ಎಸ್ ಜಿ ಸಿದ್ಧರಾಮಯ್ಯ ಹೊಸ ಕವಿತೆ – ಬನ್ನಿ ನೀವೂ ಮನುಷ್ಯರಾಗಿ…

ಎಸ್ ಜಿ ಸಿದ್ಧರಾಮಯ್ಯ

ಕ್ಷಮಿಸಿ ನೀವು ಕಟ್ಟುವ ಜಗತ್ತಿನಲ್ಲಿ ನಮಗೆ ಜಾಗವಿಲ್ಲ
ಅದು ಗೊತ್ತಾಗಿಯೇ ನಿಮ್ಮ ಬಗ್ಗೆ ನಮ್ಮ ವಿರೋಧ
ನೀವೆಂದರೆ ನಿಮಗೆ ನೀವೇ ಜಗತ್ತು ಸಂಪತ್ತು
ನಾವುಗಳಿರುವುದು ಎಂದರೆ ನಿಮಗೆ ವಿಪತ್ತು

ನಮ್ಮ ನೆರಳು ಕಂಡರಾಗದ ನಿಮಗೆ ನಾವು ಬೇಕು
ನಿಮ್ಮ ಅಂಗಳವ ಗುಡಿಸಲಿಕ್ಕೆ ಬಾಚಿ ಬಳಿಯಲಿಕ್ಕೆ
ನೀವು ತಿನ್ನುವ ಅನ್ನವ ಬೆಳೆಯಲಿಕ್ಕೆ ಬೇಯಿಸಲಿಕ್ಕೆ
ಉಂಡ ತಟ್ಟೆಯ ಬಳಿಯಲಿಕ್ಕೆ ಬೆಳಗಲಿಕ್ಕೆ

ಉಟ್ಟು ಕಳೆದ ಬಟ್ಟೆಯ ಮಡಿಮಾಡಲಿಕ್ಕೆ
ಮೆಟ್ಟುವ ಚಪ್ಪಲಿಗಳ ಮಾಡಲಿಕ್ಕೆ ಅದಕ್ಕೆ
ಇದಕ್ಕೆ ಎದಕ್ಕೂ ನಾವು ಬೇಕೇ ಬೇಕು ಕೊನೆಗೆ
ನಿಮ್ಮ ಕರ್ಮಫಲ ಕೃಪೆಗೆ ಬೊಗಸೆಯೊಡ್ಡಲಿಕ್ಕೆ

ಮೂಗುರಿಗಳಾಗಿ ಕತ್ತೆ ದುಡಿತಕೆ ತೆತ್ತು ಕೊಂಡರು
ನಮ್ಮವರು ನಮ್ಮ ಮನೆಯ ಹಿರಿಯರು
ನೀವು ನಿಷೇಧಿಸಿದ್ದ ಅಕ್ಷರದರಿವಿಗೆ ತೆರೆದುಕೊಂಡ
ನಾವು ನಿಮ್ಮ ಬುಡಕ್ಕೆ ಬಿಸಿನೀರು ಹರಿಸುತ್ತೇವೆ.

ಭಯ ನಿಮಗೆ ನಮ್ಮ ನೆರಳು ಕಂಡರೂ ಅದಕ್ಕೇ
ನಮ್ಮವರನ್ನು ನಮ್ಮ ವಿರುದ್ಧವೇ ಎತ್ತಿ ಕಟ್ಟಿದ್ದೀರಿ:
ಅಪ್ಪ ಮಕ್ಕಳಿಗೆ ಅಣ್ಣ ತಮ್ಮರಿಗೆ ಕೊನೆಗೆ
ಗಂಡ ಹೆಂಡಿರಿಗೆ ಮಾತಿನ ಕಿಡಿ ಹೊತ್ತಿಸಿದ್ದೀರಿ.

ನಮ್ಮ ಗುಡಿಗುಂಡಾರಗಳಿಂದ ನಮ್ಮನ್ನು ಹೊರ ದಬ್ಬಿದ್ದೀರಿ:
ಕುಕ್ಕೆಯೊಳಗಿನ ಸುಬ್ರಹ್ಮಣ್ಯ ಪುರಿಯ ಜಗನ್ನಾಥ
ತಿರುಪತಿಯ ವೆಂಕಟರಮಣ ಒಂದೇ ಎರಡೆ
ಎಲ್ಲ ನಮ್ಮವರೇ ನಮ್ಮ ಮನೆಯ ಮಕ್ಕಳು.

ಒಕ್ಕಲುತನದಲಿ ಮಿಕ್ಕವರಿಗೆ ಮಾದರಿಯಾಗಿ
ಮನೆದೇವರಾದವರು ಬಳಿಸಾಲ ಬಳಗದೊಟ್ಟಿನಲಿ
ಸಂಪನ್ನರಾದವರು ನಿಮ್ಮ ಕಣ್ಣಿಗೆ ಬಿದ್ದು ಪರಬಾರೆ
ಯಾದವರು. ಕುಲಗಳ ತಬ್ಬಲಿಮಾಡಿ ಕಥೆಯಾಗಿ

ಬೆಳೆದವರು, ಕುಲದ ಮಕ್ಕಳ ಮಡೆಸ್ನಾನಕೆ ಸಿಡೆ ಹಬ್ಬಕೆ
ದಬ್ಬಿದವರು. ನಿಮ್ಮ ಗಾಳಕ್ಕೆ ಎರೆಹುಳುವಾದವರು.
ನಮ್ಮ ಅರಿವು ನಮ್ಮ ಧರ್ಮ ನಮಗೆ ಬೇಡ ನಿಮ್ಮ ಕರ್ಮ.
ದಯೆಯಿಲ್ಲದ ಧರ್ಮದಲ್ಲಿ ಯಾರು ಹಿಂದು ಯಾರು ಮುಂದು?

ನಮಗೆ ಬೇಡ ನಿಮ್ಮ ರಾಮರಾಜ್ಯ. ನಮಗಿರಲಿ ನಮ್ಮದೇ ಪ್ರಜಾರಾಜ್ಯ.
ಚಾರ್ವಾಕ ಆಜೀವಕ ಬೌದ್ಧರು ಶರಣರು
ನಡೆದ ದಾರಿ ತೆರೆದಿದೆ ಸಾವಿರದ ಬಳಿಸಾಲ ಬಳಗವಾಗಿ
ಬನ್ನಿ ನೀವೂ ನಮ್ಮೊಂದಿಗೆ ಬಳಗದೊಟ್ಟಿನ ಮನುಷ್ಯರಾಗಿ.

‍ಲೇಖಕರು Admin

January 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: