ಈ ಆರ್ಥಿಕ ತುರ್ತು ಪರಿಸ್ಥಿತಿ ತೀರಾ ಕೆಟ್ಟದಾಗಿದೆ.

ಜನಾರ್ಧನ ಕೆಸರಗದ್ದೆ
ಹೋದ ತಿಂಗಳು ಯವುದೋ ಕೆಲಸದ ನಿಮಿತ್ತ ಬೆಂಗಳೂರಿನ ಹೊರವಲಯದ ತೋಟದಲ್ಲಿ ತಂಗಿದ್ದ ಗೆಳೆಯರಿಗೆ ಬೆಳಗ್ಗಿನ ತಿಂಡಿ ತೆಗೆದುಕೊಂಡು ಹೋಗಬೇಕಿತ್ತು.
ಜೇಬಲ್ಲಿ ಇದ್ದ ಚಿಲ್ಲರೆ ನೋಟುಗಳನ್ನೆಲ್ಲ ಸೇರಿಸಿ ತಿಂಡಿ ತೆಗೆದುಕೊಂಡು ಸ್ಕೂಟರ್ ಏರಿ ಹೊರಟೆ. ಕಾಫಿ ಪುಡಿ ತರಲು ಹೇಳಿದ್ದಾರೆ ಎಂದು ಆಮೇಲೆ ನೆನಪಾಯಿತು. ಜೇಬಲ್ಲಿ ತಡಕಾಡಿದರೆ ಮೂರು ರೂಪಾಯಿ ಇದೆ. ನಗರ ವ್ಯಾಪ್ತಿ ಬಿಡುವುದರೊಳಗೆ ಇದ್ದ ಬದ್ದ ಎಟಿಎಂಗಳಿಗೆಲ್ಲಾ ಕಣ್ಣು ಹಾಯಿಸಿದೆ.
ಅವು ಒಂದೋ ಮುಚ್ಚಿತ್ತು ಇಲ್ಲವೇ ಅರ್ಧ ಬಾಗಿಲು ಕೆಳಗೆ ಎಳೆದು ಕಾವಲುಗಾರರು ಕೂತಿದ್ದರು. ಬೇರೆ ಉಪಾಯ ಕಾಣದೆ ಅದೇ ದಾರಿಯಲ್ಲಿರುವ ಹಳ್ಳಿಯಲ್ಲಿ ಪರಿಚಯಸ್ಥರ ಮನೆಗೆ ಹೋಗಿ “ದೇಶಕ್ಕಾಗಿ” ಸಹಾಯ ಮಾಡಿಯಾರೆಂದು ನಂಬಿ ಪರಿಸ್ಥಿತಿಯನ್ನು ವಿವರಿಸಿ ಅವರ ಸಹೋದರರ ಅಂಗಡಿಯಿಂದ 50 ಗ್ರಾಂ ಕಾಫಿ ಪುಡಿ ಪಡೆದುಕೊಂಡು ಹೊರಟೆ.
ಕಳೆದ ತಿಂಗಳಲ್ಲಿ ಒಂದು ಅದೃಷ್ಟದ ದಿನ ಎಟಿಎಂನಲ್ಲಿ ಹೊರ ಬಂದ 2000 ನೋಟನ್ನು ಹೇಗೋ ಚಿಲ್ಲರೆ ಮಾಡಿ ಜಾಗರೂಕತೆಯಿಂದ ಖರ್ಚು ಮಾಡುತ್ತ ಬಂದಿದ್ದೇನೆ. ಮೂರು ದಿನದಿಂದ ಯಾವುದಾದರೂ ಎಟಿಎಂ ನಲ್ಲಿ ಹಣ ಸಿಗುವುದೇ ಎಂದು ನೋಡಿ ಹಿಂದಿರುಗಿದ್ದೇನೆ.
ಒಂದನೇ ತಾರೀಕು ನನ್ನ ಬ್ಯಾಂಕಿಗೆ ಹೋದಾಗ ಆಶ್ಚರ್ಯ…ಜನವೇ ಇಲ್ಲ..ಒಳಗೆ ಹೋಗಬೇಕು ಅನ್ನುವಾಗ ಕಾವಲುಗಾರರು ಹೇಳಿದರು”ಕ್ಯಾಷ್ ಖಾಲಿಯಾಗಿದೆ ಸಾರ್”. ಹಿಂದೆ ಬಂದೆ. ನಿನ್ನೆ ಬೇರೆ ಕೆಲಸವಿದ್ದುದರಿಂದ ಹೋಗಲು ಆಗಲಿಲ್ಲ. ಎರಡು ದಿನ ಬಿಟ್ಟು ಬ್ಯಾಂಕಿಗೆ ಹೋದೆ.
ಒಳಗೆ ಹೋದಾಗಲೇ ಜನರ ಗುಸು ಗುಸುವಿನಿಂದ ಗೊತ್ತಾಯಿತು, ಸಿಗುವುದೇ 6000 ಮಾತ್ರ ಎಂದು.ಅಷ್ಟಾದರೂ ಸಿಗುತ್ತದೆಯಲ್ವಾ ಎಂದು ಸರದಿಯಲ್ಲಿ ನಿಂತು ಕಾದು ನನ್ನ ಸರದಿ ಬಂದಾಗ ಚೆಕ್ ಕೊಟ್ಟೆ. “ನಮ್ಮ ಕಸ್ಟಮರ್ಸ್ ಗೆ ಮಾತ್ರ ಕ್ಯಾಷ್ ಕೊಡುವುದು” ಎಂದರು. “ನಾನು ನಿಮ್ಮ ಕಸ್ಟಮರ್ ಮೇಡಂ” ಎಂದೆ. “ಆದರೆ ನಿಮ್ಮದು ಬೇರೆ ಬ್ರಾಂಚ್ ಅಲ್ವ ಕೊಡಲು ಆಗುವುದಿಲ್ಲ, ನೀವು ನಿಮ್ಮ ಬ್ರಾಂಚಿಗೇ ಹೋಗಿ ತೆಗೆದುಕೊಳ್ಳಿ” ಎಂದರು. ನನ್ನ ಸಹನೆ ಮೀರಿತ್ತು.
ದೇಶದಲ್ಲಿರುವ ಬ್ರಷ್ಟರು ಸಿಕ್ಕಿ ಬೀಳಲಿ ಎಂಬ ಆಸೆ ನನಗೂ ಇದೆ. ಅದಕ್ಕಾಗಿ ಕ್ಯೂ ನಿಲ್ಲಲು ತಯಾರಿದ್ದೇನೆ.ನಿಂತಿದ್ದೇನೆ.ಖರ್ಚು ಬಹಳ ಕಡಿಮೆ ಮಾಡುತ್ತಿದ್ದೇನೆ. ನನ್ನ ಅಕೌಂಟಲ್ಲಿ ಹಣ ಹೆಚ್ಚಿದ್ದರೂ ಕಡಿಮೆ ತೆಗೆದುಕೊಳ್ಳಲು ತಯಾರಿದ್ದೇನೆ. ಆದರೆ ಈಗ ನನಗೆ ನಂಬಿಕೆ, ನಿಯಮಗಳು ಸಂಪೂರ್ಣ ಅಪ್ರಸ್ತುತವಾಗುವುದನ್ನು ಒಪ್ಪಿಕೊಳ್ಳಲು ಆಗಲಿಲ್ಲ.
ಯಾಕೆ ಕೊಡಲ್ಲ ಎಂದು ಕೂಗಾಡಿದೆ. ಮ್ಯಾನೇಜರ್ ಅಲ್ಲೇ ಇದ್ದರು. ವಾಗ್ವಾದ ನಡೆಯಿತು. ಚೇಂಬರ್ ಗೆ ಕರೆದರು. ಬಹಳ ಸಿಟ್ಟಿನಿಂದ ಅವರ ಕಷ್ಟಗಳನ್ನು ಹೇಳಿಕೊಂಡರು, ದೇಶಕ್ಕಾಗಿ ಏನೆಲ್ಲ ಮಾಡಬೇಕೆಂದು ಹೇಳಿದರು. ಎಲ್ಲ ಕಡೆ ಕಾರ್ಡ್ ಸ್ವೈಪ್ ಮಾಡಿ ಎಂದರು. ಕ್ಯಾಷ್ ಲೆಸ್ ಅರ್ಥ ವ್ಯವಸ್ಥೆಯ ಬಗ್ಗೆ ಪುಟ್ಟ ಭಾಷಣ ಮಾಡಿದರು.
ಚೇಂಬರ್ ನಿಂದ ಹೊರ ಬಂದೆ. ಪ್ರಧಾನ ಕಛೇರಿಗೆ ಫೋನ್ ಮಾಡಿದೆ. ಕಸ್ಟಮರ್ ಕ್ಯಾರ್ ನಂಬರ್ ಕೊಟ್ಟರು. ಅಲ್ಲಿಗೆ ಫೋನ್ ಮಾಡಿದೆ. ಜನರಲ್ ಮ್ಯಾನೇಜರ್ ಅವರ ಕಾರ್ಯದರ್ಶಿ ಫೋನ್ ತೆಗೆದುಕೊಂಡರು. “ನಿಮ್ಮ ಕಸ್ಟಮರ್ಸ್ ಅವರವರ ಅಕೌಂಟ್ ಇರುವ ಊರಿಗೆ ಹೋಗಿ ಹಣ ಡ್ರಾ ಮಾಡಬೇಕೆ ಎಂದು ಕೇಳಿದೆ”
ಬ್ಯಾಂಕ್ ಮ್ಯಾನೇಜರ್ ಗೆ ಫೋನ್ ಕೊಡಲು ಹೇಳಿದರು. ನನಗೆ ಕ್ಯಾಷ್ ಸಿಕ್ಕಿತು. ಮ್ಯಾನೇಜರ್ ಬಹಳ ಸಿಟ್ಟಾಗಿದ್ದರು. “ಯಾವುದೇ ಬ್ರಾಂಚಾದರೂ ಪರವಾಗಿಲ್ಲ ಎಲ್ಲರಿಗೂ ದುಡ್ಡು ಕೊಡಿ” ಎಂದು ಎಲ್ಲಾ ಸಿಬ್ಬಂದಿಗಳಿಗೆ ಕೇಳುವಂತೆ ಕೂಗಿ ಹೇಳಿದರು.
ಬದಲಾವಣೆ ತರುವಾಗಲೂ ಒಂದಿಷ್ಟು ನೀತಿ ನಿಯಮಗಳು ಇಲ್ಲದಿದ್ದರೆ ಹೇಗೆ? ಈ ಆರ್ಥಿಕ ತುರ್ತು ಪರಿಸ್ಥಿತಿ ತೀರಾ ಕೆಟ್ಟದಾಗಿದೆ.





deshada ella nagarikaraddu ide stiti, heccu matadidre deshadrohi patta, deshakkagi tyaga madabekemba brame huttisalaguttide