ಎಚ್ ಆರ್ ರಮೇಶ
ಸಂಜೆ ಅಣಿಯಾಗುತ್ತಿದೆ ಪ್ರಜ್ಞಾಹೀನವಾಗಲು, ಸೂರ್ಯ
ಸಾಯುತ್ತಿರುವುದನ್ನು ಸಾಯುತ್ತಿರುವ ಎಲ್ಲವೂ ನೋಡುತ್ತಿವೆ;
ಪುನರ್ಜನ್ಮವೆನ್ನುವುದು ಪುರಾಣದಲ್ಲಿಯೇ ಇರಲಿ,
ಇಲ್ಲಿ ಈಗ ಒಂದು ಪಕ್ಷಿ
ಹಣ್ಣನ್ನು ತಂದಿದೆ;
ಮತ್ತು ಗೂಡಿಗೆ ಹಾರುತ್ತಿದೆ,
ಇನ್ನೊಂದು ಹಣ್ಣು ಇಲ್ಲವೆಂಬಂತೆ ಇದೆ ಒಳಗೆ,
ಸಾವೆನ್ನುವುದು ಸಾವಯವ;
ಪ್ರತಿ ತಂತುವಿನಲ್ಲೂ,
ಪ್ರತಿ ಅಣುವಿನಲ್ಲೂ;
ಸಂಜೆ ಅಣಿಯಾಗುತ್ತಿದೆ ಪ್ರಜ್ಞಾಹೀನವಾಗಲು, ಅಂದರೆ: ಜೀವಂತವಾಗಿ
ಮತ್ತೆ ಪ್ರಜ್ಞೆ ಬರುವ ತನಕ ಸತ್ತು ಹಗೂರವಾಗುವುದು,
ಎಲ್ಲದರ ನಡುವೆ ಎಲ್ಲವ ಕಳೆದುಕೊಂಡು (ಇದು ಲೋಕದ ಮಾತು, ಕಳೆದು ಕೊಳ್ಳುವುದಕ್ಕೆ ನಮ್ಮದೇನಿದೆ),
ಆದರೂ,
ಎಲ್ಲೆಲ್ಲಿಂದಲೋ ಬೆಳಕಿನ ಕೋಲುಗಳು ತೂರಿ ಬರುತ್ತವೆ,
ಅಲ್ಲಿ,
ಅಣು ಕಣಗಳು ದೂರದ ನಕ್ಷತ್ರಗಳು;
ಒಂದೇ ಸಮ ಹೋಗುತ್ತಿವೆ, ಬರುತ್ತಿವೆ, ಏರುತ್ತಿವೆ, ಇಳಿಯುತ್ತಿವೆ,
ಸೃಷ್ಟಿ ಒಮ್ಮೊಮ್ಮೆ ಗುಟ್ಟು ಬಿಡುವುದು,
ಕನಸಲ್ಲಿ ಹಾಲುಗಲ್ಲದ ಕಂದ ನಕ್ಕಂತೆ;
ಆದರೆ-
ರಟ್ಟಾದ ಗುಟ್ಟು ಗುಟ್ಟಾಗಿರುವುದಿಲ್ಲ,
ಕಂದ ನಕ್ಕಿದ್ದು ಕನಸಿನಿಂದಾಗಿಯೇ,
ಗೊತ್ತಿಲ್ಲ.
Beautiful …Ramesh