
ರಾಜೀವ ನಾರಾಯಣ ನಾಯಕ
ಭಾವನೆಗಳ ಸಂತೆಯಲ್ಲಿ ಬೆತ್ತಲಾಗಿದೆ ಬದುಕು
ಮೂಟೆಗಟ್ಟಿದ ಮನಸೂ ವಿಕ್ರಿಗೆ ಬಿಚ್ಚಲೇ ಬೇಕು
ಸಿಕ್ಕಷ್ಟೇ ಬೆಲೆ-ನೆಲೆ ಕಟ್ಟಲಾಗದು ಕೆಲವೊಮ್ಮೆ
ಲೇಲೋ ಭೈ ಖಾಲಿ ಕರ್ನೇ ಕಾ ಭಾವ್ ಮೆ!
ಸೋವಿ ಕೊತ್ತಂಬರಿ ಸೊಪ್ಪು ನಾಲ್ಕೇ ಮೆಣಸು
ಕೊಚ್ಚಿ ಈರುಳ್ಳಿ ಇಗೋ ನಂಜಿಕೊಳ್ಳಿ, ಕನಸು
ತ್ವರೆಮಾಡಿ ಸಾರ್ ಜಾಗತಿಕರಣ ಜೋರಾಗಿದೆ
ಎದೆಗಂಟದ ಪ್ರೀತೀಲಿ ರುಚಿಗಿಚಿ ಹುಡುಕೋದೆ?
ಮಳೆಹನಿಯಲ್ಲಿ ಕೊಯ್ದಿಟ್ಟ ಅವಳ ಪಾದಗಳು
ಎದೆಸೀಳಿ ಮಿಸುಕಾಡುವ ಅವನ ಕವನಗಳು
ಹೆಚ್ಚಿಟ್ಟ ಭಗ್ನ ಹೃದಯಗಳಿವೆ ತಾಜಾತಾಜಾ
ಲೇಲೋ ಭೈ, ಭಾವ್ ಹೈ ಖಾಲಿ ಕರ್ನೇಕಾ!
“ವಿರಹದ ಸಂತೆಯಲ್ಲಿ ಒಲವಿನ ಮಾರಾಟ!?
ಕಾವ್ಯಕ್ಕೂ ಕಟುಕರಂಗಡಿಯ ಪ್ರಾಸ? ಅಕಟಕಟ”
ಹೀಗೆಲ್ಲ ಕೊರಗದಿರಿ ಸ್ವಾಮಿ, ಟೈಮು ವೇಸ್ಟುರಿ
ಫೇಸ್ಬುಕ್ ಟ್ವಿಟರು ವಾಟ್ಸಾಪ್ ಮೋಡೀರಿ!
ತೀರಿದ ಸಂತೆಯಲ್ಲೀಗ ಕವಿ ಮತ್ತು ಜಾಡುವಾಲಿ
ಕವಿಯ ಭಾವಹತಾರುಗಳ ಝಾಡಿಸಿ ಶೂನ್ಯದಲ್ಲಿ
ಕಸದಲ್ಲೆಸೆದ ನಕ್ಷತ್ರಗಳಿಂದ ಸ್ಖಲಿಸಿದನು ಸೂರ್ಯ
ವಾಸ್ತವ-ಕನಸುಗಳ ಅವಸರದ ಸುರತವೆ ಕಾವ್ಯ!





superb ☺