ಎಸ್ ಜಿ ಸಿದ್ದರಾಮಯ್ಯ
ಇದು ಕವಿತೆಯಲ್ಲ ಸಂಗಾತಿಗಳೇ
ಬೇಸರಿಸಿಕೊಳ್ಳಬೇಡಿ.
ನಾನು ಕವಿತೆ ಬರೆಯುವುದ ಬಿಟ್ಟು
ಬಹಳ ಕಾಲವಾಯಿತು.
ನಾವು ಪ್ರಜಾಪ್ರಭುತ್ವದ ಪ್ರಜೆಗಳು
ಇಡುವ ಹೆಜ್ಜೆಗಳ ಅರಿಯದ ಕುರಿಗಳು
ವರ್ಣಪ್ರಭುತ್ವ ಆರ್ಭಟಿಸುತ್ತಿದೆ
ಪ್ರಜಾಪ್ರಭುತ್ವ ದನಿಉಡುಗಿದೆ.
ಸಂಗಾತಿಗಳೇ ಇದು ನಿಜದಿ ಕವಿತೆಗಳ ಕಾಲ
ಆದರೂ ಕವಿತೆ ಬರೆಯಲಾರೆ ನಾನು
ಕಾರಣ ರೂಪಕಗಳು ಸತ್ತಿವೆ
ಭಾಷೆಯನ್ನು ಭ್ರಷ್ಟಗೊಳಿಸಲಾಗಿದೆ.
ಸುಳ್ಳುಗಳು ಮೆರವಣಿಗೆ ಹೊರಟಿವೆ
ಸತ್ಯದ ಬಾಯಿಗೆ ಬೀಗ ಜಡಿಯಲಾಗಿದೆ.
ಮನುಷ್ಯರು ಮನೆಯಿಂದ ಹೊರಗೆ ಬರುತ್ತಿಲ್ಲ
ಹಾದಿ ಬೀದಿಗಳಲ್ಲಿ ಮತಾಂಧ ಮಚ್ಚುಗಳು.
ಎಲ್ಲಿ ನೋಡಿದರೂ ಅವರದೇ ಅಬ್ಬರ
ಉಳಿಗಾಲವಿಲ್ಲ ಅಳಿಯದಿದ್ದರೆ ಇವರ ಉಬ್ಬರ
ಅದಕ್ಕೆ ಎರಡು ಸೂತ್ರ ಎರಡು ಮಾತು
ಶ್ರೇಷ್ಠರಿಗೆ ಒಂದು ಕನಿಷ್ಠರಿಗೆ ಮತ್ತೊಂದು.
ಉತ್ತಮ ಕುಲದಲ್ಲಿ ಹುಟ್ಟಿದ್ದೇ
ಕಷ್ಟದ ಹೊರೆ ಎಂದರು ಅಣ್ಣ.
ಮೈಸೂತಕ ಮನಸೂತಕ
ಬೇಡ ಇದು ವರ್ಣಪಾತಕ ನರಕ.
ಮಾದರ ಹೊಲೆಯರ ಮಗ ಮಗಳ
ಸಂಗಕ್ಕೆ ಹುಟ್ಟಿದ ಶಿಶುವಾದರು ಅಣ್ಣ
ಸಂಗನ ಸಾಕ್ಷಿಯಾಗಿ ಶ್ರೇಷ್ಠತೆಯ ಕೊಳಚೆ
ಕಳಕೊಂಡರು ಸಂಗನ ಬಸವಣ್ಣ.
ಜಾತಿ ಶ್ರೇಷ್ಠ ಧರ್ಮ ಶ್ರೇಷ್ಠ ವ್ಯಸನಿಗರ
ಕುರಿತು ಬೇಡ ಕೋಪ ಬೇಡ ತಾಪ
ಕಾರಣ ಅವರು ಮಾನಸಿಕ ರೋಗಿಗಳು
ಕನಿಕರಿಸಿ ಅದಕೆ ಎಂದರು ಅಂಬೇಡ್ಕರ್.
ಅಸ್ಪೃಶ್ಯನಾಗಿ ಹುಟ್ಟಿದರೂ
ಎದೆಗೆ ಬಿದ್ದ ಅಕ್ಷರದಲ್ಲಿ
ಅರಿವಿನ ಗುರುವಾದರು.
ಸ್ವಾಭಿಮಾನಿ ಬಿತ್ತವಾದರು ಭೀಮ.
ವರ್ಣಭಾರತಕ್ಕೆ ಸರ್ವಸಮಾನತೆಯ
ಸಂವಿಧಾನವನಿತ್ತ ಶಿಲ್ಪಿಯಾದರು ಭೀಮ
ಬಹುತ್ವ ಭಾರತದಲ್ಲಿ ಶ್ರೇಷ್ಠತೆಯ
ಕೊಳಚೆ ಕರಗಲಿ.
ಮನುಷ್ಯರು ಒಡಮೂಡಿ ಬರಲಿ.
ಕನಿಷ್ಠರ ಎದೆಯ ಕೀಳರಿಮೆ ಭಸ್ಮವಾಗಲಿ
ಸ್ವಾಭಿಮಾನಶೀಲರು ಕೂಡಿ ಬಾಳಲಿ.
0 ಪ್ರತಿಕ್ರಿಯೆಗಳು