‘ಅವಧಿ’ಯಲ್ಲಿ ನವೀನ್ ಮಧುಗಿರಿ ಅವರು ಬರೆದ ಒಂದು ಪ್ರಬಂಧ ಅನೇಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಆ ಲೇಖನ ಇಲ್ಲಿದೆ ಈ ಲೇಖನದ ಮುಂದುವರಿಕೆಯಾಗಿ ನಿಸಾರ್ ಅಹ್ಮದ್ ಬರೆದ ಕವಿತೆ ಹಾಗೂ ರಾಘವೇಂದ್ರ ಜೋಶಿ ಅವರ ವಿಸ್ತರಣೆಯನ್ನು ಪ್ರಕಟಿಸಲಾಗಿತ್ತು.
ಇವು ಉಂಟುಮಾಡಿದ ಚರ್ಚೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ಕ್ಷಮೆ ಸಮಾಚಾರ
ನವೀನ್ ಮಧುಗಿರಿ
ಮೊನ್ನೆ ‘ಅವಧಿ’ಯಲ್ಲಿ ಪ್ರಕಟಗೊಂಡ ಅತಿ ಸಣ್ಣಕತೆಗಳ ಕುರಿತ ನನ್ನ ಲೇಖನ ‘ದೈತ್ಯ ಜೀವಿಯ ಅತಿ ಸಣ್ಣಕತೆ’ ಫೇಸ್ಬುಕ್ ನಲ್ಲಿ ಕೆಲವು ಚರ್ಚೆ ಹಾಗೂ ಆರೋಪಗಳಿಗೆ ಕಾರಣವಾಗಿದೆ.
ಚರ್ಚೆಯ ಹಂತದಲ್ಲಿ ತಮ್ಮ ಫೇಸ್ಬುಕ್ ಕಮೆಂಟಿನಲ್ಲೊಬ್ಬರು ಲೇಖನವನ್ನು ಪ್ರಕಟಿಸಿದ್ದ ‘ಅವಧಿ’ಯನ್ನು ದೂರಿರುವುದು ಸರಿಯಲ್ಲ. “ತಪ್ಪು ಮಾಹಿತಿ ಎಲ್ಲೇ ಬಂದರೂ ತಪ್ಪು. ಮೂಲ ತಪ್ಪು ನವೀನ್ ಲೇಖನದಲ್ಲಿ ಆಗಿದೆ” ಎಂದಿರುವ ಜಯಶ್ರೀ ಕಾಸರವಳ್ಳಿ ಮೇಡಮ್ ಅವರ ಮಾತಿನಲ್ಲಿ ಸತ್ಯವಿದೆ. ಎಲ್ಲವೂ ಶುರುವಾಗಿದ್ದು ನನ್ನ ಲೇಖನದಿಂದ. ಎಲ್ಲದಕ್ಕೂ ನಾನೇ ಹೊಣೆ. ಮಾಹಿತಿ ಸ್ಪಷ್ಟವಿಲ್ಲದೇ ಬರೆದುದರಿಂದಲೇ ಇಷ್ಟೆಲ್ಲವೂ ಆಗಿದೆ.
ಎಸ್. ದಿವಾಕರ್ ಸರ್ ಬಗ್ಗೆ ಅಪಾರವಾದ ಗೌರವ ಹಾಗೂ ಅಭಿಮಾನವಿದೆ. ಎಲ್ಲಿಯೂ ಅವರಿಗೆ ಮತ್ತು ಅವರ ಬರಹಕ್ಕೆ ಅವಹೇಳನ ಮಾಡುವ ಉದ್ದೇಶ ನನ್ನದಲ್ಲ. ದಿವಾಕರ್ ಸರ್ ಅವರು ಅನುವಾದವನ್ನು ತಪಸ್ಸಿನಂತೆ ಧ್ಯಾನಿಸುವವರು. ಇದಕ್ಕೆ ಸಾಕ್ಷಿಯಾಗಿ ಅವರ ಪುಸ್ತಕಗಳಿವೆ.
ಇನ್ನೂ ರಾಘವೇಂದ್ರ ಜೋಶಿ ಸರ್ ನಮ್ಮ ಹಾಯ್ಕು ಗುರುಗಳು. ಇವರು ಸಹ ಹಲವು ದೇಶ ಭಾಷೆಗಳ ಹಾಯ್ಕುಗಳ ಅನುವಾದಿಸಿದ್ದಾರೆ. ಸಹೃದಯರು . ಯಾರನ್ನೂ ಹೀಯಾಳಿಸುವ ಅಥವಾ ಅವಹೇಳನ ಮಾಡುವವರಲ್ಲ.
ದಿವಾಕರ್ ಸರ್ ಅವರ ಅತಿ ಸಣ್ಣಕತೆಗಳ ಕುರಿತ ಪ್ರಸ್ತಾವನೆ ಅತಿ ಸಣ್ಣಕತೆಗಳ ಬರೆಯಲು ನನಗೆ ಪ್ರೇರಣೆಯಾದರೆ, ರಾಘವೇಂದ್ರ ಜೋಶಿ ಯವರು ಹಾಯ್ಕುಗಳ ಕುರಿತು ಬರೆದ ಒಂದು ಲೇಖನ ನನ್ನ ಕವಿತೆಗಳನ್ನು ತಿದ್ದಿವೆ. ಇಬ್ಬರೂ ದೂರದಲ್ಲಿದ್ದು ತಮ್ಮ ಬರಹಗಳ ಮೂಲಕ ನನಗೆ ತಿದ್ದಿ ಬುದ್ಧಿ ಕಲಿಸಿದ್ದು, ಇಬ್ಬರೂ ನನಗೆ ಗುರು ಸಮಾನರು.
ನನ್ನ ಲೇಖನದಿಂದ ಯಾರದೇ ಬರಹ, ಗೌರವಗಳಿಗೆ ಧಕ್ಕೆಯಾಗಿದ್ದಲ್ಲಿ ಅಥವಾ ಯಾರ ಮನಸಿಗಾದರೂ ನೋವಾಗಿದ್ದರೆ ಈ ಮೂಲಕ ನಾನಿಲ್ಲಿ ಕ್ಷಮೆ ಕೋರುವೆ.. ಕ್ಷಮೆಯಿರಲಿ..
0 ಪ್ರತಿಕ್ರಿಯೆಗಳು