ಎತ್ತಣಿಂದೆತ್ತ ಸಂಬಂಧವಯ್ಯಾ!
ಮೂಲತಃ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹಿತ್ತಲಪುರವೆಂಬ ಕುಗ್ರಾಮದವನಾದ ನನಗೂ ದೂರದ ಮಲೆನಾಡಿನ ಕುಪ್ಪಳಿಗೂ ಯಾವ ಸಂಬಂಧ?
ಬಾಲ್ಯವನ್ನು ಹಳ್ಳಿಯಲ್ಲಿ ಕಳೆದು, ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಗಿಸಿ, ಅಲ್ಲೇ ಉನ್ನತ ನೌಕರಿ ಹಿಡಿದು ಜಂಜಾಟದ ಜೀವನ ಸಾಗಿಸಿ, ಕನ್ನಡ ವಿಶ್ವವಿದ್ಯಾಲಯದ ಹುಟ್ಟಿನೊಂದಿಗೆ ಬಳ್ಳಾರಿಯ ಗಣಿದೂಳಿನ ಪರಿಸರವನ್ನು ಅಪ್ಪಿಕೊಂಡು, ಇದೀಗ ಆಕಸ್ಮಿಕ ಎನ್ನುವಂತೆ ಕುಪ್ಪಳಿಯ ಕುವೆಂಪು ಅಧ್ಯಯನ ಕೇಂದ್ರಕ್ಕೆ ಬಂದು ನಿಂತಿದ್ದೇನೆ!
ಹಾಗೆ ನೋಡಿದರೆ ಕುಪ್ಪಳಿಯ ಪರಿಸರ ನನಗೆ ಹೊಸದೇನೂ ಅಲ್ಲ. ನನ್ನ ವಿದ್ಯಾರ್ಥಿ ದಿಸೆಯಿಂದಲೂ ಕುವೆಂಪು ಬರೆಹವನ್ನು ಹಚ್ಚಿಕೊಂಡು ಓದಿದವನು. ಕನ್ನಡ ಎಂ.ಎ. ನಲ್ಲಿ ಕುವೆಂಪು ಪತ್ರಿಕೆಗೆ ರಾಜರತ್ನಂ ಚಿನ್ನದ ಪದಕ ಪಡೆದ ಹೆಗ್ಗಳಿಕೆ ನನ್ನದು. ಆ ಅಭಿಮಾನದಿಂದಲೇ ಹಲವು ಬಾರಿ ಕುಪ್ಪಳಿಗೆ ಬಂದು ಹೋಗಿದ್ದೆ. ಮೈಸೂರಿನಲ್ಲಿ ಕುವೆಂಪು ಅವರನ್ನು ಎರಡು ಬಾರಿ ಭೇಟಿ ಮಾಡಿಯೂ ಬಂದಿದ್ದೆ.
ಕಾಡು ಮೇಡುಗಳನ್ನು ಹಚ್ಚಿಕೊಂಡು ಮೂರು ದಶಕಗಳ ಕಾಲ ಇಡೀ ಪಶ್ಚಿಮ ಘಟ್ಟ ಮತ್ತು ಕರಾವಳಿಯ ವನಪ್ರದೇಶಗಳನ್ನು ಅಲೆದಾಡಿದ್ದೆ. ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕನಾಗಿ ಮತ್ತಷ್ಟು ಅಲೆಯುವ ಸುಯೋಗವೂ ನನಗೆ ಲಭಿಸಿತ್ತು. ಆದರೆ ನನ್ನ ನೆಚ್ಚಿನ ಕವಿಯ ದೇಹ ಮಿಲನವಾದ ಈ ಮಣ್ಣಿನಲ್ಲಿ ಕಾಯಕ ಮಾಡುವ ಸುಯೋಗವೊಂದು ಲಭಿಸುತ್ತದೆ ಎಂದು ನಾನು ಎಂದೂ ಎಣಿಸಿರಲಿಲ್ಲ.
‘ಕನ್ನಡ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯೂ ಸೇರಿದಂತೆ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ ನೀನು ಕುಪ್ಪಳಿಯ ಪುಟ್ಟ ಕೇಂದ್ರದಲ್ಲಿ ಮಾಡುವುದಾದರೂ ಏನು? ಯಾಕೆ ಇಂಥ ಮೂರ್ಖ ನಿರ್ಧಾರ?’ ಎಂದು ಛೇಡಿಸಿ ಹೀಗೆಳೆದ ಮಿತ್ರರೂ ಉಂಟು.
ಆ ಮಹಾ ಕಾಡಿನಲ್ಲಿ ಒಬ್ಬನೇ ಹೇಗೆ ಇರುತ್ತೀಯಾ ಎಂದು ಹೆದರಿಸಿದವರೂ ಉಂಟು. ಊಟ ತಿಂಡಿ ಇಲ್ಲದೆ ಆರೋಗ್ಯ ಹಾಳು ಮಾಡಿಕೊಳ್ಳುತ್ತೀಯಾ ಎಂದು ಎಚ್ಚರಿಸಿದ ಹೆಂಡತಿಯ ಮಾತನ್ನೂ ಬದಿಗೆ ತಳ್ಳಿ, ಕನ್ನಡ ವಿಶ್ವವಿದ್ಯಾಲಯದ ಪುಟ್ಟ ಅಧ್ಯಯನ ತಾಣ ‘ಕುವೆಂಪು ಅಧ್ಯಯನ ಕೇಂದ್ರ’ದ ಹೊಣೆ ಹೊತ್ತು ಹೊರಟು ಬಿಟ್ಟಿದ್ದೆ.
ಕಾಕತಾಳಿಯವೋ ಎಂಬಂತೆ ಕುಪ್ಪಳಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಕೇಂದ್ರ ಸ್ಥಾಪನೆ ಹಿಂದೆ ನನ್ನ ಒತ್ತಾಸೆಯೂ ಇತ್ತು. ಪ್ರಥಮ ಕುಲಪತಿ ಕಂಬಾರರ ನಂತರ ಬಂದ ಕುಲಪತಿ ಕಲಬುರ್ಗಿ ಅವರು ಕುವೆಂಪು ಮತ್ತು ಬೇಂದ್ರೆ ಅವರ ಸಮಗ್ರ ಸಾಹಿತ್ಯವನ್ನು ಕನ್ನಡ ವಿಶ್ವವಿದ್ಯಾಲಯದಿಂದ ಹೊರತರಬೇಕೆಂದು ಆಸೆಪಟ್ಟಿದ್ದರು.
ಮೊದಲು ಬೇಂದ್ರೆಯವರ ಮಗನನ್ನು ಒಪ್ಪಿಗೆ ನೀಡುವಂತೆ ಕೇಳಿದರು. ಆದರೆ ಅವರು ಒಪ್ಪಲಿಲ್ಲ. ಕುವೆಂಪು ಸಾಹಿತ್ಯ ಪ್ರಕಟಣೆಗಾಗಿ ಒಪ್ಪಿಗೆಯನ್ನು ಪೂರ್ಣಚಂದ್ರ ತೇಜಸ್ವಿ ಮತ್ತು ತಾರಿಣಿ ಅವರನ್ನು ಭೇಟಿ ಮಾಡಿ ಕೇಳಬೇಕಾಗಿತ್ತು. ಖಂಡತುಂಡ ಅಭಿಪ್ರಾಯದ ತೇಜಸ್ವಿ ಏನನ್ನುತ್ತಾರೋ ಎಂಬ ಭಯ. ಯಾಕೆಂದರೆ ಈ ಹಿಂದೆ ಅಂಥ ಅನುಭವವೊಂದು ನಮಗೆ ಆಗಿತ್ತು. ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ‘ನಾಡೋಜ’ ಪದವಿಯನ್ನು ಅವರಿಗೆ ನೀಡಬೇಕೆಂದು ತೀರ್ಮಾನಿಸಿ, ಅವರನ್ನು ಒಪ್ಪಿಸಲು ಡಾ. ಕಲಬುರ್ಗಿಯವರು ನನ್ನನ್ನೂ ಹಾಗೂ ಡಾ. ಕರೀಗೌಡ ಬೀಚನಹಳ್ಳಿ ಅವರನ್ನು ಕಳಿಸಿದ್ದರು.
ಆಗ ಇಂಥ ಪದವಿಗಳು ನನಗೆ ಬೇಡವೇ ಬೇಡ, ನನಗೆ ಬಿಡುವಾದಾಗ ನಾನೇ ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದು ನಿಮ್ಮೆಲ್ಲರೊಡನೆ ಕುಂತು ಹರಟುತ್ತೇನೆಯೇ ಹೊರತು, ಈ ಪದವಿ ಗಿದವಿ ಅಂತ ಬಂದರೆ ಇನ್ನು ಮುಂದೆ ನಿಮ್ಮನ್ನು ಮೂಡಿಗೆರೆಗೆ ತಲೆಹಾಕದಂತೆ ಮಾಡುತ್ತೇನೆ ಎಂದು ಬೈದು ಕಳಿಸಿದ್ದರು.
ಆದರೂ ಕುವೆಂಪು ಸಮಗ್ರ ಸಾಹಿತ್ಯವನ್ನು ಪ್ರಕಟಿಸುವ ಹಂಬಲ ಹೊತ್ತು ಮತ್ತೆ ನನ್ನನ್ನೇ ಕಳಿಸಿದ್ದರು. ಕನ್ನಡ ವಿಶ್ವವಿದ್ಯಾಲಯದ ಡೀನ್ ಆಗಿದ್ದ ನಾನು ಅತ್ಯಂತ ದೀನನಾಗಿ, ನಮ್ಮ ಪ್ರಸಾರಾಂಗದ ಆಗಿನ ನಿರ್ದೇಶಕರಾಗಿದ್ದ ಪ್ರೊ. ಎ.ವಿ. ನಾವಡ ಅವರನ್ನು ಕರೆದುಕೊಂಡು ಮೂಡಿಗೆರೆ ಹೊರಟಿದ್ದೆ.
ನಾವು ಬರುವ ವಿಷಯವನ್ನು ಮೊದಲೇ ಫೋನ್ನಲ್ಲಿ ತಿಳಿಸಿದ್ದೆನಾದ್ದರಿಂದ ತೇಜಸ್ವಿಯವರು ಸಹಜವಾಗಿಯೇ ಸ್ವಾಗತಿಸಿದರು. ಅದೂ ಇದೂ ಮಾತನಾಡಿ ಕುವೆಂಪು ಸಮಗ್ರ ಕೃತಿ ಪ್ರಕಟಣೆಯ ವಿಚಾರಕ್ಕೆ ಬಂದಾಗ ತಟ್ಟನೇ ಗಂಭೀರವಾಗಿ, ಮುಖ ಬಿಗಿ ಮಾಡಿಕೊಂಡು, ತಮ್ಮ ಎಂದಿನ ಶೈಲಿಯಲ್ಲಿ ಎಡಗೈ ಹಸ್ತವನ್ನು ನನ್ನ ಮೂತಿಗೆ ನೇರವಾಗಿ ತೋರಿಸುತ್ತಾ ‘ನೀವು ಇದ್ದೀರಲ್ಲ, ಯೂನಿವರ್ಸಿಟಿಯವರು, ಮಹಾ ತರ್ಲೆಗಳು ಮಾರಾಯ, ನಿಮ್ಮ ಯೂನಿವರ್ಸಿಟಿಗಳ ಸಹವಾಸವೂ ಬ್ಯಾಡ, ಪ್ರೊಫೆಸರ್ಗಳ ಸಹವಾಸ ಮೊದಲೇ ಬ್ಯಾಡ’ ಎಂದು ಹೂಂಕರಿಸಿದರು!
ಸನ್ನಿವೇಶ ಒಮ್ಮೆಲೇ ಗಂಭೀರವಾಯಿತು. ಐದು ನಿಮಿಷ ಮೌನ. ಅಷ್ಟರಲ್ಲಿ ಶ್ರೀಮತಿ ರಾಜೇಶ್ವರಿ ಅವರು ಕಾಫಿ ತಂದರು. ಮತ್ತೆ ತಣ್ಣನೆ ವಾತಾವರಣಕ್ಕೆ ಹಿಂತಿರುಗಿ ‘ಕಾಫಿ ಕುಡೀರಿ ಮೊದ್ಲು ಆಮೇಲೆ ನೋಡೋಣ’ ಎಂದು ಹೇಳಿ ಮಾಮೂಲಿ ಮಾತಿಗೆ ಶುರು ಮಾಡಿದರು.
ತಮ್ಮ ಪುಸ್ತಕ ಪ್ರಕಾಶನದ ಹೊಣೆ, ಅದರ ಕಷ್ಟ ಸುಖಗಳು, ಇಡಬೇಕಾದ ಬೆಲೆ, ಸರ್ಕಾರದ ಖರೀದಿಯ ಅವ್ಯವಹಾರ ಇತ್ಯಾದಿ ಮಾತುಕತೆಗಳು ನಡೆದವು. ನಡುನಡುವೆ ವಿಶ್ವವಿದ್ಯಾಲಯದ ಪ್ರಸಾರಾಂಗಗಳು ಹಾಗೂ ಆಡಳಿತಗಳು ಕುಲಗೆಟ್ಟು ಹೋಗಿರುವ ಬಗ್ಗೆ ಖಾರವಾಗಿ ಪ್ರಸ್ತಾಪಿಸುತ್ತಾ ಬೈದದ್ದೂ ಆಯಿತು.
ನಾವು ನಮ್ಮ ಕೆಲವು ಪ್ರಕಟಣೆಗಳನ್ನು ಅವರಿಗೆ ತೋರಿಸುವುದಕ್ಕಾಗಿಯೇ ತೆಗೆದುಕೊಂಡು ಹೋಗಿದ್ದೆವು. ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಅದುವರೆಗೆ ಪ್ರಕಟಿಸಿದ್ದ ಪುಸ್ತಕಗಳು ಮತ್ತು ಅವುಗಳ ಗುಣಮಟ್ಟ ಹಾಗೂ ಸುಂದರ ವಿನ್ಯಾಸ ಇವುಗಳ ಬಗ್ಗೆ ನಮಗೆ ಹೆಮ್ಮೆ ಇತ್ತು. ಬಹುಶಃ ತೇಜಸ್ವಿಯವರು ಇದೆಲ್ಲವನ್ನು ಮೊದಲಿನಿಂದಲೂ ಗಮನಿಸಿಕೊಂಡೇ ಬಂದಿದ್ದರು ಎಂದು ಕಾಣಿಸುತ್ತದೆ. ಆದ್ದರಿಂದಲೇ ನಮ್ಮ ಪ್ರಸಾರಾಂಗದ ವಿಚಾರ ಬಂದಾಗ ಅವರು ಮೆದುವಾಗುತ್ತಿದ್ದರು.
ಅಂತೂ ಅನೇಕ ಷರತ್ತುಗಳ ನಡುವೆ ಮತ್ತು ಪುಸ್ತಕಗಳ ಗುಣಮಟ್ಟ ಮತ್ತು ವಿನ್ಯಾಸದ ಹೊಣೆಯನ್ನು ಅವರಿಗೇ ವಹಿಸಿದ ನಂತರ ನಮ್ಮ ಹಾದಿ ಸುಗಮವಾಯಿತು. ಮೊದಲ ಹಂತದಲ್ಲಿ ಕುವೆಂಪು ಅವರ ಸಮಗ್ರ ಕಾವ್ಯ ಪ್ರಕಟಿಸುವುದೆಂದು ತೀರ್ಮಾನವಾಯಿತು.
ಸಮಗ್ರ ಕಾವ್ಯದ ಸಂಪಾದನಾ ಕಾರ್ಯವನ್ನು ಯಾರಿಗೆ ವಹಿಸಬೇಕು ಎಂಬ ಜಿಜ್ಞಾಸೆ ಬಂದಾಗ ನಮ್ಮ ವಿಶ್ವವಿದ್ಯಾಲಯದಲ್ಲಿ ನವೋದಯದ ಸಾಹಿತಿಗಳ ಬಹುತೇಕ ಹಳೇ ಪುಸ್ತಕಗಳನ್ನು ಸಂಗ್ರಹಿಸಿಡುವ ಹಾಗೂ ಸಾಧ್ಯವಿದ್ದಲ್ಲಿ ಮೊದಲ ಆವೃತ್ತಿಗಾಗಿ ಹುಡುಕಾಡಿ ಆ ಪ್ರತಿಯನ್ನು ಹೇಗೋ ಸಂಪಾದಿಸುತ್ತಿದ್ದ ಉತ್ತಮ ಹವ್ಯಾಸದ ಡಾ. ಕೆ.ಸಿ. ಶಿವಾರೆಡ್ಡಿಯವರೇ ಇದಕ್ಕೆ ಸೂಕ್ತ ಎಂದು ನಾನು ಡಾ. ಕಲಬುರ್ಗಿಯವರಿಗೆ ಸಲಹೆ ನೀಡಿದೆ. ಅವರೂ ನನ್ನ ಪ್ರಸ್ತಾವವನ್ನು ಒಪ್ಪಿದರು. ಶಿವಾರೆಡ್ಡಿಯವರೂ ಸಂತೋಷದಿಂದ ಕಾರ್ಯ ಆರಂಭಿಸಿದರು.
ಆದರೆ ಈ ಕೆಲಸವನ್ನು ತೇಜಸ್ವಿಯವರ ಜೊತೆಗೂಡಿ ಕುಂತು ಮಾಡಬೇಕಿತ್ತಾದ್ದರಿಂದ ಶಿವಾರೆಡ್ಡಿಯವರನ್ನು ಅವರಿಗೆ ಪರಿಚಯಿಸಿಕೊಡಬೇಕಿತ್ತು. ತೇಜಸ್ವಿಯವರಿಗೆ ಶಿವಾರೆಡ್ಡಿಯವರನ್ನು ಪರಿಚಯಿಸಿಕೊಟ್ಟಾಗ ಒಂದು ತಮಾಷೆಯ ಘಟನೆ ನಡೆಯಿತು. ತೇಜಸ್ವಿಯವರನ್ನು ದೂರದಿಂದ ಮಾತ್ರ ನೋಡಿದ್ದ ಶಿವಾರೆಡ್ಡಿ ಅವರ ಎಲ್ಲ ಪುಸ್ತಕಗಳನ್ನು ಓದಿಕೊಂಡಿದ್ದರು. ಆದರೂ ಅತ್ಯಂತ ಭಯ-ಭಕ್ತಿ ಗೌರವಗಳಿಂದ ಅವರನ್ನು ನೋಡಲು ಉತ್ಸಾಹದಿಂದ ನನ್ನೊಡನೆ ಹೊರಟರು.
ಮೂಡಿಗೆರೆಯಲ್ಲಿ ಬಸ್ಸಿಳಿದಾಗ ನಾಲ್ಕು ಪಾಕೆಟ್ ’ಗುಡ್ ಡೇ’ ಬಿಸ್ಕೆಟ್ಗಳನ್ನು ಕೊಂಡುಕೊಂಡು ತೇಜಸ್ವಿಯವರ ತೋಟದ ಗೇಟು ಸರಿಸಿ ಒಂದಷ್ಟು ದೂರ ನಡೆದು ಮನೆಗೆ ಪ್ರವೇಶಿಸಿದಾಗ ಶ್ರೀಮತಿ ರಾಜೇಶ್ವರಿ ಅವರು ಬಾಗಿಲು ತೆಗೆದು ಒಳಗೆ ಕೂರಿಸಿದರು. ತೋಟದ ಒಳಗೆಲ್ಲೋ ಕಾರ್ಯಮಗ್ನರಾಗಿದ್ದ ತೇಜಸ್ವಿ ಹತ್ತು ನಿಮಿಷದಲ್ಲಿ ಬಂದರು. ಶಿವಾರೆಡ್ಡಿಯನ್ನು ಅವರಿಗೆ ಪರಿಚಯಿಸಿ ಇವರೇ ಸಮಗ್ರ ಕಾವ್ಯದ ಸಂಪಾದಕರು ಎಂದಾಗ, ಕುರುಚಲು ಗಡ್ಡ ಬಿಟ್ಟು, ಒರಟೊರಟಾಗಿ, ಮೇಲ್ನೋಟಕ್ಕೆ ಮಹಾನ್ ಕುಡುಕನಂತೆಯೂ, ಉಡಾಳನ ರೀತಿಯಲ್ಲೂ ಕಾಣುತ್ತಿದ್ದ ರೆಡ್ಡಿಯನ್ನು ಅಪಾದ ಮಸ್ತಕ ಗಮನಿಸಿ ಸುಮ್ಮನೆ ಕೂತರು. ಈ ವ್ಯಕ್ತಿ ಏನು ಮಾಡಬಲ್ಲ ಎಂಬ ಅನಾದರ ಅವರಿಗೆ.
ಯಾವ ಪ್ರತಿಕ್ರಿಯೆಯನ್ನು ನೀಡದೆ ಸುಮ್ಮನೆ ಕುಳಿತಿದ್ದ ತೇಜಸ್ವಿಯವರನ್ನು ನಾನೇ ಮಾತಿಗೆಳೆದೆ. ಆದರೂ ಅವರಲ್ಲಿ ಮಾತಿನ ಉತ್ಸಾಹ ಕುದುರಲಿಲ್ಲ. ಅಷ್ಟರಲ್ಲಿ ರೆಡ್ಡಿ ಕುವೆಂಪುರವರ ಸುಮಾರು ಕವನ ಸಂಗ್ರಹಗಳ ಮೊದಲ ಆವೃತ್ತಿಯನ್ನು ಸಂಗ್ರಹಿಸಿರುವುದಾಗಿ ತಿಳಿಸಿ ಒಂದೊಂದೇ ಪ್ರತಿಯನ್ನು ತಮ್ಮ ಬತ್ತಳಿಕೆಯಿಂದ ತೆಗೆಯತೊಡಗಿದರು. ಅಷ್ಟರವರೆಗೆ ನೀರಸವಾಗಿ ಕುಳಿತಿದ್ದ ತೇಜಸ್ವಿಯವರಿಗೆ ಒಮ್ಮೆಲೇ ಉತ್ಸಾಹ ಮೂಡಿದಂತಾಯಿತು. ಕಣ್ಣುಗಳನ್ನು ಅರಳಿಸಿ ಆ ಕೃತಿಗಳ ಮುಖಪುಟವನ್ನೂ, ಅವುಗಳನ್ನು ಸಂಗ್ರಹಿಸಿದ ರೆಡ್ಡಿಯ ಒರಟು ಮುಖವನ್ನೂ ಕುತೂಹಲದಿಂದ ನೋಡತೊಡಗಿದರು. ರೆಡ್ಡಿಯ ಬತ್ತಳಿಕೆಯಿಂದ ಹೊರಬಿದ್ದ ಮೊದಲ ಮುದ್ರಣದ ಅಪೂರ್ವ ರಕ್ಷಾಪುಟಗಳು ಹಾಗೂ ಸಂಕಲನಗಳನ್ನು ಮತ್ತೆ ಮತ್ತೆ ನೋಡುತ್ತಾ ಅದೇ ಕ್ಷಣದಲ್ಲಿ ಶಿವಾರೆಡ್ಡಿಯ ಅಭಿಮಾನಿಯಾಗಿ ಮಾರ್ಪಟ್ಟರು!
ಮಾತುಕತೆ ಊಟ ಎಲ್ಲವೂ ಆದನಂತರ ಸ್ವತಃ ತಾವೇ ಡ್ರೈವ್ ಮಾಡಿಕೊಂಡು ಬಂದು ಮೂಡಿಗೆರೆಯ ಬಸ್ ಸ್ಟಾಪ್ನಲ್ಲಿ ಬಿಟ್ಟರು. ಶಿವಾರೆಡ್ಡಿ ಎಷ್ಟು ಭಾವುಕರಾಗಿದ್ದರೆಂದರೆ ಕನ್ನಡದ ಸಮರ್ಥ ಲೇಖಕನ ಸಾನಿಧ್ಯ ದೊರೆತ ಖುಷಿಯಲ್ಲಿ ತೇಜಸ್ವಿಯವರ ಬಹುಕಾಲದ ಪರಿಚಿತನಂತೆ ಹಾಗೂ ನವೋದಯ ಕಾಲದಲ್ಲೇ ಬದುಕಿದ್ದ ಒಬ್ಬ ಪುಸ್ತಕ ಪರಿಚಾರಕನಂತೆ ಉದ್ದುದ್ದ ಭಾಷಣ ಹೊಡೆದು ತೇಜಸ್ವಿಯವರನ್ನು ಮರಳುಗೊಳಿಸಿದ್ದರು.
ಬಸ್ಸ್ಟ್ಯಾಂಡಿಗೆ ಬಿಟ್ಟು ಹಿಂತಿರುಗುವಾಗ ರೆಡ್ಡಿ ತಮ್ಮ ಬ್ಯಾಗಿನಿಂದ ಪುಸಕ್ಕನೆ ಎರಡು ಗುಡ್ ಡೇ ಬಿಸ್ಕೆಟ್ ಪ್ಯಾಕೆಟ್ ತೆಗೆದು ತೇಜಸ್ವಿ ಅವರಿಗೆ ಕೊಡಹೋದರು. ರೆಡ್ಡಿಯ ಈ ವರ್ತನೆ ಅತ್ಯಂತ ಮುಗ್ಧವಾಗಿತ್ತು. ಮಗುವಿನ ಮನಸ್ಸಿತ್ತು. ಎಷ್ಟು ಭಾವುಕರಾಗಿದ್ದರೆಂದರೆ ತನ್ನ ಪ್ರೀತಿಯ ಸಂಕೇತವಾಗಿ ಏನಾದರೂ ಕೊಡಬೇಕು ಅನಿಸಿಬಿಟ್ಟಿತ್ತು. ಆದರೆ ತೇಜಸ್ವಿಯರು ಅದನ್ನು ನಯವಾಗಿ ನಿರಾಕರಿಸಿದರು. ರೆಡ್ಡಿ ಬಿಡಲಿಲ್ಲ ‘ಇಲ್ಲ ತಗೊಳ್ಳಿ ಸಾರ್ ಇದು ಮೊದಲ ಭೇಟಿ, ನೀವು ತಗೊಳ್ಳಲೇ ಬೇಕು’ ಎಂದು ಮಗುವಿನಂತೆ ಹಠ ಹಿಡಿದರು.
ರೆಡ್ಡಿಯ ವರ್ತನೆ ತಮಾಷೆಯಾಗಿ ಕಂಡರೂ ಅವರು ಅತ್ಯಂತ ನಯವಾಗಿ ‘ಬೇಡ ಮಾರಾಯ, ಬಸ್ನಲ್ಲಿ ಪ್ರಯಾಣ ಮಾಡುವವ ನೀನು, ನೀನು ಇಟ್ಕೋ’ ಎಂದರೂ ರೆಡ್ಡಿ ಕೇಳದೆ ಚಂಡಿ ಹಿಡಿದು ‘ಇಲ್ಲ ಸರ್ ತಗೊಳ್ಳೇಬೇಕು’ ಎಂದರು. ನನಗೋ ಗಾಬರಿ, ಎಲ್ಲಿ ತೇಜಸ್ವಿ ಸಿಟ್ಟುಗೊಂಡು ರೇಗಾಡಿ ‘ಈ ಹಟಮಾರಿ ಸಂಪಾದಕನಾಗಕೂಡದು’ ಎಂದು ಬೈದು ನಮ್ಮ ಒಪ್ಪಂದವನ್ನು ರದ್ದು ಮಾಡಿ ಬಿಡುತ್ತಾರೋ ಎಂದು.
ಆದರೂ ತೇಜಸ್ವಿಯವರು ಅತ್ಯಂತ ತಾಳ್ಮೆಯಿಂದ ಬಿಸ್ಕೆಟ್ ತೆಗೆದುಕೊಂಡು ಐದು ನಿಮಿಷ ಮಾತಾಡಿದ ನಂತರ ರೆಡ್ಡಿ ಕೈಗೆ ಮತ್ತೆ ಅದನ್ನು ವಾಪಸ್ ಕೊಟ್ಟು, ಬಸ್ಸಿನಲ್ಲಿ ತಿನ್ನಿ’ ಎಂದು ಬೀಳ್ಕೊಟ್ಟರು. ಆನಂತರದ ದಿನಗಳಲ್ಲಿ ರೆಡ್ಡಿ ಹೊಸಪೇಟೆ ಬೇಕರಿಯಿಂದ ಏನೇನೋ ತೆಗೆದುಕೊಂಡು ಹೋಗುವುದು, ತೇಜಸ್ವಿಯವರು ಮೂಡಿಗೆರೆ ಬೇಕರಿಯಿಂದ ‘ರಸ್ಕ್’ಗಳನ್ನು ಕೊಂಡು ಕೊಡುವುದು ಹೀಗೆ ಅವರಿಬ್ಬರ ವಿನಿಮಯ ನಡೆದೇ ಇತ್ತು. ಸಮಗ್ರ ಕಾವ್ಯ ಸಂಪಾದನೆಯ ಕೆಲಸ ತೇಜಸ್ವಿಯವರ ಮನೆಯಲ್ಲೇ ನಡೆಯುತ್ತಿತ್ತು. ನಾನೂ ಎರಡು ಮೂರು ಬಾರಿ ಮೂಡಿಗೆರೆಗೆ ಹೋಗಿ ಬಂದೆ. ಕುವೆಂಪು ಸಮಗ್ರ ಕಾವ್ಯದ ಎರಡು ಸಂಪುಟಗಳು ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟಗೊಂಡವು.
ಕಲ್ಬುರ್ಗಿಯವರ ನಂತರ ಪ್ರೊ. ಲಕ್ಕಪ್ಪಗೌಡ ಅವರು ಕುಲಪತಿಗಳಾಗಿ ಬಂದರು. ಆಗ ಮತ್ತೆ ಕುವೆಂಪುರವರ ಸಮಗ್ರ ಗದ್ಯ ಸಂಪುಟವನ್ನು ಹೊರತರಲು ತೀರ್ಮಾನಿಸಿ ತೇಜಸ್ವಿಯವರನ್ನು ಒಪ್ಪಿಸುವ ಕೆಲಸವನ್ನು ಮತ್ತೆ ನನಗೆ ಮತ್ತು ರೆಡ್ಡಿಯವರಿಗೆ ವಹಿಸಿದರು.
ಅಷ್ಟರಲ್ಲಿ ನಾನೇ ಪ್ರಸಾರಂಗದ ನಿರ್ದೇಶಕನಾಗಿ ಕಾರ್ಯಭಾರ ವಹಿಸಿಕೊಂಡಿದ್ದೆ. ಈ ಹೊತ್ತಿಗಾಗಲೇ ತೇಜಸ್ವಿಯವರ ಮಾನಸ ಪುತ್ರನಂತೆ ಆಗಿದ್ದ ಶಿವಾರೆಡ್ಡಿಯವರನ್ನು ಜೊತೆಯಲ್ಲಿ ಕರೆದುಕೊಂಡು ಮತ್ತೆ ಮೂಡಿಗೆರೆ ಬಸ್ಸು ಹತ್ತಿದೆ.
ಈ ಸಲ ಅವರನ್ನು ಒಪ್ಪಿಸಲು ಯಾವ ಕಷ್ಟವೂ ಆಗಲಿಲ್ಲ. ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಅತ್ಯುತ್ತಮ ಪ್ರಕಟಣೆಗಳನ್ನು ಜಾಗತಿಕ ಮಟ್ಟದಲ್ಲೂ ಹೊರತರುವ ಶಕ್ತಿ ಪಡೆದಿದೆ ಎಂಬುದು ಅವರಿಗೆ ಮನದಟ್ಟಾಗಿತ್ತು. ಅಲ್ಲದೆ ಶಿವಾರೆಡ್ಡಿ ಜೊತೆಗೆ ಇರುವಾಗ ಗದ್ಯ ಸಂಪುಟದ ಸಂಪಾದನೆ ಅಷ್ಟು ಕಷ್ಟವಲ್ಲ ಎಂಬುದೂ ಗೊತ್ತಿತ್ತು. ಅಲ್ಲದೆ ಸಮಗ್ರ ಕಾವ್ಯಕ್ಕೆ ಕನ್ನಡಿಗರಿಂದ ಬಂದ ಬೇಡಿಕೆ ಆಶ್ಚರ್ಯ ಹುಟ್ಟಿಸುವಂತಿತ್ತು. ಈ ಹಿನ್ನೆಲೆಯಲ್ಲಿ ತೇಜಸ್ವಿಯವರು ತಕ್ಷಣವೇ ಸಮಗ್ರ ಗದ್ಯ ಸಂಪುಟಗಳನ್ನು ತರಲು ಒಪ್ಪಿಕೊಂಡರು.
ಈ ನಡುವೆ ನಮ್ಮಲ್ಲಿ ಒಂದು ಹೊಸ ಆಲೋಚನೆ ಹುಟ್ಟಿತ್ತು. ಕುವೆಂಪುರವರ ಜನ್ಮ ಸ್ಥಳವಾದ ಕುಪ್ಪಳಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಕೇಂದ್ರವನ್ನು ತೆರೆದರೆ ಹೇಗೆ? ಈ ಬಗ್ಗೆ ಆಸಕ್ತರಾಗಿದ್ದ ಕುಲಸಚಿವರಾದ ಡಾ. ಕೆ.ವಿ. ನಾರಾಯಣ ಅವರೊಡನೆ ಮೊದಲು ಪ್ರಸ್ತಾಪ ಮಾಡಿ, ನಂತರ ಕುಲಪತಿ ಡಾ. ಲಕ್ಕಪ್ಪಗೌಡರಲ್ಲಿ ಪ್ರಸ್ತಾಪಿಸಿದೆವು. ಲಕ್ಕಪ್ಪಗೌಡರು ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ಕುಲಸಚಿವರಾಗಿ ಕೆಲಸ ಮಾಡಿದ್ದವರು. ಆ ಸಂದರ್ಭದಲ್ಲಿಯೇ ಕುಪ್ಪಳಿಯ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿಗಳಾಗಿ ಕೂಡ ಕೆಲಸ ಮಾಡಿದ್ದರು.
ಈ ಹಿಂದೆ ತೀರ್ಥಹಳ್ಳಿಯ ದೇವಂಗಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ಒಂದು ಕೇಂದ್ರವನ್ನು ಸ್ಥಾಪಿಸಿ, ಅದನ್ನು ಕ್ರಮವಾಗಿ ನಡೆಸಲಾಗದೆ ಮುಚ್ಚಿಹೋಗಿತ್ತು. ನಮ್ಮ ಮಾತು ಲಕ್ಕಪ್ಪಗೌಡರಿಗೆ ಹಿಡಿಸಿತು. ಕನ್ನಡ ವಿಶ್ವವಿದ್ಯಾಲಯದ ಕೇಂದ್ರವೊಂದನ್ನು ಸ್ಥಾಪಿಸುವುದು ನಮ್ಮ ಪರಮ ಕರ್ತವ್ಯ ಎಂಬಂತೆ ಅವರು ಪ್ರೋತ್ಸಾಹಿಸಿದರು. ಕೆ.ವಿ. ನಾರಾಯಣ ಅವರು ಕೂಡ ಅಷ್ಟೇ ಉತ್ಸಾಹದಿಂದ ಕಾರ್ಯೋನ್ಮುಖರಾದರು. ನಾವೆಲ್ಲ ಸೇರಿ ಮತ್ತೆ ತೇಜಸ್ವಿ ಅವರೊಡನೆ ಮಾತಾಡಿ ಅವರನ್ನು ಒಪ್ಪಿಸಿದೆವು.
ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಎನ್.ಡಿ. ವೆಂಕಟೇಶ್ ಅವರು ಈ ಕ್ರಮವನ್ನು ಸ್ವಾಗತಿಸಿದರು. ಅಲ್ಲಿನ ಚಟುವಟಿಕೆಗಳ ಕೇಂದ್ರ ಬಿಂದುವಾದ ಕ್ರಿಯಾಶೀಲ ವ್ಯಕ್ತಿತ್ವದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಸ್ಥಳದಾನವೂ ಮೊದಲ್ಗೊಂಡಂತೆ ಎಲ್ಲ ನೆರವನ್ನು ನೀಡಿ ಕನ್ನಡ ವಿಶ್ವವಿದ್ಯಾಲಯದ ಕೇಂದ್ರ ಅಸ್ತಿತ್ವಕ್ಕೆ ಬರಲು ಶ್ರಮಿಸಿದರು. ಆ ಕೇಂದ್ರದ ಜವಾಬ್ದಾರಿಯನ್ನು ಯಾರಿಗೆ ವಹಿಸಬೇಕು ಎಂಬ ಜಿಜ್ಞಾಸೆ ಉಂಟಾದಾಗ ಡಾ. ಶಿವಾರೆಡ್ಡಿ ಅವರನ್ನೇ ಮಾಡುವಂತೆ ಲಕ್ಕಪ್ಪಗೌಡರಲ್ಲಿ ನಾನು ಬಲವಾಗಿ ಪ್ರತಿಪಾದಿಸಿದೆ. ಇದಕ್ಕೆ ಕೆ.ವಿ. ನಾರಾಯಣ ಅವರ ಬೆಂಬಲವೂ ಇತ್ತು. ಕೊನೆಗೆ ಶಿವಾರೆಡ್ಡಿಯವರನ್ನು ಕೇಂದ್ರದ ಸಂಚಾಲಕರನ್ನಾಗಿ ಮಾಡಲು ನಿರ್ಣಯವಾಯಿತು.
ತಮ್ಮ ತನುಮನಗಳಲ್ಲಿ ಕುವೆಂಪು ಮತ್ತು ತೇಜಸ್ವಿಯವರನ್ನು ಆವಾಹಿಸಿಕೊಂಡಿದ್ದ ಶಿವಾರೆಡ್ಡಿಯವರು ತುಂಬ ಸಂತೋಷದಿಂದ ಆ ಜವಾಬ್ದಾರಿ ಹೊತ್ತುಕೊಂಡರು.
ಆರು ವರ್ಷಗಳ ಕಾಲ ಆ ಜವಾಬ್ದಾರಿಯನ್ನು ನಿರ್ವಹಿಸಿದ ಶಿವಾರೆಡ್ಡಿ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಹಂಪಿಗೆ ಹಿಂತಿರುಗಬೇಕಾಯಿತು. ಆ ಸಂದರ್ಭದಲ್ಲಿ ಯಾರನ್ನು ಕುಪ್ಪಳ್ಳಿಗೆ ಕಳಿಸಬೇಕು ಎಂಬ ಜಿಜ್ಞಾಸೆ ಉಂಟಾಯಿತು. ಆಗಿನ ಕುಲಪತಿ ಮುರಿಗೆಪ್ಪನವರು ಎಲ್ಲ ಅಧ್ಯಾಪಕರ ಗಮನಕ್ಕಾಗಿ ಒಂದು ಸುತ್ತೋಲೆ ಹೊರಡಿಸಿ ‘ಯಾರಾದರೂ ಕುಪ್ಪಳಿಯ ಕೇಂದ್ರಕ್ಕೆ ಹೋಗುವವರಿದ್ದರೆ ಸಂಪರ್ಕಿಸಬಹುದು’ ಎಂದು ಸೂಚನೆ ನೀಡಿದರು.
ಎಷ್ಟೋ ದಿನಗಳ ಕಾಲ ಯಾರೂ ಮುಂದೆ ಬರಲಿಲ್ಲ. ತದನಂತರ ಹಿರಿಯ ಪ್ರಾಧ್ಯಾಪಕರೊಬ್ಬರು ತಾವು ಹೋಗುವುದಾಗಿ ಅರ್ಜಿ ಕೊಟ್ಟರು. ಅವರನ್ನು ಕಳಿಸಲು ತೀರ್ಮಾನಿಸಿದ ನಂತರ ಆಗುವುದಿಲ್ಲ ಎಂದು ಬರೆದುಕೊಟ್ಟರು. ಮತ್ತೊಮ್ಮೆ ಜಿಜ್ಞಾಸೆ ಶುರುವಾಯಿತು. ಆಗ ಕಾರ್ಯಾರ್ಥವಾಗಿ ಬೆಂಗಳೂರಿನಲ್ಲಿದ್ದ ನನಗೆ ಮಾತನಾಡಿದ ಕುಲಪತಿ ಮುರಿಗೆಪ್ಪನವರು ನೀವು ಹೋಗುತ್ತಿರಾ? ಎಂದು ಕೇಳಿದರು. ನಾನು ತಕ್ಷಣವೇ ಒಪ್ಪಿಗೆ ಸೂಚಿಸಿದೆ.
ಡೀನ್ ಸಮಿತಿಯಲ್ಲಿ ತೀರ್ಮಾನಿಸಿ ನನ್ನನ್ನು ಕುಪ್ಪಳಿಗೆ ವರ್ಗಾಯಿಸಲಾಯಿತು. ನನ್ನ ಒಪ್ಪಿಗೆ ಅನೇಕರಿಗೆ ಆಶ್ಚರ್ಯ ತಂದಿತ್ತು. ಶಿವಾರೆಡ್ಡಿಯವರು ಮೊದಲು ಅಧ್ಯಾಪಕರಾಗಿದ್ದು, ನಂತರ ಪ್ರವಾಚಕರಾಗಿ ಬಡ್ತಿ ಪಡೆದಿದ್ದರು. ಅವರಿದ್ದ ಸ್ಥಾನಕ್ಕೆ ಕುಲಸಚಿವನಾಗಿ, ಹಂಗಾಮಿ ಕುಲಪತಿಯಾಗಿ ಕೆಲಸ ಮಾಡಿದವನು ಹೋಗಬಹುದೆ? ಇದು ನಿಮ್ಮ ಘನತೆಯನ್ನು ಕುಂದಿಸುತ್ತದೆ ಎಂದೂ ಕೆಲವರು ಹೇಳಿದರು.
ಕಳೆದ ಹದಿನೇಳು ವರ್ಷಗಳ ಕನ್ನಡ ವಿಶ್ವವಿದ್ಯಾಲಯದ ಒಡನಾಟದಲ್ಲಿ ಆತ್ಮೀಯರಾಗಿದ್ದ ಅನೇಕ ಸಹೋದ್ಯೋಗಿಗಳು ‘ನೀವು ಹೋಗಬೇಡಿ ಸಾರ್, ನಮಗೆಲ್ಲ ನೀವು ಬೇಕು ಇಲ್ಲೇ ಇರಿ’ ಎಂದು ವಿನಂತಿಸಿದರು. ಇದಕ್ಕೆ ಒಪ್ಪದಿದ್ದಾಗ ಕೆಲವರು ಸಿಟ್ಟು ಮಾಡಿಕೊಂಡರು. ಸ್ವತಃ ನನ್ನ ಹೆಂಡತಿ ಈ ತೀರ್ಮಾನವನ್ನು ವಿರೋಧಿಸಿದಳು. ಆದರೂ ಇದಾವುದನ್ನೂ ಲೆಕ್ಕಿಸದೇ ಕುಪ್ಪಳಿಯಲ್ಲಿ ಕೆಲಸ ಮಾಡುವುದು ನನ್ನ ಭಾಗ್ಯ ಎಂದು ತಿಳಿದು ಕುಪ್ಪಳಿಗೆ ಹೋಗುವ ದೃಢ ನಿರ್ಧಾರ ತೆಗೆದುಕೊಂಡೆ.
ಕಾಕತಾಳೀಯವೆಂದರೆ ಈ ಕೇಂದ್ರದ ಸ್ಥಾಪನೆಗೆ ಒತ್ತಾಸೆ ನೀಡಿದವರಲ್ಲಿ ಒಬ್ಬನಾದ ನಾನೇ ಇದರ ನಿರ್ವಹಣೆ ಹೊರಬೇಕಾದ ಪ್ರಸಂಗ ಬಂದುದು ಆಕಸ್ಮಿಕವಿರಬಹುದು ಅಷ್ಟೆ.
ನಿಜಕ್ಕೂ ಒಂದು ಆತ್ಮೀಯ ಒಡನಾಟದ ಅನುಭವ ಓದುಗರಿಗೆ ಆಗುತ್ತದೆ. ಆಪ್ತವಾಗಿದೆ ಧನ್ಯವಾದಗಳು ಸರ್
ಕುವೆಂಪು ಸಮಗ್ರ ಸಾಹಿತ್ಯ ಕೃತಿಗಳ ಸಂಪಾದನೆ ಮತ್ತು ಪ್ರಕಟಣೆಯ ಹಲವು ಹಂತಗಳಲ್ಲಿ ದುಡಿದವರ ಬಗ್ಗೆ ತಿಳಿಸುತ್ತಲೇ ತೇಜಸ್ವಿ ಅವರ ಪಾರದರ್ಶಕ ಬದುಕನ್ನು ಅನಾವರಣಗೊಳಿಸಿದ ಆಪ್ತ ಬರಹ ತಮ್ಮದು. ತಮ್ಮಂಥ ನಿಸ್ವಾರ್ಥ ಸಾಧಕರ ಮಾತು ಕೇಳುವುದು ತುಂಬಾ ಆನಂದದ ಸಂಗತಿ. ಅನಂತ ಧನ್ಯವಾದಗಳು ಸರ್.