜಗತ್ತಿನ ಪರಿಚಯ ಮಾಡಿಸುತ್ತದೆ.. ಐತಾಳರಿಗೆ ಅಭಿನಂದನೆಗಳು.

‍ಲೇಖಕರು avadhi

17 January, 2020

2 Comments

  1. T S SHRAVANA KUMARI

    ಒಳ್ಳೆಯ ಪುಸ್ತಕ ಪರಿಚಯ

  2. Shyamala Madhav

    ಸುಮಿತ್ರಾ, ಇನ್ನೂ ಸ್ವಲ್ಪ ಬೇಕೆನಿಸಿತು. ಹಾಗಾಗಿ ಪುಸ್ತಕ ಕೊಂಡು ಓದಿದೆ ನಿರ್ವಾಹವಿಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading