ಆನೆಗೊಂದಿ ಉತ್ಸವದಲ್ಲಿ ವಾಚಿಸಲಾದ ಕವಿತೆ ಈಗ ವಿವಾದಕ್ಕೀಡಾಗಿದೆ.
ಹಿರಿಯ ಪತ್ರಕರ್ತ ಸಿರಾಜ್ ಬಿಸರಳ್ಳಿ ಅವರು ‘ನಿನ್ನ ದಾಖಲೆ ಯಾವಾಗ ನೀಡುತ್ತಿ’ ಎನ್ನುವ ಕವಿತೆಯನ್ನು ಉತ್ಸವದಲ್ಲಿ ವಾಚಿಸಿದ್ದರು.
ಪ್ರಸ್ತುತ ದೇಶಾದ್ಯಂತ ಪ್ರತಿಭಟನೆ ಎದುರಿಸುತ್ತಿರುವ ಸಿ ಎ ಎ ಹಾಗೂ ಎನ್ ಆರ್ ಸಿ ಕುರಿತ ಕವನ ಇದಾಗಿತ್ತು.
ಕವಿತೆ ಕೇಳುಗರ ಮೆಚ್ಚುಗೆಗೂ, ಚಪ್ಪಾಳೆಗೂ ಕಾರಣವಾಗಿತ್ತು.
ಕವಿಗೋಷ್ಠಿ ನಂತರ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಈ ಕವನವನ್ನು ಖಂಡಿಸಿ, ಕವಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸಿರಾಜ್ ಬಿಸರಳ್ಳಿ ಅವು ವಾಚಿಸಿದ ಕವಿತೆ ಇಲ್ಲಿದೆ-
ನಿನ್ನ ದಾಖಲೆ ಯಾವಾಗ ನೀಡುತ್ತಿ?..
( ಆನೆಗೊಂದಿ ಉತ್ಸವದ ಕವಿಗೋಷ್ಠಿಯಲ್ಲಿ ವಾಚನ ಮಾಡಿದ ಕವಿತೆ)
ಆಧಾರು, ರೇಷನ್ ಕಾರ್ಡಗಳ ಕ್ಯೂನಲ್ಲಿ
ಥಂಬಿನ, ಸರ್ವರಿನ ಮಂಗನಾಟದಲ್ಲಿ
ಬದುಕ ಕಳೆದುಕೊಳ್ಳು ತ್ತಿರುವವರ ದಾಖಲೆ
ಕೇಳುವವನೇ ನಿನ್ನ ದಾಖಲೆ ಯಾವಾಗ ನೀಡುತ್ತಿ?
ನಾಡಿನ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಲೇ ನೇಣಿಗೇರಿದವರ ,
ಹೆಸರೂ ಬೇಡವೆಂದು ಹುತಾತ್ಮರಾದವರ
ಇತಿಹಾಸದ ಹಾಳೆಗಳ ಹರಿಯುತ್ತಿರುವವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ ?
ತಾಜ್ ಮಹಲ್, ಚಾರ್ ಮಿನಾರು ಗುಂಬಜಗಳಿಗೆ
ಕೆಂಪು ಕೋಟೆ ಕುತುಬ್ ಮಿನಾರುಗಳಿಗೆ ಸಾಕ್ಷಿ ಕೇಳುತ್ತಿರುವವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ?
ಬ್ರಿಟಿಷರ ಬೂಟು ನೆಕ್ಕಿದ ತಲೆಹಿಡುಕರ
ಧರ್ಮ ದ್ವೇಷದ ಅಮಲಿನಲ್ಲಿ ರಕ್ತ ಕುಡಿಯುತ್ತಿರುವ
ಗೊಬೆಲ್ ಸಂತತಿಯವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ?
ಪಕೋಡ ಮಾರಿ ಬದುಕಿದವನು
ಚಾ ಮಾರಿ ಬದುಕಿದವನು ನನ್ನೂರಿನಲ್ಲಿ
ಮನುಷ್ಯತ್ವ ಮಾರಿಕೊಂಡಿಲ್ಲ
ಸ್ವಾಭಿಮಾನ ಮಾರಿಕೊಂಡಿಲ್ಲ, ಸುಳ್ಳಿನ ಕಂತೆಗಳ ಕತೆ ಕಟ್ಟಿಲ್ಲ
ಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ?
ಮುಳ್ಳು ಚುಚ್ಚಿ, ಹರಿದು, ಸಿಡಿದು ಹೋದ
ಟ್ಯೂಬುಗಳ, ಟೈಯರುಗಳ ತಿದ್ದಿ ತೀಡಿ ಗಾಳಿ ತುಂಬಿದ
ಪಂಚರ್ ನವನು ತನ್ನತನವನ್ನು ಮಾರಿಕೊಳ್ಳಲಿಲ್ಲ
ನೀನು ದೇಶವನ್ನೇ ಮಾರಿಬಿಟ್ಟೆಯಲ್ಲ
ಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ?
ದೇಶವನ್ನೇ ಯಾಮಾರಿಸಿದ ನಿನಗೆ
ನಕಲಿ ದಾಖಲೆಗಳು ದೊಡ್ಡದಲ್ಲ ಬಿಡು
ಕನಿಷ್ಠ ಮನುಷ್ಯತ್ವವೂ ನಿನಗಿದೆ
ಎನ್ನುವ ದಾಖಲೆ ಯಾವಾಗ ನೀಡುತ್ತಿ ?
ಸುಳ್ಳು ಹೇಳುವುದಕ್ಕಿಂತ ಮೌನವಾಗಿರುವುದೇ ಲೇಸು
ಗುರುತು ಕೇಳುವುದಕ್ಕಿಂತ ಮರೆತು ಬಿಡುವುದೇ ಲೇಸು
ಇತಿಹಾಸ ತಿರುಚುವುದಕ್ಕಿಂತ ತಿದ್ದುವುದೇ ಲೇಸು
ಯಾಮಾರಿಸಿದವರು ಒಬ್ಬಿಬ್ಬರಲ್ಲ
ಯಾಮಾರುವ ಮುನ್ನ ಎದ್ದೇಳುವುದೇ ಲೇಸು…
ಬಾಯಿಗೆ ಬಂದಂತೆ ಬೈಯ್ಯುವದು ಸಹ ಕವನವೇ ?
ರಮೇಶ ಪಾಟೀಲ.ಕಲಬುರ್ಗಿ
ವಾಸ್ತವಕ್ಕೆ ಕನ್ನಡಿ ಹಿಡಿದಿದೆ ಭಾರತದ
ನಾಜೀಗಳ ಬಣ್ಣ ಬಯಲು ಮಾಡಿರುವ ಕವನ
ಕವನದ ಅರ್ಥ ನಾಜೀಗಳಿಗೆ ನಾಜೂಕಾಗಿ ಹರಿತವಾಗಿ ಇರಿದಿದೆ ಹಾಗಾಗಿ ನಾಜೀಗಳ ಕುಂಡೆ ಸುಟ್ಟಂತಾಗಿದೆ