ಎಸ್ ದಿವಾಕರ್ ಎಂದರೆ..

S divakarಎಸ್ ದಿವಾಕರ್ ಎಂದರೆ.. ಎಂದರೆ..

ಹೇಗೆ ಬಣ್ಣಿಸುವುದು?

ಮೊನ್ನೆ ಪ್ರೊ ಸಿ ಎನ್ ರಾಮಚಂದ್ರನ್ ಅವರು ಹೇಳಿದ್ದರು, ತುಂಬು ವೇದಿಕೆಯಲ್ಲಿ- ದಿವಾಕರ್ ಎಂದರೆ ದಿವಾಕರ್ ಎಂದು-

ಹಾಗಾಗಿ ಇಲ್ಲಿ ಏನನ್ನೋ ಬಣ್ಣಿಸದೇ ಅವರ ಒಂದು ಪ್ರೀತಿಯ ಪ್ರಬಂಧ ಕೊಡುತ್ತಿದ್ದೇವೆ. ಓದಿ-

 

ಬಾಲಮುರಳೀ ಕೃಷ್ಣ ಮತ್ತು ಜಾಕ್ಸನ್ ಪೊಲ್ಯಾಕ್
ಎಸ್. ದಿವಾಕರ್
ನಮ್ಮ ಶಾಸ್ತ್ರೀಯ ಸಂಗೀತದಎರಡು ಮೂಲದ್ರವ್ಯಗಳೆಂದರೆ ನಾದ ಮತ್ತು ಕಾಲ. ಒಂದು ಶ್ರುತಿಶುದ್ಧವಾದದ್ದು, ಇನ್ನೊಂದು ಲಯಬದ್ಧವಾದದ್ದು.ಇವೆರಡನ್ನು ಸಾಧಿಸುವುದಕ್ಕೆಕಂಪಿತವೆಂಬ ಗಮಕವೂ ಸೂಕ್ಷ್ಮಸ್ವರಗಳ ಪ್ರಸ್ತುತಿಯೂ ಅತ್ಯಗತ್ಯ. ಸ್ವರವೆಂದಾಗ ಕರ್ನಾಟಕ ಸಂಗೀತದ ಒಂದು ಮುಖ್ಯ ಭಾಗವಾಗಿರುವ ಕಲ್ಪನಾ ಸ್ವರಗಳ ಪ್ರಸ್ತಾಪ ತೀರ ಸಹಜ.

ಕಲ್ಪನಾ ಸ್ವರವೆಂದರೆ ಗಮಕಗಳನ್ನು ಸೂಕ್ತ ರೀತಿಯಲ್ಲಿ ಸಂಯೋಜಿಸಿ ಪ್ರಕಟಪಡಿಸುವ ರಾಗವಿಶೇಷ. ಕರ್ನಾಟಕ ಸಂಗೀತ ಕಛೇರಿಯಲ್ಲಿ ರಾಗತಾನ ಪಲ್ಲವಿ ಹಾಡುವಾಗ ಗಾಯಕನಾದವನು ಕೃತಿಯ ಪಲ್ಲವಿಯಲ್ಲೋ ಚರಣದಲ್ಲೋ ತನಗೆ ಸೂಕ್ತವೆನಿಸಿದ ಒಂದು ಜಾಗವನ್ನುಆಯ್ಕೆ ಮಾಡಿಕೊಂಡು ಕಲ್ಪನಾ ಸ್ವರಗಳನ್ನು ನಿರೂಪಿಸುತ್ತಾನೆ.

dr-balamuralikrishnaಇವು ಹ್ರಸ್ವವಾದ, ಸರಳವಾದ ಸ್ವರಗಳಿಂದ ಪ್ರಾರಂಭವಾಗಿ ನಂತರ ದೀರ್ಘವಾದ, ಹೆಚ್ಚು ಸಂಕೀರ್ಣವಾದ ಸ್ವರಗಳಿಂದ ಕೊನೆಗೊಳ್ಳುತ್ತವೆ. ಮೊದಲು ನಿಧಾನ ಗತಿಯಲ್ಲಿ ಪ್ರಾರಂಭವಾಗಿ ನಂತರ ಧ್ರುತಗತಿಯಲ್ಲಿ ಮುಂದುವರೆಯುತ್ತವೆ. ಮೃದಂಗದ ನಡೆಗಳಿಗೆ ಅನುಗುಣವಾಗಿ ಸ್ವರಗಳನ್ನು ಜೋಡಿಸಿ ಪ್ರಸ್ತುತಪಡಿಸುವ ಕಲ್ಪನ ಸ್ವರಗಳು ಒಂದು ಕೃತಿಯ ಒಟ್ಟು ಭಾವವನ್ನು ಹೊಮ್ಮಿಸಬಲ್ಲವು. ಕೆಲವು ಸಂದರ್ಭಗಳಲ್ಲಿ ಕೃತಿಗೆ ಪೂರಕವಾಗಿದ್ದೂಒಂದು ಸ್ವತಂತ್ರ ನೆಲೆಯಲ್ಲಿ ವಿಜೃಂಭಿಸಬಲ್ಲವು. ವಿಳಂಬ ಕಾಲದಲ್ಲೋ ಮಧ್ಯಮ ಕಾಲದಲ್ಲೋ ಹಾಡಿದಾಗ ಒಂದು ಬಗೆಯ ಶಾಂತಿ ಸಮಾಧಾನಗಳನ್ನು ನೀಡಬಲ್ಲವು. ಬಾಲಮುರಳೀ ಕೃಷ್ಣರಂಥ ಸಂಗೀತಗಾರರು ತಾರಕದಲ್ಲಿ ಮತ್ತು ಮೂರನೆಯ ಕಾಲದಲ್ಲಿ ಹಾಡಿದಾಗ ನಟ್ಟಿರುಳ ಆಕಾಶದ ನಕ್ಷತ್ರಗಳಂತೆ ಅಪೂರ್ವ ಕಾಂತಿಯನ್ನು ಚೆಲ್ಲಬಲ್ಲವು.

ತಾಳ ತಪ್ಪಿತೆ? ಆದಿತಾಳ ಶಾರೀರಕ್ಕೆ
ರೂಪಕದ ಚಿತ್ತಲಯ ಬಂತು ಹೇಗೆ?
ಶಿಖರದ ಬುಡಕ್ಕೆ ಖಂಡಿತ ಸ್ವರ ಪ್ರಸ್ತಾರ. ಅದರಾಚೆ
ಅವನವನ ಸ್ವಚ್ಛಂದ ಛಂದಸ್ಸಿಗೆ

ಗೋಪಾಲಕೃಷ್ಣ ಅಡಿಗರ ಒಂದು ಕವನದ ಈ ಸಾಲುಗಳು ಬಾಲಮುರಳಿಯವರ ಸ್ವರಪ್ರಸ್ತಾರದ ವಿಶಿಷ್ಟ ಬಾನಿಯನ್ನೇ ಸೂಚಿಸುವಂತಿವೆ. ನಮ್ಮ ಸಂಗೀತದಲ್ಲಿಅವರು ಸಿದ್ಧ ನಿಯಮಗಳನ್ನು ಮುರಿಯುವುದಕ್ಕೆ, ಪರಂಪರೆಯನ್ನು ತಲೆಕೆಳಗು ಮಾಡುವುದಕ್ಕೆ ಹೆಸರಾದವರು. ರಾಗದ ಸ್ವರೂಪವನ್ನೂ ಸೌಂದರ್ಯವನ್ನೂ ಹೆಚ್ಚಿಸಿ ಅದರ ವೈಶಿಷ್ಟ್ಯವನ್ನು ತೋರಿಸುವಂತೆ 15589512_995038483934247_732166766695798393_nಸ್ವರಗಳನ್ನು ಬಳಸಿ ಹಾಡುವುದರಲ್ಲಿಅವರನ್ನು ಮೀರಿಸುವವರು ಅಪರೂಪ. ಅವರ ಸ್ವರಪ್ರಸ್ತಾರದಲ್ಲಿ ಸರಳವಾದದ್ದು ಸಂಕೀರ್ಣವೂ ಸಂಕೀರ್ಣವಾದದ್ದು ಸರಳವೂ ಆಗಿಬಿಡುತ್ತದೆ. ಅವರು ನಿರಾಯಾಸವಾಗಿ ನಿರೂಪಿಸುವ ಸ್ವರಪ್ರಸ್ತಾರ ಸರಳ ರಚನೆಯ ಹಾಗೆ ಭಾಸವಾಗಬಹುದು.ಆದರೆ ವಿವಿಧ ಸ್ಥಾಯಿಗಳ ಮೂಲಕ ಜಿಗಿಯುವ, ಕುಣಿಯುವ, ಮಿಂಚುವ ಪದಗುಚ್ಛಗಳು, ಅವುಗಳ ಉಪಾಂಗ ಸ್ವರಗಳು ಹೇಗೆ ತಾನೆ ಸರಳವಾಗಿರಲು ಸಾಧ್ಯ? ಅವು ಪಕ್ಕವಾದ್ಯದವರ ಪರಿಣತಿಯನ್ನೂ ಸತ್ವವನ್ನೂ ಪರೀಕ್ಷೆಗೊಡ್ಡದೆ ಬಿಡಲಾರವು.

ಬಾಲಮುರಳಿ ರಾಗತಾನ ಪಲ್ಲವಿ ಹಾಡುವಾಗ ನೆರವಲಿಗಾಗಿ ಕೃತಿಯಲ್ಲಿ ಹಿಂದೆ ಯಾವ ಗಾಯಕರೂ ಆರಿಸಿಕೊಂಡಿರದ ಎಡುಪನ್ನುಆಯ್ಕೆಮಾಡಿಕೊಂಡು ಅದರ ಸಾಹಿತ್ಯ ವಿನ್ಯಾಸವನ್ನು ಸ್ವರ ವಿನ್ಯಾಸವಾಗಿ ಮಾರ್ಪಡಿಸುವುದುಂಟು. ಎಡುಪುವಿಗೆ ಸಂಬಂಧಿಸಿದಂತೆ ಹೇಳುವುದಾದರೆ ಅವರು ಬಹುಮಟ್ಟಿಗೆ ತಮ್ಮ ಸ್ವರಾಭಿವ್ಯಕ್ತಿಗಾಗಿ ಕೃತಿಯ ಪರಿಚಿತ ಭಾಗವನ್ನು ಆರಿಸಿಕೊಳ್ಳದೆ ಅಪರಿಚಿತ ಭಾಗವನ್ನೇ ಆರಿಸಿಕೊಳ್ಳುತ್ತಾರೆ. ಉದಾಹರಣೆಗೆ ಜಗನ್ಮೋಹಿನಿ ರಾಗದ ‘ಶೋಬಿಲ್ಲು ಸಪ್ತಸ್ವರ’ ಕೃತಿಯನ್ನು ನೋಡಬಹುದು. ಸಾಮಾನ್ಯವಾಗಿ ಸಂಗೀತಗಾರರು ‘ಶೋಬಿಲ್ಲು’ವನ್ನೋ ‘ಸಪ್ತಸ್ವರ’ವನ್ನೋ ಆಯ್ಕೆಮಾಡಿಕೊಂಡರೆ ಬಾಲಮುರಳಿಯವರು ಚರಣ ಭಾಗದಲ್ಲಿರುವ ‘ದರುಋಕ್ ಸಾಮ ದು ಲ ಲೋ’ ವನ್ನುಆಯ್ದುಕೊಂಡು ಅದನ್ನು ವಿಸ್ತರಿಸುತ್ತಾರೆ. ಹೀಗೆ ಮಾಡುವ ಮೂಲಕ ಅವರು ಕೃತಿಯ ಸಾಹಿತ್ಯ ಭಾಗವನ್ನು ‘ಸಾ ಮಾ’ ಎಂಬ ಸ್ವರವಿನ್ಯಾಸವಾಗಿ ಪರಿವರ್ತಿಸುವುದನ್ನು ಗಮನಿಸಬೇಕು. ಅದು ಶ್ರೋತೃಗಳ ಮೇಲೆ ಬೀರುವ ಪ್ರಭಾವ ಅಪಾರ.

ರಾಗಾಲಾಪನೆ, ತಾನ, ಸ್ವರಕಲ್ಪನೆ, ಇತ್ಯಾದಿ ಸಂಗೀತದ ಪ್ರಧಾನಾಂಗಗಳಲ್ಲಿ ನಾವು ಆಡುವ ಭಾಷೆಗೆಯಾವ ಕೆಲಸವೂ ಇಲ್ಲ. ವಿದ್ವಾಂಸ ರಾಳ್ಲಪಲ್ಲಿ ಅನಂತ ಕೃಷ್ಣ ಶರ್ಮ ಅವರು ಬರೆದಿರುವಂತೆ ಸಾಹಿತ್ಯ ಅಕ್ಷರ ಭಾಷೆ; ಸಂಗೀತ ನಾದಭಾಷೆ…. ಸಂಕೇತ ಸಿದ್ಧವಾದ ಅರ್ಥಾನುಭವ ಸಾಹಿತ್ಯದಲ್ಲಿ; ಸಂಕೇತವೇ ಇಲ್ಲದ ಭಾವಾನುಭವ ಸಂಗೀತದಲ್ಲಿ. ಆದ್ದರಿಂದ ಒಂದು ಮತ್ತೊಂದಕ್ಕೆ ನಿರ್ವಚನವಾಗಲಾರದು. ಆದರೆ ಸ್ವತಃ ವಾಗ್ಗೇಯಕಾರರಾಗಿರುವ ಬಾಲಮುರಳೀ ಕೃಷ್ಣ ತೆಲುಗು ಭಾಷೆಯಲ್ಲಿ, ತೋಡಿ ರಾಗದಲ್ಲಿ ರಚಿಸಿರುವ ‘ಮಾ ಮಾನಿನಿ’ ಎಂಬ ಕೃತಿಯನ್ನು ನೋಡಿ.ಇದರಲ್ಲಿ ‘ಮಾ ಮಾನಿನೀ ನೀ ಧಮಗನೀ ನೀಧಾ ಸರಿನೀಗದಾ’ ಎನ್ನುವುದು ಸಾಹಿತ್ಯ ಭಾಗ. ಇದಕ್ಕೆತೆಲುಗು ಭಾಷೆಯಲ್ಲಿ ನಿರ್ದಿಷ್ಟ ಅರ್ಥವಿದೆ.ಆದರೆ ಇಲ್ಲಿನ ಪ್ರತಿಯೊಂದು ಅಕ್ಷರವೂ ಒಂದೊಂದು ಸ್ವರವಾಗಿರುವುದನ್ನುಗಮನಿಸಬೇಕು. ಹಾಡಿದಾಗಇಲ್ಲಿನ ಅಕ್ಷರ ಭಾಷೆ ಯಾವುದು, ನಾದ ಭಾಷೆ ಯಾವುದು ಎಂದು ಪ್ರತ್ಯೇಕಿಸುವುದೇ ಸಾಧ್ಯವಿಲ್ಲ.

ಬಾಲಮುರಳಿಯವರ ಕಲ್ಪನಾ ಸ್ವರಗಳ ಮೆರವಣಿಗೆಯನ್ನು, ಅವುಗಳ ಸಂಭ್ರಮ, ವೈಭವಗಳನ್ನು ಆಲಿಸುತ್ತಿರುವಾಗ ನಮ್ಮ ಮನಸ್ಸಿನಲ್ಲಿ ಬಗೆಬಗೆಯ ಚಿತ್ರಗಳು ಮೂಡಬಹುದು. ಅಮೂರ್ತವಾಗಿಯೇ ಇರಬಹುದಾದ ಆ ಚಿತ್ರಗಳಲ್ಲಿ ಕೆಲವು ಕಲಾವಿದ ಜಾಕ್ಸನ್ ಪೊಲ್ಯಾಕನ ‘ಆಕ್ಷನ್ ಪೇಂಟಿಂಗ್’ಗಳಂತೆ ಭಾಸವಾದರೆ ಆಶ್ಚರ್ಯವಿಲ್ಲ. ನಿದರ್ಶನಕ್ಕಾಗಿ ಅವನ ‘ಕಾನ್ವರ್ಜೆನ್ಸ್’ ಎಂಬ ಈ ಚಿತ್ರವನ್ನು ನೋಡಬಹುದು.

ಅಮೆರಿಕದಲ್ಲಿ 1940ರಿಂದ 1960ರವರೆಗೆ ಸುಪ್ರಸಿದ್ಧವಾಗಿದ್ದ ಒಂದು ಕಲಾ ಪಂಥದ ಹೆಸರು ‘ಅಮೂರ್ತ ಅಭಿವ್ಯಕ್ತಿವಾದ’. ಅದಕ್ಕೆ ‘ಆಕ್ಷನ್ ಪೇಂಟಿಂಗ್’ ಎಂಬ ಹೆಸರು ಕೊಟ್ಟವನು ಅಮೆರಿಕದ ಕಲಾ ವಿಮರ್ಶಕ ಹೆರಾಲ್ಡ್ರೋ ಸೆನ್ಬರ್ಗ್. ಅವನ ದೃಷ್ಟಿಯಲ್ಲಿ ಕ್ಯಾನ್ವಾಸ್ ಎನ್ನುವುದು ಕ್ರಿಯಾಶೀಲತೆಗೊಂದು ಅಖಾಡ. ಅಂದರೆ ಸುಮಾರು ಇಪ್ಪತ್ತು ವರ್ಷ ಅಮೆರಿಕನ್ ಕಲಾವಿದರಿಗೆಕ್ಯಾನ್ವಾಸೆನ್ನುವುದು ನಿಜವಾದ ಅಥವಾ ಕಲ್ಪಿತ ಚಿತ್ರವೊಂದನ್ನು ರಚಿಸುವ, ಅದನ್ನು ಪುನರ್ವಿನ್ಯಾಸಗೊಳಿಸುವ ಮತ್ತು ‘ಅಭಿವ್ಯಕ್ತಿಸುವ’ ಸ್ಪೇಸ್ ಆಗದೆಒಂದು ಅಖಾಡದಂತಾಗಿತ್ತು.ಕಲಾವಿದ ಕ್ಯಾನ್ವಾಸಿಗೆ ಮುಖಾಮುಖಿಯಾಗುತ್ತಿದ್ದದ್ದು ತನ್ನ ಮನಸ್ಸಿನಲ್ಲಿದ್ದುದನ್ನು ಚಿತ್ರಿಸುವುದಕ್ಕಲ್ಲ; ತನ್ನ ಬಳಿಯಿದ್ದ ವಸ್ತುಗಳಿಂದ (ಉದಾ.ಬಣ್ಣ, ಚಾಕು, ಕರಣೆ, ಇತ್ಯಾದಿ) ಬೇರೇನನ್ನೋ ಸೃಷ್ಟಿಸುವುದಕ್ಕಾಗಿ.

ಈ ಪಂಥದ ಪ್ರಸಿದ್ಧ ಕಲಾವಿದ ಜಾಕ್ಸನ್ ಪೊಲ್ಯಾಕ್ (1912- ).ಈತ ಆಧುನಿಕ ಕಲಾ ಇತಿಹಾಸದಲ್ಲಿ ಕಲಾ ನಿಯಮಗಳನ್ನು ಬುಡಮೇಲುಗೊಳಿಸುವಂಥ ಅಮೂರ್ತ ಶೈಲಿಯೊಂದನ್ನು ಆವಿಷ್ಕರಿಸಿದವನು; ಬಣ್ಣದಿಂದ ರೇಖೆಯನ್ನು ಬೇರ್ಪಡಿಸುವ ಮೂಲಕ ಡ್ರಾಯಿಂಗ್ ಮತ್ತು ಪೇಂಟಿಂಗ್ ವಿಭಾಗಗಳನ್ನು ಪುನರ್ವ್ಯಾಖ್ಯಾನಕ್ಕೆ ಗುರಿಪಡಿಸಿದವನು. ಮೆಕ್ಸಿಕನ್ ಭಿತ್ತಿಚಿತ್ರಕಾರ ಡೀಗೊರಿವೇರನಿಂದ, ಸರ್ರಿಯಲಿಸಂನ ಕೆಲವು ಅಂಶಗಳಿಂದ, 1939ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಪಿಕಾಸೊ ಚಿತ್ರಗಳ ಒಂದು ಪ್ರದರ್ಶನದಿಂದ ಪ್ರಭಾವಿತನಾದ ಈತ ‘ಪೇಂಟಿಂಗಿಗೆ ಅದರದೇ ಆದ ಜೀವನವಿದೆ. ನಾನು ಆ ಜೀವನವನ್ನು ಅರಳಿಸಲು ಪ್ರಯತ್ನಿಸುತ್ತೇನೆ’ ಎಂದೊಮ್ಮೆ ಹೇಳಿದ್ದುಂಟು.

jackson-polack1940ರ ಹೊತ್ತಿಗೆತನ್ನ ‘ಹನಿ ಚಿತ್ರಗಳಿಗೆ’ (ಡ್ರಿಪ್ ಪೇಂಟಿಂಗ್ಸ್) ಹೆಸರಾಗಿದ್ದಜಾಕ್ಸನ್ ಪೊಲ್ಯಾಕ್ 20ನೇ ಶತಮಾನದ ಅತ್ಯಂತ ಸ್ವೋಪಜ್ಞ ಕಲಾ ಶೈಲಿಯೊಂದನ್ನು ಆವಿಷ್ಕರಿಸಿದ ಮಾರ್ಗಪ್ರವರ್ತಕ. ಚಿತ್ರಗಳನ್ನು ರಚಿಸಬೇಕಾದಾಗ ಅವನು ತನ್ನ ಕ್ಯಾನ್ವಾಸುಗಳನ್ನು ಗೋಡೆಗೆ ನಿಲ್ಲಿಸುವುದೋ ಈಸೆಲ್ಲಿಗೆ ಬಂಧಿಸುವುದೋ ಮಾಡದೆ ನೆಲದ ಮೇಲೆ ಮಲಗಿಸುತ್ತಿದ್ದ. ಆಮೇಲೆ ಬಣ್ಣದ ಕ್ಯಾನಿನ ಬಣ್ಣ ಕ್ಯಾನ್ವಾಸಿನ ಮೇಲೆ ಹನಿಹನಿಯಾಗಿ ಸುರಿಯುವಂತೆ ಮಾಡುತ್ತಿದ್ದ; ಕುಂಚವನ್ನುಕೈಬಿಟ್ಟು ಚಾಕುಗಳನ್ನು, ಕಡ್ಡಿಗಳನ್ನು, ಕರಣೆಗಳನ್ನು ಉಪಯೋಗಿಸಿ ತನ್ನಅಮೂರ್ತ ಪ್ರತಿಮೆಗಳಿಗೆ ಹೊಸ ಆಯಾಮ ಕಲ್ಪಿಸುತ್ತಿದ್ದ.ಅವನ ಆ ಬಗೆಯ ಚಿತ್ರಗಳಲ್ಲಿ ಕಲಾವಿದನ ಒಂದು ನಿರ್ದಿಷ್ಟ ಮನಃಸ್ಥಿತಿಯ ನೇರ ಅಭಿವ್ಯಕ್ತಿಯುಂಟು.

ಕಲೆಗೆ ಸಂಬಂಧಿಸಿದಂತೆ ಅವನು ತೆಗೆದುಕೊಂಡ ನಿಲುವುಗಳು, ಅನುಸರಿಸಿದ ಸೃಜನಶೀಲ ವಿಧಾನಗಳು ಬಾಲಮುರಳೀ ಕೃಷ್ಣರ ಸಂಗೀತದಂತೆ ನವನವೋನ್ಮೇಶಶಾಲಿಯಾಗಿದ್ದವು. ಸ್ಪೇಸ್, ಪಿಗ್ಮೆಂಟ್, ಅಂಚು ಮತ್ತು ಡ್ರಾಯಿಂಗುಗಳ ನಡುವೆ ಬಗೆಬಗೆಯ ಸಂಬಂಧಗಳ ಹೊಸದೊಂದು ವಿನ್ಯಾಸವನ್ನು ರೂಪಿಸಿದ ಹೆಗ್ಗಳಿಕೆ ಅವನದು.

ಪೊಲ್ಯಾಕ್ ತನ್ನ ಪೇಂಟಿಂಗುಗಳನ್ನು ರಚಿಸಿದ್ದು ಒಂದು ರೀತಿಯಲ್ಲಿಅನುಕ್ರಮವಾಗಿ. ಅಂದರೆ ಮೊದಲೊಂದು ಬಣ್ಣ, ನಂತರ ಇನ್ನೊಂದು, ಆಮೇಲೆ ಮತ್ತೊಂದು, ಹೀಗೆ. ಬಾಲಮುರಳೀ ಕೃಷ್ಣರ ಕಲ್ಪನ ಸ್ವರಗಳು ರೂಪುಗೊಳ್ಳುವುದು ಕೂಡ raga-notesಅನುಕ್ರಮವಾಗಿಯೇ. ಅಂದರೆ ಮೊದಲು ವಿಳಂಬ ಕಾಲದಲ್ಲಿ, ನಂತರ ಮಧ್ಯಮ ಕಾಲದಲ್ಲಿ, ಕೊನೆಗೆ ತಾರದಲ್ಲಿ. ಪೊಲ್ಯಾಕನ ಚಿತ್ರಗಳಲ್ಲಿ ಬಣ್ಣಗಳು ಬಿಂದುಗಳಾಗಿ, ಬಿಂದುಗಳು ಗೆರೆಗಳಾಗಿ, ಗೆರೆಗಳು ತಮ್ಮ ಚಲನೆಯಿಂದಲೇ ಅಮೂರ್ತಅನುಭವವೊಂದನ್ನು ನೇಯುವ ಸಾಧನಗಳಾಗಿ ಕಣ್ಣುಕುಕ್ಕುತ್ತವೆ. ಬಾಲಮುರಳಿಯವರ ಕಲ್ಪನಾ ಸ್ವರಗಳು ಕೂಡ ಹಾಗೆಯೇ. ಇಬ್ಬರದೂ ದೇಶಕಾಲಗಳಲ್ಲಿ ನಡೆಯುವ ಕಲಾಸೃಷ್ಟಿ.

ರಾಗವೆಂದರೆ ಬಣ್ಣವೆಂಬ ಅರ್ಥವೂ ಇದೆಯಷ್ಟೆ. ಒಂದು ಕಾಲದಲ್ಲಿ ಬಾಲಮುರಳಿಯವರು ಕೂಡ ಕುಂಚವನ್ನು ಬಣ್ಣಗಳಲ್ಲಿ ಅದ್ದಿ ಚಿತ್ರಗಳನ್ನು ರಚಿಸುತ್ತಿದ್ದ ಕಲಾವಿದರಾಗಿದ್ದವರು.

‍ಲೇಖಕರು Admin

December 18, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: